Advertisement

ಅಮ್ಮನ ಹೆಸರಿನ ಹಚ್ಚೆ ನೀಡಿತ್ತು ಸುಳಿವು

06:34 AM Feb 10, 2019 | |

“ವೈಯಕ್ತಿಕ ಬದುಕಿನಲ್ಲಿ ಎದುರಾದ ಜಂಜಾಟ, ಮಾನಸಿಕ ಖನ್ನತೆಗೆ ಬೇಸತ್ತು ಮನೆಯ ಹಿರಿಯ ಮಗ ಮನೆ ತೊರೆದಿದ್ದ. 15 ದಿನ ಕಳೆದರೂ ವಾಪಾಸ್‌ ಬಂದಿರಲಿಲ್ಲ. ಮಗನನ್ನು ಪತ್ತೆಹಚ್ಚಲು ಬೆಂಗಳೂರು ಸೇರಿದಂತೆ ಪರಿಚಯಸ್ಥರ ಮನೆಗಳಲ್ಲಿ ಪೋಷಕರ ತೀವ್ರ ಹುಡುಕಾಟ ಮುಂದುವರಿದಿತ್ತು…. ಬೆಂಗಳೂರಿನಲ್ಲಿದ್ದ ಸೋದರ ಅಣ್ಣನಿಗಾಗಿ ನಗರದೆಲ್ಲೆಡೆ ಹುಡಕಾಟ ನಡೆಸಿದ್ದ. ಮನೆಬಿಟ್ಟ ಮಗ ಸಿಕ್ಕೇ ಸಿಗುತ್ತಾನೆ ಎಂಬ ಭರವಸೆ ತಾಯಿಗಿತ್ತು.

Advertisement

ಆದರೆ.. ಅದೊಂದು ದಿನ ಮಟಮಟ ಮಧ್ಯಾಹ್ನ ಬಂದ ಸುದ್ದಿ ಬರಸಿಡಿಲು ಬಡಿದಂತಾಗಿತ್ತು. ತಾಯಿಯ ಅತೀವ ಪ್ರೀತಿಯ ಹಿರಿಯ ಮಗ ಸದ್ದಿಲ್ಲದೆ ಇಹಲೋಕ ತ್ಯಜಿಸಿದ್ದ. ಅಮ್ಮನ ಪ್ರತಿಕ್ಷಣದ ನೆನಪಿಗಾಗಿ ಕೈಯ ಮೇಲೆ ಆಕೆಯ ಹೆಸರನ್ನು ಹಚ್ಚೆ  ಕುರುಹಾಗಿ ಕಂಡಿತ್ತು. 2016ರ ಏಪ್ರಿಲ್‌ನಲ್ಲಿ ಬೆಂಗಳೂರು ಹೊರವಲಯದ ದೇವನಹಳ್ಳಿ ಸಮೀಪದ ನಂದಿಕ್ರಾಸ್‌ನಲ್ಲಿ ರೈಲಿಗೆ ಸಿಲುಕಿ ಮೃತಪಟ್ಟವನ ಗುರುತು ಹಚ್ಚೆಯಿಂದಾಗಿ ಪತ್ತೆಯಾಗಿತ್ತು.

ಹಚ್ಚೆ ತಿಳಿಸಿತು ಸಾವಿನ ಗುರುತು!: ನಾಪತ್ತೆಯಾಗಿದ್ದ ಕುಮಾರ್‌ ಹುಡುಕಾಟದಲ್ಲಿದ್ದಾಗಲೇ ಅವನ ಸಂಬಂಧಿ, ಬೆಂಗಳೂರಿನಲ್ಲಿದ್ದ ಮನೋಹರ್‌ ಎಂಬಾತ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಗ ಅಚಾನಕ್‌ ಆಗಿ ಅಪರಿಚಿತ ಶವ ಪತ್ತೆ ಕುರಿತ ಪ್ರಕಟಣೆ ಕಣ್ಣಿಗೆ ಬಿದ್ದಿತ್ತು. ಅನುಮಾನಗೊಂಡು ಹಚ್ಚೆಯ ಹೆಸರು ಗಮನಿಸಿದಾಗ ತನ್ನ ಸೋದರ ಸಂಬಂಧಿಯ ಹೆಸರಿತ್ತು. ಅಕ್ಕನ ಮಗ ಕುಮಾರ್‌ ಇರಬಹುದೇ ಎಂಬ ಸಣ್ಣ ಸಂಶಯ ಶುರುವಾಗಿತ್ತು.

ಅದೇ ಗುಂಗಿನಲ್ಲಿ ವಾಪಾಸ್‌ ಬಂದವರೇ ಕುಮಾರ್‌ ಸಹೋದರ ಪ್ರಮೋದ್‌ಗೆ ಕರೆ ಮಾಡಿ, ಕುಮಾರ್‌ ಮನೆ ಬಿಟ್ಟು ಎಷ್ಟು ದಿನವಾಯ್ತು ಎಂಬ ಮಾಹಿತಿ ಕೇಳಿ ಪೊಲೀಸ್‌ ಪ್ರಕಟಣೆಯ ವಿಚಾರ ಮುಟ್ಟಿಸಿದ್ದ. ಈ ವಿಚಾರ ತಿಳಿದ ಕೂಡಲೇ ದಿಗ್ಬ್ರಾಂತರಾದ ಕುಮಾರ್‌ ಸೋದರ ಪ್ರಮೋದ್‌ ರೈಲ್ವೆ ಪೊಲೀಸರ ಬಳಿ ಮಾಹಿತಿ ಪಡೆದರು. ಅವರು ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ವ್ಯಾಪ್ತಿ¿ಲ್ಲಿ ಈ ಕೇಸ್‌ ಇದೆ ಎಂದು ಸಲಹೆ ನೀಡಿದರು.

ಬೆಂಗಳೂರಿನಿಂದ ನೇರವಾಗಿ ದೊಡ್ಡಬಳ್ಳಾಪುರ ರೈಲ್ವೆ ಠಾಣೆಗೆ ತೆರಳಿದ ಪ್ರಮೋದ್‌ ಪೊಲೀಸರು ತೋರಿಸಿದ ಬಟ್ಟೆ, ಕೈಯಲ್ಲಿದ್ದ ಶೋಭಾ ಹೆಸರಿನ ಹಚ್ಚೆ ಗುರತಿರುವ ಫೋಟೋ ನೋಡಿ ಬೆಚ್ಚಿಬಿದ್ದು ಅಳಲಾರಂಭಿಸಿದ. ಬಟ್ಟೆ ಹಾಗೂ ತಾಯಿ ಹೆಸರಿನ ಹಚ್ಚೆ ನೋಡಿದ ಪ್ರಮೋದ್‌ಗೆ, ಮೃತಪಟ್ಟಿರುವುದು ಸಹೋದರ ಕುಮಾರ್‌ ಎಂಬುದು ಗೊತ್ತಾಗಿಹೋಗಿತ್ತು. ಮನೆಗೆ ಬಂದವನೇ ತಾಯಿ ಹಾಗೂ ತಂದೆಗೆ ವಿಚಾರ ತಿಳಿಸಿದ.

Advertisement

ಹಿರಿಯ ಮಗ ಕುಮಾರ್‌ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗದೇ ಪೋಷಕರ ಆಕ್ರಂದನದ ಕಟ್ಟೆ ಒಡೆದಿತ್ತು. ಈಗಾಗಲೇ ಮಣ್ಣು ಮಾಡಿರುವ ಕುಮಾರ್‌ ಮೃತದೇಹ ಕೊಂಡೊಯ್ದು ಬೇರೆಕಡೆ ಮಣ್ಣು ಮಾಡಿಕೊಳ್ಳಬಹುದು ಎಂದು ಪೊಲೀಸರು ಸೂಚಿಸಿದರು.

ಹಿರಿಯ ಮಗನ ಮುಖದ ಛಾಯೆಯನ್ನು ಮನಸ್ಸಲ್ಲೇ ಇಟ್ಟುಕೊಂಡಿದ್ದ ತಾಯಿಗೆ ಛಿದ್ರವಾಗಿದ್ದ ಮೃತದೇಹ ತೋರಿಸುವುದು ಬೇಡ ಎಂದು ಸಂಬಂಧಿಕರು ನಿರ್ಧರಿಸಿದರು. ಆ ಸಂಬಂಧ ಪ್ರಮೋದ್‌ ಹೆತ್ತವರಿಗೆ ಸಮಾಧಾನ ಮಾಡಿದ. ಬಳಿಕ ಕುಟುಂಬಸ್ಥರು ಕುಮಾರ್‌ನನ್ನು ಮಣ್ಣು ಮಾಡಿ, ಸಮಾಧಿ ಕಟ್ಟಿಸಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮನೆಬಿಟ್ಟ ದಿನವೇ ಆತ್ಮಹತ್ಯೆ: ಮನೆಗೆ ಹಿರಿಯ ಮಗನಾಗಿದ್ದ ಕುಮಾರ್‌ಗೆ ಮೊದಲಿನಿಂದಲೂ ಮೂರ್ಛೆ ರೋಗದ ಸಮಸ್ಯೆ ಕಾಡುತ್ತಿತ್ತು. ಚಿಕಿತ್ಸೆ ಪಡೆದುಕೊಂಡ ಬಳಿಕ ಸ್ವಲ್ಪಪ್ರಮಾಣದಲ್ಲಿ ಕಡಿಮೆಯಾಗಿತ್ತು. ತಂದೆಯ ಜತೆ ಕಟ್ಟಡ ನಿರ್ಮಾಣ ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತಿದ್ದರು.

ಕುಮಾರ್‌ಗೆ ವಿವಾಹ ಮಾಡಲು ನಿಶ್ಚಯಿಸಿದ ಪೋಷಕರು, ಮದುವೆಯಾಗಲಿದ್ದ ಯುವತಿಗೆ ಆತನಿಗೆ ಆಗಾಗ್ಗೆ ಕಾಡಲಿರುವ ಮೂರ್ಛೆ ರೋಗದ ಸಮಸ್ಯೆಯ ಬಗ್ಗೆಯೂ ಹೇಳಿದ್ದರು. ಇದನ್ನು ಒಪ್ಪಿಕೊಂಡಿದ್ದ ಆಕೆ ಕುಮಾರ್‌ನನ್ನು ಮದುವೆ ಮಾಡಿಕೊಂಡಿದ್ದರು. ಆದರೆ, ಆರೇ ತಿಂಗಳಲ್ಲಿ ಆಕೆಯ ವರಸೆ ಬದಲಾಗಿತ್ತು. ಆಕೆ ಒಂದು ದಿನ ಇದ್ದಕ್ಕಿದ್ದಂತೆ ಮನೆಬಿಟ್ಟು ಹೋಗಿದ್ದಳು. ಕುಮಾರ್‌ ಅಂಗಲಾಚಿದರೂ ವಾಪಾಸ್‌ ಬರಲು ಆಕೆ ಒಪ್ಪಿರಲಿಲ್ಲ. 

ಅನಾರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಮಾನಸಿಕ ಖನ್ನತೆಗೆ ಒಳಗಾಗಿದ್ದ ಕುಮಾರ್‌ ಕುಡಿತದ ಅಭ್ಯಾಸ ಮಾಡಿಕೊಂಡಿದ್ದ. ಬರಬರುತ್ತಾ ಅಭ್ಯಾಸ ಚಟವಾಗಿ ಬದಲಾಗಿತ್ತು. ಕುಮಾರ್‌ ಮನೆಯವರ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗುವುದು ಮತ್ತೆ ಬರುವುದು ನಡೆಯುತ್ತಿತ್ತು. ಆದರೆ, 2014ರ ಏ. 2ರಂದು ಮನೆ ಬಿಟ್ಟು ಹೋಗಿದ್ದ ಕುಮಾರ್‌ ಮತ್ತೆ ಬರಲೇ ಇಲ್ಲ. ನಂದಿಕ್ರಾಸ್‌ನಲ್ಲಿ ಚಲಿಸುತ್ತಿರುವ ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. 

ಪೊಲೀಸರಿಂದಲೇ ಅಂತ್ಯಕ್ರಿಯೆ: ರೈಲಿಗೆ ಸಿಲುಕಿದ ಕುಮಾರ್‌ ದೇಹ ಚೆಲ್ಲಾಪಿಲ್ಲಿಯಾಗಿದ್ದು, ಮುಖ ಗುರುತುಸಿಗದಂತಾಗಿತ್ತು. ಸ್ಥಳಕ್ಕೆ ಬಂದಿದ್ದ ರೈಲ್ವೆ ಪೊಲೀಸರು, ಮೃತದೇಹವನ್ನು ಪರಿಶೀಲಿಸಿದರು ಆತ ಧರಿಸಿದ್ದ ಬಟ್ಟೆಗಳಲ್ಲಿಯೂ ಆತನ ವಿಳಾಸದ ಕುರಿತ ಸಣ್ಣ ಸುಳಿವೂ ದೊರೆತಿರಲಿಲ್ಲ. ಮೃತದೇಹ ವಶಕ್ಕೆ ಪಡೆದಿದ್ದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದಾಗ ಮೃತವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದು ಧೃಡಪಟ್ಟಿತ್ತು. ಆದರೆ, ಆತನ ವಿಳಾಸ ಮಾತ್ರ ಎಷ್ಟು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ.

ಕಡೆಗೆ ಅಪರಿಚಿತ ಶವ ಪತ್ತೆಯ ಬಗ್ಗೆ ಆತನ ಕೈ ಮೇಲಿದ್ದ ಶೋಭಾ ಹೆಸರಿನ ಕುರಿತು ಮಾಹಿತಿ ಬರೆದಿದ್ದ ಪೊಲೀಸರು ಆತನ ಪೋಷಕರ ಪತ್ತೆಗೆ ರೈಲ್ವೆ ನಿಲ್ದಾಣ, ಬಸ್‌ಸ್ಟಾಂಡ್‌ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಪ್ರಕಟಿಸಿದ್ದರು. ಆದರೆ ಇಪ್ಪತ್ತು ದಿನ ಕಳೆದರೂ ಯಾರೊಬ್ಬರು ಶವ ತಮ್ಮದೆಂದು ಮುಂದೆ ಬಂದಿರಲಿಲ್ಲ. ಕಡೆಗೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು.

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next