Advertisement

ಮೂರನೇ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಮರುಜೀವ

10:51 PM Dec 01, 2019 | Sriram |

ವಿಶೇಷ ವರದಿ ಮಹಾನಗರ: ನಗರದ ಮೀನುಗಾರಿಕೆ ಬಂದರಿನ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರದ ಸಹ ಭಾಗಿತ್ವದಲ್ಲಿ ಯೋಜಿಸಲಾಗಿದ್ದ ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಈಗ ಮರುಜೀವ ದೊರಕುವ ನಿರೀಕ್ಷೆ ಮೂಡಿದೆ.

Advertisement

ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ನಿರ್ಮಾಣ ಕಾಮಗಾರಿಯ ಹಳೆಯ ಟೆಂಡರ್‌ನ್ನು ರದ್ದುಮಾಡಿ, ಅಲ್ಲಿ ಬಾಕಿ ಉಳಿದ ಕಾಮಗಾರಿಯನ್ನು 22 ಕೋ.ರೂ. ವೆಚ್ಚದಲ್ಲಿ ಕೈಗೊಳ್ಳುವ ಯೋಜನ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ಈ ಮೂಲಕ 2010ರಲ್ಲಿ ಆರಂಭವಾಗಿ ಹೆಚ್ಚಿನ ಕೆಲಸ ಮುಗಿದರೂ, ಕೆಲವು ಕಾಮ ಗಾರಿ ಬಾಕಿಯಾಗಿ ನನೆಗುದಿಗೆ ಬಿದ್ದಿದ್ದ ಮೀನುಗಾರರ ಬಹುನಿರೀಕ್ಷಿತ ಯೋಜನೆ ಈಗ ಮುನ್ನೆಲೆಗೆ ಬಂದಿದೆ. 28 ಕೋ.ರೂ. ವೆಚ್ಚದ ಯೋಜನ ವರದಿ ಮೊದಲು ಸಿದ್ಧ‌ಪಡಿಸಿದ್ದರೂ, ಆರ್ಥಿಕ ಇಲಾಖೆಯ ಸೂಚನೆಯ ಮೇರೆಗೆ ಈಗ 22 ಕೋ.ರೂ.ಗಳ ಯೋಜನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

“ಮೂರನೇ ಜೆಟ್ಟಿಯ ಅಂತಿಮ ಕಾಮಗಾರಿಯಲ್ಲಿ ಯಾವೆಲ್ಲ ಯೋಜನೆ ಬೇಕು? ಹಾಗೂ ಕಾಮಗಾರಿಯನ್ನು ಮೀನುಗಾರರಿಗೆ ನೆರವಾಗುವಂತೆ ಯಾವ ರೀತಿಯಲ್ಲಿ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ಮೀನುಗಾರರ ಜತೆಗೆ ವಿಶೇಷ ಸಭೆ ನಡೆಸಿಯೇ ಯೋಜನ ವರದಿ ಸಿದ್ಧಪಡಿಸಲಾಗಿದೆ. ಇದರಂತೆ, ಮೀನುಗಾರರಿಗೆ ಅಗತ್ಯವಿರುವ ಹರಾಜು ಪ್ರಾಂಗಣ, ರಸ್ತೆ ನಿರ್ಮಾಣ, ರೇಡಿಯೋ ಮಾಹಿತಿ ಕೇಂದ್ರ ಸಹಿತ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತದೆ’ ಎಂದು “ಸುದಿನ’ ಜತೆಗೆ ಬಂದರು ಹಾಗೂ ಮೀನುಗಾರಿಕೆ ಇಲಾಖೆಯ ಮಂಗಳೂರಿನ ಸಹಾಯಕ ಕಾ.ನಿ. ಎಂಜಿನಿಯರ್‌ ಸುಜನ್‌ಚಂದ್ರ ರಾವ್‌ ತಿಳಿಸಿದ್ದಾರೆ.

1986ರಲ್ಲಿ ಮೊದಲ ಜೆಟ್ಟಿ
ಮೊದಲ ಹಂತದ ಮಂಗಳೂರು ಮೀನು ಗಾರಿಕೆ ಬಂದರಿನ ನಿರ್ಮಾಣವನ್ನು 1986ರಲ್ಲಿ ಪ್ರಾರಂಭಿಸಿ, 1991ರಲ್ಲಿ ಪೂರ್ಣ ವಾಗಿತ್ತು. 147.80 ಲಕ್ಷ ರೂ. ಗಳಲ್ಲಿ 138 ಮೀ. ಉದ್ದದ ಜೆಟ್ಟಿ, 675 ಚ.ಮೀ ವಿಸ್ತೀರ್ಣದ ಮೀನು ಹರಾಜು ಪ್ರಾಂಗಣ ಸಹಿತ ಇತರ ವ್ಯವಸ್ಥೆ ಒದಗಿಸಲಾಗಿತ್ತು.

ಆಗ 300ರಿಂದ 350 ಸಂಖ್ಯೆಯ 30 ಅಡಿಯಿಂದ 43 ಅಡಿ ಉದ್ದದ ಯಾಂತ್ರೀಕೃತ ದೋಣಿಗಳು ಕಾರ್ಯಾಚರಿಸುತ್ತಿದ್ದವು.

Advertisement

ಅನಂತರ ಯಾಂತ್ರೀಕೃತ ದೋಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಮೀನುಗಾರಿಕೆ ಬಂದರಿನ 2ನೇ ಹಂತದ ಕಾಮಗಾರಿಯನ್ನು 2003ರಲ್ಲಿ ಕೈಗೊಳ್ಳಲಾಯಿತು. 67 ಮೀ. ಉದ್ದದ ಜೆಟ್ಟಿಯನ್ನು 144.67 ಲಕ್ಷ ರೂ. ವೆಚ್ಚದಲ್ಲಿ 2004ರಲ್ಲಿ ಪೂರ್ಣಗೊಳಿಸಲಾಯಿತು. ಮೀನು ಹರಾಜು ಪ್ರಾಂಗಣ, ಬಂದರಿನ ರಸ್ತೆಗಳ ಕಾಂಕ್ರೀಟ್‌ಕರಣ, ಕುಡಿಯುವ ನೀರು ಸಹಿತ ಇತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಆನಂತರ ಮೂರನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು.

2010ರ ಯೋಜನೆ-ಹೊಸ ಗುತ್ತಿಗೆ
ಮೀನುಗಾರಿಕೆ ಬಂದರಿನ 1 ಹಾಗೂ 2ನೇ ಜೆಟ್ಟಿ ನಿರ್ಮಾಣವಾದ ಬಳಿಕ ಬೋಟುಗಳು ಹಾಗೂ ಮೀನುಗಾರರಿಗೆ ವಿವಿಧ ಸಮಸ್ಯೆ-ಸವಾಲುಗಳು ಇವೆ ಎಂಬ ಕಾರಣಕ್ಕೆ 2010ರಲ್ಲಿ ಮೂರನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ಸರಕಾರ ಮನಸ್ಸು ಮಾಡಿತ್ತು. ಆದರೆ, ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಇಚ್ಛಾಶಕ್ತಿ ಇಲ್ಲದೆ ಈ ಯೋಜನೆ ಬಹುತೇಕ ಆದರೂ, ಪೂರ್ಣವಾಗಲು ಇನ್ನೂ ಸಾಧ್ಯವಾಗಿಲ್ಲ. ಅಂತಿಮವಾಗಿ, ಇಲ್ಲಿಯವರೆಗೆ ಆಗಿರುವ ಕಾಮಗಾರಿಯ ಹಳೆಯ ಗುತ್ತಿಗೆದಾರರಿಂದ ಟೆಂಡರ್‌ ಮುಕ್ತಾಯಗೊಳಿಸಿ, ಬಾಕಿ ಉಳಿದ ಕಾಮಗಾರಿಯನ್ನು ಹೊಸ ಗುತ್ತಿಗೆ ಮೂಲಕ ನಡೆಸಲು ಮೀನುಗಾರಿಕೆ-ಬಂದರು ಇಲಾಖೆ ನಿರ್ಧರಿಸಿದೆ.

ಶೀಘ್ರ ಸಚಿವ ಸಂಪುಟ ಅನುಮೋದನೆ
ಮಂಗಳೂರಿನ 3ನೇ ಹಂತದ ಜಟ್ಟಿ ನಿರ್ಮಾಣಕ್ಕೆ 22 ಕೋಟಿ ರೂ.ಗಳ ಯೋಜನ ವರದಿ ಸಿದ್ಧಗೊಂಡಿದೆ. ಮುಂದಿನ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರೆಯಲಿದೆ. ಆ ಮುಖೇನ ಮೀನುಗಾರರಿಗೆ ಬಹುನಿರೀಕ್ಷಿತ ಯೋಜನೆಯೊಂದು ಪೂರ್ಣ ಮಟ್ಟದಲ್ಲಿ ಲಭ್ಯವಾಗಲಿದೆ.
 - ಕೋಟ ಶ್ರೀನಿವಾಸ ಪೂಜಾರಿ, ಬಂದರು ಹಾಗೂ ಮೀನುಗಾರಿಕೆ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next