Advertisement

ವಿಶ್ವವೇ ಎದುರು ನಿಂತರೂ ತಲೆಬಾಗೆವು

12:41 AM Aug 10, 2019 | mahesh |

ಒಂದು ಕಡೆ ಭಾರತ ಪ್ರಗತಿಯನ್ನು ಬೆನ್ನು ಹತ್ತಿ ಮೇಲೇರುವ ಪ್ರಯತ್ನ ಮಾಡುತ್ತಿದ್ದರೆ ಬಹುತೇಕ ಕಾಶ್ಮೀರ ಮಾತ್ರ ಜಿಹಾದಿನ ಇಳಿಜಾರಿನಲ್ಲಿ ಭಾರತವನ್ನು ನಿಲ್ಲಿಸುವ ಪ್ರಯತ್ನ ಮಾಡಿ ಪ್ರಪಾತಕ್ಕೆ ಒಯ್ಯುತ್ತಿತ್ತು. ನಮ್ಮದೇ ದೇಶದ ಕಾಶ್ಮೀರಿ ಯುವಕರು ಸರ್ಕಾರದಿಂದ ಸಿಕ್ಕ ಅನುಕೂಲವನ್ನು ದುರುಪಯೋಗ ಮಾಡಿಕೊಂಡು ನಮ್ಮ ಸೈನಿಕರಿಗೆ ಕೊಟ್ಟ ಕಿರುಕುಳವೇನು ಕಡಿಮೆಯೇ?

Advertisement

ಧಮ್ಕಿ, ಜಿಹಾದ್‌ ಕೆ ನಾರೋ ಸೆ, ಅತ್ಯಾಚಾರೋ ಸೆ ಕಾಶ್ಮೀರ ಕಭೀ ಹತಿಯಾಲೆಂಗೆ ಏ ಮತ್‌ ಸಮ್‌ಝೋ!

ಹಮಲೋ ಸೇ, ಹತಿಯಾರೋ ಸೇ, ಸಂಹಾರೋ ಸೇ ಭಾರತ್‌ ಕಾ ಶೀರ್ಷ್‌ ಝುಕಾಲೇಂಗೆ ಏ ಮತ್‌ ಸಮ್‌ಝೋ!

ಜಬ್‌ ತಕ್‌ ಗಂಗಾ ಮೇ ಧಾರ್‌, ಸಿಂಧೂ ಮೇ ಜ್ವಾರ್‌,ಅಗ್ನಿ ಮೇ ಜಲನ್‌, ಸೂರ್ಯ ಮೇ ತಪನ್‌ ಶೇಷ, ಸ್ವಾತಂತ್ರ್ಯ ಸಮರ್‌ ಕೀ ವೇದಿ ಪರ್‌ ಅರ್ಪಿತ ಹೋಂಗೆ ಅಗಣಿತ ಜೀವನ್‌ ಯೌವ್ವನ್‌ ಶೇಷ, ಅಮ್ರಿಕ ಕ್ಯಾ..ಸಂಸಾರ್‌ ಭಲೇ ಹೀ ಹೋ ವಿರುದ್ಧ ಕಾಶ್ಮೀರ್‌ ಪರ್‌ ಭಾರತ್‌ ಕಾ ಸರ್‌ ನಹಿ ಜುಖೇಗ.

ಅಂದೊಂದು ಸಭೆಯಲ್ಲಿ ಭಾರತದ ಮಾಜಿ ಪ್ರಧಾನಿ, ಅಜಾತಶತ್ರು, ಸ್ವರ್ಗೀಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ತಾವೇ ಬರೆದಿದ್ದ ಈ ಕವಿತೆಯ ಸಾಲುಗಳನ್ನು ವಾಚನ ಮಾಡುತ್ತಾ ಕಾಶ್ಮೀರದ ವಿಷಯದಲ್ಲಿ ತಮ್ಮ ನಿಲುವೇನು ಎನ್ನುವುದನ್ನು ಇಡೀ ಜಗತ್ತಿಗೆ ಎತ್ತಿ ಒತ್ತಿ ಹೇಳಿದ್ದರು. ಅದರ ಮೂಲಕ ಕೇವಲ ಪಾಕಿಸ್ತಾನ ಮತ್ತು ಅದಕ್ಕೆ ಸದಾ ಪಾಲನೆ ಪೋಷಣೆ ಮಾಡುತ್ತಾ ಬಂದಿದ್ದ ಅಮೆರಿಕ ಮಾತ್ರವಲ್ಲದೆ ಇಡೀ ಜಗತ್ತೇ ಎದುರು ನಿಂತರೂ ಕಾಶ್ಮೀರದ ವಿಷಯದಲ್ಲಿ ಭಾರತ ಮಾತ್ರ ಎಂದಿಗೂ ತಲೆಬಾಗದು ಎಂದು ತಮ್ಮ ಕವಿತೆಯನ್ನೇ ಎಚ್ಚರಿಕೆಯಾಗಿ ಕೊಟ್ಟಿದ್ದರು ಅಟಲ್. ಅದರ ಜೊತೆಗೆ ಶಾಂತ ಸ್ವರೂಪಿ ಕವಿ ಹೃದಯದೊಳಗಿದ್ದ ಕ್ಷಾತ್ರತೇಜದ ನಾಯಕನ ಪ್ರಕಟೀಕರಣ ಕೂಡ ಜಗತ್ತಿನ ಮುಂದೆ ಆಗಿತ್ತು.

Advertisement

ಈಗ ಅವರ ಆ ಕವಿತೆಗೆ ನಿಜಕ್ಕೂ ಅರ್ಥ ಬಂದಿದೆ. ಅವರ ಹಾದಿಯಲ್ಲೇ ಬದುಕು ಸವೆಸುತ್ತಿರುವ, ಅವರದ್ದೇ ಕನಸು ನನಸು ಮಾಡ ಹೊರಟಿರುವ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಟೀಮ್‌, ಅಟಲ್ ಜೀ ಅವರ ಕವಿತೆಯ ಪ್ರತಿಯೊಂದು ಅಕ್ಷರವನ್ನೂ ಸಹ ಬಿಟ್ಟುಬಿಡದೆ ಸತ್ಯವಾಗಿಸಿ ಸಾರ್ಥಕಗೊಳಿಸಿದೆ.

ಈ ಐತಿಹಾಸಿಕ ಕ್ಷಣಗಳಿಗೆ ನಾವು ಇವತ್ತು ಸಾಕ್ಷಿಯಾಗಲು ಹಿಂದೆ ಅದೆಷ್ಟೋ ಜನ ತಮ್ಮ ಬದುಕು – ಭವಿಷ್ಯ ಬಲಿಕೊಟ್ಟಿದ್ದರು. ಅಂತಹ ಎಲ್ಲರ ತ್ಯಾಗಗಳಿಗೆ ಕೊಟ್ಟ ಗೌರವ ಅದು. ಶ್ಯಾಮ ಪ್ರಸಾದ್‌ ಮುಖರ್ಜಿ ಅವರಿಂದ ಹಿಡಿದು ಮೊನ್ನೆ ಮೊನ್ನೆ ಕಾಶ್ಮೀರದ ಕಣಿವೆಯಲ್ಲಿ ಹುತಾತ್ಮರಾದ ನಮ್ಮೆಲ್ಲ ಯೋಧರ ತನಕ ಅದೆಷ್ಟು ಜನ ತಮ್ಮ ಪ್ರಾಣ ಕೊಡಲಿಲ್ಲ? ಬಾಬಾ ಸಾಹೇಬ್‌ ಅಂಬೇಡ್ಕರರಿಂದ ಹಿಡಿದು ಇವತ್ತಿನ ರಾಷ್ಟ್ರವಾದಿಗಳ ತನಕ ಅದೆಷ್ಟು ಜನ ತಮ್ಮ ಬೆವರು ಹರಿಸಲಿಲ್ಲ?

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಆವತ್ತಿನ ಕಾಂಗ್ರೆಸ್‌ ಸರ್ಕಾರ ಮಾಡಿದ ಒಂದು ತಪ್ಪು ಎಪ್ಪತ್ತು ವರ್ಷಗಳ ಕಾಲ ದೇಶವನ್ನು ಮಗ್ಗುಲ ಮುಳ್ಳಾಗಿ ಚುಚ್ಚುತ್ತಿತ್ತು. ಇಡೀ ದೇಶವನ್ನೇ ಭಯದಿಂದ ನಲುಗಿಸಿತ್ತು. ಉಗ್ರಗಾಮಿಗಳ, ಜಿಹಾದಿಗಳ, ಪ್ರತ್ಯೇಕತಾವಾದಿಗಳ ರಾಕ್ಷಸೀ ಕೃತ್ಯಗಳಿಂದ ಹರಿದ ನೆತ್ತರಿಗೆ, ಹಾರಿದ ಪ್ರಾಣಗಳಿಗೆ ಲೆಕ್ಕವೇ ಇರಲಿಲ್ಲ. ಆ ಒಂದು ತಪ್ಪಿನಿಂದ ದೇಶ ಅನುಭವಿಸಿದ್ದು ಅಷ್ಟಿಷ್ಟಲ್ಲ. ಪ್ರಾಯಶಃ ಜಗತ್ತಿನ ಯಾವ ದೇಶವೂ ತನ್ನದೇ ಜನರಿಂದ ಇಷ್ಟು ಹಿಂಸೆ ಮತ್ತು ಕಷ್ಟ ಪಟ್ಟಿರಲಿಲ್ಲ.

ಸ್ವತಃ ಕಾಶ್ಮೀರಿ ಪಂಡಿತರೇ ಆಗಿದ್ದ ನೆಹರು ಅವರ ಸರ್ಕಾರದ ಆ ಒಂದು ಆತುರದ, premature ತೀರ್ಮಾನವು ಸ್ವಾತಂತ್ರ್ಯಬಂದ ನಂತರ ಬಹಳ ವೇಗವಾಗಿ ಬೆಳೆಯಬೇಕಿದ್ದ ಭಾರತ ಸದಾ ಕಾಶ್ಮೀರದ ವಿಚಾರವಾಗಿ ನಮ್ಮ ಯೋಗ್ಯತೆಗೆ ಯಾವ ಲೆಕ್ಕವೂ ಅಲ್ಲದ ಪಾಕಿಸ್ತಾನದ ಜೊತೆಗೆ ಗುದ್ದಾಡುವಂತೆ ಮಾಡಿತ್ತು. ಯಾವ ಸಂಬಂಧವೂ ಇಲ್ಲದ ಅಮೆರಿಕ ಮತ್ತಿತರ ದೇಶಗಳ ಮುಂದೆ ಅಂಗಲಾಚಿ ಅಸಹಾಯಕತೆಯಿಂದ ಬೇಡಿಕೊಳ್ಳುವಂತೆ ಮಾಡಿತ್ತು. ದೇಶದ ಬಹುತೇಕ ಸಂಪನ್ಮೂಲ, ಸಮಯ ಮತ್ತು ಶಕ್ತಿ ಅದಕ್ಕೆ ಹರಿದು ಹೋಗುವಂತೆ ಮಾಡಿತ್ತು. ಬೇರೆ ಬೇರೆ ದೇಶಗಳ ಮುಂದೆ ನಮ್ಮನ್ನು ಕುಬ್ಜರನ್ನಾಗಿ ಮಾಡಿ ನಿಲ್ಲಿಸಿತ್ತು. ನಮ್ಮ ಈ ಸಮಸ್ಯೆಯ ಲಾಭವನ್ನೇ ದಶಕಗಳ ಕಾಲ ಅಮೆರಿಕ ಚೀನದಂಥ ದೇಶಗಳು ಪಡೆದುಕೊಂಡು ಕಾಟ ಕೊಟ್ಟಿದ್ದು ನೆನಪಿದೆಯಲ್ಲವೇ?

ಒಂದು ಕಡೆ ಭಾರತ ಪ್ರಗತಿಯನ್ನು ಬೆನ್ನು ಹತ್ತಿ ಮೇಲೇರುವ ಪ್ರಯತ್ನ ಮಾಡುತ್ತಿದ್ದರೆ ಬಹುತೇಕ ಕಾಶ್ಮೀರ ಮಾತ್ರ ಜಿಹಾದಿನ ಇಳಿಜಾರಿನಲ್ಲಿ ಭಾರತವನ್ನು ನಿಲ್ಲಿಸುವ ಪ್ರಯತ್ನ ಮಾಡಿ ಪ್ರಪಾತಕ್ಕೆ ಒಯ್ಯುತ್ತಿತ್ತು. ನಮ್ಮದೇ ದೇಶದ ಕಾಶ್ಮೀರಿ ಯುವಕರು ಸರ್ಕಾರದಿಂದ ಸಿಕ್ಕ ಅನುಕೂಲವನ್ನು ದುರುಪಯೋಗ ಮಾಡಿಕೊಂಡು ನಮ್ಮ ಸೈನಿಕರಿಗೆ ಕೊಟ್ಟ ಕಿರುಕುಳವೇನು ಕಡಿಮೆಯೇ?

ಕಲ್ಲು ತೂರಿದರು, ಎಳೆದಾಡಿದರು, ನಿಕೃಷ್ಟವಾಗಿ ಕಂಡರು. ನಮ್ಮದೇ ದೇಶದ ಕಾಶ್ಮೀರಿ ಯುವಕರನ್ನು ತಲೆ ಕೆಡಿಸಿ ದಾರಿ ತಪ್ಪಿಸಿ ಧರ್ಮಯುದ್ಧದ ಹೆಸರಿನಲ್ಲಿ ನಮ್ಮ ದೇಶದ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿದ ಪಾಕಿಸ್ತಾನಕ್ಕೆ ಅನುಕೂಲವಾಗಿದ್ದ ಅಸ್ತ್ರವೂ ಇದೇ ನೆಹರು ಸರ್ಕಾರದ ಕನಸಿನ ಆರ್ಟಿಕಲ್ 370 ಮತ್ತು 35ಎ. ವಿಶೇಷ ‘ಸ್ಥಾನ‌’ ಕೊಟ್ಟ ನಂತರ ಅವರು ‘ಮಾನ’ ಉಳಿಸಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲವಲ್ಲ. ಬದಲಾಗಿ ಜಗತ್ತಿನ ಮುಂದೆ ಭಾರತದ ಮಾನ ಹರಾಜು ಹಾಕಲು ಸಾಧ್ಯವಿದ್ದ ಎಲ್ಲಾ ಪ್ರಯತ್ನ ಮಾಡಿದರು.

ಅವರು ಅಷ್ಟೆಲ್ಲ ಪುಂಡಾಟಿಕೆ ಮಾಡಿದರೂ ಅವರ ರಕ್ಷಣೆಗೆ ಅದೇ 370 ಇತ್ತಲ್ಲ, ಅದು ಅವರನ್ನು ಸದಾ ಕಾಪಾಡುತ್ತಿತ್ತು. ನಮ್ಮ ನೆಲದ IPC, ನಮ್ಮ ನೆಲದ ತೆರಿಗೆ, ನಮ್ಮ ನೆಲದ ಶಾಸನಗಳು ಅವರನ್ನು ಏನೂ ಮಾಡುವಂತೆ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ದೇಶವೂ ಬದಲಾಗಿದೆ ಮತ್ತು ಅದರ ನಾಯಕತ್ವ ಕೂಡ. ಇವತ್ತಿನ ದೇಶದ ನಾಯಕತ್ವ ನಮಗೆ ನೋಡಲಿಕ್ಕೆ ಸಿಕ್ಕಿದ್ದೂ ಸಹ ಇದೇ ಆರ್ಟಿಕಲ್ 370ರಿಂದ ಅಂದರೆ ನಾವು ನಂಬಲೇಬೇಕು.

ಹೌದು, ಅಂದು ಐವತ್ತರ ದಶಕದಲ್ಲಿ ಮೊದಲ ಸರ್ಕಾರದ ಕೈಗಾರಿಕಾ ಮಂತ್ರಿಗಳಾಗಿದ್ದ ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವ ನೆಹರು ಸರ್ಕಾರದ ತೀರ್ಮಾನವನ್ನು ವಿರೋಧಿಸಿಯೇ ಕಾಂಗ್ರೆಸ್‌ ಸರ್ಕಾರದಿಂದ ಹೊರಬಂದವರು. ಹಾಗೆ ತಮ್ಮ ಮಂತ್ರಿಗಿರಿಗೆ ರಾಜೀನಾಮೆ ನೀಡಿ ‘ಏಕ್‌ ದೇಶ ಮೇ ದೋ ಪ್ರಧಾನ್‌, ದೋ ನಿಶಾನ್‌, ಔರ್‌ ದೋ ಸಂವಿಧಾನ ನಹಿ ಚಲೇಗಾ’ ಎಂದು ಗುಡುಗಿದ್ದರು. ಆರೆಸ್ಸೆಸ್ಸಿನ ಅಂದಿನ ಸರಸಂಘಚಾಲಕರಾಗಿದ್ದ ಗುರೂಜಿ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ವಿಚಾರದ ಆಧಾರದ ಮೇಲೆ ರಾಜಕೀಯ ಪಕ್ಷ ಕಟ್ಟುವ ದೇಶಭಕ್ತಿಯ ಹಸಿವು ಹೇಳಿಕೊಂಡಿದ್ದರು. ಆಗ ಗುರೂಜಿ, ಅವರ ಹಸಿವು ಅರಿತು ಕೆಲವು ಸಮರ್ಥ ಪ್ರಚಾರಕರನ್ನು ಕೊಟ್ಟು ಹೊಸ ರಾಜಕೀಯ ಪಕ್ಷ ಕಟ್ಟಲು ಆಶೀರ್ವಾದ ಮಾಡಿದ ನಂತರವೇ ಹುಟ್ಟಿದ್ದು ಅಂದಿನ ಜನಸಂಘ; ಇಂದಿನ ಬಿಜೆಪಿ.

ಯಾವ ಉದ್ದೇಶಕ್ಕಾಗಿ ಅಂದು ಜನಸಂಘ ಹುಟ್ಟಿತ್ತೋ ಇಂದು ತನ್ನ ಹುಟ್ಟಿನ ಮೂಲ ಉದ್ದೇಶವನ್ನು ಈಡೇರಿಸಿಕೊಂಡಿದೆ, ಅಂದು ಹಿರಿಯರು ಕಂಡ ಕನಸನ್ನು ನನಸು ಮಾಡಿದೆ. ನಮ್ಮದೇ ದೇಶದ ಭೂಭಾಗದಲ್ಲಿ ನಾವು ನೆಲೆಸುವಂತೆ ಇರಲಿಲ್ಲ. ನಮ್ಮ ನೆಲದ ಕಾನೂನು ಅಲ್ಲಿಗೆ ತೃಣ ಮಾತ್ರವಾಗಿತ್ತು, ನಮ್ಮ ಸಂವಿಧಾನ ಅವರಿಗೆ ನಗಣ್ಯವಾಗಿತ್ತು, ನಮ್ಮ ಧ್ವಜ ಅವರಿಗೆ ಅಗೌರವ ತೋರಲು ಇದ್ದಿದ್ದ ವಸ್ತು ಮಾತ್ರವಾಗಿತ್ತು. ಲಾಲ್ ಚೌಕಿನಲ್ಲಿ ತ್ರಿವರ್ಣ ಧ್ವಜ ಹಾರಿಸಲು ರಕ್ತ ಹರಿಸಬೇಕಾದ ಪರಿಸ್ಥಿತಿ ಇತ್ತು. ಈ ದೇಶದ ನೋವು ಕಷ್ಟಗಳು ಅವರಿಗೆ ಖುಷಿಪಡುವ ಸಂಗತಿಗಳು, ಈ ದೇಶದ ಸಾಧನೆಗಳು ಅವರಿಗೆ ಹೊಟ್ಟೆಕಿಚ್ಚು ತರುವಂಥ ಪ್ರಸಂಗಗಳು.

ಒಟ್ಟಿನಲ್ಲಿ ಮಣ್ಣಿನ ಮಕ್ಕಳೇ ಮಣ್ಣು ತಿನ್ನುವ ಕೆಲಸಕ್ಕೆ ಕೈ ಹಾಕಿದ್ದರು ಎನ್ನಿ. ಇಂತಹ ಕಾಶ್ಮೀರದ ಸಮಸ್ಯೆ ಭಾರತದ ಪಾಲಿಗೆ ಎಂದೆಂದೂ ಬಗೆಹರಿಯದ ಶಾಶ್ವತ ಸಮಸ್ಯೆಯೇ ಆಗಿ ಉಳಿಯಲಿದೆ ಅಂದುಕೊಂಡು ಅದರಿಂದ ಲಾಭ ಪಡೆಯುತ್ತಿದ್ದ ರಾಜಕೀಯ ಪಕ್ಷಗಳು, ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳು, ಪಾಕಿಸ್ತಾನಕ್ಕೆೆ ಮೋದಿ ಸರ್ಕಾರ ಮಾತ್ರ ಕಾಶ್ಮೀರಕ್ಕೆ ಕೊಟ್ಟಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ಮತ್ತು 35ಎ ರದ್ದು ಮಾಡಿ ಮರ್ಮಾಘಾತ ನೀಡಿದೆ.

ಇಂತಹ ಗಂಭೀರ ವಿಚಾರವಾದರೂ ಸಹ ಯಾವುದೇ ದೇಶ ಭಾರತದ ವಿರುದ್ಧ ಮಾತನಾಡುವ ಪರಿಸ್ಥಿತಿ ಇಲ್ಲ, ಹಾಗೆ ಸಮಯ ಸಂದರ್ಭ ನೋಡಿ ಇಡೀ ಜಗತ್ತೇ ಭಾರತಕ್ಕೆ ಬೇಕಿದ್ದೋ ಬೇಕಿಲ್ಲದೆಯೋ ಸಪೋರ್ಟ್‌ ಮಾಡುವ ವಾತಾವರಣ ನಿರ್ಮಾಣ ಮಾಡಿ, ಪಾಕಿಸ್ತಾನವು ಸಹ ಮಾತನಾಡದ ಅಸಹಾಯಕ ಹತಾಶ ಸ್ಥಿತಿಯಲ್ಲಿರುವ ಕಾಲಘಟ್ಟದಲ್ಲಿ ತೆಗೆದುಕೊಂಡ ತೀರ್ಮಾನ ಇದು.

ಅದಕ್ಕೆ ನಿಜವಾಗಿಯೂ ಐವತ್ತಾರಿಂಚಿನ ಗುಂಡಿಗೆಯೇ ಬೇಕು. ಅದರ ಮೂಲಕ ಒಂದು ದೇಶಕ್ಕೆ ಒಂದೇ ಸಂವಿಧಾನ, ಒಂದೇ ಕಾನೂನು ಎಂದು ಸಾರಿ ಹೇಳಿ ಕಾಶ್ಮೀರ ಸಮಸ್ಯೆಗೆ ಬಹುತೇಕ ಪರಿಹಾರದ ಉಪಾಯ ಹುಡುಕಿದೆ. ತನ್ನ ಪೂರ್ವಜರ ಬೆವರಿಗೆ, ನೆತ್ತರಿಗೆ, ಸಾವಿಗೆ, ನೋವಿಗೆ ಗೌರವ ಕೊಟ್ಟಿದೆ. ಈಗ ಭಾರತ ನಿಜವಾದ ಅರ್ಥದಲ್ಲಿ ಸಂಪೂರ್ಣ ಸ್ವಾತಂತ್ರ್ಯದ ಕಡೆಗೆ ಹೊರಟಿದೆ.

ನಮ್ಮ ನೆಲದ ಶ್ರದ್ಧೆಯ ಕೇಂದ್ರಗಳಾದ ಅಮರನಾಥ್‌, ವೈಷ್ಣೋದೇವಿ ಇನ್ನಿತರ ದೇಗುಲಗಳ ದರ್ಶನ ನಮಗೆ ಮರೀಚಿಕೆ ಆಗಿತ್ತಲ್ಲವೆ? ತಾಯಿ ಶಾರದೆಯ ಆವಾಸ ನಮಗೆ ನೋಡಲು ಕಷ್ಟ ಸಾಧ್ಯವಾಗಿದೆಯಲ್ಲವೆ? ಶಂಕರರು, ಬುದ್ಧ, ಅಸಂಖ್ಯ ಸಂತ ಮಹಂತರು ಸಂಚರಿಸಿದ ನೆಲ ನಮಗೆ ಪರಕೀಯ ಆಗಿತ್ತಲ್ಲವೇ? ನಮ್ಮ ಸೈನಿಕರು ಪ್ರಾಣ ಕೊಟ್ಟು ಹುತಾತ್ಮರಾದ, ನಮಗೆ ಪ್ರೇರಣೆ ಕೊಡಬೇಕಾಗಿದ್ದ ರಣಭೂಮಿ ನಮಗೆ ಹೋಗಲು ಭಯ ಹುಟ್ಟಿಸಿತ್ತು ಅಲ್ಲವೇ? ಒಂದೇ ಮನೆಯ ಮಕ್ಕಳಂತೆ ಬಾಳಿ ಬದುಕಬೇಕಾಗಿದ್ದ ಅವರೆಲ್ಲರೂ ನಮ್ಮನ್ನೇ ಶತ್ರುಗಳು ಎಂದುಕೊಂಡು ಎದೆ ಬಗೆಯುವ ಕೆಟ್ಟ ಕೆಲಸ ಮಾಡಿದರಲ್ಲವೇ? ಈ ಎಲ್ಲ ನೋವು ದುಃಖ ಕೊರಗುಗಳಿಗೆ ಒಂದು ಹಂತದ ಮುಕ್ತಿ ಸಿಕ್ಕಿದೆ. ಹಲವು ಪೀಳಿಗೆಯ ದೇಶಭಕ್ತರ ತ್ಯಾಗ, ತಂತ್ರ, ತಪಸ್ಸು, ಅರ್ಪಣೆ, ತರ್ಪಣೆಗಳಿಗೆ ಸೂಕ್ತ ಗೌರವ ತಂದು ಕೊಡಲು ದೇಶ ಸುದೀರ್ಘ‌ ಏಳು ದಶಕಗಳೇ ಕಾಯ ಬೇಕಾಯಿತು.

ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ಬಲಿದಾನ, ಬಾಬಾ ಸಾಹೇಬ್‌ ಅಂಬೇಡ್ಕರರ ಕನಸು,ಆರ್‌ಎಸ್‌ಎಸ್‌ನಂತಹ ದೇಶಭಕ್ತ ಸಂಘಟನೆಯ ತಪಸ್ಸುಗಳಿಗೆ ಕೊಟ್ಟ ಗೌರವ, ಸಂದ ಜಯ ಇದು. ನೂರಾರು ಕೋಟಿ ಭಾರತವಾಸಿಗಳಿಗೆ ಒದಗಿದ ನ್ಯಾಯ ಇದು.

ಇನ್ನೂ ಒಂದು ವಾರ ಕಳೆದರೆ ಅಜಾತಶತ್ರು ಅಟಲ್ ಜೀ ನಮನ್ನು ಆಗಲಿ ಒಂದು ವರ್ಷವಾಗಲಿದೆ, ಒಂದು ವರ್ಷ ಕಳೆಯುವಷ್ಟರಲ್ಲಿ ವಾಜಪೇಯಿ ಅವರ ಆಸೆಯಂತೆ ಅವರ ಶಿಷ್ಯರು ಕೊನೆಗೂ ಕಾಶ್ಮೀರದ ವಿಷಯದಲ್ಲಿ ಭಾರತವನ್ನು ತಲೆತಗ್ಗಿಸಲು ಬಿಡಲಿಲ್ಲ. ಅಮೆರಿಕ ಮಾತ್ರವಲ್ಲ ಇಡೀ ವಿಶ್ವವೇ ಎದುರು ನಿಂತರೂ ನಾಡನುಳಿಸಲು ಬಲ್ಲೆವು ಎಂದು ಸಾಬೀತುಪಡಿಸಿದ್ದಾರೆ. ಭಾರತದ ತಲೆಗೆ (ಕಾಶ್ಮೀರ) ಸರಿಯಾದ ಬೆಲೆ ಕೊಟ್ಟು, ಜಗತ್ತಿನ ಮುಂದೆ ತಲೆ ಎತ್ತುವಂಥ ಕೆಲಸವನ್ನೇ ಮಾಡಿದ್ದಾರೆ.

• ಡಾ. ಮಲ್ಲಿಕಾರ್ಜುನ ಬಾಳಿಕಾಯಿ

Advertisement

Udayavani is now on Telegram. Click here to join our channel and stay updated with the latest news.

Next