Advertisement

ದಿಗ್ದರ್ಶಕರ ಆರೋಗ್ಯಕ್ಕೆ ಸಂಚಕಾರ

11:14 AM Feb 14, 2018 | |

ಬೆಂಗಳೂರು: ಸಾವಿರಾರು ವಾಹನಗಳು ಸಂಚರಿಸುವಾಗ ಉಗುಳುವ ಹೊಗೆ, ಏಳುವ ಧೂಳಿನ ವಾತಾವರಣದಲ್ಲಿ ಹಲವು ಗಂಟೆ ಕಾಲ ನಿಂತು ಕರ್ತವ್ಯ ನಿರ್ವಹಿಸುವುದು ಸಂಚಾರಿ ಪೊಲೀಸರ ಕಾಯಕ. ಇದು ಅವರ ಆರೋಗ್ಯಕ್ಕೆ ಮಾರಕ!

Advertisement

ಸಂಚಾರಿ ಪೊಲೀಸರಿಗೆ ಮೂರು ಪಾಳಿ ವ್ಯವಸ್ಥೆಯಿದ್ದರೂ ಬಹುಪಾಲು ಸಿಬ್ಬಂದಿ ಹಗಲು ಹೊತ್ತಿನಲ್ಲಿ ಸಂಚಾರ ನಿರ್ವಹಣೆಗೆ ನಿಯೋಜನೆಗೊಳ್ಳುತ್ತಾರೆ. ಜನ, ವಾಹನ ದಟ್ಟಣೆಯ ಪ್ರದೇಶದಲ್ಲಿ ಆರೇಳು ಗಂಟೆ ಕೆಲಸ ಮಾಡುವ ಈ ಸರ್ಕಾರಿ ನೌಕರರಿಗೆ ಮೂಲ ಸೌಕರ್ಯ ಮತ್ತು ಆರೋಗ್ಯ ಭದ್ರತೆ ಎಂಬುದು ಮರೀಚಿಕೆ. 

ಒತ್ತಡ: ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಸಮಯಕ್ಕೆ ಸರಿಯಾಗಿ ಕುಡಿವ ನೀರು, ಉಪಾಹಾರ, ಊಟ ಸೇವನೆಗೂ ಸ್ಥಳಾವಕಾಶ, ಸಮಯಾವಕಾಶದ ತೊಂದರೆ. ಇನ್ನು ನಿಸರ್ಗ ಕರೆಗೂ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಶೋಚನೀಯ. ಇದು ಹಗಲು ಹೊತ್ತಿನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸಮಸ್ಯೆಯಾದರೆ ರಾತ್ರಿ ವೇಳೆ ಪಾನಮತ್ತ ಚಾಲಕರು, ವಾಹನ ಸವಾರರ ಪತ್ತೆಗೆ ತಪಾಸಣೆ ನಡೆಸುವವರು, ಅಡ್ಡಾದಿಡ್ಡಿಯಾಗಿ, ಡ್ರ್ಯಾಗ್‌ ರೇಸಿಂಗ್‌ ಮಾಡುವವರನ್ನು ತಡೆಯಾಗುವ ಅಪಾಯಗಳಾಗುವ ಸಾಧ್ಯತೆಯೂ ಹೆಚ್ಚು. ಹೀಗೆ ಎಲ್ಲ ಪಾಳಿಯಲ್ಲೂ ಬಹುತೇಕ ಸಿಬ್ಬಂದಿ ಒತ್ತಡದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.

ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲು, ಮಳೆ ಎನ್ನದೇ ನಡುರಸ್ತೆಯಲ್ಲಿ ನಿಲ್ಲಬೇಕು. ನೆಪ ಮಾತ್ರಕ್ಕೆ 8 ಗಂಟೆ ಕೆಲಸ ಎಂದು ಸರ್ಕಾರದ ಹೇಳಿದೆ. ಆದರೆ ಕರ್ತವ್ಯದ ಅವಧಿ 10 ಗಂಟೆವರೆಗೂ ವಿಸ್ತರಿಸಬಹುದು. ಗಣ್ಯರ ಸಂಚಾರ, ಅಂತಾರಾಷ್ಟ್ರೀಯ ಕ್ರೀಡಾ ಪಂದ್ಯಾವಳಿ, ಕ್ರಿಕೆಟ್‌ ಆಯೋಜನೆಗೊಂಡಾಗ ಕರ್ತವ್ಯ ಅವಧಿಗೆ ಲೆಕ್ಕವೇ ಇರುವುದಿಲ್ಲ. ತಪಾಸಣೆ ವೇಳೆ ಕೆಲ ವಾಹನ ಸವಾರರು ಅನುಚಿತವಾಗಿ ವರ್ತನೆ ತೋರುತ್ತಾರೆ, ಹಲ್ಲೆ ನಡೆಸುತ್ತಾರೆ ಎನ್ನುತ್ತಾರೆ ಪೊಲೀಸರು.

ಶೈಕ್ಷಣಿಕ ತೊಂದರೆ: ಕೇಂದ್ರದ ಭದ್ರತಾ ಪಡೆ ಸಿಬ್ಬಂದಿ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ಕೊಡಲಾಗುತ್ತದೆ. ಆದರೆ, ಪೊಲೀಸರ ಮಕ್ಕಳಿಗೆ ಆ ರೀತಿಯ ಸೌಲಭ್ಯವಿಲ್ಲ. ಜಿಲ್ಲೆ ಅಥವಾ ನಗರದ ಯಾವುದೋ ಒಂದು ಮೂಲೆಯಲ್ಲಿ ಪೊಲೀಸ್‌ ಮಕ್ಕಳಿಗಾಗಿ ಶಾಲೆ ತೆರೆಯಲಾಗಿದೆ. ಕೆಲವರಿಗಷ್ಟೇ ಇದರ ಪ್ರಯೋಜನವಾಗುತ್ತಿದೆ. ಹೀಗಾಗಿ ಕೇಂದ್ರ ಭದ್ರತಾ ಪಡೆಗಳು, ಎಚ್‌ಎಎಲ್‌ ಸಿಬ್ಬಂದಿಗೆ ಒದಗಿಸುವ ರೀತಿಯಲ್ಲೇ ನಮಗೂ ಉತ್ತಮ ಸೌಲಭ್ಯ ನೀಡಬೇಕು ಎಂಬುದು ಪೊಲೀಸ್‌ ಸಿಬ್ಬಂದಿ ಅಳಲು
 
ಆರೋಗ್ಯ ಸಮಸ್ಯೆ: ಸಂಚಾರ ಪೊಲೀಸರಿಗೆ ಮಂಡಿ ನೋವು ಬರುವುದು ಸಾಮಾನ್ಯ. ನಿರಂತರ ಐದಾರು ಗಂಟೆಗಳ ಕಾಲ
ನಿಂತರೇ ಸಾಕು ಕಾಲುಗಳು ಉದಿಕೊಳ್ಳುತ್ತವೆ. ಕೆಲಸದ ಮಧ್ಯೆ ಕುಳಿತುಕೊಳ್ಳಬಹುದಾದರೂ ಸಿಸಿಟಿವಿಯಲ್ಲಿ ಸೆರೆಯಾಗುತ್ತದೆ ಎಂಬ ಭಯದಿಂದ ನಿಂತಿಕೊಂಡೆ ಕೆಲಸ ಮಾಡುತ್ತಾರೆ.

Advertisement

ಪೊಲೀಸ್‌ ಇಲಾಖೆ ಸೇರಿದಂತೆ ನಾನಾ ಸಂಘ, ಸಂಸ್ಥೆಗಳು ಸಹ ಉಚಿತವಾಗಿ ಮಾಸ್ಕ್ ನೀಡುತ್ತವೆ. ಆದರೂ ಕೆಲವೊಮ್ಮೆ ಅತಿಯಾದ ಧೂಳು, ಹೊಗೆ ನೇರವಾಗಿ ಶ್ವಾಸಕೋಶಕ್ಕೆ ಸೇರುವುದರಿಂದ ಕೆಮ್ಮು, ಅಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಾಹನಗಳ ಕರ್ಕಷ ಹಾರ್ನ್ ಶಬ್ದ ನಿತ್ಯ ಕೇಳಿ ಕಿವಿಗೆ ಹಾನಿಯಾಗುವುದು ಮಾತ್ರವಲ್ಲದೆ ಕಿವುಡುತನ ಕಾಣಿಸಿಕೊಳ್ಳುವ ಆತಂಕ ಮೂಡುತ್ತದೆ. ರಸ್ತೆ ದುರಸ್ತಿ, ಅಭಿವೃದ್ಧಿ ಕಾಮಗಾರಿ, ರಸ್ತೆ ಗುಂಡಿ, ಕಟ್ಟಡ ನಿರ್ಮಾಣ ಸಾಮಗ್ರಿ ರಸ್ತೆಬದಿ ಸುರಿಯುವುದು ಇತರೆ ಕಾರಣಗಳಿಂದ ಧೂಳಿನ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವುದರಿಂದ ಕಣ್ಣಿನ ಸಮಸ್ಯೆ, ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತದೆ. 

ಇಲಾಖೆಯು “ಆರೋಗ್ಯ ಭಾಗ್ಯ’ ಯೋಜನೆ ಜಾರಿಗೊಳಿಸಿದ್ದು, ವೇತನದಲ್ಲಿ ಇಂತಿಷ್ಟು ಹಣ ಕಡಿತಮಾಡಿಕೊಳ್ಳಲಾಗುತ್ತದೆ. ಆದರೆ, ದೊಡ್ಡ ಕಾಯಿಲೆ ಹೊರತುಪಡಿಸಿದರೆ, ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಗೆ ಯಾವುದೇ ಪ್ರಯೋಜನವಾಗಿಲ್ಲ. ತಪಾಸಣೆ,ಔಷಧಿಗೆ ಪ್ರತ್ಯೇಕ ಪಾವತಿ ಪೊಲೀಸರಿಗೆ ತಲೆನೋವಾಗಿದೆ. (ಪೊಲೀಸರೇ ತಮ್ಮ ಸಮಸ್ಯೆ, ಸವಾಲುಗಳನ್ನು ಹೇಳಿಕೊಂಡಿದ್ದು, ಅವರ ಮನವಿಯಂತೆ ಹೆಸರನ್ನು ಗೌಪ್ಯವಾಗಿಡಲಾಗಿದೆ) 

ಆಯೋಗದ ಸೂಚನೆಯೇನು? ಮಿತಿ ಮೀರಿದ ವಾಯುಮಾಲಿನ್ಯ, ಶಬ್ದ ಮಾಲಿನ್ಯದ ವಾತಾವರಣದಲ್ಲೇ ನಿರಂತರವಾಗಿ ಕರ್ತವ್ಯ ಸಲ್ಲಿಸುವ ಸಂಚಾರ ಪೊಲೀಸರು ಎದುರಿಸುವ ಆರೋಗ್ಯ ಸಮಸ್ಯೆ, ಜೀವಿತಾವಧಿ ಪ್ರಮಾಣ ಕುಗ್ಗುವುದು ಸೇರಿದಂತೆ ಇತರೆ ಆತಂಕಕಾರಿ ಅಂಶಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿದೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್‌ ನೀಡಿ ಸಂಚಾರ ಪೊಲೀಸರ ಸ್ಥಿತಿಗತಿ ಹಾಗೂ ಅವರಿಗೆ ನೀಡಿರುವ ಆರೋಗ್ಯ ಸೇವೆಗಳ ಬಗ್ಗೆ ಎಂಟು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.

ನೀವೂ ಭಾಗವಹಿಸಿ
ಸಂಚಾರಿ ಪೊಲೀಸರು ಹೈವೇ, ಷಷ್ಠಪಥ, ಚತುಷ್ಪಧ ರಸ್ತೆಗಳಲ್ಲಿ ನಿಂತು ಸಾರ್ವಜನಿಕರಿಗೆ ಮಾರ್ಗ ತೋರುತ್ತಾ
ಬಿಸಿಲು, ಮಳೆ ಎನ್ನದೆ ಅನುಭವಿಸುವ ಯಾತನೆ ಬಗ್ಗೆ ಸಂಚಾರ ಪೊಲೀಸರು, ಅಥವಾ ನಾಗರಿಕರು ನಮಗೆ ವಾಟ್ಸಪ್‌ ಮೂಲಕ ತಿಳಿಸಬಹುದು 8861196369

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next