Advertisement

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್?: ವಿಭಿನ್ನ ತೀರ್ಪು ನೀಡಿದ ಸುಪ್ರೀಂ ನ್ಯಾಯಮೂರ್ತಿಗಳು

10:36 AM Oct 13, 2022 | Team Udayavani |

ಹೊಸದಿಲ್ಲಿ: ಪ್ರಪಂಚದ ಗಮನ ಸೆಳೆದಿದ್ದ ಕರ್ನಾಟಕ ಹಿಜಾಬ್ ಪ್ರಕರಣದ ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು ಇಂದು ಐತಿಹಾಸಿಕ ತೀರ್ಪು ನೀಡಿದೆ.

Advertisement

ಹಿಬಾಜ್ ತೀರ್ಪಿನ ಬಗ್ಗೆ ನ್ಯಾಯಮೂರ್ತಿಗಳಲ್ಲೇ ವಿಭಿನ್ನ ಅಭಿಪ್ರಾಯವಾಗಿದೆ. ನ್ಯಾ| ಹೇಮಂತ್‌ ಗುಪ್ತಾ ಅವರು ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿಯನ್ನು ವಜಾ ಮಾಡಿ, ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದರು. ಆದರೆ ನ್ಯಾ| ಸುಧಾಂಶು ಧುಲಿಯಾ ಅವರು ಕರ್ನಾಟಕ ಹೈಕೋರ್ಟ್ ತೀರ್ಪನ್ನು ರದ್ದು ಮಾಡಿದ್ದಾರೆ. ಹೀಗಾಗಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ ಆದೇಶಿಸಲಾಗಿದೆ.

ನ್ಯಾ| ಹೇಮಂತ್‌ ಗುಪ್ತಾ ಮತ್ತು ನ್ಯಾ| ಸುಧಾಂಶು ಧುಲಿಯಾ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ ತೀರ್ಪನ್ನು ಕಾದಿರಿಸಿತ್ತು. ಈ ಪ್ರಕರಣದಲ್ಲಿ 10 ದಿನಗಳ ಕಾಲ ವಾದಗಳು ನಡೆದಿದ್ದು, ಅರ್ಜಿದಾರರ ಪರ 21 ವಕೀಲರು ಮತ್ತು ಪ್ರತಿವಾದಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದ್ದರು.

ಶಿಕ್ಷಣ ಸಂಸ್ಥೆಗಳು ಸೂಚಿಸಿದ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು ಎಂಬ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸಿದೆ.

ಇದನ್ನೂ ಓದಿ:ದಕ್ಷಿಣ ಕೋಲ್ಕತ್ತಾದ ಎಸ್ಕೇ ಮೂವೀಸ್ ಸ್ಟುಡಿಯೋದಲ್ಲಿ ಬೆಂಕಿ ಅವಘಡ, ಅಪಾರ ಹಾನಿ

Advertisement

“ಸರ್ಕಾರಿ ಅಧಿಕಾರಿಗಳ ಮಲತಾಯಿ ವರ್ತನೆಯು ವಿದ್ಯಾರ್ಥಿಗಳ ಸಂಪ್ರದಾಯದ ಆಚರಣೆಯನ್ನು ತಡೆಯುತ್ತದೆ, ಅಲ್ಲದೆ ಅನಪೇಕ್ಷಿತ ಶಾಂತಿಭಂಗ ಪರಿಸ್ಥಿತಿಗೆ ಕಾರಣವಾಗುತ್ತದೆ” ಎಂದೂ ಅರ್ಜಿ ಸಲ್ಲಿಸಲಾಗಿದೆ.

ಎಲ್ಲಿಂದ ಆರಂಭ: ಕಳೆದ ಜನವರಿಯಲ್ಲಿ ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ಆರು ವಿದ್ಯಾರ್ಥಿನಿಯರನ್ನು ಪ್ರವೇಶಿಸದಂತೆ ತಡೆದಾಗ ಈ ಹಿಜಾಬ್ ವಿವಾದ ಆರಂಭವಾಗಿತ್ತು. ಪ್ರವೇಶ ತಡೆದ ಕಾರಣಕ್ಕೆ ವಿದ್ಯಾರ್ಥಿಗಳು ಕಾಲೇಜಿನೆದುರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ತಿರುಗೇಟು ಎಂಬಂತೆ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲು ಹುಡುಗರು- ಹುಡುಗಿಯರು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿದ್ದರು. ಉಡುಪಿಯಿಂದ ಹೊರಗೂ ಕಾಲಿಟ್ಟ ಹಿಜಾಬ್ ವಿವಾದ ಕರ್ನಾಟದ ಇತರ ಜಿಲ್ಲೆಗಳಲ್ಲೂ ಧ್ವನಿಸಿತ್ತು.

ಇದರ ಪರಿಣಾಮ ತಜ್ಞರ ಸಮಿತಿ ನಿರ್ಧಾರ ಮಾಡುವವರೆಗೂ  ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲನ್ನು ನಿಷೇಧ ಮಾಡಿದ ಕರ್ನಾಟಕ ಸರ್ಕಾರವು, ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದಿತ್ತು.

ಫೆಬ್ರವರಿ 5 ರಂದು, ಸುತ್ತೋಲೆ ಬಿಡುಗಡೆ ಮಾಡಿದ ಶಿಕ್ಷಣ ಮಂಡಳಿಯು, ವಿದ್ಯಾರ್ಥಿಗಳು ಶಾಲಾ ಆಡಳಿತವು ಅನುಮೋದಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬಹುದು ಮತ್ತು ಇತರ ಯಾವುದೇ ಧಾರ್ಮಿಕ ಉಡುಪುಗಳನ್ನು ಕಾಲೇಜುಗಳಲ್ಲಿ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿತು. ಇದರ ವಿರುದ್ಧ ಹಲವಾರು ಅರ್ಜಿಗಳನ್ನು ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು.

ಸತತ ವಿಚಾರಣೆ ಮಾಡಿದ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು, ಸರ್ಕಾರದ ಸಮವಸ್ತ್ರದ ನೀತಿ ಸಮಂಜಸವಾಗಿದ್ದು, ವಿದ್ಯಾರ್ಥಿಗಳು ಆಕ್ಷೇಪಿಸುವಂತಿಲ್ಲ ಎಂದಿತ್ತು. ಅಲ್ಲದೆ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next