Advertisement

ಯುವರಾಜನ ಅವಿರೋಧ ಪದೋನ್ನತಿ

09:10 AM Dec 12, 2017 | |

ಲೋಕಸಭೆ ಚುನಾವಣೆಯಿಂದ ತೊಡಗಿ ಉತ್ತರ ಪ್ರದೇಶದ ಸ್ಥಳೀಯಾಡಳಿತ ಚುನಾವಣೆ ತನಕ ರಾಹುಲ್‌ ಸೋಲಿನ ಸರಮಾಲೆ ಧರಿಸಿದ್ದಾರೆ. ಆದರೂ ಎದೆಗುಂದದೆ ಮತ್ತೆ ಮತ್ತೆ ಚುನಾವಣೆ ಎದುರಿಸುತ್ತಿದ್ದಾರೆ. ಈಗೀಗ ಬಹಳ  ಆಕ್ರಮಣಕಾರಿಯಾಗಿ ಎದುರಾಳಿಗಳ ಮೇಲೆ ಪ್ರಹಾರ ಮಾಡುತ್ತಿದ್ದಾರೆ. 

Advertisement

132 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಾರ್ಟಿಯ ನೂತನ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಆಯ್ಕೆಯಾಗಿರುವ ಕುರಿತು ಸೋಮವಾರ ಅಧಿಕೃತ ಘೋಷಣೆ ಹೊರಬಿದ್ದಿದೆ. ಕಣದಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಸ್ಪರ್ಧೆಯೇ ಇಲ್ಲದೆ ರಾಹುಲ್‌ ಆಯ್ಕೆಯಾಗಿದ್ದಾರೆ. 19 ವರ್ಷಗಳಷ್ಟು ಸುದೀರ್ಘ‌ ಕಾಲ ಪಕ್ಷದ ಸಾರಥ್ಯ ವಹಿಸಿದ್ದ ಸೋನಿಯಾ ಗಾಂಧಿ ನೇಪಥ್ಯಕ್ಕೆ ಸರಿಯಲು ತೀರ್ಮಾನಿಸಿದಾಗ ಹೊಸ ಅಧ್ಯಕ್ಷ ಯಾರು ಎಂದು ತೀರ್ಮಾನಿಸಲು ಕಾಂಗ್ರೆಸ್‌ಗೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಹೇಗಿದ್ದರೂ ಅಧ್ಯಕ್ಷ ಹುದ್ದೆ ನೆಹರು-ಗಾಂಧಿ ಪರಿವಾರಕ್ಕೆ ಮೀಸಲಾಗಿರುವುದರಿಂದ ರಾಹುಲ್‌ ಸಹಜ ಆಯ್ಕೆಯೇ ಆಗಿದ್ದರು. ಅದಕ್ಕೆ ಪ್ರಜಾಪ್ರಭುತ್ಮಾತ್ಮಕ ರೀತಿಯ ಆಯ್ಕೆ ಎಂಬ ಮುದ್ರೆಯೊತ್ತಲು ನೆಪಮಾತ್ರಕ್ಕೆ ಚುನಾವಣೆಯೆಂಬ ಪ್ರಹಸನವನ್ನು ನಡೆಸಲಾಗಿದೆಯಷ್ಟೆ. ಡಿ. 16ಕ್ಕೆ ಅಧಿಕಾರ ಹಸ್ತಾಂತರವಾಗುವುದರೊಂದಿಗೆ ಕಾಂಗ್ರೆಸ್‌ನಲ್ಲಿ ರಾಹುಲ್‌ ಪರ್ವ ಪ್ರಾರಂಭವಾಗಲಿದೆ. ಆದರೆ ಕಾಂಗ್ರೆಸ್‌ ಅತ್ಯಂತ ಸಂಕಷ್ಟದ ಸಮಯದಲ್ಲಿರುವ ಕಾಲಘಟ್ಟದಲ್ಲಿ ರಾಹುಲ್‌ ಅಧ್ಯಕ್ಷ ಪದವಿಗೇರುತ್ತಿದ್ದಾರೆ ಎಂಬ ಅಂಶ ಅವರ ಆಯ್ಕೆಯ ಬಗ್ಗೆ ಕುತೂಹಲ ತಾಳುವಂತೆ ಮಾಡಿದೆ. ಅಧ್ಯಕ್ಷರಾಗಿ ಒಂದು ಕ್ಷಣವೂ ವಿರಮಿಸಲು ಸಾಧ್ಯವಾಗದಷ್ಟು ಘನ ಸವಾಲುಗಳು ರಾಹುಲ್‌ ಮುಂದಿವೆ. 

ಈ ಪೈಕಿ ಅತಿ ದೊಡ್ಡ ಸವಾಲು ಎಂದರೆ ಪಕ್ಷವನ್ನು ತಳಮಟ್ಟದಿಂದ ಪುನರ್‌ರಚಿಸುವುದು. ವಂಶದ ಬಲದಿಂದ ಅಧ್ಯಕ್ಷ ಹುದ್ದೆ ದಕ್ಕಿದ್ದರೂ ಅದರಲ್ಲಿ ಮುಂದುವರಿಯಲು ಸಾಧಿಸಿ ತೋರಿಸಬೇಕಾದ ಅನಿವಾರ್ಯತೆಯಿದೆ. ದೇಶವೀಗ ನಿರ್ಣಾಯಕವಾದ ಸ್ಥಿತ್ಯಂತರದ ಘಟ್ಟದಲ್ಲಿದೆ. ನವಭಾರತ ನಿರ್ಮಾಣದ ಕನಸು ಚಿಗುರೊಡೆದಿದ್ದು, ಈ ಆಧುನಿಕ ಕಾಲಕ್ಕೆ ತಕ್ಕಂತೆ ಸಂಪ್ರದಾಯವಾದಿ ಪಕ್ಷವನ್ನು ಹೇಗೆ ಕಟ್ಟಿ ನಿಲ್ಲಿಸುತ್ತಾರೆ ಎನ್ನುವುದರ ಮೇಲೆ ಅವರ ಯಶಸ್ಸು ನಿಂತಿದೆ. ಕರ್ನಾಟಕ, ಪಂಜಾಬ್‌, ಗೋವಾದಂತಹ ಕೆಲವು ರಾಜ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಬಲಿಷ್ಠ ಸಂಘಟನೆ ಹೊಂದಿಲ್ಲ. ನಿಷ್ಠಾವಂತ ಕಾರ್ಯ ಕರ್ತರ ಕೊರತೆ ಕಾಂಗ್ರೆಸ್‌ನ್ನು ಬಹುವಾಗಿ ಕಾಡುತ್ತಿದ್ದು ಮೊದಲಾಗಿ ಈ ಸಮಸ್ಯೆಯನ್ನು ಬಗೆಹರಿಸುವ ಅಗತ್ಯವಿದೆ. ಅಂತೆಯೇ ರಾಹುಲ್‌ ಗಾಂಧಿ ತನ್ನ ಇಮೇಜ್‌ ಬದಲಾಯಿಸಿಕೊಳ್ಳುವ ಅನಿವಾರ್ಯತೆಯೂ ಇದೆ. ಕೆಲ ಸಮಯದ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಬಳಿಕ ರಾಹುಲ್‌ ಇಮೇಜ್‌ ಸಾಕಷ್ಟು ಬದಲಾಗಿರುವುದು ನಿಜ. ಆದರೆ ಇನ್ನೂ ಅವರಲ್ಲಿ ಸಮರ್ಥ, ವಿಶ್ವಾಸಾರ್ಹ ಮತ್ತು ದಕ್ಷ ನಾಯಕತ್ವದ ಗುಣ ಕಾಣಿಸಿಕೊಂಡಿಲ್ಲ. ಆದರೆ ಎಷ್ಟೇ ಸೋಲುಗಳು ಎದುರಾದರೂ ಎದೆಗುಂದದೆ ಮುನ್ನುಗ್ಗುವ ಛಾತಿಯನ್ನು ಅವರು ಬೆಳೆಸಿಕೊಂಡಿದ್ದಾರೆ.

ಹಾಗೇ ನೋಡಿದರೆ 2014ರ ಲೋಕಸಭೆ ಚುನಾವಣೆಯಿಂದ ತೊಡಗಿ ಮೊನ್ನೆ ನಡೆದ ಉತ್ತರ ಪ್ರದೇಶದ ಸ್ಥಳೀಯಾಡಳಿತ ಚುನಾವಣೆ ತನಕ ರಾಹುಲ್‌ ಗಾಂಧಿ ಸೋಲಿನ ಸರಮಾಲೆಯನ್ನೇ ಧರಿಸಿದ್ದಾರೆ. ಆದರೂ ಎದೆಗುಂದದೆ ಮತ್ತೆ ಮತ್ತೆ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದಾರೆ ಹಾಗೂ ಈಗೀಗ ಬಹಳ ಆಕ್ರಮಣಕಾರಿಯಾಗಿ ಎದುರಾಳಿಗಳ ಮೇಲೆ ಪ್ರಹಾರ ಮಾಡುತ್ತಿದ್ದಾರೆ. ಅವರಲ್ಲಾಗಿರುವ ಈ ಪರಿವರ್ತನೆ ಕಾಂಗ್ರೆಸ್‌ ಪಾಲಿಗೆ ಮತ್ತೆ ಭರವಸೆಯ ಬೆಳಕು ನೀಡಿರುವುದು ಸುಳ್ಳಲ್ಲ. ಪಕ್ಷದಲ್ಲಿ ಎರಡನೇ ತಲೆಮಾರಿನ ಬಲಿಷ್ಠ ನಾಯಕರನ್ನು ಬೆಳೆಸುವ ಅಗತ್ಯವಿದೆ. ಸೋನಿಯಾ ಗಾಂಧಿಯ 19 ವರ್ಷದ ಕಾರುಬಾರಿನ ಕಾಲದಲ್ಲಿ ಇಂತಹ ಯಾವ ನಾಯಕರೂ ಬೆಳೆದು ಬಂದಿಲ್ಲ ಎನ್ನುವುದು ಗಮನಾರ್ಹ ಅಂಶ. ಅದೇ ಹಳೆಯ ಮುಖಗಳೇ ಪಕ್ಷದ ಮುಂಚೂಣಿಯಲ್ಲಿದ್ದವು. 13 ವರ್ಷದ ಸಕ್ರಿಯ ರಾಜಕಾರಣ ಮತ್ತು ನಾಲ್ಕೂ ಚಿಲ್ಲರೆ ವರ್ಷ ಉಪಾಧ್ಯಕ್ಷ ಹುದ್ದೆಯ ಅವಧಿಯಲ್ಲಿ ಹೊಸ ನಾಯಕರನ್ನು ಬೆಳೆಸಲು ರಾಹುಲ್‌ ಪ್ರಯತ್ನಿಸಿರುವುದು ನಿಜವಾಗಿದ್ದರೂ ಅದರಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ.

ಕಾರ್ಯಕರ್ತರಂತೆಯೇ ಕಾಂಗ್ರೆಸ್‌ ಈಗ ಎರಡನೇ ಸ್ತರದ ನಾಯಕರ ಕೊರತೆಯನ್ನೂ ಎದುರಿಸುತ್ತಿದೆ. ಸ್ಥಳೀಯ ನಾಯಕರನ್ನು ಬೆಳೆಸುವುದು ಯಾವುದೇ ಪಕ್ಷಕ್ಕಾದರೂ ಅನಿವಾರ್ಯ. ಹೈಕಮಾಂಡ್‌ ಕೇಂದ್ರಿತ ಕಾಂಗ್ರೆಸ್‌ನಲ್ಲಿ ಈ ಪರಂಪರೆ ಮತ್ತೂಮ್ಮೆ ಹೊಸದಾಗಿ ಪ್ರಾರಂಭವಾಗಬೇಕಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಬೆನ್ನುಬೆನ್ನಿಗೆ ನಡೆಯಲಿರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾದ ಭಾರೀ ಸವಾಲು ರಾಹುಲ್‌ ಮುಂದಿದೆ. ಮುಂದಿನ ವರ್ಷ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಕಚ್ಚಾಟ ನಿರತರಾಗಿರುವ ನಾಯಕರನ್ನು ಒಗ್ಗೂಡಿಸಿ ಚುನಾವಣೆ ಎದುರಿಸುವುದು ಅಗ್ನಿಪರೀಕ್ಷೆಯಾಗಲಿದೆ. ಅಂತೆಯೇ 2019ರ ಸಾರ್ವತ್ರಿಕ ಚುನಾವಣೆಗೆ ಇನ್ನು ಬಾಕಿಯಿರುವುದು ಬರೀ 16 ತಿಂಗಳು ಮಾತ್ರ. ಮೋದಿಯ ಪ್ರಖರ ಪ್ರಭಾವಳಿಯನ್ನು ಮೆಟ್ಟಿ ನಿಂತು ಪಕ್ಷವನ್ನು ಮುನ್ನಡೆಸುವ ಸವಾಲಿನಲ್ಲಿ ರಾಹುಲ್‌ ಎಷ್ಟು ಯಶಸ್ವಿಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next