Advertisement

ಮತ ಎಣಿಕೆ ಸಮರ್ಪಕವಾಗಿ ನಡೆಯಲಿ: ಡೀಸಿ

10:27 PM May 19, 2019 | Lakshmi GovindaRaj |

ಚಾಮರಾಜನಗರ: ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ ಕಾವೇರಿ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ನಂಜನಗೂಡು, ವರುಣಾ, ತಿ.ನರಸೀಪುರ, ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಣಿಕೆ ಕಾರ್ಯಕ್ಕೆ ನಿಯೋಜಿತರಾಗಿರುವ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರಿಗೆ ಆಯೋಜಿಸಲಾಗಿದ್ದ ಮತ ಎಣಿಕ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅನುಮಾನ ಸರಿಪಡಿಸಿಕೊಳ್ಳಿ: ನಗರದ ಬೇಡರ‌ಪುರ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೇ 23 ರಂದು ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ ನೇಮಕವಾಗಿರುವ ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಮತ ಎಣಿಕೆಯಲ್ಲಿ ಯಾವುದೇ ಲೋಪದೋಷ ಮತ್ತು ಗೊಂದಲಗಳಿಗೆ ಅವಕಾಶ ನೀಡಬಾರದು. ತರಬೇತಿಯಲ್ಲಿ ತಿಳಿಸುವ ಪ್ರತಿ ಮಾಹಿತಿಯನ್ನು ಗಭೀರವಾಗಿ ತೆಗೆದುಕೊಂಡು ಅನುಮಾನ ಬಗೆಹರಿಸಿಕೊಳ್ಳಿ ಎಂದರು.

ವಿಳಂಬಕ್ಕೆ ಆಸ್ಪದವಿಲ್ಲ: ಮತ ಎಣಿಕೆ ದಿನದಂದು ಸೂಚಿಸಲಾಗಿರುವ ಸಮಯಕ್ಕೆ ಸರಿಯಾಗಿ ಮತ ಎಣಿಕೆ ಸಿಬ್ಬಂದಿ ವರ್ಗ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಬೇಕು. ವಿಳಂಬಕ್ಕೆ ಆಸ್ಪದವಿರುವುದಿಲ್ಲ. ಮತ ಎಣಿಕೆ ವೇಳೆ ಅಜಾಗರೂಕತೆ ಮತ್ತು ಬೇಜವಾಬ್ದಾರಿತನಕ್ಕೆ ಅವಕಾಶವಾಗದಂತೆ ಕರ್ತವ್ಯ ನಿರ್ವಹಿಸಿ. ಮತ ಎಣಿಕೆ ಕರ್ತವ್ಯವನ್ನು ಅತ್ಯಂತ ಹೊಣೆಗಾರಿಕೆಯಿಂದ ನಿಭಾಯಿಸಿ ಎಂದು ಸೂಚಿಸಿದರು.

ಲೋಕಸಭೆ ಚುನಾವಣೆ ಘೋಷಣೆಯಾದ ಸಮಯದಿಂದ ಇಲ್ಲಿಯವರೆಗೂ ಅತ್ಯಂತ ಅಚ್ಚುಕಟ್ಟಾಗಿ ಚುನಾವಣೆ ಕೆಲಸಗಳು ನಡೆದಿವೆ. ಈಗ ಉಳಿದಿರುವ ಮತ ಎಣಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದರೆ ಇಡೀ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ನಡೆದಂತಾಗುತ್ತದೆ ಎಂದು ತಿಳಿಸಿದರು.

Advertisement

ರಾಜ್ಯ ಮಟ್ಟದ ಚುನಾವಣಾ ಸಂಪನ್ಮೂಲ ವ್ಯಕ್ತಿ ಪ್ರೊ.ಕೃ.ಪ.ಗಣೇಶ್‌ ಅವರು ಮತ ಎಣಿಕೆ ಕರ್ತವ್ಯದ ವಿವಿಧ ಹಂತಗಳನ್ನು ಪವರ್‌ ಪಾಯಿಂಟ್‌ ಮೂಲಕ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಉಪವಿಭಾಗಾಧಿಕಾರಿ ನಿಖೀತಾ ಚಿನ್ನಸ್ವಾಮಿ, ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್‌ ಉಪಸ್ಥಿತರಿದ್ದರು.

19 ಮೇ ಸಿಎಚ್‌ಎನ್‌ ಡಿಸಿ ಎಲೆಕ್ಷನ್‌ ಮೀಟಿಂಗ್‌: ಚಾಮರಾಜನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಲೋಕಸಭಾ ಚುನಾವಣೆ ಮತ ಎಣಿಕೆಗೆ ನಿಯೋಜಿತರಾಗಿರುವ ಅಧಿಕಾರಿಗಳ ಸಭೆ ನಡೆಸಿದರು.

ಪಟಾಕಿ, ಬಿಡಿ ಪೆಟ್ರೋಲ್‌ಗೆ ನಿಷೇಧ: ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮೇ 23ರಂದು ನಗರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮೇ 23ರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಮಧ್ಯರಾತ್ರಿ 12 ಗಂಟೆವರೆಗೆ ಪಟಾಕಿ ಮಾರಾಟ ಹಾಗೂ ಬಿಡಿ ಪೆಟ್ರೋಲ್‌ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ.

ಫ‌ಲಿತಾಂಶ ಪ್ರಕಟವಾದ ನಂತರ ವಿಜೇತ ಅಭ್ಯರ್ಥಿ ಪರವಾಗಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಾಚರಣೆ ಹೆಸರಿನಲ್ಲಿ ಪಟಾಕಿ ಸಿಡಿಸಿ ಸೋತ ಅಭ್ಯರ್ಥಿಗಳ ಮತ್ತು ಕಾರ್ಯಕರ್ತರನ್ನು ಕೆರಳಿಸುವ ಸಾಧ್ಯತೆಯಿದೆ. ಅಲ್ಲದೇ, ಕಿಡಿಗೇಡಿಗಳು ತಮ್ಮ ಸ್ವಾರ್ಥ ಸಾಧನೆಗೆ ವಿಧ್ವಂಸಕ ಕೃತ್ಯಕ್ಕೆ ನಡೆಸುವುದನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯೋತ್ಸವ, ಸಭೆ ನಡೆಸಂಗಿಲ್ಲ: ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ನಂಜನಗೂಡು- ಮೈಸೂರು ರಸ್ತೆಯ ತಾಲೂಕಿನ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೇ 23ರಂದು ನಡೆಯಲಿದೆ.

ಹೀಗಾಗಿ ಮೇ 23ರ ಬೆಳಗ್ಗೆ 6ರಿಂದ ಮೇ 24ರ ಮಧ್ಯರಾತ್ರಿ 12 ರವರೆಗೆ ಜಿಲ್ಲಾದ್ಯಂತ (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ) ಸಿಆರ್‌ಪಿಸಿ 144ರ ಕಲಂ ಅನ್ವಯ ವಿಜಯಿ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆ, ಸಭೆ ಸಮಾರಂಭ, ಪಟಾಕಿ ಸಿಡಿಸುವುದು,

ಗುಂಪುಗೂಡುವುದು, ಉದ್ರೇಕಕಾರಿ ಘೋಷಣೆ ಕೂಗುವುದು, ಸೋತ ಅಭ್ಯರ್ಥಿಗಳ, ಪಕ್ಷಗಳ ಕಾರ್ಯಕರ್ತರನ್ನು ಛೇಡಿಸುವುದು, ವಿಜಯೋತ್ಸವ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಸ್ಫೋಟಕ ವಸ್ತು, ಮಾರಕಾಸ್ತ್ರ ಒಯ್ಯುವುದು, 5ಕ್ಕಿಂತ ಹೆಚ್ಚಿನ ಜನ ಗುಂಪುಗೂಡುವುದನ್ನೂ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next