Advertisement

ಮಹಾನುಭಾವರಿಗೆ ಸ್ಟಾರ್‌ಗಳ ಸ್ಪರ್ಶ

10:35 AM Oct 31, 2017 | Team Udayavani |

ಈಗಂತೂ ಹೊಸಬರ ಸಿನಿಮಾಗಳದ್ದೇ ಸುದ್ದಿ. ಅದರಲ್ಲೂ, ಹೊಸಬರು ಅಂದಾಕ್ಷಣ, ಕನ್ನಡದ ಬಹುತೇಕ ಸ್ಟಾರ್‌ ನಟರು ಪ್ರೀತಿಯಿಂದಲೇ ಅವರನ್ನು ಪ್ರೋತ್ಸಾಹಿಸುತ್ತಿರುವುದು ಹೊಸ ಬೆಳವಣಿಗೆಯೂ ಹೌದು. ಈಗಿಲ್ಲಿ ಹೇಳ ಹೊರಟಿರುವ ವಿಷಯ “ಮಹಾನುಭಾವರು’ ಚಿತ್ರದ್ದು. ಹೌದು, ಇದು ಸಂಪೂರ್ಣ ಹೊಸಬರು ಸೇರಿ ಮಾಡಿರುವ ಚಿತ್ರ.

Advertisement

ನವೆಂಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಮೊದಲಿಗೆ ಪುನೀತ್‌ರಾಜ್‌ಕುಮಾರ್‌ ಹಾಗೂ ಶ್ರೀಮುರಳಿ ಇಬ್ಬರು ಒಂದೊಂದು ಹಾಡನ್ನು ಹಾಡುವ ಮೂಲಕ ಚಿತ್ರ ತಂಡವನ್ನು ಪ್ರೋತ್ಸಾಹಿಸಿದ್ದರು. ಇತ್ತೀಚೆಗೆ ಸಿನಿಮಾದ ಟ್ರೇಲರ್‌ವೊಂದನ್ನು ಸುದೀಪ್‌ ಅವರು ಬಿಡುಗಡೆ ಮಾಡುವ ಮೂಲಕ ಹೊಸಬರ ಕೆಲಸವನ್ನು ಮೆಚ್ಚಿಕೊಂಡಿದ್ದರು.

ಈಗ ಹೊಸ ಸುದ್ದಿಯೆಂದರೆ, ಪ್ರಜ್ವಲ್‌ ದೇವರಾಜ್‌, ಶರಣ್‌, ನೆನಪಿರಲಿ ಪ್ರೇಮ್‌, ಧನಂಜಯ್‌ ಮತ್ತು ಹರಿಪ್ರಿಯ ಅವರು ಚಿತ್ರದ ಲಿರಿಕಲ್‌ ವೀಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಹೊಸಬರ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ. ರಾಜೇಶ್‌ಕೃಷ್ಣ ಹಾಡಿದ “ಬರದ ಬೇಸಿಗೆಯಲ್ಲಿ’ ಹಾಡು ಕೇಳಿದ ಪ್ರಜ್ವಲ್‌, ಪ್ರೇಮ್‌,ಧನಂಜಯ್‌ ಮತ್ತು ಹರಿಪ್ರಿಯ ಆ ಲಿರಿಕಲ್‌ ವೀಡಿಯೋವನ್ನು ಬಿಡುಗಡೆ ಮಾಡಿದ್ದಲ್ಲದೆ, ಚಿತ್ರತಂಡಕ್ಕೆ ಗೆಲುವು ಸಿಗಲಿ ಎಂದು ಹಾರೈಸಿದ್ದಾರೆ.

ಅತ್ತ ಶರಣ್‌ ಕೂಡ ಅನುರಾಧ ಭಟ್‌ ಹಾಗು ಹೊ ಗಾಯಕ ಮಾಗಡಿ ಲೋಕೇಶ್‌ ಹಾಡಿದ “ಕಣ್ಣಲ್ಲೇ ಕಂಡೆನು’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ಫ‌ುಲ್‌ ಖುಷಿಯಲ್ಲಿರುವ ಚಿತ್ರತಂಡ, ವಿತರಕ ಜಾಕ್‌ಮಂಜು ಅವರ ಮೂಲಕ ಸುಮಾರು 80 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 

ಅಂದಹಾಗೆ, ಚಿಕ್ಕ ಬಜೆಟ್‌ನಲ್ಲೊಂದು ಚಂದದ ಸಿನಿಮಾ ಮಾಡಲು ಅಣಿಯಾದ ಚಿತ್ರತಂಡ, ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೆ ಎಲ್ಲವನ್ನೂ ಪೂರೈಸಿದ್ದರಿಂದ ಚಿತ್ರದ ಬಜೆಟ್‌ ಈಗ ದೊಡ್ಡದಾಗಿದೆ. ಹಾಗಂತ ಹಣ ಜಾಸ್ತಿ ಖರ್ಚಾಗಿದೆ ಎಂಬ ಬೇಸರ ಚಿತ್ರತಂಡಕ್ಕಿಲ್ಲ. ಆದರೆ, ಸಿನಿಮಾ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಬಂದಿರುವ ತೃಪ್ತಿ ಇದೆ ಎಂಬುದು ನಾಯಕ ಬಾಲಚಂದರ್‌ ಅವರ ಮಾತು.

Advertisement

ಇನ್ನು, ಈ ಚಿತ್ರವನ್ನು ಸಂದೀಪ್‌ ನಾಗಲೀಕರ್‌ ನಿರ್ದೇಶನ ಮಾಡಿದ್ದಾರೆ. ಗೋಕುಲ್‌ರಾಜ್‌ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕ ಮತ್ತು ಅನೂಷ ರೈ ನಾಯಕಿಯರು. ಇಲ್ಲಿ ದೊಡ್ಡ ಸಾಧನೆ ಮಾಡಿದವರು “ಮಹಾನುಭಾವರು’ ಅಲ್ಲ, ಸಣ್ಣ ಸಣ್ಣ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳುವವರು “ಮಹಾನುಭಾವರು’ ಎಂಬ ವಿಷಯ ಇಲ್ಲಿದೆ ಎನ್ನುತ್ತಾರೆ ಅವರು. ಚಿತ್ರಕ್ಕೆ ಸತೀಶ್‌ ಮೌರ್ಯ ಸಂಗೀತವಿದೆ. ವೀರೇಶ್‌ ಕ್ಯಾಮೆರಾ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next