Advertisement

 “ಮೌಲ್ಯ ಉಳಿಸಿಕೊಂಡ ನಿಜವಾದ ನೇತಾರ ಬಾಳಪ್ಪ’

11:19 AM Feb 25, 2017 | Team Udayavani |

ಬಂಟ್ವಾಳ : ಬದುಕಿನಲ್ಲಿ ಮೌಲ್ಯಗಳನ್ನು ಉಳಿಸಿ ಕೊಂಡವರು ಮಾತ್ರ ನಿಜವಾದ ನೇತಾರರು. ಡಾಣ ಅಮ್ಮೆಂಬಳ ಬಾಳಪ್ಪ ಜೀವನಪೂರ್ತಿ ಮೌಲ್ಯಗಳ ಪ್ರೇರಕರಾಗಿದ್ದರು ಎಂದು ಮಂಗಳೂರು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಪಿ.ವಿ.ಮೋಹನ್‌ ಹೇಳಿದರು.

Advertisement

ಅವರು  ಬಂಟ್ವಾಳ ಎಸ್‌ವಿಎಸ್‌ ಕಾಲೇಜು ಸಭಾಂಗಣದಲ್ಲಿ ಡಾಣ ಅಮ್ಮೆಂಬಳ ಬಾಳಪ್ಪ ಸೇವಾ ಪ್ರತಿಷ್ಠಾನ ಮತ್ತು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಜಂಟಿ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ  ಡಾಣ ಅಮ್ಮೆಂಬಳ ಬಾಳಪ್ಪ ಅವರ 96ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದರು.

ರಾಮ್‌ಮನೋಹರ ಲೋಹಿಯಾ ಅಭಿಮಾನಿಯಾಗಿದ್ದ ಬಾಳಪ್ಪ ಅವರು ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದವರು. ರಾಜಕೀಯ ಮೌಲ್ಯಕ್ಕಿಂತ ವೈಯಕ್ತಿಕ ಜೀವನ ಮೌಲ್ಯ ಮುಖ್ಯ. ಮೌಲ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದಲ್ಲ. ದ್ವೇಷ, ಅಸಹಿಷ್ಣುತೆ ಇಂದಿನ ರಾಜಕೀಯದಲ್ಲಿ ಕಂಡು ಬರುತ್ತಿದ್ದು ನೈತಿಕತೆ ಇಲ್ಲವಾಗಿದೆ. ಸಮಾನತೆ, ಸಾಮಾಜಿಕ ನ್ಯಾಯ ರಾಜಕೀಯದಿಂದ ಸಿಗುವಂತಾಗಬೇಕು. ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು. ದೇಶವು ಧರ್ಮ ನಿರಪೇಕ್ಷಿತ ಸಿದ್ಧಾಂತ ಹೊಂದಿದ್ದು ಎಲ್ಲಾ ಮತಧರ್ಮಗಳು ಒಳ್ಳೆಯದನ್ನು ಹೇಳಿವೆ. ಇಂದಿನ ಯುವಕರು ದೇಶದ ಎಲ್ಲಾ ವರ್ಗದ ಜನರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇಂದಿನ ರಾಜಕೀಯ ಹಳಿ ತಪ್ಪುತ್ತಿದ್ದು ಈ ಬಗ್ಗೆ ಯುವ ಜನರು ಜಾಗೃತರಾಗಿ ಜಾತ್ಯತೀತ,  ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ. ಮೋಹನ ರಾವ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಡಾ| ಬಾಳಪ್ಪ ಅವರ ಜನ್ಮ ದಿನಾಚರಣೆ ಆಚರಿಸುವುದು ಹೆಮ್ಮೆಯ ವಿಚಾರ. ರಾಷ್ಟ್ರ ರಾಜಕಾರಣಕ್ಕೆ ಅಮ್ಮೆಂಬಳ ಅವರ ಕೊಡುಗೆ ಮಹತ್ವದ್ದು. ಅವರು ಬಂಟ್ವಾಳ ತಾಲೂಕಿನವರು ಎನ್ನುವುದು ನಮಗೆ ಹೆಮ್ಮೆಯಾಗಿದೆ ಎಂದರು.

ಸ್ವಾತಂತ್ರ್ಯಯೋಧ ಡಾ| ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ಅಧ್ಯಕ್ಷ, ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು,  ಪ್ರತಿಷ್ಠಾನದ ಮೂಲಕ ಅಮ್ಮೆಂಬಳ ಅವರ ತತ್ವಸಿದ್ಧಾಂತವನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸುವ ಮೂಲಕ ಮುಂದಿನ ಪೀಳಿಗೆಗೆ ದೇಶಭಕ್ತಿ, ದೇಶ ಪ್ರೇಮದ ಮನೋಭಾವ ಮೂಡಿಸುವುದು ಅಗತ್ಯವಿದೆ ಎಂದರು.

Advertisement

ಬಂಟ್ವಾಳ ಎಸ್‌ವಿಎಸ್‌ ಕಾಲೇಜು ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್‌ ಶುಭ ಹಾರೈಸಿದರು.

ಸಾಮಾಜಿಕ ನ್ಯಾಯ ಕಲ್ಪಿಸಿದವರು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್‌ ಪ್ರಸ್ತಾವನೆ ನೀಡಿ ಡಾ| ಬಾಳಪ್ಪ  ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ದ ಹೋರಾಡಿ ಜೈಲು ಶಿಕ್ಷೆ ಅನುಭವಿಸಿದವರು.  ಕಾರ್ಮಿಕರು, ಕೃಷಿಕರ ಬಗ್ಗೆ ನ್ಯಾಯೋಚಿತ ಹೋರಾಟ ನಡೆಸಿ ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದವರು ಎಂದು ಹೇಳಿದರು. ಹಿರಿಯ ಸಾಮಾಜಿಕ ನೇತಾರ ಎ. ಸಿ.ಭಂಡಾರಿ, ಸಮಾಜ ಸೇವಾ ಸಹಕಾರಿ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಕೆ. ದಯಾನಂದ ಬೆಳ್ಳೂರು ಉಪಸ್ಥಿತರಿದ್ದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಂ ಪೂಜಾರಿ, ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ  ಬಿ. ತಮ್ಮಯ್ಯ, ಬಂಟ್ವಾಳ ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ,  ದಾಮೋದರ ಬಿ.ಎಂ.,  ಧರ್ಮಜಾಗರಣ ಪ್ರತಿಷ್ಠಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್‌, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಸದಸ್ಯ ಪರಮೇಶ್ವರ ಎಂ., ಬಂಟ್ವಾಳ ಸಿಪಿಐ ಕಾರ್ಯದರ್ಶಿ ಶೇಖರ ಬಿ.,  ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಮುತ್ತಪ್ಪ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.ಬಂಟ್ವಾಳ ತಾ| ಕನ್ನಡ ಭವನ ನಿರ್ಮಾಣ ಸಮಿತಿ ಸಂಚಾಲಕ ಗಂಗಾಧರ ಭಟ್‌ ಕೊಳಕೆ ಸ್ವಾಗತಿಸಿ, ಟ್ರಸ್ಟ್‌ ಕಾರ್ಯದರ್ಶಿ ಉಮೇಶ್‌ ಪಿ. ಕೆ. ವಂದಿಸಿದರು. ಉಪನ್ಯಾಸಕ ಚೇತನ್‌ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next