Advertisement

ಅಮೆರಿಕ-ತಾಲಿಬಾನ್‌ ಶಾಂತಿ ಒಪ್ಪಂದ ಭಾರತಕ್ಕೆ ಅನೇಕ ಸವಾಲು

10:10 AM Mar 04, 2020 | mahesh |

ಅಫ್ಘಾನಿಸ್ಥಾನದಲ್ಲಿ 19 ವರ್ಷದಿಂದ ನಡೆಯುತ್ತಿದ್ದ ಅಮೆರಿಕ- ತಾಲಿಬಾನ್‌ ಉಗ್ರರ ನಡುವಿನ ಕದನಕ್ಕೆ ತೆರೆ ಬಿದ್ದಿದೆ. ಅಮೆರಿಕ ಸರಕಾರ ಹಾಗೂ ತಾಲಿಬಾನ್‌ ನಾಯಕರ ನಡುವೆ ಏರ್ಪಟ್ಟ ಶಾಂತಿ ಒಪ್ಪಂದಕ್ಕೆ ಶನಿವಾರ ಜಗತ್ತಿನ 30 ರಾಷ್ಟ್ರಗಳ ಸಮ್ಮುಖದಲ್ಲಿ ಎರಡೂ ಕಡೆಯ ಪ್ರತಿನಿಧಿಗಳು ಸಹಿ ಹಾಕಿದ್ದಾರೆ. ವಿಷಯ ಅಷ್ಟು ಮಾತ್ರವಲ್ಲ. ಈ ಒಪ್ಪಂದ ಭಾರತಕ್ಕೆ ಎಷ್ಟರ ಮಟ್ಟಿಗೆ ಅಪಾಯಕಾರಿ ಆಗಬಹುದು ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಏಕೆಂದರೆ, ಹೊಸ ಶಾಂತಿ ಒಪ್ಪಂದದ ಹಿಂದೆ – ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರವರ ವೈಯಕ್ತಿಕ ಹಿತಾಸಕ್ತಿ, ತಾಲಿಬಾನಿಗಳ ಅಧಿಕಾರ ದಾಹ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ನ ರಾಜಕೀಯ ಅನುಕೂಲ, ಜಿಹಾದಿಗಳಿಗೆ ಸುಭದ್ರ ನೆಲೆ ಹಾಗೂ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆ – ಇವೆಲ್ಲ ಉದ್ದೇಶಗಳೂ ಅಡಗಿವೆ.

Advertisement

ಆ ಘಟನೆಯನ್ನು ಇಲ್ಲಿ ನೆನೆಯಲೇಬೇಕು…
ಸದ್ಯಕ್ಕೆ ಜಾರಿಗೊಂಡಿರುವ ಕದನ ವಿರಾಮ ಭಾರತಕ್ಕೆ ಹೇಗೆ ಮುಳುವಾಗಬಹುದು ಎಂಬುದನ್ನು ತಿಳಿಸಬೇಕಾದರೆ, 20 ವರ್ಷಗಳ ಹಿಂದೆ ನಡೆದಿದ್ದ ಏರ್‌ ಇಂಡಿಯಾ ವಿಮಾನ ಹೈಜಾಕ್‌ನ ಘಟ ನೆ ಯ ನ್ನು ಇಲ್ಲಿ ಮೆಲುಕು ಹಾಕಲೇಬೇಕು. ಅದು ಡಿ. 24, 1999. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸಬೇಕಿದ್ದ ಇಂಡಿಯನ್‌ ಏರ್‌ ಲೈನ್ಸ್‌ನ ಐಸಿ 814 ಎಂಬ ವಿಮಾನವನ್ನು ಉಗ್ರರು ಮಾರ್ಗ ಮಧ್ಯದಲ್ಲೇ ಅಪಹರಿಸಿಬಿಟ್ಟಿದ್ದರು. ಹಾಗೆ ಅಪಹೃತಗೊಂಡ ವಿಮಾನವನ್ನು ಅಮೃತಸರ, ಲಾಹೋರ್‌, ದುಬೈ ಕಡೆಯಲ್ಲಾ ಸುತ್ತಾಡಿಸಿ ಕೊನೆಗೆ ಆಫ್ಘಾನಿಸ್ಥಾನದ ಕಂದಹಾರ್‌ನ ವಿಮಾನ ನಿಲ್ದಾಣದಲ್ಲಿ ಇಳಿಸಿಬಿಟ್ಟರು. ಲಾಹೋರ್‌ನಲ್ಲಿ ಈ ವಿಮಾನವನ್ನು ಇಂಧನ ತುಂಬಿಸಿಕೊಳ್ಳಲೆಂದು ಇಳಿಸಲಾಗಿತ್ತು. ಆಗ, ಭಾರತವು, ಪಾಕಿಸ್ಥಾನ ಸರಕಾರಕ್ಕೆ ಮನವಿ ಮಾಡಿ ಆ ವಿಮಾನ ಮತ್ತೆ ಗಗನಕ್ಕೆ ಹಾರದಂತೆ ತಡೆಯಿರಿ ಎಂದು ಎರಡು ಬಾರಿ ಮನವಿ ಮಾಡಿತ್ತು. ಆದರೆ, ನೆನಪಿಡಿ… ಎರಡೂವರೆ ಗಂಟೆಗಳ ಕಾಲ ಲಾಹೋರ್‌ ವಿಮಾನದಲ್ಲಿದ್ದರೂ ಆ ವಿಮಾನವನ್ನು ಪಾಕಿಸ್ಥಾನ ಹಿಡಿದು ನಿಲ್ಲಿಸಲಿಲ್ಲ. ಅಲ್ಲಿಂದ ಅದು ನೇರವಾಗಿ ಆಫ್ಘಾನಿಸ್ಥಾನದ ಕಂದಹಾರ್‌ನಲ್ಲಿ ಇಳಿದಿತ್ತು.

ಮಧ್ಯಸ್ಥಿಕೆ ವಹಿಸಿದ್ದ ತಾಲಿಬಾನ್‌, ಕಳಚಿದ ಮುಖವಾಡ
ಕಂದಹಾರ್‌ನಲ್ಲಿ ವಿಮಾನ ಇಳಿದ ಆ ಕಾಲಘಟ್ಟದಲ್ಲಿ ಆಫ್ಘಾನಿಸ್ಥಾನದಲ್ಲಿ ಇದ್ದಿದ್ದು ತಾಲಿ ಬಾನಿಗಳ ಆಡಳಿತ. ಭಾರತ ಸರಕಾರದ ಮನವಿಯ ಮೇರೆಗೆ ತಾಲಿಬಾನ್‌ ಸರಕಾರವು ತನ್ನ ಸೇನೆಯನ್ನು ಕಳುಹಿಸಿ, ವಿಮಾನವನ್ನು ಸುತ್ತುವರಿಯಂತೆ ಮಾಡಿತು. ಅಷ್ಟೇ ಅಲ್ಲ, ಉಗ್ರರು ಹಾಗೂ ಭಾರತ ಸರಕಾರದೊಂದಿಗೆ ಸಂಧಾನಕಾರರಾಗಿ ಪಾತ್ರ ನಿರ್ವಹಿಸಿ ವಿಮಾನದಲ್ಲಿದ್ದ 170 ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆಯಾಗಲು ಸಹಕರಿಸಿತು. ಭಾರತದ ಪಾಲಿಗೆ ಆ ಸಂದರ್ಭದಲ್ಲಿ ತಾಲಿಬಾನ್‌ ಅಷ್ಟು ದೊಡ್ಡ ಸಹಾಯ ಮಾಡಿತ್ತು. ಕಂದಹಾರ್‌ನಲ್ಲಿ ಉಗ್ರರು, ಭಾರತ ಸರಕಾರದ ನಡುವೆ ತಾಲಿಬಾನ್‌ನ ಸೇನಾಧಿಕಾರಿ ಗಳು ಸಂಧಾನಕಾರರಾಗಿ ಪಾತ್ರ ನಿರ್ವಹಿಸುತ್ತಿದ್ದಾಗ ಭಾರತದ ಪರವಾಗಿ ಹೋಗಿದ್ದು ಅಂದಿನ ಭಾರತೀಯ ಗುಪ್ತಚರ ಇಲಾಖೆಯ ಅಧಿಕಾರಿ ಹಾಗೂ ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್‌ ದೋವಲ್‌ ಎಂಬ ಚಾಣಾಕ್ಷ. ಆ ವ್ಯಕ್ತಿ, ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗ ತಾಲಿಬಾನ್‌ ಸೇನಾಧಿಕಾರಿಗಳ ಜೊತೆಗೆ ಅವರಂತೆಯೇ ಉಡುಪುಗಳನ್ನೇ ಧರಿಸಿ ಮಾತುಕತೆಗೆ ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನು ನೋಡಿದ್ದರು. ಅವರು ಮತ್ಯಾರೂ ಅಲ್ಲ, ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳು! ಅದು ಗೊತ್ತಾಗುತ್ತಲೇ ದೋವಲ್‌ಗೆ ಈ ಅಪಹರಣವನ್ನು ಪಾಕಿ ಸ್ಥಾನದ ಐಎಸ್‌ಐ ಹಾಗೂ ತಾಲಿಬಾನ್‌ ಸರಕಾರ ಜಂಟಿಯಾಗಿ ಸೇರಿಯೇ ಮಾಡಿದ್ದು ಎಂಬುದು ಮನದಟ್ಟಾಯಿತು.

ಕಣ್ಣು ಕೆಂಪಾಗಿಸಿದ್ದ ತಾಲಿಬಾನಿಗಳು
ಪಾಕಿಸ್ಥಾನದ ಜತೆಗೆ ಸೇರಿ ತಾಲಿಬಾನ್‌ ನಡೆಸಿದ ಷಡ್ಯಂತ್ರದ ವಿಷವನ್ನು ಹಾಗೆ ಎದೆಯಲ್ಲಿ ಟ್ಟುಕೊಂಡಿದ್ದ ಭಾರತ, 2001ರಲ್ಲಿ ತಾಲಿಬಾನ್‌ ವಿರುದ್ಧ ಪ್ರತೀಕಾರ ತೀರಿಸಿ ಕೊಂಡಿತ್ತು. ಆ ವರ್ಷ, ಅಮೆರಿಕದ ವಿಶ್ವ ವಾಣಜ್ಯ ಕಟ್ಟಡಗಳ ಮೇಲೆ ಅಲ್‌ ಖೈದಾ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆ ಪ್ರಕರಣದ ರೂವಾರಿಯಾದ ಬಿನ್‌ ಲ್ಯಾಡೆನ್‌ನನ್ನು ಹಿಡಿಯಲು ಅಮೆರಿಕ, ನ್ಯಾಟೋ ಪಡೆಗಳ ಸಹಾಯದಿಂದ ತನ್ನ ಸೇನೆಯನ್ನು ಅಫ್ಘಾನಿಸ್ಥಾನದೊಳಕ್ಕೆ ನುಗ್ಗಿಸಿ ಅಲ್ಲಿದ್ದ ತಾಲಿಬಾನ್‌ ಸರಕಾರವನ್ನು ಕೆಡವಿತು. ಆಗ ಅಮೆರಿಕದ ಯುದ್ಧ ವಿಮಾನಗಳು ಭಾರತಕ್ಕೆ ಬಂದು ಇಂಧನ ತುಂಬಿಸಿಕೊಂಡು ಹೋಗಿದ್ದವು. ಭಾರತ ನೀಡಿದ ಸಹಾಯ ತಾಲಿಬಾನಿಗಳ ಕಣ್ಣು ಕೆಂಪಾಗಿಸಿತ್ತು.

ಒಪ್ಪಂದ ತಂದ ಆನಂದ !
ಈಗ ಕಾಲ ಬದಲಾಗಿದೆ. ಅಮೆರಿಕ, ನ್ಯಾಟೋ ಪಡೆಗಳು ತಾಲಿಬಾನಿಗಳ ವಿರುದ್ಧದ ಯುದ್ಧದಲ್ಲಿ ಒಂದರ್ಥದಲ್ಲಿ ಸೋಲು ಕಂಡಿವೆ. ಮೇಲಾಗಿ ಚುನಾವಣಾ ಒತ್ತಡದಲ್ಲಿರುವ ಅಮೆರಿಕಾಧ್ಯಕ್ಷ ಟ್ರಂಪ್‌, ಅಫ್ಘಾನಿಸ್ಥಾನದಲ್ಲಿರುವ ಅಮೆರಿಕ ಪಡೆಗಳನ್ನು ಹಿಂಪಡೆಯುವ ನಾಟಕವನ್ನಾಡಲೇಬೇಕಿದೆ. ಜೊತೆಗೆ, ಅಲ್ಲಿ ಆದ ಅಮೆರಿಕನ್ನರ ಯೋಧರ ಸಾವಿಗೆ, ಅನಾಮತ್ತಾಗಿ ಪೋಲಾದ ಬಿಲಿಯನ್‌ಗಟ್ಟಲೆ ಡಾಲರ್‌ ಹಣಕ್ಕೆ ಪೂರ್ಣವಿರಾಮ ಇಡಲೇಬೇಕಿದೆ. ಚುನಾವಣೆಯಲ್ಲಿ ತನ್ನ ದೇಶದ ಜನರ ಮನಸ್ಸು ಗೆಲ್ಲಬೇಕಾದರೆ ಟ್ರಂಪ್‌ಗೆ ಇದು ಅನಿವಾರ್ಯವೂ ಹೌದು. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ, ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಗೋಡೆ ಕಟ್ಟುವೆ, ಬೇರೆ ದೇಶಗಳಲ್ಲಿ (ಆಫ್ಘಾನಿಸ್ಥಾನದಲ್ಲಿ) ನಮ್ಮ ಯೋಧರು ಸಾಯುವುದನ್ನು ತಡೆಗಟ್ಟುವೆ ಎಂಬಿತ್ಯಾದಿ ಬೂಸಿಬಿಟ್ಟಿದ್ದ ಟ್ರಂಪ್‌, ಈಗ ಗೋಡೆ ಕಟ್ಟುವ ವಿಚಾರದಲ್ಲಿ ವಿಫಲವಾಗಿದ್ದರೂ ಆಫ್ಘಾನಿಸ್ಥಾನದಿಂದ ಯೋಧರನ್ನು ಹಿಂದಕ್ಕೆ ಕರೆಯಿಸಿ ಈ ಬಾರಿಯ ಚುನಾವಣೆಯಲ್ಲಿ ತನ್ನ ದೇಶದ ಜನರ ಮುಂದೆ ನುಡಿದಂತೆ ನಡೆದವನು ಎಂಬುದನ್ನು ಬಿಂಬಿಸಿಕೊಳ್ಳಬೇಕಿದೆ. ಅದರ ಪರಿಣಾಮವೇ ಈಗ ಜಾರಿಯಾದ ಶಾಂತಿ ಒಪ್ಪಂದ.

Advertisement

ಉಗ್ರರಿಗೆ ಮತ್ತಷ್ಟು ಕುಮ್ಮಕ್ಕು?
ಭಾರತದ ಹೆಸರೆತ್ತಿದರೆ ಕೆಂಗಣ್ಣು ಬೀರುವ ತಾಲಿಬಾನಿಗಳು ತಮ್ಮ ನೆಲವನ್ನು ಭಾರತ ವಿರೋಧಿಯಾಗಿ ಪರಿವರ್ತಿಸಬಹುದು. ಪಾಕಿಸ್ಥಾನಕ್ಕೆ, ಅಮೆರಿಕ ಸೇನೆಯ ನಾಕಾಬಂದಿ ಹಂಗಿಲ್ಲದೆ ಆಪಾ^ನಿಸ್ಥಾನಕ್ಕೆ ಅನಾಯಾಸವಾಗಿ ಹೋಗಿಬರಲು ರಹದಾರಿ ಸಿಕ್ಕಂತಾಗುತ್ತದೆ. ಅದನ್ನು ಉಪಯೋಗಿಸಿಕೊಂಡು ಭಾರತದ ವಿರುದ್ಧ ದೊಡ್ಡ ಷಡ್ಯಂತ್ರಗಳನ್ನು ರಚಿಸಲು ಪಾಕಿಸ್ಥಾನಕ್ಕೆ ಚೀನದ ಜೊತೆಗೆ ತಾಲಿಬಾನ್‌ ಸರಕಾರದ ಸಹಕಾರವೂ ಸಿಗಲಿದೆ.

ಮುಂದೇನಾಗಬಹುದು?
ಶಾಂತಿ ಒಪ್ಪಂದ ಜಾರಿಯಾದ ಮೇಲೆ ಅಮೆರಿಕದ ಸೇನೆ ಇನ್ನು 14 ತಿಂಗಳುಗಳಲ್ಲಿ ಹಂತಹಂತವಾಗಿ ತನ್ನ ದೇಶಕ್ಕೆ ಹಿಂದಿರುಗುತ್ತದೆ. ಅಮೆರಿಕ, ನ್ಯಾಟೋ ಪಡೆಗಳು ಸಂಪೂರ್ಣವಾಗಿ ಹಿಂದಿರುಗಿದ ಮೇಲೆ ಆಫ್ಘಾನಿಸ್ತಾನ ಸರ್ಕಾರದ ಮೇಲೆ ತಾಲಿಬಾನಿಗಳ ಕರಿಛಾಯೆ ಆವರಿಸುತ್ತದೆ. ಪಾಕಿಸ್ತಾನ, ಇನ್ನಿತರ ಜಿಹಾದಿ ಬೆಂಬಲಕ್ಕೆ ನಿಂತಿರುವ ರಾಷ್ಟ್ರಗಳಿಗೆ ಆಫ್ಘಾನಿಸ್ತಾನ ಕಾಂಪೌಂಡ್‌ ಇಲ್ಲದ ಪಕ್ಕದ ಮನೆಯಂತೆ ಆಗುತ್ತದೆ.

ಪಾಕಿಸ್ಥಾನದ ಬೇಳೆ ಬೇಯುತ್ತದೆ
ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ರಾಜ್ಯಭಾರ ಬಂತೆಂದರೆ, ಇಡೀ ದೇಶ ಉಗ್ರರ ಆಡಂಬೋಲ ಆಗುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಒಮ್ಮೆ ಅದು ಉಗ್ರರ ನಾಡಾಗಿ ಬದಲಾದರೆ, ಪಾಕಿಸ್ಥಾನಕ್ಕೆ ಅದೊಂದು ಅಡ್ವಾಂಟೇಜ್‌. ಹಾಗಾದ ಕೂಡಲೇ ಅದು ಮಾಡುವ ಮೊದಲ ಕೆಲಸವೇನೆಂದರೆ, ತನ್ನಲ್ಲಿರುವ ಉಗ್ರರ ನೆಲೆಗಳನ್ನು ಅಫ್ಘಾನಿಸ್ಥಾನದಲ್ಲಿರುವ ತಾಲಿಬಾನಿಗಳ ಸುಭದ್ರ ನೆಲೆಗಳಿಗೆ ಗುಟ್ಟಾಗಿ ವರ್ಗಾಯಿಸಿ, ತಾನೀಗ ಪರಿಶುದ್ಧ ಎಂದು ಅದು ಪೋಸು ಕೊಡುತ್ತದೆ. ಇದೇ ಸ್ವ-ರಚಿತ ಪ್ರಮಾಣ ಪತ್ರದೊಂದಿಗೆ, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹಣ ಸಹಾಯ ಮಾಡುವ ದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ “ಎಫ್‌ಎಟಿಎಫ್‌’ ಸಂಘಟನೆಯ ಬೂದು ಪಟ್ಟಿಯಿಂದ (ಗ್ರೇ ಲಿಸ್ಟ್‌) ಹೊರಬರಲು ಪ್ರಯತ್ನಿಸುತ್ತದೆ. ಇದರಲ್ಲಿ ಯಶಸ್ವಿಯಾದರೆ, ಎಫ್‌ಎಟಿಎಫ್‌ ಗ್ರೇ ಲಿಸ್ಟ್‌ನಿಂದಾಗಿ ಅಮೆರಿಕ ಮತ್ತಿತರ ದೇಶಗಳಿಂದ ಪಾಕ್‌ಗೆ ಬರಬೇಕಿರುವ ಕೋಟಿಗಟ್ಟಲೆ ಅನುದಾನ ಬಾಚಿಕೊಳ್ಳಲು ಅವಕಾಶ ಪಾಕಿಸ್ಥಾನಕ್ಕೆ ಸಿಗುತ್ತದೆ. ಜೊತೆಗೆ, ಭಾರತ ವಿರುದ್ಧದ ಸೇಡನ್ನು ತಾಲಿಬಾನಿಗಳ ಮೂಲಕ ತೀರಿಸಿಕೊಳ್ಳಲು ಅದು ಹೊಸ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತದೆ.

ಟ್ರಂಪ್‌ ಉಲ್ಟಾ ಹೊಡೆದರೆ ಸುಸೂತ್ರ?
ಟ್ರಂಪ್‌ ಮತ್ತೆ ಅಧಿಕಾರಕ್ಕೆ ಮರಳುವಷ್ಟರಲ್ಲಿ ತಾಲಿಬಾನಿಗಳು, ಆಫ್ಘಾನಿಸ್ಥಾನದ ಅಧ್ಯಕ್ಷ ಘನಿ ನಡುವೆ ಸಂಘರ್ಷ ಏರ್ಪಟ್ಟು, ರಕ್ತಪಾತ ಶುರುವಾದರೆ ಅದನ್ನೇ ನೆಪವಾಗಿಟ್ಟುಕೊಂಡು ಟ್ರಂಪ್‌, ಆಫ್ಘಾನಿಸ್ಥಾನದಿಂದ ತನ್ನ ಸೇನೆಯನ್ನು ಹಿಂಪಡೆಯದಿರುವ ನಿರ್ಧಾರಕ್ಕೆ ಬರಬಹುದು. ಆಗ, 2001ರ ದಾಳಿಯೇ ಪುನರಾವರ್ತನೆಯಾಗಿ ತಾಲಿಬಾನಿಗಳ ಹುಟ್ಟಡಗಬಹುದು. ಆದರೆ, ಅದನ್ನೂ ಈಗಲೇ ಊಹಿಸಲು ಸಾಧ್ಯವಿಲ್ಲ. ಸದ್ಯದ ಮಟ್ಟಿಗೆ ಶಾಂತಿ ಒಪ್ಪಂದ ಭಾರತದ ಪಾಲಿಗೆ ಅನುಕೂಲಕರವಾಗಿಲ್ಲ ಎಂಬುದಷ್ಟೇ ಸತ್ಯ.

ವ್ಯಾಪಾರ, ವಾಣಿಜ್ಯ, ವಹಿವಾಟಿಗೆ ಕುತ್ತು
ಇರಾನ್‌ನ ಚಬಾಹರ್‌ ಬಂದರನ್ನು ಅಭಿವೃದ್ಧಿಪಡಿಸುವ ಮೂಲಕ ಇರಾನ್‌, ಮಧ್ಯಪ್ರಾಚ್ಯ ರಾಷ್ಟ್ರಗಳು, ಐರೋಪ್ಯ ರಾಷ್ಟ್ರಗಳಿಗೆ ಭಾರತ ನೇರವಾಗಿ ತನ್ನ ಸಾಮಗ್ರಿಗಳನ್ನು ಮಾರಾಟ ಮಾಡಲಾರಂಭಿಸಿತ್ತು. ಆ ಮೂಲಕ, ಪಾಕಿಸ್ಥಾನದ ಮೂಲಕವೇ ಸಾಗಬೇಕಿದ್ದ ತನ್ನ ಸಾಮಗ್ರಿಗಳಿಗೆ ಹೊಸ ದಾರಿ (ಸಮುದ್ರ ದಾರಿ) ಕಂಡುಕೊಂಡಿತ್ತಲ್ಲದೆ, ಹಿಂದೂ ಮಹಾಸಾಗರ ದಲ್ಲಿ ಚೀನದ ಅಧಿಪತ್ಯ ಸ್ಥಾಪನೆಗೆ ಭಾರತ ಸಡ್ಡು ಹೊಡೆದಿತ್ತು. ಆದರೆ, ಆಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳು ಬೆಳೆದರೆ ಕೂಡಲೇ ಅದೆಲ್ಲದಕ್ಕೂ ಫುಲ್‌ ಸ್ಟಾಪ್‌ ಬೀಳಬಹುದು.

ಸ್ನೇಹದ ಕುರುಹುಗಳಿಗೆ ಅಪಾಯ?
ಎರಡು ದಶಕಗಳಿಂದ ಭಾರತ, ಅಫ್ಘಾನಿಸ್ಥಾನದಲ್ಲಿ ಅನೇಕ ಯೋಜನೆ ಗಳನ್ನು ಜಾರಿಗೊಳಿಸಿ ಆ ದೇಶದ ಮಿತ್ರತ್ವ ಸಂಪಾದಿಸಿದ್ದು ಈಗ ಹೊಳೆ ನೀರಿನಲ್ಲಿ ಹುಣಸೇಹಣ್ಣು ತೊಳೆದಂತಾಗಬಹುದು. ಅಲ್ಲಿ ಫ್ರೆಂಡ್‌ ಶಿಪ್‌ ಡ್ಯಾಂ, ಸಂಸತ್‌ ಭವನ, ರಸ್ತೆಗಳು ಮುಂತಾದ ಮೂಲ ಸೌಕರ್ಯಗಳನ್ನು ಕಟ್ಟಿಕೊಟ್ಟಿತ್ತು ಭಾರತ. ಅದನ್ನು ಸಹಿಸದ ತಾಲಿಬಾನಿಗಳು ಸಂಸತ್‌ ಭವನದ ಮೇಲೆ, ಫ್ರೆಂಡ್‌ಶಿಪ್‌ ಡ್ಯಾಂ ಮೇಲೆ ದಾಳಿ ನಡೆಸಿದ್ದರು. ಈಗ ಅಮೆರಿಕನ್‌ ಪಡೆಗಳು ಹಿಂದಿರುಗಿದರೆ, ಅವನ್ನೆಲ್ಲ ಅವರು ಟಾರ್ಗೆಟ್‌ ಮಾಡಬಹುದು.

ಚೇತನ್‌ ಓ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next