Advertisement

ರಣ ರೋಚಕ ಕ್ಷೇತ್ರ ವೈಭವ

08:29 AM Aug 12, 2019 | Suhan S |
ಚಿತ್ರ: ಕುರುಕ್ಷೇತ್ರ
•ನಿರ್ಮಾಣ: ಮುನಿರತ್ನ

•ನಿರ್ದೇಶನ: ನಾಗಣ್ಣ

Advertisement

•ತಾರಾಗಣ: ದರ್ಶನ್‌, ಅಂಬರೀಶ್‌, ಅರ್ಜುನ್‌ ಸರ್ಜಾ, ಶಶಿಕುಮಾರ್‌, ರವಿಚಂದ್ರನ್‌, ನಿಖೀಲ್ ಮತ್ತಿತರರು.

ಒಂದು ಕಮರ್ಷಿಯಲ್ ಸಿನಿಮಾವನ್ನು ಸುಲಭವಾಗಿ ಮಾಡಿಬಿಡಬಹುದು. ಅದಕ್ಕೆ ಲಾಜಿಕ್‌ ಆಗಲೀ, ದೊಡ್ಡ ಮಟ್ಟದ ಪೂರ್ವಸಿದ್ಧತೆಯಾಗಲಿ ಬೇಕಾಗಿರುವುದಿಲ್ಲ. ಜನ ಕೂಡಾ ಕಮರ್ಷಿಯಲ್ ಸಿನಿಮಾಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ಮನರಂಜನೆಗಷ್ಟೇ ಸೀಮಿತ ಮಾಡುತ್ತಾರೆ. ಆದರೆ, ಇತಿಹಾಸ ಪುಟದಲ್ಲಿ ದಾಖಲಾಗಿರುವ ಅಂಶಗಳನ್ನು ಸಿನಿಮಾ ಮಾಡೋದು ಸುಲಭವಲ್ಲ. ಅದರಲ್ಲೂ ಪೌರಾಣಿಕ ಸಿನಿಮಾ ಮಾಡಬೇಕಾದರೆ ಸಾಕಷ್ಟು ಸಿದ್ಧತೆ ಬೇಕು. ಆ ನಿಟ್ಟಿನಲ್ಲಿ ಈ ವಾರ ತೆರೆಗೆ ಬಂದಿರುವ ‘ಕುರುಕ್ಷೇತ್ರ’ ಚಿತ್ರದ ಪ್ರಯತ್ನವನ್ನು ಮೆಚ್ಚಲೇಬೇಕು. ತುಂಬಾ ವರ್ಷಗಳ ನಂತರ ಕನ್ನಡದಲ್ಲಿ ಬರುತ್ತಿರುವ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ವಾದ್ದರಿಂದ ಸಿನಿಪ್ರೇಮಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಇವತ್ತಿನ ತಂತ್ರಜ್ಞಾನವನ್ನು ಬಳಸಿಕೊಂಡು ಪೌರಾಣಿಕ ಸಿನಿಮಾ ಹೇಗೆ ಮೂಡಿ ಬಂದಿರಬಹುದೆಂಬ ಕುತೂಹಲವೂ ಇತ್ತು. ಆ ಎಲ್ಲಾ ಕುತೂಹಲವನ್ನು ತಣಿಸುವಲ್ಲಿ ‘ಕುರುಕ್ಷೇತ್ರ’ ಯಶಸ್ವಿಯಾಗಿದೆ.

ಇಡೀ ಮಹಾಭಾರತವನ್ನು ಕಟ್ಟಿ ಕೊಡೋದು ಸುಲಭದ ಮಾತಲ್ಲ. ಅದೇ ಕಾರಣದಿಂದ ಈ ಚಿತ್ರದಲ್ಲಿ ಕೇವಲ ದುರ್ಯೋಧನನ್ನು ಮೂಲವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕುರುವಂಶದ ದೊರೆ ದುರ್ಯೋಧನನ ಸ್ವಾಭಿಮಾನ, ಸೇಡು, ಛಲ, ಸ್ನೇಹ, ಪರಾಕ್ರಮವೇ ‘ಕುರುಕ್ಷೇತ್ರ’ ಚಿತ್ರದ ಹೈಲೈಟ್. ದುರ್ಯೋಧನ ಉದಯ, ಮೆರೆದಾಟ, ಅಂತ್ಯವನ್ನು ಸಾಕಷ್ಟು ಸೂಕ್ಷ್ಮಅಂಶಗಳೊಂದಿಗೆ ಕಟ್ಟಿಕೊಡಲಾಗಿದೆ. ಜೊತೆಗೆ ಇಲ್ಲಿ ಕರ್ಣನ ಹಿನ್ನೆಲೆ, ಸ್ನೇಹ, ಪ್ರಾಮಾಣಿಕತೆ, ದಾನಶೂರ ಗುಣವನ್ನು ಹೈಲೈಟ್ ಮಾಡಲಾಗಿದೆ. ಇಷ್ಟು ಅಂಶಗಳನ್ನು ಮೂಲವಾಗಿಟ್ಟುಕೊಂಡು ಸಿನಿಮಾವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಪೌರಾಣಿಕ ಸಿನಿಮಾಕ್ಕೆ ಮುಖ್ಯವಾಗಿ ಬೇಕಾಗಿರೋದು ಮೂಲ ಅಂಶಗಳಿಗೆ ನಿಷ್ಠೆ ಹಾಗೂ ದೃಶ್ಯ ವೈಭವ. ‘ಕುರುಕ್ಷೇತ್ರ’ ಚಿತ್ರದ ಪ್ರತಿಯೊಂದು ದೃಶ್ಯ ಕೂಡಾ ಅದ್ಧೂರಿ ಹಾಗೂ ಅದ್ಭುತವಾಗಿದೆ. ಕೌರವ-ಪಾಂಡವರ ಸಾಮ್ರಾಜ್ಯ, ಜೂಜು, ಅದ್ಧೂರಿತವನ್ನು ನಿರ್ಮಾಪಕ ಮುನಿರತ್ನ ಹಾಗೂ ನಿರ್ದೇಶಕ ನಾಗಣ್ಣ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸುಯೋಧನನ ಎಂಟ್ರಿ, ಯುದ್ಧ, ಹಾಡು ಎಲ್ಲವೂ ಕಣ್ಣಿಗೆ ಹಬ್ಬದಂತಿದೆ. ಈ ಅಂಶಗಳಲ್ಲಿ ಗ್ರಾಫಿಕ್‌ ಅನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ಸಾಮಾನ್ಯವಾಗಿ ಪೌರಾಣಿಕ ಸಿನಿಮಾಗಳನ್ನು ಮಾಡುವಾಗ ಆಗುವ ಆಭಾಸಗಳಿಂದಲೂ ‘ಕುರುಕ್ಷೇತ್ರ’ ಮುಕ್ತ. ಅಂದಿನ ಕಾಲಘಟ್ಟ ಹೇಗಿತ್ತೋ, ಏನು ಬೇಕಿತ್ತೋ ಅವೆಲ್ಲವೂ ‘ಕುರುಕ್ಷೇತ್ರ’ದಲ್ಲಿದೆ. ಪೌರಾಣಿಕ ಸಿನಿಮಾಗಳಲ್ಲಿ ವೇಷ-ಭೂಷಣದ ಜೊತೆಗೆ ಪ್ರಮುಖ ಪಾತ್ರ ವಹಿಸುವುದು ಸಂಭಾಷಣೆ. ಆ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವಿ.ನಾಗೇಂದ್ರ ಪ್ರಸಾದ್‌ ಎಲ್ಲೂ ಅಪಭ್ರಂಶವಾಗದಂತೆ ನೋಡಿಕೊಂಡಿದ್ದಾರೆ.

 

Advertisement

.ರವಿ ಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next