Advertisement

ತಾಮ್ರಧ್ವಜ ಕಾಳಗ ಮತ್ತು ಅಹಮಪಿ ಮಾನುಷೀ- ಎರಡು ಭಿನ್ನ ಮಾದರಿಯ ಯಕ್ಷಗಾನಗಳು

06:04 PM Nov 28, 2019 | mahesh |

ಉಡುಪಿಯ ಯಕ್ಷಗಾನ ಕಲಾರಂಗ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಂದು ಎರಡು ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿತ್ತು. ಬಡಗುತಿಟ್ಟು ಶೈಲಿಯ ತಾಮ್ರಧ್ವಜ ಕಾಳಗವನ್ನು ಪ್ರಸ್ತುತ ಪಡಿಸಿದವರು ಯಕ್ಷಸಿಂಚನ ಟ್ರಸ್ಟ್‌ ಬೆಂಗಳೂರು. ಆಯ್ದ ಕಲಾವಿದರನ್ನು ಸೇರಿಸಿ, ಪೃಥ್ವಿರಾಜ್‌ ಅವರು ತೆಂಕುತಿಟ್ಟು ಯಕ್ಷಗಾನ ಅಹಮಪಿ ಮಾನುಷೀ ಎಂಬ ಕಥಾನಕವನ್ನು ಪ್ರೇಕ್ಷಕರ ಚಿಂತನೆಗೆ ಸವಾಲೆಸೆದು, ರಂಗಸ್ಥಳದಲ್ಲಿ ರಚಿಸಿದರು. ಯಾವುದೇ ವೈಭವ, ಇಂದಿನ ಮಾಮೂಲಿ ನೃತ್ಯ ವಿಸ್ತಾರ ಅಥವಾ ವಿಜೃಂಭಣೆಗಳಿಲ್ಲದೆ ಈ ಎರಡು ಯಕ್ಷಗಾನಗಳು ಪ್ರೇಕ್ಷಕರ ಗಮನ ಸೆಳೆದುದು ನಿಜ. ಜೈಮಿನಿ ಭಾರತದಲ್ಲಿ ಬರುವ ತಾಮ್ರಧ್ವಜ ಕಾಳಗದ ಕಥೆ ಎಲ್ಲರಿಗೂ ತಿಳಿದಿರುವಂಥದ್ದು. ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳಲ್ಲಿ ಈ ಪ್ರಸಂಗದ ನಡೆ, ರಂಗಭಾಷೆ ಮತ್ತು ಬಳಸುವ ಪದ್ಯಗಳಲ್ಲಿ ವ್ಯತ್ಯಾಸವಿದೆ. ಕರ್ಣಾರ್ಜುನ ಕಾಳಗ, ದುಶ್ಯಾಸನ ವಧೆ ಮೊದಲಾದ ಪ್ರಸಂಗಗಳಂತೆ ಸ್ವಲ್ಪ ಸಂಕೀರ್ಣವಾದ ರಂಗನಡೆ, ರಂಗ ತಂತ್ರ, ರಂಗ ಸಂಪ್ರದಾಯಗಳನ್ನು ಬಯಸುವ ತಾಮ್ರಧ್ವಜ ಕಾಳಗದಲ್ಲಿ ಯಕ್ಷಸಿಂಚನದ ಕಲಾವಿದರು ನಡುಬಡಗು ತಿಟ್ಟಿನ ಶೈಲಿಯನ್ನು ಪಾಲಿಸಿದ್ದರು. ಒಡ್ಡೋಲಗ, ಹೆಜ್ಜೆಗಾರಿಕೆ, ಮುಖವರ್ಣಿಕೆ ಇತ್ಯಾದಿಗಳಲ್ಲೆಲ್ಲ ಈ ಸಂಗತಿ ಸ್ಪುಟವಾಗಿ ಕಾಣುತ್ತಿತ್ತು. ನರ್ತನದಲ್ಲಿ ದೈಹಿಕ ಬಾಗುಬಳುಕುಗಳು , ವೇಷಗಾರಿಕೆಗೆ ಒಪ್ಪುವಂತೆ, ಒಂದು ಬಿಗುವನ್ನು ಉಳಿಸಿಕೊಂಡೇ, ಶೈಲಿನಿಷ್ಠೆಯಲ್ಲಿ ನಯನ ರಂಜನೆ ಒದಗಿಸಿದುವು. ಬಾಲಗೋಪಾಲ ಮತ್ತು ಸ್ತ್ರೀವೇಷಗಳು (ಕು| ಪಂಚಮಿ ಮತ್ತು ಕು| ಚಿತ್ಕಲಾ) ಸ್ವತ್ಛ ನಾಟ್ಯದಲ್ಲಿ ಲವಲವಿಕೆಯನ್ನು ರಂಗಸ್ಥಳದ ವಾತಾವರಣಕ್ಕೆ ತುಂಬಿಸಿದುವು. ಅರ್ಜುನ (ಶಶಿರಾಜ ಸೋಮಯಾಜಿ) ವೃಷಕೇತು (ಆದಿತ್ಯ ಉಡುಪ) ಮತ್ತು ಪ್ರದ್ಯುಮ್ನ (ಅಭಿನವ್‌) ಇವರ ಕಥಾರಂಭದ ಒಡ್ಡೋಲಗದಲ್ಲಿ ಹೆಜ್ಜೆಗಾರಿಕೆಯ ಖಚಿತತೆ ತರಬೇತಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿತ್ತು. ತಾಮ್ರಧ್ವಜನ (ಶಶಾಂಕ್‌ ಕಾಶಿ) ಮುಂಡಾಸಿನ ವೇಷವೂ ನರ್ತನ ಸೊಗಸುಗಾರಿಕೆಯಿಂದ, ಪಾತ್ರಚಿತ್ರಣಕ್ಕೆ ಆಕರ್ಷಣೆ ಒದಗಿಸಿತು. ಎಲ್ಲರ ಅರ್ಥಗಾರಿಕೆ ಲಯಬದ್ಧವೂ ಶ್ರುತಿಬದ್ಧವೂ ಆಗಿದ್ದುದರಿಂದ ಶೈಲಿ ಶಿಲ್ಪದಲ್ಲಿ ಒಂದಾಗಿರುತ್ತಿತ್ತು. ಕೃಷ್ಣವೇಷ ನಡು ಬಡಗುತಿಟ್ಟಿನ ಆಹಾರ್ಯ ವೈವಿಧ್ಯದಲ್ಲಿ ಪ್ರತ್ಯೇಕ ಸ್ಥಾನ ಹೊಂದಿದೆ. ಕಸೆ ಸೀರೆಯನ್ನು ನೆರಿಹಿಡಿದು ಧರಿಸುವುದು ಕಾಲಕಡಗಕ್ಕಿಂತ ಸ್ವಲ್ಪ ಎತ್ತರದಲ್ಲಿ ಅದು ಇರುವುದು ಮಾತ್ರವಲ್ಲದೆ ಎದೆಯ ಹಾರದ ಮೇಲೆ ಒಂದು ಡಾಬು ಹಾಕುವುದು ಇತ್ಯಾದಿಗಳು ಕೃಷ್ಣ ಪಾತ್ರದ ಒಂದು ಭಿನ್ನ ಪಾರಂಪರಿಕ ಮಾದರಿ. ಈ ರೀತಿಯ ಆಹಾರ್ಯದಲ್ಲಿ ತನ್ನ ಸುಂದರ ಸ್ಪಷ್ಟ ಹೆಜ್ಜೆಗಾರಿಕೆಯಲ್ಲಿ ಕೃಷ್ಣನನ್ನು ಎಲ್ಲರೂ ಮೆಚ್ಚುವಂತೆ ಚಿತ್ರಿಸಿದವರು ಕೃಷ್ಣಮೂರ್ತಿ ತುಂಗರು.

Advertisement

ರವಿ ಮಡ್ಡೋಡಿಯವರು ಹರಿಭಕ್ತ ಮಯೂರ ಧ್ವಜನ ಪಾತ್ರವನ್ನು ಸಾಕಷ್ಟು ಭಾವುಕವಾಗಿಯೇ ಚಿತ್ರಿಸಿದರು. ಈ ಕಾಲದ ರಂಗಸ್ಥಳವು ಆಧುನಿಕ ವಿದ್ಯುದ್ದೀಪಗಳ ಪ್ರಕಾಶದಿಂದ ಬೆಳಗುತ್ತಿರುವುದರಿಂದ ಕೆಮರಾ ಕಣ್ಣಿಗೆ ಅಚ್ಚಬಿಳಿ ಬಣ್ಣದ ಗಡ್ಡ ಮೀಸೆಗಳು ಮುಖವರ್ಣಿಕೆಗೆ ಮತ್ತು ಆಹಾರ್ಯದ ಬಣ್ಣಗಳೊಂದಿಗೆ ಹೇಗೆ ಹೊಂದುತ್ತವೆ, ಅಥವಾ ಅರೆ ಕಪ್ಪು ಬಣ್ಣದ ಗಡ್ಡಮೀಸೆಗಳು ಹೆಚ್ಚು ಸೂಕ್ತವಾಗಬಹುದೇ ಎನ್ನುವುದನ್ನು ಯೋಚಿಸುವುದು ಒಳ್ಳೆಯದೆಂದು ಮಯೂರ ಧ್ವಜನ ಮುಖನೋಡಿದಾಗ ತೋರಿತು. ಸಮಯ ಮಿತಿಯ ಒತ್ತಡದಿಂದ ನರಸಿಂಹ ತುಂಗರ ಬ್ರಾಹ್ಮಣ ಪಾತ್ರ ಪ್ರಸಂಗದ ಕೊನೆಯ ಭಾಗ ಸಂವಾದದ ಹೊಂದಾಣಿಕೆಯಲ್ಲಿ ಸ್ವಲ್ಪ ಸೊರಗಿತು.

ಶೈಲಿ ನಿಷ್ಠೆಗೆ ಪೂರಕವಾಗಿ ಪ್ರಸಂಗದ ಕಳೆಕಟ್ಟಿದವರು ಭಾಗವತರಾದ ಕೆ.ಜೆ. ಗಣೇಶ ಹಾಗೂ ಚಂಡೆ ಮದ್ದಳೆಯ ಸಹಕಲಾವಿದರಾದ ಕೆ.ಜೆ ಕೃಷ್ಣ ಮತ್ತು ಕೆ.ಜೆ. ಸುಧೀಂದ್ರ. ಹಿಮ್ಮೇಳ-ಮುಮ್ಮೇಳ ಕಲಾತ್ಮಕ ಸಾಂಗತ್ಯ ಈ ಪ್ರದರ್ಶನದ ಯಶಸ್ಸಿಗೆ ಕಾರಣವಾಗಿತ್ತು. ಕೆ.ಜೆ. ಗಣೇಶರ ಪಾರಂಪರಿಕ ಶೈಲಿ ಹಿಂದಿನ ಹಿರಿಯ ಭಾಗವತರನ್ನು ನೆನಪಿಸಿತು.

ಅನಂತರ ಪ್ರದರ್ಶನ ಕಂಡದ್ದು ಅಹಮಪಿ ಮಾನುಷೀ. ಕೆಲವು ತಿಂಗಳ ಹಿಂದೆ ಆತ್ಮಾನಂ ಮಾನುಷಂ ಮನ್ಯೆ ಎಂಬ ರಾಮನ ಕುರಿತಾದ ಕತೆಯನ್ನು ಯಕ್ಷಗಾನ ರೂಪಕ್ಕೆ ಸಂಯೋಜಿಸಿದ ಪ್ರಥ್ವಿರಾಜ್‌ ಅವರೇ ಸೀತೆಯ ಕುರಿತಾದ ಕಥಾಭಾಗವನ್ನು ತೆಂಕುತಿಟ್ಟಿನ ಶೈಲಿಗೆ ಹೊಂದಿಸಿದವರು. ಸಾಮಾನ್ಯವಾಗಿ ತೆಂಕುತಿಟ್ಟು ಆಟವಾದಾಗ ಚಂಡೆ, ಮದ್ದಳೆಗಳ ಅಬ್ಬರ, ಭಾಗವತಿಕೆಯ ವೈಭವ, ದಿಗಿಣ, ಹಾಸ್ಯಗಳ ಪೈಪೋಟಿ ಎದ್ದು ಕಾಣುತ್ತವೆ. ವೀರ, ಶೃಂಗಾರ ರಸಗಳ ಮನೋರಂಜನೆಯ ಸಮಾರಾಧನೆ ಸಾಕಷ್ಟಿರುತ್ತದೆ. ಆದರೆ ಅಹಮಪಿ ಮಾನುಷೀಯಲ್ಲಿ ಕರುಣ ರಸವೇ ಪ್ರಧಾನ. ಲವಣಾಸುರನನ್ನು ವಧಿಸಿದ ಬಳಿಕ ಶತ್ರುಘ್ನ, ವಾಲ್ಮೀಕಿ ಆಶ್ರಮದಲ್ಲಿ ಸೀತೆಯನ್ನು ಕಂಡು, ತಾನು ದುಃಖೀತನಾಗಿ ಸೀತೆ ಮರಳಿ ಅಯೋಧ್ಯೆಗೆ ಬರಬೇಕೆಂದು ಪ್ರಾರ್ಥಿಸುವುದೇ ಕಥಾಭಾಗ.

ಸೀತೆಯ ಅಗ್ನಿಪರೀಕ್ಷೆಯ ಸಂದರ್ಭ ರಾಮ ತನ್ನನ್ನು ತಾನು ಮನುಷ್ಯನೆಂದು ಹೇಳಿ ಪರೋಕ್ಷವಾಗಿ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದನಲ್ಲ, ಈಗ ಈ ಲಕ್ಷ್ಮಣನ ಪ್ರಾರ್ಥನೆಯನ್ನು ತಿರಸ್ಕರಿಸಿದ ಸೀತೆ ತಾನೂ ಮನುಷ್ಯಳೆಂದು ಅಯೋಧ್ಯೆಗೆ ಬಾರದಿರುವುದಕ್ಕೆ ಕಾರಣ ಕೊಡುತ್ತಾಳೆ. ಆದರೆ ಸೀತೆಯ ಮಾತಿನ ಅಂತರಾರ್ಥ, ಧಾಟಿ, ಅವಳ ವಾದದ ಧೋರಣೆ ಇತ್ಯಾದಿಗಳೆಲ್ಲ ಪ್ರೇಕ್ಷಕರೆ ಅಥೆìçಸಿಕೊಳ್ಳಬೇಕಾಗುವ ರೀತಿಯಲ್ಲಿ ಅವಳ ಪಾತ್ರ ಚಿತ್ರಿಸಲ್ಪಟ್ಟಿದೆ. ಅವಳ ಮನಸ್ಸಿನ ಒಳತೋಟಿ ನೇರವಾಗಿ ಪ್ರಸಂಗದಲ್ಲಿ ವಾಚ್ಯಗೊಂಡಿಲ್ಲ. ರಾಮನ ಮಾತಿಗೆ ಅವಳದ್ದು ಪ್ರತಿವಾದವೆ? ಹೆಣ್ಣೊಬ್ಬಳು ಮಾನುಷ ನೆಲೆಯಲ್ಲಿ, ಸಮ್ಮಿಶ್ರ ಭಾವಗಳ ತುಮುಲದಲ್ಲಿ, ಸ್ವಾಭಿಮಾನಿಯಾಗಿ ತಾನೂ ಹೆಣ್ಣು ಎಂದು ಹೇಳುತ್ತಾಳೆಯೆ? ಅಂತೂ ಕಥೆಯ ಆಶಯ ಪ್ರೇಕ್ಷಕರನ್ನು ಚಿಂತನೆಯಲ್ಲಿ ಮುಳುಗಿಸುತ್ತದೆ.

Advertisement

ಶತ್ರುಘ್ನನಾಗಿ ಲಕ್ಷ್ಮಣ ಮರಕಡ, ಸೀತೆಯಾಗಿ ಮಹೇಶ ಸಾಣೂರು, ಕರುಣ ರಸವನ್ನು ಅದರ ಸಂಕೀರ್ಣತೆಯನ್ನು ಯಶಸ್ವಿಯಾಗಿ ಚಿತ್ರಿಸಿದ್ದಾರೆ. ಪ್ರಸಂಗದ ಪೂರ್ವಾರ್ಧದ ಲವಣಾಸುರ ಕಾಳಗ (ಲವಣಾಸುರನಾಗಿ ಕಾರುಣ್ಯನಿಧಿ)ದಲ್ಲಿ ಮಿತವಾದ ರಂಗಕ್ರಿಯೆಯನ್ನು ಶತ್ರುಘ್ನ ಮತ್ತು ಲವಣಾಸುರರು ನಿರ್ವಹಿಸುತ್ತಾರೆ. ಉತ್ತರಾರ್ಧದಲ್ಲಿ ಈಗ ಬಾಣಂತಿಯಾದ ಸೀತೆ ರಂಗದಲ್ಲಿ ಕುಳಿತೇ ಮಾತು ಮತ್ತು ಮುಖಾಭಿನಯಗಳಿಂದ ನಮ್ಮ ಮೇಲೆ ಪರಿಣಾಮ ಬೀರುತ್ತಾಳೆ.

ಈ ಪ್ರದರ್ಶನದ ಭಿನ್ನತೆ ಇರುವುದು ಅಂದಿನ ಹಿಮ್ಮೇಳದಲ್ಲಿ. ಚಿನ್ಮಯ ಕಲ್ಲಡ್ಕ, ದೇವರಾಜ್‌ ಕಟೀಲು ಹಾಗೂ ಶಾಲಿನಿ ಹೆಬ್ಟಾರ್‌ ಈ ಮೂವರು ಭಾಗವತರ ಪಾತ್ರ ನಿರ್ವಹಿಸಿ ಹಾಡುತ್ತಾರೆ. ಸಂಗೀತ ಪ್ರಧಾನವಾದ, ಗಮಕವಾಚನವನ್ನು ನೆನಪಿಸುವ ರಾಗ, ಭಾವಗಳಿಗೆ ಒತ್ತು ನೀಡಿದ ಹಾಡುಗಾರಿಕೆ. ಹಿಮ್ಮೇಳ ಮುಮ್ಮೇಳಗಳ ಗತಿಯೂ ನಿಧಾನ ಲಯದಲ್ಲಿತ್ತು. ತಾಳ್ಮೆಯಿಂದ ಆಟ ನೋಡುವರಿಗೆ ಪಾತ್ರ ಚಿತ್ರಣದೆಡೆಗೆ ಗಮನ ಸೆಳೆಯುವ ಒಂದು ಆಟವಿದು. ಪಾತ್ರಗಳ ಹಾರಾಟ, ಮೇಲಾಟವಿಲ್ಲ. ಮದ್ದಳೆ ವಾದಕ ಶ್ರೀಧರ ವಿಟ್ಲರಿಗೂ ಸಂಯಮವೇ ಮುಖ್ಯವಾಗಿತ್ತು. ಚಂಡೆವಾದಕ ಮುರಾರಿ ಕಡಂಬಳಿತ್ತಾಯರು ರಂಗಶಿಸ್ತಿನಿಂದ ಹೆಚ್ಚಿನ ಕಾಲ ರಂಗಸ್ಥಳದಲ್ಲಿ ನಿಂತೇ ಇರಬೇಕಾಗಿತ್ತು. ಒಟ್ಟಿನಲ್ಲಿ ಭಾವ ಸಂಯಮದಿಂದ, ಭಿನ್ನ ಸಂವೇದನೆಯಿಂದ, ಬೌದ್ಧಿಕ ಚಿಂತನೆಯಿಂದ ನೋಡಿ ಆನಂದಿಸಬೇಕಾದ ಪ್ರದರ್ಶನ ಅಹಮಪಿ ಮಾನುಷೀ ಪೌರಾಣಿಕ ಆಶಯಕ್ಕೆ ಭಂಗ ಬಾರದಂತೆ ಹೊಸ ದೃಷ್ಟಿಕೋನದಿಂದ ಸೀತೆಯನ್ನು ಚಿತ್ರಿಸುವ ಈ ಪ್ರದರ್ಶನದಲ್ಲಿ ಯಕ್ಷಗಾನದ ರಂಗಕ್ರಿಯೆಯ ಅಂಶಗಳು ಹೆಚ್ಚಿರಲಿಲ್ಲ. ಲವಣಾಸುರನ ತೆರೆ ಒಡ್ಡೋಲಗಕ್ಕೆ ತೆರೆ ಹಿಡಿಯುವವರಾಗಿ ಋಷಿಕುಮಾರರೇ ಬಂದಿದ್ದು, ಬಳಿಕ ಅವರೇ ರಾಕ್ಷಸನ ದೌರ್ಜನ್ಯಕ್ಕೆ ತುತ್ತಾಗುವ ದೃಶ್ಯ ನಿರ್ದೇಶಕನ ಕೌಶಲವೆನ್ನಬಹುದು. ಅಂದಿನ ಎರಡೂ ಪ್ರಸಂಗಗಳ ಯಶಸ್ಸಿನ ಹಿಂದೆ ನಿರ್ದೇಶಕನ ಪ್ರಯತ್ನವಿತ್ತು ಎನ್ನುವುದು ಖಚಿತ. ಹಾಗಾಗಿ ಯಕ್ಷಗಾನಕ್ಕೆ ನಿರ್ದೇಶಕ ಏಕೆ ಬೇಕು ಎನ್ನುವುದಕ್ಕೂ ಈ ಎರಡು ಆಟಗಳು ಸಾಕ್ಷಿ.

ಪ್ರೊ. ಎಂ.ಎಲ್‌. ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next