ಬೀದರ: ಮೂರನೇ ಅಲೆ ರೂಪದಲ್ಲಿ ಅಪ್ಪಳಿಸಲಾರಂಭಿಸಿರುವ ಕೋವಿಡ್ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ವಿ ಧಿಸಿರುವ ವೀಕೆಂಡ್ ಕರ್ಫ್ಯೂಗೆ ಎರಡನೇ ದಿನವಾದ ರವಿವಾರವೂ ಧರಿನಾಡು ಬೀದರ ಸ್ತಬ್ಧವಾಗಿತ್ತು. ಕೆಲ ಜನರ ಓಡಾಟ ಹೊರತುಪಡಿಸಿದರೆ ನಗರ ಸೇರಿ ಜಿಲ್ಲಾದ್ಯಂತ ಬಂದ್ ವಾತಾವರಣ ಕಂಡುಬಂದಿತು.
ಕೊರೊನಾ ಸ್ಫೋಟ ಹಿನ್ನೆಲೆ ಶನಿವಾರ ಮತ್ತು ರವಿವಾರದ ವಾರಾಂತ್ಯದ ಕರ್ಫ್ಯೂಗೂ ಉತ್ತಮ ಜನ ಬೆಂಬಲ ವ್ಯಕ್ತವಾಯಿತು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಕರ್ಫ್ಯೂ ಪರಿಣಾಮಕಾರಿ ಜಾರಿಗೊಳಿಸಲು ಯಶಸ್ಸು ಕಂಡಿದೆ. ಎರಡು ದಿನಗಳ ಕಾಲ μàಲ್ಡಿಗಿಳಿದಿದ್ದ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ಜನರು ಮತ್ತು ವಾಹನ ತಡೆದು ವಾಪಸ್ ಕಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಮೋಹನ ಮಾರ್ಕೆಟ್, ಉದಗೀರ್ ರಸ್ತೆ, ಶಿವನಗರ, ಬಿವಿಬಿ ಕಾಲೇಜು ರಸ್ತೆ, ಗುಂಪಾ ಮತ್ತು ಓಲ್ಡ್ ಸಿಟಿ ಹೀಗೆ ಪ್ರತಿ ಪ್ರಮುಖ ರಸ್ತೆಗಳೆಲ್ಲ ಬಂದ್ ಆಗಿತ್ತು. ಜನರ, ವಾಹನಗಳ ಓಡಾಟ ಹೆಚ್ಚಾಗಿ ಇಲ್ಲದೇ ಬಿಕೋ ಎನ್ನುತ್ತಿದ್ದವು. ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಅಲ್ಲಲ್ಲಿ ಬೀಡುಬಿಟ್ಟಿದ್ದ ಪೊಲೀಸ್ ಅಧಿ ಕಾರಿ ಮತ್ತು ಸಿಬ್ಬಂದಿ ವಾಹನ ತಡೆದು ತಪಾಸಣೆ ಮಾಡಿದರು. ಮಾಸ್ಕ್ ಇಲ್ಲದವರಿಗೆ ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಿದರು. ವಿವಿಧ ಕಾರಣ ನೀಡಿ ಜನ ರಸ್ತೆಗಿಳಿದಿರುವುದು ಕಂಡು ಬಂತು.
ಕಿರಾಣಿ, ತರಕಾರಿ, ಹಾಲು-ಹಣ್ಣು, ಔಷಧ ಅಂಗಡಿ ಸೇರಿ ಅಗತ್ಯ ವಸ್ತುಗಳು ಹೊರತುಪಡಿಸಿದರೆ ಉಳಿದ ವ್ಯಾಪಾರ-ವಹಿವಾಟು ಬಂದ್ ಆಗಿತ್ತು. ಆಟೋ ಸಂಚಾರ ಬಂದ್ ಆಗಿದ್ದರೆ, ಸಾರಿಗೆ ಬಸ್ ಗಳ ಕಾರ್ಯಾಚರಣೆ ಇತ್ತಾದರೂ ಪ್ರಯಾಣಿಕರ ಸಂಖ್ಯೆ ತೀರ ವಿರಳವಾಗಿತ್ತು. ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಕೆಲವೆಡೆ ಮಾತ್ರ ಹೋಟೆಲ್ಗಳು ತೆರೆದಿದ್ದವು. ಸೋಮವಾರ ಬೆಳಗ್ಗೆ 8ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ. ನಂತರ ವ್ಯಾಪಾರ-ವಹಿವಾಟು ಎಂದಿನಂತೆ ಸಾಮಾನ್ಯವಾಗಿರಲಿದೆ. ಆದರೆ, ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಮುಂದೆ ಸರ್ಕಾರ ಬಂದ್ ವಿಷಯದಲ್ಲಿ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ಎಂದು ಜನರಲ್ಲಿ ಆತಂಕ ಮನೆ ಮಾಡಿದೆ.