Advertisement

ಕಿನಾರೆಯಲ್ಲಿ ಮುಗ್ಧ ಮನಸುಗಳ ಪ್ರೀತಿ ಕಥೆ , ತೀರದ ದಾಹ

03:45 AM Jan 13, 2017 | Team Udayavani |

ಹೊಸ ವರ್ಷದ ಆರಂಭದಲ್ಲಿ ಹೊಸಬರು ಮೆಲ್ಲನೆ ಸದ್ದು ಮಾಡಲು ಶುರುವಿಟ್ಟುಕೊಂಡಿದ್ದಾರೆ. ವರ್ಷದ ಹಿಂದೆ ಶುರುವಾಗಿದ್ದ ಹೊಸಬರ “ಕಿನಾರೆ’, ಈಗಾಗಲೇ ಶೇ.70 ರಷ್ಟು ಮುಗಿದಿದೆ. ಅದೇ ಖುಷಿಯಲ್ಲಿ ಚಿತ್ರತಂಡ ಟೀಸರ್‌ವೊಂದನ್ನು ರಿಲೀಸ್‌ ಮಾಡೋಕೆ ಪತ್ರಕರ್ತರ ಮುಂದೆ ಬಂದಿತ್ತು. ದೇವರಾಜ್‌ ಪೂಜಾರಿ ನಿರ್ದೇಶನದ ಜತೆ ನಿರ್ಮಾಣವನ್ನೂ ಮಾಡಿದ್ದಾರೆ. ಮೊದಲು ಮಾತು ಶುರುಮಾಡಿದ ನಿರ್ದೇಶಕರು, ತಮ್ಮ “ಕಿನಾರೆ’ ಕುರಿತು ಹೇಳುತ್ತಾ ಹೋದರು.

Advertisement

“ಇದೊಂದು ಮುಗ್ಧ ಮನಸುಗಳ ನಡುವಿನ ಪ್ರೀತಿಯ ಕಥೆ. ಈ ಚಿತ್ರಕ್ಕಾಗಿ ವರ್ಷಗಟ್ಟಲೆ ಕಾದು, ಅದ್ಭುತ ತಾಣಗಳಲ್ಲೇ ಚಿತ್ರೀಕರಿಸಲಾಗಿದೆ. ನನ್ನ ಕನಸು ಪರದೆ ಮೇಲೆ ತರಲು ಪ್ರಯತ್ನಿಸಿದ್ದೇನೆ. ಇಲ್ಲಿ ಕಥೆಯೇ ಹೀರೋ. ವಿಭಿನ್ನ ಪಾತ್ರಗಳು ಇಲ್ಲಿರಲಿವೆ. ಇದು ಕಲಾತ್ಮಕತೆಯ ಜತೆಗೆ ಮನರಂಜನೆಯನ್ನೂ ಕಟ್ಟಿಕೊಡಲಿದೆ. ಒಬ್ಬ ಮುಗ್ಧ ಹುಡುಗನ ನಡುವೆ ಪ್ರೀತಿ ಚಿಗುರಿದಾಗ, ಏನೆಲ್ಲಾ ಆಗಿಹೋಗುತ್ತವೆ ಎಂಬುದು ಒನ್‌ಲೈನ್‌. ಇಲ್ಲಿ ಮಾತುಗಳಿಗಿಂತ ಭಾವನೆಗಳೇ ಹೆಚ್ಚು ಮಾತಾಡುತ್ತವೆ’ ಎಂದರು ದೇವರಾಜ್‌ ಪೂಜಾರಿ.

ಚಿತ್ರದ ನಾಯಕ ಸತೀಶ್‌ ರಾಜ್‌ಗೆ ಇದು ಮೊದಲ ಚಿತ್ರವಂತೆ. ಅವರಿಗೆ ಈ ಸಿನಿಮಾ, ನಿರ್ದೇಶಕರು ಹಾಗೂ ಚಿತ್ರತಂಡ ದೇವರು ಕೊಟ್ಟ ಗಾಡ್‌ಗಿಫ್ಟ್ ಅಂತೆ. ಇದೊಂದು ವಿಭಿನ್ನ ಕಥೆ, ಭಿನ್ನವಾಗಿರುವಂತಹ ಪಾತ್ರ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದೇನೆ. ನಾನಿಲ್ಲಿ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದೇನೆ. ಚಿತ್ರದ ಟೀಸರ್‌ ನೋಡಿದಾಗ ಎಷ್ಟೊಂದು ಅದ್ಭುತವಾಗಿದೆ ಎಂದೆನಿಸಿತು. ಚಿತ್ರ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ. ನಮ್ಮ ಹೊಸ ತಂಡಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು ಸತೀಶ್‌ ರಾಜ್‌.

ನಾಯಕಿ ಗೌತಮಿಗೂ ಇದು ಮೊದಲ ಸಿನಿಮಾ. “ಸುಂದರ ಮನಸ್ಸುಗಳ ನಡುವೆ ಬರುವ ಪ್ರೀತಿಯ ತಿಲ್ಲಾನ ಕುರಿತು ಕಥೆ ಸಾಗಲಿದೆ. ಎಲ್ಲಾ ಚಿತ್ರಗಳಲ್ಲಿರುವಂತೆ ಇಲ್ಲಿ ಪಾತ್ರಗಳಾಗಲಿ, ಕಥೆಯಾಗಲಿ ಅಥವಾ ತಾಣಗಳಾಗಲಿ ಇಲ್ಲ. ಪ್ರತಿಯೊಂದು ಹೊಸತನ ಎನ್ನುವಂತೆ ಮೂಡಿಬಂದಿದೆ. ಅದೇ ಚಿತ್ರದ ಸ್ಪೆಷಲ್ಲು’ ಎಂದರು ಗೌತಮಿ.

ಇನ್ನು, ಗಿರೀಶ್‌ ಮಂಗಳೂರು, ಇದುವರೆಗೆ ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದಾರಂತೆ. ಮೊದಲು ಈ ಚಿತ್ರದ ಶೀರ್ಷಿಕೆ ಕೇಳಿದಾಗ, ಹಿಂದಿ ಸಿನಿಮಾನ ಎಂಬ ಅನುಮಾನ ಬಂತಂತೆ. ಕೊನೆಗೆ ಇದು ಕಡಲ ತೀರದ ಕಥೆ ಆಗಿದ್ದರಿಂದ “ಕಿನಾರೆ’ ಟೈಟಲ್‌ ಸೂಕ್ತವೆನಿಸಿ, ಚಿತ್ರದಲ್ಲಿ ಮೊದಲ ಬಾರಿಗೆ ಫ‌ುಲ್‌ಟೈಮ್‌ ಖಳನಟರಾಗಿ ಕಾಣಿಸಿಕೊಂಡಿದ್ದಾರಂತೆ. ಅದರಲ್ಲೂ ಇಲ್ಲಿ ಕುಂಚಾಪುರ ಭಾಷೆ ಮಾತಾಡಿರುವುದು ಖುಷಿಕೊಟ್ಟಿದೆ ಅಂದರು ಗಿರೀಶ್‌ ಮಂಗಳೂರು.

Advertisement

ಪ್ರಮೋದ್‌ ಶೆಟ್ಟಿಗೆ ಇಲ್ಲಿ ವಯಸ್ಸಿಗೆ ಮೀರಿದ ಪಾತ್ರ ಸಿಕ್ಕಿದೆಯಂತೆ. ಅದು ಪಾಸಿಟಿವ್‌ ಪಾತ್ರವಾಗಿದ್ದು, ಅವರಿಲ್ಲಿ ಬುದ್ಧಿವಾದ ಹೇಳುವಂತಹ ಮೇಷ್ಟ್ರು ಆಗಿ ನಟಿಸಿದ್ದಾರಂತೆ. ಒಳ್ಳೇ ತಂಡ ಮತ್ತು ಒಳ್ಳೇ ಕಥಾಹಂದರ ಇರುವ ಚಿತ್ರದಲ್ಲಿ ನಾನಿದ್ದೇನೆ ಅಂತ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಅಂದರು ಅವರು.

ಸಂಗೀತ ನಿರ್ದೇಶಕ ಸುರೇಂದ್ರನಾಥ್‌ ಇಲ್ಲಿ ಆರು ಹಾಡುಗಳನ್ನು ಕೊಟ್ಟಿದ್ದಾರಂತೆ. ಜಯಂತ್‌ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌, ಕಲ್ಯಾಣ್‌, ಯೋಗರಾಜ್‌ ಭಟ್‌ ಗೀತೆ ರಚಿಸಿದ್ದಾರೆ. ಇನ್ನು, ಅಭಿಷೇಕ್‌ ಕಾಸರಗೋಡು ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ವಿಕ್ರಂ ಕತ್ತರಿ ಪ್ರಯೋಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next