Advertisement

ತಮ್ಮನ ಸರ್ಕಾರದಲ್ಲಿ ಅತೃಪ್ತರಿಗೆ ಅಣ್ಣನೇ “ವಿಲನ್‌’

11:32 PM Jul 14, 2019 | Team Udayavani |

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್‌ನ ಅತೃಪ್ತರು ಪಕ್ಷದ ನಾಯಕರ ಮೇಲಿನ ಮುನಿಸಿಗಿಂತ ದೇವೇಗೌಡರ ಕುಟುಂಬದ ಹಸ್ತಕ್ಷೇಪದ ಮೇಲೆಯೇ ಹೆಚ್ಚು ಅಸಮಾಧಾನ ಹೊರ ಹಾಕಿದ್ದಾರೆ. ಅದೇ ಕಾರಣಕ್ಕೆ ಸರ್ಕಾರ ಪತನದ ಅಂಚಿಗೆ ತಲುಪಿದೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

Advertisement

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬೇಡಿಕೆಗಳಿಗೆ ಬೆಲೆ ಕೊಡುತ್ತಿಲ್ಲ ಎಂಬ ಬೇಸರದ ಜತೆಗೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಹಸ್ತಕ್ಷೇಪ, ಸಚಿವ ಸಾ.ರಾ.ಮಹೇಶ್‌ ಅವರ ನಡವಳಿಕೆ, ದೇವೇಗೌಡರ ಮಗಳ ಹಸ್ತಕ್ಷೇಪವೂ ಅತೃಪ್ತಿಗೆ ಕಾರಣಗಳೆನ್ನಲಾಗಿದೆ. ಅದರಿಂದಾಗಿಯೇ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ರಾಜೀನಾಮೆ ನೀಡಿ ಸರ್ಕಾರವನ್ನು ಅಲ್ಪಮತಕ್ಕೆ ತಂದು ನಿಲ್ಲಿಸುವಂತೆ ಮಾಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ತಮ್ಮನ ಸರ್ಕಾರ ಪತನಕ್ಕೆ “ಅಣ್ಣನೇ ವಿಲನ್‌’ ಎನ್ನುವಂತಾಗಿದೆ.

ಯಾವುದರಲ್ಲಿ ಹಸ್ತಕ್ಷೇಪ?
ಆಪ್ತ ಕಾರ್ಯದರ್ಶಿಯೂ ಅವರದ್ದೇ: ಮೈತ್ರಿ ಸರ್ಕಾರದಲ್ಲಿ ಬಹುತೇಕ ಸಚಿವರ ಆಪ್ತ ಕಾರ್ಯದರ್ಶಿಗಳಿಂದ ಹಿಡಿದು ಕಚೇರಿ ಸಹಾಯಕವರೆಗೂ ಎಚ್‌.ಡಿ. ರೇವಣ್ಣ ಹಾಗೂ ದೇವೇಗೌಡರ ಸೂಚನೆ ಮೇರೆಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬಹುತೇಕ ಸಚಿವರು ವಿಧಿಯಿಲ್ಲದೇ ತಮಗೆ ಇಷ್ಟ ಇಲ್ಲದಿರುವ ಆಪ್ತ ಕಾರ್ಯದರ್ಶಿಗಳೊಂದಿಗೆ ಕೆಲಸ ಮಾಡುವ ಪರಿಸ್ಥಿತಿ ಇದೆ ಎನ್ನಲಾಗುತ್ತಿದೆ.

ವರ್ಗಾವಣೆಯಲ್ಲಿ ಹಸ್ತಕ್ಷೇಪ: ಯಾವುದೇ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಆಗಬೇಕೆಂದರೆ, ಸಂಬಂಧಪಟ್ಟ ಇಲಾಖೆಯ ಸಚಿವರ ಶಿಫಾರಸ್ಸಿಗಿಂತ ರೇವಣ್ಣ ಅವರ ಶಿಫಾರಸ್ಸಿದ್ದರೆ ಕೆಲಸ ಗ್ಯಾರಂಟಿ ಎನ್ನುವ ಮಾತುಗಳು ವಿಧಾನಸೌಧದ ಕಾರಿಡಾರ್‌ಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತವೆ.

ಕಾಂಗ್ರೆಸ್‌ನ ಎಂಭತ್ತು ಶಾಸಕರು ಆಯ್ಕೆಯಾಗಿರುವ ಕ್ಷೇತ್ರಗಳಲ್ಲಿ ಅವರ ವಿರುದ್ಧ ಸೋತಿರುವ ಜೆಡಿಎಸ್‌ನ ಅಭ್ಯರ್ಥಿಗಳು ಮಾಡುವ ಶಿಫಾರಸ್ಸುಗಳ ಆಧಾರದ ಮೇಲೆಯೇ ಅಧಿಕಾರಿಗಳ ವರ್ಗಾವಣೆ ಹಾಗೂ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುತ್ತಿದೆ. ರೇವಣ್ಣ ತಮ್ಮ ಸಮುದಾಯ ಹಾಗೂ ಆಪ್ತ ಅಧಿಕಾರಿಗಳನ್ನೇ ಆಯಕಟ್ಟಿನ ಸ್ಥಳಗಳಿಗೆ ನಿಯೋಜನೆ ಮಾಡಿಸಿಕೊಂಡು ತಮ್ಮ ಅಣತಿಯಂತೆ ನಡೆಸಿಕೊಳ್ಳುತ್ತಿದ್ದಾರೆಂಬ ಆರೋಪವಿದೆ.

Advertisement

ಗೃಹ ಇಲಾಖೆಯಲ್ಲಿಯೂ ಜಿಲ್ಲಾ ವರಿಷ್ಠಾಧಿಕಾರಿಯಿಂದ ಹಿಡಿದು ಇನ್ಸ್‌ಪೆಕ್ಟರ್‌ವರೆಗೂ ಜೆಡಿಎಸ್‌ ನಾಯಕರು ತಮಗೆ ಬೇಕಾದಂತೆ ಅಧಿಕಾರಿಗಳನ್ನು ವರ್ಗಾಯಿಸಿಕೊಂಡಿರುವುದರಿಂದ ಹಾಲಿ ಶಾಸಕರಿಗೆ ಕ್ಷೇತ್ರದಲ್ಲಿ ಹಾಗೂ ತಮ್ಮ ಜಿಲ್ಲೆಯಲ್ಲಿ ತಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂಬ ಅಳಲು ಬಹುತೇಕ ಕಾಂಗ್ರೆಸ್‌ ಶಾಸಕರದ್ದಾಗಿದೆ.

ಅನುದಾನದಲ್ಲಿ ತಾರತಮ್ಯ: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿಯೂ ಕುಮಾರಸ್ವಾಮಿ ತಾರತಮ್ಯ ಮಾಡುತ್ತಿದ್ದಾರೆಂಬ ದೂರಿದೆ. ರೇವಣ್ಣ ತಮಗೆ ಬೇಕಾದ ಯೋಜನೆಗಳಿಗೆ ಬೇಕಾದಷ್ಟು ಅನುದಾನವನ್ನು ಪಡೆದುಕೊಳ್ಳುತ್ತಿದ್ದರೂ, ಬೇರೆ ಸಚಿವರ ಇಲಾಖೆಗಳಿಗೆ ಹಾಗೂ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಾರೆಂಬ ಆರೋಪವನ್ನು ಕಾಂಗ್ರೆಸ್‌ ಸಚಿವರೂ ವ್ಯಕ್ತಪಡಿಸುತ್ತಾರೆ.

ಕಾಂಗ್ರೆಸ್‌ ಶಾಸಕರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ವಿಷಯದ ಕೆಲಸಗಳಿಗೆ ಸಂಬಂಧಪಟ್ಟ ಸಚಿವರ ಬಳಿ ಅನುದಾನ ಕೇಳಿದರೂ, ಅವರು ಮುಖ್ಯಮಂತ್ರಿ ಇಲ್ಲವೇ ರೇವಣ್ಣ ಅವರನ್ನು ಭೇಟಿ ಮಾಡಿ ಎಂಬ ಸೂಚನೆ ನೀಡುವ ಸ್ಥಿತಿ ಇದೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿಯೂ ಅವರದೇ ಪಾತ್ರ: ರೇವಣ್ಣ ಅವರು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿಯೂ ತಮ್ಮ ಹಸ್ತಕ್ಷೇಪ ಮಾಡುತ್ತಿದ್ದರು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಅದೇ ಕಾರಣಕ್ಕೆ ಬೆಂಗಳೂರಿನ ಐವರು ಶಾಸಕರು ಮುನಿಸಿಕೊಂಡು ರಾಜೀನಾಮೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ ಕಾರ್ಯವನ್ನು ರೇವಣ್ಣ ಅವರ ಪ್ರಭಾವ ಬಳಸಿ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿಸಿಕೊಂಡಿರುವುದು ನಗರದ ಕಾಂಗ್ರೆಸ್‌ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ. ಸುಮಾರು 16 ಸಾವಿರ ಕೋಟಿ ರೂ. ವೆಚ್ಚದ ಯೋಜನೆಯನ್ನು ರೇವಣ್ಣ ತಮ್ಮ ಇಲಾಖೆ ವ್ಯಾಪ್ತಿಗೆ ತೆಗೆದುಕೊಂಡಿರುವುದರಿಂದ ನಗರದ ಹೊರವಲಯದಲ್ಲಿರುವ ಶಾಸಕರ ಪಾತ್ರ ಇಲ್ಲದಂತಾಗಿದ್ದು, ಬಂಡಾಯಕ್ಕೆ ಅದೂ ಕಾರಣ ಎನ್ನಲಾಗಿದೆ.

ಅಸಹಾಯಕರಾದ ಡಿಸಿಎಂ: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರು, ಸಚಿವರಿಗೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಸರ್ಕಾರದಲ್ಲಿ ಕಾಂಗ್ರೆಸ್‌ನ ಮುಖ್ಯಸ್ಥರಾಗಿರುವ ಉಪ ಮುಖ್ಯಮಂತ್ರಿಯವರು ಅದನ್ನು ಸರಿಪಡಿಸುವ ಪ್ರಯತ್ನ ಮಾಡಲೇ ಇಲ್ಲ ಎಂಬ ಬೇಸರ ಕಾಂಗ್ರೆಸ್‌ ಶಾಸಕರಲ್ಲಿದೆ. ಪರಮೇಶ್ವರ್‌ ಅವರು ಧೈರ್ಯವಾಗಿ ಪಕ್ಷದ ಶಾಸಕರ ಹಿತ ಕಾಯದೇ ಅಸಹಾಯಕತೆ ಪ್ರದರ್ಶನ ಮಾಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಶಾಸಕರ ಒತ್ತಾಯದ ಮೇಲೆಯೇ ಪರಮೇಶ್ವರ್‌ ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ರೇವಣ್ಣ ಅವರ ಹಸ್ತಕ್ಷೇಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ರೇವಣ್ಣ ಅವರ ಮುನಿಸಿಗೂ ಕಾರಣವಾಗಿತ್ತು.

ಕೆಎಂಎಫ್ ಬಿಟ್ಟುಕೊಡಲು ನಿರಾಕರಣೆ: ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನವನ್ನೂ ಕಾಂಗ್ರೆಸ್‌ಗೆ ಬಿಟ್ಟು ಕೊಡಲು ಒಪ್ಪುತ್ತಿಲ್ಲ ಎನ್ನಲಾಗಿದೆ. ಕೆಎಂಎಫ್ನ 13 ನಿರ್ದೇಶಕರಲ್ಲಿ ಕಾಂಗ್ರೆಸ್‌ನ 7 ನಿರ್ದೇಶಕರಿದ್ದರೂ ಕೇವಲ ಮೂವರು ನಿರ್ದೇಶಕರನ್ನು ಹೊಂದಿರುವ ತಮಗೇ ಅಧ್ಯಕ್ಷ ಸ್ಥಾನ ಬೇಕೆಂದು ರೇವಣ್ಣ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಿದರೆ, ಸಚಿವ ಸ್ಥಾನ ಸಿಗದಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಸಮಾಧಾನ ಪಡಿಸುವ ಲೆಕ್ಕಾಚಾರ ಕೈ ನಾಯಕರದ್ದಾಗಿದೆ. ಅದಕ್ಕೂ ರೇವಣ್ಣ ಅಡ್ಡಗಾಲಾಗಿದ್ದಾರೆಂಬ ಆರೋಪ ಕಾಂಗ್ರೆಸ್‌ ಶಾಸಕರದ್ದಾಗಿದೆ.

ನಿರ್ಲಕ್ಷಿಸಿದ ಕುಮಾರಸ್ವಾಮಿ: ಕಾಂಗ್ರೆಸ್‌ ಶಾಸಕರು ಹಲವಾರು ಬಾರಿ ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದಾಗಲೂ ಕುಮಾರಸ್ವಾಮಿ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಸಮಾಧಾನಗೊಂಡ ಶಾಸಕರನ್ನು ಕಾಂಗ್ರೆಸ್‌ ನಾಯಕರೇ ಸಮಾಧಾನ ಪಡಿಸಲಿ ಎಂದು ನಿರ್ಲಕ್ಷ್ಯ ಭಾವನೆಯನ್ನು ಅವರು ತಾಳಿರುವುದು ಈ ಹಂತಕ್ಕೆ ಬಂದು ತಲುಪಲು ಕಾರಣವಾಗಿದೆ.

ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರಗಳ ಕೆಲಸಗಳಿಗೆ ಪತ್ರ ಹಿಡಿದುಕೊಂಡು ಮುಖ್ಯಮಂತ್ರಿ ಕಚೇರಿಗೆ ತೆರಳಿದರೆ, ಗಂಟೆಗಟ್ಟಲೇ ಕಾಯಿಸಿ, ಅವರ ಎದುರು ಸೋತಿದ್ದ ಜೆಡಿಎಸ್‌ ಅಭ್ಯರ್ಥಿಗಳನ್ನು ಒಳಗೆ ಕರೆದುಕೊಂಡು ಕೆಲಸ ಮಾಡಿಕೊಡುತ್ತಿದ್ದರು ಎಂಬ ಅಸಮಾಧಾನವೂ ಅತೃಪ್ತರ ಬಂಡಾಯ ಬಲಗೊಳ್ಳಲು ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಧ್ಯಕ್ಷರನ್ನೇ ನಿರ್ಲಕ್ಷಿಸಿದ್ದ ಸಾ.ರಾ.ಮಹೇಶ್‌: ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಎಚ್‌.ವಿಶ್ವನಾಥ್‌ ಅವರಿಗೆ ಪಕ್ಷದಲ್ಲಿ ಯಾವುದೇ ಅಧಿಕಾರ ಇಲ್ಲದಂತೆ ಮಾಡಲಾಗಿತ್ತು ಎಂಬ ನೋವನ್ನು ಅವರೇ ತೋಡಿಕೊಂಡಿದ್ದಾರೆ. ಅಲ್ಲದೇ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ತಮ್ಮ ಕ್ಷೇತ್ರದಲ್ಲಿಯೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಕಡೆಯ ಹಾಗೂ ತಮ್ಮ ಕುರುಬ ಸಮುದಾಯದ ಒಬ್ಬ ಅಭ್ಯರ್ಥಿಗೆ ಟಿಕೆಟ್‌ ಸಿಗದಂತೆ ನೋಡಿಕೊಂಡಿದ್ದು ವಿಶ್ವನಾಥ್‌ ಅವರ ಮುನಿಸಿಗೆ ಕಾರಣವಾಗಿತ್ತು ಎನ್ನಲಾಗಿದೆ.

ಅದನ್ನು ವಿಶ್ವನಾಥ್‌ ಅವರು ಬಹಿರಂಗವಾಗಿಯೇ ವ್ಯಕ್ತಪಡಿಸಿದರೂ, ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಸರಿಪಡಿಸುವ ಪ್ರಯತ್ನ ಮಾಡಲಿಲ್ಲ. ಕೆ.ಆರ್‌.ಪೇಟೆಯಲ್ಲಿ ದೇವೇಗೌಡರ ಪುತ್ರಿಯೇ ನೇರವಾಗಿ ಅಧಿಕಾರ ನಡೆಸುತ್ತಿದ್ದಾರೆ ಎನ್ನುವುದು ನಾರಾಯಣಗೌಡರ ಆರೋಪವಾಗಿದ್ದು, ಕುಟುಂಬದ ಹಸ್ತಕ್ಷೇಪ ಕುಮಾರಸ್ವಾಮಿಯ ಸರ್ಕಾರಕ್ಕೆ ಕಂಟಕವಾದಂತೆ ಕಾಣಿಸುತ್ತಿದೆ.

ಮನವೊಲಿಕೆ ಬದಲು ಟೆಂಪಲ್‌ ರನ್‌: ಮೈತ್ರಿ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್‌ನ ಬಹುತೇಕ ಶಾಸಕರು ರಾಜೀನಾಮೆ ಸಲ್ಲಿಸಲು ರೇವಣ್ಣ ಅವರ ಹಸ್ತಕ್ಷೇಪವೇ ಕಾರಣ ಎಂದು ಬಹಿರಂಗವಾಗಿ ಹೇಳಿಕೊಂಡು ಹೋಗುತ್ತಿದ್ದರೂ, ಆರೋಪಿಸುವವರ ಮನವೊಲಿಕೆಗೆ ಕಸರತ್ತು ನಡೆಸದೇ ರೇವಣ್ಣ ಅವರು, ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ರೇವಣ್ಣ ಅವರ ಮೇಲಿನ ಆರೋಪವನ್ನು ಸರಿಪಡಿಸುವುದಾಗಿ ಸ್ವತಃ ಕುಮಾರಸ್ವಾಮಿ ಭರವಸೆ ನೀಡಿದರೂ, ಅತೃಪ್ತರಿಗೆ ಅವರ ಭರವಸೆಯ ಮೇಲೆ ನಂಬಿಕೆ ಇಲ್ಲದಂತಾಗಿದೆ.

ಏಕೆಂದರೆ, ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಕೊಡದೇ ರೇವಣ್ಣ ತಾವಂದುಕೊಂಡಂತೆ ಕೆಲಸ ಮಾಡಿಕೊಳ್ಳುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಂದರ್ಭದಲ್ಲಿ ರೇವಣ್ಣ ಅವರು ಅತೃಪ್ತರ ಮನವೊಲಿಕೆಗೆ ಪ್ರಯತ್ನ ನಡೆಸದೇ ಟೆಂಪಲ್‌ ರನ್‌ ಮಾಡುತ್ತಿರುವುದು. ಅತೃಪ್ತರು ವಾಪಸ್‌ ಬಂದರೂ ಅವರು ತಮ್ಮ ಹಸ್ತಕ್ಷೇಪ ವರಸೆಯನ್ನು ಮುಂದುವರೆಸುತ್ತಾರೆ ಎಂಬ ಮಾತುಗಳು ಅತೃಪ್ತರ ಕಡೆಯಿಂದ ಕೇಳಿ ಬರುತ್ತಿವೆ.

ಅತೃಪ್ತರ ರಾಜೀನಾಮೆಗೆ 16 ಕಾರಣಗಳು
* ಆನಂದ್‌ಸಿಂಗ್‌: ಬೇರೆಯವರು ಸೂಚಿಸಿದ ಅಧಿಕಾರಿಗಳನ್ನು ತಮ್ಮ ಕ್ಷೇತ್ರದಲ್ಲಿ ಹಾಕಿ, ತಮ್ಮ ಬೇಡಿಕೆಗೆ ಸ್ಪಂದಿಸದೇ ಇರುವುದು.

* ರಮೇಶ್‌ ಜಾರಕಿಹೊಳಿ: ಬೆಳಗಾವಿ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪದ ಮೂಲಕ ಲಕ್ಷ್ಮೀ ಹೆಬ್ಟಾಳ್ಕರ್‌ ಪ್ರಭಾವ ಬೆಳೆಸಿಕೊಳ್ಳುತ್ತಿರುವುದು.

* ಮಹೇಶ್‌ ಕುಮಟಳ್ಳಿ: ರಮೇಶ್‌ ಜಾರಕಿಹೊಳಿಯನ್ನು ನಿರ್ಲಕ್ಷಿಸಿರುವುದು. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡಿಸುವಂತೆ ಮನವಿ ಮಾಡಿದರೂ ಸ್ಪಂದಿಸದೆ ಇರುವುದು.

* ಬಿ.ಸಿ.ಪಾಟೀಲ್‌: ಮೂರು ಸಾರಿ ಗೆದ್ದರೂ ಸಂಪುಟದಲ್ಲಿ ಸಚಿವರನ್ನಾಗಿ ಮಾಡದಿರುವುದು.

* ಶಿವರಾಮ್‌ ಹೆಬ್ಬಾರ್‌: ಕ್ಷೇತ್ರದಲ್ಲಿ ಆರ್‌.ವಿ.ದೇಶಪಾಂಡೆ ಹಸ್ತಕ್ಷೇಪ, ಮಂತ್ರಿ ಮಾಡದಿರುವುದು.
* ಪ್ರತಾಪ್‌ಗೌಡ ಪಾಟೀಲ್‌: ಸಂಪುಟದಲ್ಲಿ ಸ್ಥಾನ ನೀಡದಿರುವುದು.

* ರಾಮಲಿಂಗಾರೆಡ್ಡಿ: ತಮ್ಮನ್ನು ಸಂಪುಟದಿಂದ ಹೊರಗಿಟ್ಟು ಪರಮೇಶ್ವರ್‌ಗೆ ಬೆಂಗಳೂರು ಉಸ್ತುವಾರಿ ಜವಾಬ್ದಾರಿ ನೀಡಿರುವುದು.

* ಎಸ್‌.ಟಿ. ಸೋಮಶೇಖರ್‌: ತಮ್ಮ ಕ್ಷೇತ್ರಕ್ಕೆ ನಿರೀಕ್ಷಿತ ಅನುದಾನ ಬಿಡುಗಡೆ ಮಾಡದಿರುವುದು.

* ಮುನಿರತ್ನ: ಫೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪಿಡಬುಡಿ ಇಲಾಖೆಯಿಂದ ಕೈಗೆತ್ತಿಕೊಂಡಿರುವುದು.

* ಬೈರತಿ ಬಸವರಾಜ್‌: ಸಾಬೂನು ಮತ್ತು ಮಾರ್ಜಕ ನಿಗಮದ ಅಧಿಕಾರಿ ವರ್ಗಾವಣೆಯಲ್ಲಿ ಜಾರ್ಜ್‌ ಹಸ್ತಕ್ಷೇಪ.

* ರೋಷನ್‌ಬೇಗ್‌: ಕಾಂಗ್ರೆಸ್‌ ನಾಯಕರಾದ ದಿನೇಶ್‌ ಗುಂಡೂರಾವ್‌, ಸಿದ್ದರಾಮಯ್ಯ ಹಿರಿಯರನ್ನು ಕಡೆಗಣಿಸುವ ನಡವಳಿಕೆ.

* ಡಾ.ಸುಧಾಕರ್‌: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ಅಧ್ಯಕ್ಷರು ನೀಡುವಂತೆ ಸೂಚಿಸಿದರೂ, ಮುಖ್ಯಮಂತ್ರಿ ಅಧಿಕಾರ ನೀಡದೇ ಸತಾಯಿಸಿರುವುದು.

* ಎಂ.ಟಿ.ಬಿ. ನಾಗರಾಜ್‌: ವಸತಿ ಇಲಾಖೆ ಸಚಿವರಾಗಿದ್ದರೂ, ರೇವಣ್ಣ ಅವರ ಹಸ್ತಕ್ಷೇಪದಿಂದ ಇಲಾಖೆಯಲ್ಲಿ ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿರುವುದು.

* ಗೋಪಾಲಯ್ಯ: ಅಚ್ಚರಿ, ಬಿಟ್ಟವರಿಗೂ ಗೊತ್ತಿಲ್ಲ. ಕರೆಸಿಕೊಂಡವರಿಗೂ ಗೊತ್ತಿಲ್ಲ.

* ಎಚ್‌.ವಿಶ್ವನಾಥ್‌: ಅಧ್ಯಕ್ಷರಾಗಿಯೂ ಅಧಿಕಾರ ಚಲಾಯಿಸಲಾಗದೇ ಅಸಹಾಯಕರಾಗಿರುವುದು.

* ನಾರಾಯಣಗೌಡ: ಕ್ಷೇತ್ರದ ಕಾರ್ಯ ಚಟುವಟಿಕೆಗಳಲ್ಲಿ ದೇವೇಗೌಡರ ಪುತ್ರಿಯ ಹಸ್ತಕ್ಷೇಪ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next