Advertisement

ಕುಸಿಯುತ್ತಿವೆ ಪ್ರಜಾಪ್ರಭುತ್ವದ ಮೌಲ್ಯ: ಬಡಿಗೇರ

02:49 PM Jan 28, 2020 | Suhan S |

ಗದಗ: ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿರುವ ಇಂದಿನ ಸ್ವಾರ್ಥ ರಾಜಕಾರಣಿಗಳಿಂದಾಗಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. ರಾಷ್ಟ್ರದ ಅಭಿವೃದ್ಧಿ, ಬಡವರ ಪರ ಕಾಳಜಿ ಇಲ್ಲದೇ, ಕೇವಲ ವೋಟ್‌ ಬ್ಯಾಂಕ್‌ ರಾಜಕಾರಣದಿಂದಾಗಿ ಜನಸೇವೆ ಅಣಕವಾಗುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳು, ಅಭಿವೃದ್ಧಿ ಪರ ಚಿಂತನೆಗಳು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಪ್ರಚಾರದ ಸರಕುಗಳಾಗುತ್ತಿವೆ ಎಂದು ಸಾಹಿತಿ ಡಿ.ವಿ. ಬಡಿಗೇರ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಹಾಗೂ ಕಬ್ಬಿಗರ ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರಜಾಪ್ರಭುತ್ವದ ಸವಾಲುಗಳು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಪೂಜಿ ಕಂಡ ಕನಸಿನಂತೆ ಪ್ರತಿಯೊಬ್ಬ ಭಾರತೀಯನ ಕಣ್ಣೀರು ಒರೆಸುವುದು ಸ್ವತಂತ್ರ ಭಾರತದ ಗುರಿ ಎಂದು ಪ್ರಥಮ ಪ್ರಧಾನಿ ನೆಹರು ಹೇಳಿದ್ದರು. ಆದರೆ, ಇಂದಿಗೂ ಆ ಮಾತುಗಳು ಈಡೇರಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರ ಸಮಾನತೆಯ ಕನಸು ನನಸಾಗಿಲ್ಲ. ಇದಕ್ಕೆಲ್ಲ ಸ್ವಾರ್ಥ ರಾಜಕಾರಣವೇ ಕಾರಣ. ಶಾಸಕಾಂಗವನ್ನು ಕಿವಿಹಿಂಡುವ ಶಕ್ತಿ ಪ್ರಜೆಗಳಲ್ಲಿ ಮೂಡಬೇಕು. ಸಜ್ಜನರ ಕೈಯಲ್ಲಿ ಆಡಳಿತ ದೊರಕಬೇಕು. ಆಳುವವರಲ್ಲಿ, ಅಧಿಕಾರಿಗಳಲ್ಲಿ ಸೇವಾ ಮನೋಭಾವ ಮೂಡಿದಾಗ ನಿಜವಾದ ಪ್ರಜಾಪ್ರಭುತ್ವ ಜಾರಿಗೆ ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮನೋಹರ ಮೇರವಾಡೆ, ಪ್ರಜಾಪ್ರಭುತ್ವದ ಸವಾಲುಗಳು ಆಳುವವರಿಗೆ ಹೊಸತೇನಲ್ಲ. ಭ್ರಷ್ಟ, ಸ್ವಜನ ಪಕ್ಷಪಾತ ಹಾಗೂ ಜಾತೀಯತೆಯಿಂದಾಗಿ ಇಂದಿನ ಪ್ರಜಾಪ್ರಭುತ್ವ ಒತ್ತಡಕ್ಕೆ ಸಿಲುಕಿದೆ. ಪ್ರಜೆಗಳು ಪ್ರಜ್ಞಾಪೂರ್ವಕವಾಗಿ ಚುನಾವಣೆಯಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆ ಅರ್ಥಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚುಟುಕು ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಕಲಾವತಿ ಹವಳದ, ಸಾಹಿತಿ ವಿ.ಎಂ. ಪವಾಡಿಗೌಡರ, ಗಾಯಕಿ ಯಲ್ಲಮ್ಮ ಗೂಳರಡ್ಡಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಶಿವಾನಂದ ಗಡಾದ, ಮಲ್ಲಿಕಾರ್ಜುನ ಪೂಜಾರ, ಎಸ್‌.ಎಫ್‌. ಭಜಂತ್ರಿ, ವಿ.ಎಂ.ಪವಾಡಿಗೌಡರ, ಶಿಲ್ಪಾ ಮ್ಯಾಗೇರಿ, ಜಯಶ್ರೀ ಅಂಗಡಿ, ಏಕನಾಥಸಾ ಹಾವನೂರ, ಜೆ.ಎ. ಪಾಟೀಲ, ಅಜಿತ್‌ ಘೋರ್ಪಡೆ, ಲಾಡಮಾ ನದಾಫ್‌, ತುಷಾರ ಕುರಿ, ಯಜ್ಞಾ ಕುರಿ ಅವರು ಪ್ರಜಾಪ್ರಭುತ್ವ ಕುರಿತು ಕವನ ವಾಚಿಸಿದರು.

ಯಲ್ಲಮ್ಮ ಗೂಳರಡ್ಡಿ ಸ್ವಾಗತಿಸಿದರು. ಲಾಡಮಾ ನದಾಫ್‌ ನಿರೂಪಿಸಿದರು. ಸಿ.ಎಫ್‌. ಹವಳದ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next