Advertisement

ಮಡಕೆಯ ಮೊಸರಿಗೆ ಬಲಿಯಾದ ಕಾಗೆ

03:08 PM Jan 18, 2018 | |

ಒಂದಾನೊಂದು ಕಾಡಿನಲ್ಲಿ ಒಂದು ಕಾಗೆ ಮತ್ತು ಪಾರಿವಾಳ ಇದ್ದವು. ಆ ಜೀವದ ಗೆಳೆಯರಿಬ್ಬರೂ ಒಂದು ದೊಡ್ಡ ಆಲದ ಮರದಲ್ಲಿ ವಾಸವಾಗಿದ್ದರು. ಒಮ್ಮೆ ಭೀಕರ ಬರಗಾಲ ಬಂದಿತು. ಕಾಡಿನ ಪ್ರಾಣಿಗಳಿಗೆ ತಿನ್ನಲು ಏನೂ ಸಿಗಲಿಲ್ಲ, ಕುಡಿಯಲು ನೀರು ಇರಲಿಲ್ಲ. ಆಗ ಕಾಗೆ ಪಾರಿವಾಳಕ್ಕೆ “ಗೆಳೆಯ ನಾವು ಪಕ್ಕದ ಊರಿಗೆ ಹೋಗೋಣ ಅಲ್ಲಿ ನಮಗೆ ತಿನ್ನಲು ಏನಾದರೂ ಸಿಗುತ್ತದೆ’ ಎಂದಿತು. ಆಗ ಪಾರಿವಾಳ ಒಪ್ಪಿಗೆ ಸೂಚಿಸಿತ್ತು. ಇಬ್ಬರೂ ಹಾರಿಕೊಂಡು ಹೊರಟರು.  

Advertisement

ಹೋಗುತ್ತಾ ಹೋಗುತ್ತಾ ದಾರಿ ಮಧ್ಯ ಬಿಸಿಲಿನ ಬೇಗೆಗೆ ಬಾಯಾರಿಕೆ ಜೊತೆಗೆ ಹಸಿವು ಆಯಿತು. ಆಗ ಒಬ್ಬ ಮನುಷ್ಯ ಕಣ್ಣಿಗೆ ಬಿದ್ದ. ಅವನು ತಾಜಾ ಮೊಸರನ್ನು ಒಂದು ಮಡಕೆಯಲ್ಲಿ ತೆಗೆದುಕೊಂಡು ಸಂತೆಯಲ್ಲಿ ಮಾರಲು ಒಯ್ಯುತ್ತಿದ್ದನು. ಕಾಗೆಗೆ ಮೊಸರನ್ನು ಕಂಡು ಬಾಯಲ್ಲಿ ನೀರೂರಿತು. ಇಬ್ಬರೂ ಕೂಡಿ ಅವನ ಹಿಂದೆಯೇ ಹೋದರು. ಆ ವ್ಯಕ್ತಿ ವಿಶ್ರಾಂತಿ ಪಡೆಯಲೆಂದು ಒಂದು ಮರದ ಕೆಳಗಡೆ ಕುಳಿತನು. ಪಕ್ಕದಲ್ಲಿ ಮೊಸರಿನ ಮಡಕೆಯನ್ನು ಇಟ್ಟನು. ಅದೇ ಮರದ ಮೇಲೆ ಕಾಗೆ ಪಾರಿವಾಳ ಕುಳಿತಿತು. ಕಾಗೆ “ಗೆಳೆಯ ಇದೇ ಒಳ್ಳೆಯ ಸಮಯ. ಈವಾಗಲೇ ಮೊಸರು ತಿಂದು ಬಿಡೋಣ’ ಎಂದಿತು. ಆಗ ಪಾರಿವಾಳ “ಅದು ಹೇಗೆ ಸಾಧ್ಯ?’ ಎಂದು ಕೇಳಿತು. ನೋಡ ನೋಡುತ್ತಿದ್ದಂತೆಯೇ ಕಾಗೆ “ಹಾ ಹಾ ಹಾ ಅದು ಬಹಳ ಸುಲಭ’ ಎಂದು ನಕ್ಕು ಮಡಕೆಯ ಪಕ್ಕಕ್ಕೆ  ಹಾರಿತು. ಮುಚ್ಚಳ ಬೀಳಿಸಿ ಮೊಸರು ಕುಡಿದು ಮೇಲಕ್ಕೆ ಹಾರಿತು. ಮೇಲಕ್ಕ ಬಂದ ಕಾಗೆಗೆ ಮೊಸರಿನ ರುಚಿ ಹತ್ತಿತು. ಇನ್ನೂ ಬೇಕು ಎಂಬ ಆಸೆಯಲ್ಲಿ ಕೆಳಕ್ಕೆ ಹಾರುವುದು ಮೇಲೆ ಬರುವುದು ಮಾಡತೊಡಗಿತು. ಪಾರಿವಾಳಕ್ಕೆ ಮೊಸರು ಕುಡಿಯಲು ಅವಕಾಶವೇ ಸಿಗಲಿಲ್ಲ. ಅಷ್ಟರಲ್ಲಿ ಆ ವ್ಯಕ್ತಿಗೆ ಎಚ್ಚರವಾಯಿತು. ಅವನು ಬಿದ್ದಿದ್ದ ಮುಚ್ಚಳವನ್ನು ಹಾಕಿ ಪ್ರಯಾಣ ಮುಂದುವರಿಸಿದನು. ಅವನಿಗೆ ಮೊಸರು ಖಾಲಿಯಾಗಿರುವುದು ಗಮನಕ್ಕೆ ಬರಲೇ ಇಲ್ಲ. “ನೀನು ಇನ್ನೊಮ್ಮೆ ಮೊಸರನ್ನು ಕುಡಿಯಲು ಹೋಗಬೇಡ. ಹೋದರೆ ಸಮಸ್ಯೆ ಅನುಭವಿಸುತ್ತೀಯಾ’ ಎಂದು ಪಾರಿವಾಳ ಕಾಗೆಯನ್ನು ಎಚ್ಚರಿಸಿತು. ಕಾಗೆ, ಮೊಸರು ಸಿಗಲಿಲ್ಲ ಎನ್ನುವ ಕಾರಣಕ್ಕೆ ಹೆದರಿಸುತ್ತಿದ್ದೀಯಾ ಎಂದು ಪಾರಿವಾಳವನ್ನು ಅಣಕಿಸಿತು. ಪಾಪ ಪಾರಿವಾಳ ಕಳ್ಳತನ ಮಾಡುವುದು ತಪ್ಪೆಂದು ತೋರಿತು ಅದಕ್ಕೆ ಹಾಗೆ ಹೇಳಿದೆ ಅಷ್ಟೆ ಎಂದು ಸಮಜಾಯಿಷಿ ನೀಡಿತು. ಕಾಗೆ ಪಾರಿವಾಳವನ್ನು ಪುಕ್ಕೆಲನೆಂದು ಅಣಕಿಸಿತು.

ವರ್ತಕ ವಿಶ್ರಾಂತಿ ಪಡೆಯುತ್ತಿದ್ದಾಗಲೆಲ್ಲ ಕಾಗೆ ಮೊಸರನ್ನು ಕುಡಿಯುತ್ತಿತ್ತು. ಒಂದಷ್ಟು ಹೊತ್ತಿನ ನಂತರ ಮಡಕೆ ಅರ್ಧ ಖಾಲಿಯಾಗಿರುವುದು ವರ್ತಕನ ಗಮನಕ್ಕೆ ಬಂದಿತು. ಅವನು ತನ್ನ ಮೊಸರನ್ನು ಯಾರು ಕುಡಿಯುತ್ತಿದ್ದಾರೆ ಎಂದು ಪತ್ತೆ ಹಚ್ಚಲು ತೀರ್ಮಾನಿಸಿದನು. ಒಂದು ಸಲ ನಿದ್ದೆ ಮಾಡುತ್ತಿರುವವನಂತೆ ನಾಟಕ ಮಾಡಿದನು. ಆಗ ಕಾಗೆ ಮೊಸರು ಕುಡಿದಿದ್ದನ್ನು ಗಮನಿಸಿದನು. ಆಗ ಒಂದು ಉಪಾಯ ಹೊಳೆಯಿತು.

ದಾರಿ ಮಧ್ಯ ಒಬ್ಬ ವ್ಯಕ್ತಿ ಸಿಕ್ಕಿ ತನಗೆ ಮೊಸರು ಬೇಕೆಂದು ಕೇಳಿದಾಗ ವರ್ತಕ ಅಂದನು “ಇದು ಕುಡಿಯಲಲ್ಲ. ವಿಷವನ್ನು ಬೆರೆಸಿದ್ದೇನೆ.’ ಎಂದನು. ಈ ಮಾತನ್ನು ಕೇಳಿಸಿಕೊಂಡ ಕಾಗೆಗೆ ಬರಸಿಡಿಲು ಹೊಡೆದಂತಾಯಿತು. ಅದು ಅಳಲು ಶುರು ಮಾಡಿತು. ತನ್ನ ತಪ್ಪಿಗೆ ತಕ್ಕ ಶಾಸ್ತಿಯಾಯಿತೆಂದು ಪಶ್ಚಾತ್ತಾಪ ಪಟ್ಟಿತು. ಪಾರಿವಾಳ “ಅಳಬೇಡ ವಿಷವನ್ನು ತಯಾರಿಸಿದ ವರ್ತಕನ ಬಳಿ ಅದಕ್ಕೆ ಔಷಧಿಯೂ ಇರಬಹುದು’ ಎಂದಿತು. ಸಂತಸಗೊಂಡ ಕಾಗೆ ವರ್ತಕನ ಬಳಿ ಹೋಗಿ ಬೆಳಗ್ಗೆಯಿಂದ ನಡೆದಿದ್ದನ್ನೆಲ್ಲಾ ಹೇಳಿ, ಕ್ಷಮೆಯನ್ನೂ ಕೇಳಿ ಔಷಧವಿದ್ದರೆ ನೀಡಿ ತನ್ನನ್ನು ಬದುಕಿಸುವಂತೆ ಮನವಿ ಮಾಡಿತು. ವರ್ತಕ “ನೀನು ಯಾವಾಗ ಕ್ಷಮೆ ಕೇಳಿದೆಯೋ ಆವಾಗಲೇ ನಿನಗೆ ಔಷಧ ಸಿಕ್ಕಂತಾಯಿತು. ಮೊಸರಲ್ಲಿ ಯಾವ ವಿಷವನ್ನೂ ನಾನು ಬೆರೆಸಿರಲಿಲ್ಲ’ ಎಂದನು. ಸಮಾಧಾನದ ನಿಟ್ಟುಸಿರಿಟ್ಟ ಕಾಗೆ ವರ್ತಕನಿಗೆ ಧನ್ಯವಾದ ಸಲ್ಲಿಸಿತು. ವರ್ತಕ ತನ್ನಲ್ಲಿ ಉಳಿದಿದ್ದ ಮೊಸರನ್ನು ಕಾಗೆ ಮತ್ತು ಪಾರಿವಾಳಕ್ಕೆ ನೀಡಿದನು.

ಆರೀಫ್‌ ವಾಲೀಕಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next