Advertisement

ಕಡಬದಲ್ಲಿ ಶಂಕಿತ ಡೆಂಗ್ಯೂ ಜ್ವರ ವ್ಯಾಪಕ

10:13 PM May 16, 2019 | mahesh |

ಕಡಬ: ಕೋಡಿಂಬಾಳ ಗ್ರಾಮದ ಕೆಲ ಪ್ರದೇಶಗಳಲ್ಲಿ ಜನರು ವ್ಯಾಪಕವಾಗಿ ಶಂಕಿತ ಡೆಂಗ್ಯೂ ಜ್ವರ ಪೀಡಿತರಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆಯ ಸಿಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜ್ವರ ಪೀಡಿತ ಪ್ರದೇಶಗಳ ಮನೆಗಳಿಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಜ್ವರ ಪೀಡಿತರ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಮೂಲಕ ಜ್ವರದ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ ಪ್ರದೇಶಗಳಲ್ಲಿ ಜ್ವರ ಹೆಚ್ಚಾಗಿ ಕಾಣಿಸಿ ಕೊಂಡಿದೆ. ಕಳೆದ ವರ್ಷ ಇದೇ ಸಮಯ ದಲ್ಲಿ ಕೋಡಿಂಬಾಳದ ಮಜ್ಜಾರು, ಮಡ್ಯಡ್ಕ ಪ್ರದೇಶಗಳಲ್ಲಿ ಇದೇ ರೀತಿ ಜ್ವರ ಕಾಣಿಸಿಕೊಂಡಿತ್ತು. ಹಿಂದಿನ ವರ್ಷ ಕಡಬ ವ್ಯಾಪ್ತಿಯ ನೂಜಿಬಾಳ್ತಿಲ, ಮೀನಾಡಿ, ಕಲ್ಲುಗುಡ್ಡೆ, ಕೋಡಿಂಬಾಳ, ಹೊಸ್ಮಠ, ಮರ್ದಾಳ, ಐತ್ತೂರು ಪ್ರದೇಶಗಳಲ್ಲಿ ಹೆಚ್ಚಿನ ಜನರು ಶಂಕಿತ ಡೆಂಗ್ಯೂ ಜ್ವರದ ಬಾಧೆಗೊಳಗಾಗಿದ್ದರು. ಕಡಬ ಸರಕಾರಿ ಆಸ್ಪತ್ರೆಯಲ್ಲಿ ಈ ಬಾರಿ ಡೆಂಗ್ಯೂ ಜ್ವರದ ಯಾವುದೇ ಪ್ರಕರಣ ದೃಢಪಟ್ಟಿಲ್ಲವಾದರೂ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಪಾಸಣೆ ಮಾಡಿದ ರಕ್ತದ ಮಾದರಿಗಳ ಪ್ರಕಾರ ಸುಮಾರು 15-20 ಮಂದಿ ಶಂಕಿತ ಡೆಂಗ್ಯೂ ಪೀಡಿತರನ್ನು ಪತ್ತೆ ಮಾಡಲಾಗಿದೆ. ಖಾಸಗಿ ಪ್ರಯೋಗಾಲಯಗಳ ವರದಿಯ ಪ್ರಕಾರ ಕಳೆದ ಒಂದು ತಿಂಗಳ ಅವಧಿಯಲ್ಲಿ 45ರಿಂದ 50 ಮಂದಿ ಶಂಕಿತ ಡೆಂಗ್ಯೂ ಜ್ವರ ಪೀಡಿತರು ಕಡಬ ಪರಿಸರದಲ್ಲಿ ಪತ್ತೆಯಾಗಿದ್ದಾರೆ. ಕೋಡಿಂಬಾಳದ ಉದೇರಿ ನಾರಾಯಣ ಗೌಡರ ಪತ್ನಿ ರತ್ನಾವತಿ ಅವರು ಡೆಂಗ್ಯೂ ಪೀಡಿತರಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಡೆಂಗ್ಯೂ ಜ್ವರದ ಲಕ್ಷಣಗಳು
ಇದ್ದಕ್ಕಿದ್ದಂತೆಯೇ ತೀವ್ರ ಜ್ವರ, ಹಣೆಯ ಭಾಗದಲ್ಲಿ ನೋವು, ಕಣ್ಣುಗುಡ್ಡೆಗಳಲ್ಲಿ ನೋವು, ಮಾಂಸಖಂಡಗಳಲ್ಲಿ ತೀವ್ರ ನೋವು ಇದ್ದಲ್ಲಿ ಅದನ್ನು ಡೆಂಗ್ಯೂ ಜ್ವರ ಎಂದು ತಿಳಿಯಬಹುದು. ಮೈಮೇಲೆ ಕೆಂಪು ಗುಳ್ಳೆಗಳು, ಕಣ್ಣು ಕೆಂಪಾಗುವುದು, ವಸಡು ಹಾಗೂ ಮೂಗಿನಲ್ಲಿ ರಕ್ತಸ್ರಾವದ ಲಕ್ಷಣ, ಕೆಂಪಾದ ಮೂತ್ರ, ಮಲ ಕಪ್ಪಾಗಿದ್ದಲ್ಲಿ ಕೂಡಲೇ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳಬೇಕು ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

ನಿಯಂತ್ರಣ ಮಾರ್ಗಗಳು
ಸೋಂಕು ಹೊಂದಿದ ಈಡಿಸ್‌ ಈಜಿಪ್ಟೆ ಸೊಳ್ಳೆಗಳಿಂದಾಗಿ ಡೆಂಗ್ಯೂ ಹರಡುತ್ತದೆ. ಮುಖ್ಯವಾಗಿ ಈ ಸೊಳ್ಳೆಗಳು ಮುಸ್ಸಂಜೆ ಮತ್ತು ಮುಂಜಾನೆಯ ವೇಳೆ ಕಚ್ಚುತ್ತವೆ. ಆದುದರಿಂದ ಡೆಂಗ್ಯೂ ಜ್ವರದಿಂದ ತೊಂದರೆಗೊಳಗಾದವರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಹಗಲು ಹೊತ್ತಿನಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳು, ಗರ್ಭಿಣಿಯರು, ಬಾಣಂತಿ ಹಾಗೂ ವಯಸ್ಸಾದವರು ಕೂಡ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಪರಿಸರದಲ್ಲಿ ಸ್ವತ್ಛತೆ, ಘನತ್ಯಾಜ್ಯ ಸಮರ್ಪಕ ವಿಲೇವಾರಿ, ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಸುವುದು, ನೀರು ನಿಂತ ಸ್ಥಳಗಳಿಗೆ ವಾರದಲ್ಲಿ 1 ಸಲ ಟೆಮೋಫಾಸ್‌ ರಾಸಾಯನಿಕ ಸಿಂಪಡಣೆ ಮಾಡುವುದು ಇತ್ಯಾದಿ ಕ್ರಮ ಕೈಗೊಂಡಾಗ ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು.

ಮುನ್ನೆಚ್ಚರ
ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಜ್ವರ ಪೀಡಿತ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಫಾಗಿಂಗ್‌ ನಡೆಸುವುದರೊಂದಿಗೆ ಜಾಗೃತಿ ಕರಪತ್ರಗಳನ್ನು ಹಂಚುವ ಕೆಲಸ ನಡೆಯುತ್ತಿದೆ. ಮಳೆ ಇನ್ನಷ್ಟೇ ಆರಂಭವಾಗಬೇಕಿದ್ದು, ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯಾಧಿಕಾರಿ

Advertisement

ಜಾಗ್ರತೆ ವಹಿಸಿ
ತೋಟಗಳಲ್ಲಿ ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುತ್ತಿವೆ. ರಬ್ಬರ್‌ ಹಾಲು ಸಂಗ್ರಹಿಸುವ ಗೆರಟೆಗಳಲ್ಲಿ ನೀರು ನಿಲ್ಲುವುದು, ತೋಟದಲ್ಲಿ ಸ್ಟ್ರಿಂಕ್ಲರ್‌ ನೀರು, ಅಡಿಕೆ ಹಾಳೆಗಳಲ್ಲಿ ಸಂಗ್ರಹವಾಗುವ ನೀರು ಸೊಳ್ಳೆ ಉತ್ಪತ್ತಿಯಾಗಲು ಕಾರಣ. ತೋಟದಲ್ಲಿ ಕೆಲಸ ಮಾಡುವವರು ಉದ್ದ ತೋಳಿನ ಶರ್ಟು, ಮೈಮುಚ್ಚುವ ಬಟ್ಟೆ ತೊಟ್ಟರೆ ಉತ್ತಮ.
– ಡಾ| ಅರುಣ್‌, ಜಿ.ಮ. ನಿಯಂತ್ರಣಾಧಿಕಾರಿ

ಆತಂಕ ಬೇಡ
ಕೋಡಿಂಬಾಳ ಪರಿಸರದಿಂದ ಶಂಕಿತ ಡೆಂಗ್ಯೂ ಜ್ವರ ಪೀಡಿತರು ಚಿಕಿತ್ಸೆಗೆ ಬರುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿದ್ದಾರೆ. 25ಕ್ಕೂ ಹೆಚ್ಚು ರೋಗಿಗಳ ರಕ್ತ ಮಾದರಿಯನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜ್ವರದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜನ ಆತಂಕಪಡಬೇಕಿಲ್ಲ. ಸೊಳ್ಳೆಗಳು ಉತ್ಪತ್ತಿಯಾಗದಂತೆ ನಿಯಂತ್ರಣ ಕ್ರಮಗಳನ್ನು ಜನರು ಅಳವಡಿಸಿಕೊಂಡರೆ ಇಂತಹ ರೋಗ ನಿಯಂತ್ರಿಸಲು ಸಾಧ್ಯ ಎಂದು ಕಡಬ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್‌ ತಿಳಿಸಿದ್ದಾರೆ.

56 ಡೆಂಗ್ಯೂ ಪ್ರಕರಣ ದೃಢ
ದ.ಕ. ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ 9 ಹಾಗೂ ಜನವರಿ ತಿಂಗಳಿನಿಂದ ಇದುವರೆಗೆ ಒಟ್ಟು 56 ಡೆಂಗ್ಯೂ ಪ್ರಕರಣಗಳು ಜಿಲ್ಲಾ ಪ್ರಯೋಗಾಲಯದಲ್ಲಿ ದೃಢಪಟ್ಟಿವೆ. ಕಳೆದ ವರ್ಷ ಒಟ್ಟು 584 ಡೆಂಗ್ಯೂ ಪ್ರಕರಣಗಳು ಜಿಲ್ಲಾ ಪ್ರಯೋಗಾಲಯದಲ್ಲಿ ದೃಢಪಟ್ಟಿತ್ತು ಎಂದು ಆರೋಗ್ಯ ಇಲಾಖಾ ಮೂಲಗಳು ಮಾಹಿತಿ ನೀಡಿವೆ.

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next