Advertisement

Movie Review: ಜೀವನ ಒಂದು ಹೋರಾಟ, ಆ ಹೋರಾಟ ನಿರಂತರ

12:11 PM May 02, 2024 | Team Udayavani |

ದೊಡ್ಮನೆಯ ಮತ್ತೋರ್ವ ರಾಜಕುಮಾರ ಸಮರ್ಥ ತಯಾರಿ ಮಾಡಿಕೊಂಡು, ನಾಯಕ ನಟನ ಪಾತ್ರಕ್ಕೆ ನ್ಯಾಯ ಒದಗಿಸಲು ಅಣಿಗೊಂಡು ಗಂಧದ ಗುಡಿಯನ್ನು ಪ್ರವೇಶಿಸಿದ್ದಾರೆ. ಅವರೇ ಇತ್ತೀಚೆಗೆ ತೆರೆಕಂಡಿರುವ “ಯುವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ‌ ಪ್ರೇಕ್ಷಕರಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿರುವ ಯುವ ರಾಜಕುಮಾರ್‌.

Advertisement

ಆ್ಯಕ್ಷನ್‌ ಸೀನ್‌ಗಳಲ್ಲಿ ಕಾಣುವ ಪ್ರಜ್ವಲಿಸುತ್ತಿರುವ ಅವರ ಕಣ್ಣುಗಳು, ನೃತ್ಯದಲ್ಲಿ ಕಂಡು ಬರುವ ಮನಸೂರೆಗೊಳಿಸುತ್ತಿರುವ ಅವರ ಹೆಜ್ಜೆಗಳು, ಸಿನೆಮಾ ಪಾತ್ರದಲ್ಲಿ ಪ್ರಭಾವ ಬೀರುತ್ತಿರುವ ಅವರ ಕುಸ್ತಿಯ ಪಟ್ಟುಗಳು ತಯಾರಿಕೆಯ ಗಂಭೀರತೆಗೆ ದ್ಯೋತಕವಾಗಿದೆ. ಇವರ ಚೊಚ್ಚಲ ಸಿನೆಮಾವನ್ನು ಆನಂದ್‌ ರಾಮ್‌ ಅವರು ನಿರ್ದೇಶಿಸಿರುವುದು ವೃತ್ತಿ ಬದುಕಿನ ಶುಭಾರಂಭವನ್ನು ಮಾಡಿದಂತಾಗಿದೆ.

ಜೀವನ ಒಂದು ಹೋರಾಟ, ಆ ಹೋರಾಟ ನಿರಂತರ- ಈ ಧ್ಯೇಯ ವಾಕ್ಯವೇ ಸಿನೆಮಾದ ಸಂದೇಶ ! ಸೆಕೆಂಡ್‌ ಹಾಫ್ನಲ್ಲಿ ಬರುವ ಮನಮುಟ್ಟುವ ಸನ್ನಿವೇಶಗಳೇ ಸಿನೆಮಾದ ಜೀವಾಳ. ಮಾನ-ಮರ್ಯಾದೆಯನ್ನೇ ಆಭೂಷಣವಾಗಿ ಧರಿಸುವ ಮಧ್ಯಮ ವರ್ಗದವರ ಬದುಕಲ್ಲಿ ಕಂಡು ಬರುವ ಕಥೆ-ವ್ಯಥೆಗಳನ್ನು ಅದ್ಭುತವಾಗಿ ನಿರೂಪಿಸಲಾಗಿದೆ.

ಕಾಲೇಜಿನಲ್ಲಿ ಓದುವಾಗ ಅಪ್ಪ ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಬೆಲೆ ತಿಳಿಯದೆ ಖರ್ಚು ಮಾಡುತ್ತಿದ್ದದ್ದು ಹಾಗೂ ತಾನೇ ಬೆವರು ಸುರಿಸಿ ಹಣ ಸಂಪಾದಿಸಬೇಕಾದಾಗ ಅಪ್ಪನನ್ನು ಜತೆಗೆ ಜೀವನವನ್ನೂ ಅರ್ಥ ಮಾಡಿಕೊಳ್ಳುವಂತಹದ್ದು ಕಥೆಯ ಎರಡು ಆಯಾಮಗಳು.

ಅಪ್ಪ – ಮಗ ಇಬ್ಬರೂ ಒಬ್ಬರನ್ನೊಬ್ಬರು ತಪ್ಪಾಗಿ ಅರ್ಥೈಸಿಕೊಳ್ಳುವುದು, ಅನಂತರ ಸಂಬಂಧದಲ್ಲಿ ಬಿರುಕು ಮೂಡುವುದು, ಸಾಲದ ಹೊರೆಯನ್ನು ಹೊರಲಾಗದೆ ಅಪ್ಪ ಕಣ್ಮರೆಯಾಗುವುದು, ತಂದೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾದ ವಿವಶತೆಯಲ್ಲಿ ಸಿಲುಕುವ ಯುವಕನಿಗೆ ತಂದೆಯ ವಾಸ್ತವ ಸತ್ಯ ಎದುರಾಗುವುದು, ಕಥೆಯ ಟರ್ನಿಂಗ್‌ ಪಾಯಿಂಟ್‌ಗಳು.

Advertisement

ಕಾಲೇಜಿನಿಂದ ಹೊತ್ತುಕೊಂಡು ಬಂದ ಗ್ಯಾಂಗ್‌ ಸ್ಟರ್‌ ಹಣೆಪಟ್ಟಿಯ ಕಾರಣ ಓದಿಗೆ ತಕ್ಕನಾದ ಉದ್ಯೋಗ ಪಡೆಯಲಾಗದೆ ಯುವ ಫ‌ುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಆರಂಭಿಸುತ್ತಾನೆ. ಯಾವುದೇ ಕೆಲಸವಾಗಲಿ, ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ ಅದೇ ಶ್ರೇಷ್ಠ ಕೆಲಸವಾಗುತ್ತದೆ. ನಾವೆಲ್ಲರೂ ಮತ್ತೂಬ್ಬರಿಂದ ಅಪೇಕ್ಷಿಸುವುದು ಗೌರವವನ್ನು ಮಾತ್ರ. ಇಲ್ಲಿ ಮೇಲು-ಕೀಳು, ದೊಡ್ಡ ಕೆಲಸ – ಚಿಕ್ಕ ಕೆಲಸ ಎಂಬ ಯಾವ ಭೇದ ಭಾವವೂ ಇಲ್ಲ, ಕಾಯಕವೇ ಕೈಲಾಸ ಅಷ್ಟೇ. ನಮ್ಮ ಕುಟುಂಬವನ್ನು ಸಲಹಲು ಮಾಡುವ ಯಾವ ಕೆಲಸವೂ ಕನಿಷ್ಠವಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಲಾಗಿದೆ.

ಆರಕ್ಕೇರದ, ಮೂರಕ್ಕಿಳಿಯದ ಮಧ್ಯಮ ವರ್ಗದ ಕುಟುಂಬಕ್ಕೆ ತಂದೆಯ ಸ್ಥಾನ ಎಷ್ಟು ಮಹತ್ವವಾದುದು ಎಂಬುದನ್ನು ತಮ್ಮ ಅಮೋಘ ಅಭಿನಯದ ಮೂಲಕ ಹೃದಯಸ್ಪರ್ಶಿಯಾಗಿಸಿದ್ದಾರೆ ಅಚ್ಯುತ್‌ ಕುಮಾರ್‌ ಅವರು.

ಮುಖವಾಡಗಳ ಜಗತ್ತಿನ ಮೋಸದಾಟಕ್ಕೆ ಬಲಿಯಾಗುವ ತಂದೆಯ ಶ್ರಮ, ಆಸೆ, ಕನಸುಗಳು. ಅವಿರತ ಶ್ರಮದಿಂದ ದುಡಿದು ಸಂಸಾರ ನಡೆಸುತ್ತಾ ತನ್ನ ಬಗ್ಗೆ ಏನೂ ಹೇಳಿಕೊಳ್ಳದೆ ಅಗೋಚರ ಜೀವಿಯಾಗಿ ಉಳಿದುಬಿಡುವ ತಂದೆಯ ಗುಣಗಳು. ವ್ಯವಹಾರದ ಚದುರಂಗದಾಟದಲ್ಲಿ ಸೋಲುವ ಆದರೆ ತಂದೆಯಾಗಿ ಗೆಲುವು ಪಡೆದ ಅವರ ಕಾರ್ಯಗಳು.

ಹೀಗೆ ಒಂದರ ಅನಂತರ ಮತ್ತೂಂದರಂತೆ ಭಾವನಾ ತರಂಗಗಳು ಬಂದಪ್ಪಳಿಸುತ್ತಲೇ ಇರುತ್ತವೆ. ಇದರ ಮಧ್ಯೆ ತಾನು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಾ ತನ್ನ ಕುಸ್ತಿ ಪಂದ್ಯಾವಳಿಯ ಚಾಂಪಿಯನ್‌ ಶಿಪ್‌ನಿಂದ ದೂರವಾಗಿದ್ದ ಯುವ ಒರಟನಾಗಿ ಮಾರ್ಪಾಡಾಗುತ್ತಿರುವಾಗಲೆ ತಂದೆಯ ವಿಷಯ ಅರ್ಥವಾಗಿ ಜೀವನದ ಸಂವೇದನಾಶೀಲತೆಯನ್ನು ಮನಗಂಡು ಸೂಕ್ಷ್ಮ ವ್ಯಕ್ತಿತ್ವವನ್ನು ಹೊಂದುತ್ತಾನೆ.

ತಂದೆಯ ಗೌರವವನ್ನು ಕಳೆಯುತ್ತಿರುವವನೆಂಬ ಕಳಂಕ ಹೊತ್ತಿದ್ದವನು ತಂದೆಯ ಗೌರವ ಕಾಪಾಡಿದನೆಂಬ ಕಳಶವನ್ನು ಧಾರಣೆ ಮಾಡುತ್ತಾನೆ ! ಹೆಚ್ಚಾದ ಕುಟುಂಬದ ಜವಾಬ್ದಾರಿ, ಪ್ರೀತಿಯ ಪರಿ, ಕನಸಿನ ಗುರಿ ಇವುಗಳ ಚಕ್ರವ್ಯೂಹದಲ್ಲಿ ಸಿಲುಕಿ ಬಂಧಿಯಾಗುವ ಯುವ ಅಭಿಮನ್ಯುವಿನಂತೆ ಶತ್ರುಗಳ ಜಾಲಕ್ಕೆ ಸಿಲುಕದೆ ಬಬ್ರುವಾಹನನಾಗಿ ಅವನ್ನೆಲ್ಲ ಮೆಟ್ಟಿ ನಿಲ್ಲುತ್ತಾನೆ. ಮಧ್ಯಮ ವರ್ಗದವರು ಹೆಚ್ಚಾಗಿ ಅನುಭವಿಸುವ ಸಮಸ್ಯೆಯೆಂದರೆ ತಮ್ಮ ಗುರಿ ಮತ್ತು ಕುಟುಂಬದ ಜವಾಬ್ದಾರಿಗಳ ನಡುವಣ ನಿರಂತರ ಹೋರಾಟ. ಇದರ ಬಗೆಗೆ ಅಚ್ಚು ಕಟ್ಟಾಗಿ ಕಥಾ ಹಂದರವನ್ನು ರೂಪಿಸಲಾಗಿದೆ.

ಈ ಸಿನೆಮಾದಲ್ಲಿ ಮತ್ತೂಂದು ಇಷ್ಟವಾಗುವ ಅಂಶವೆಂದರೆ ಯಾರನ್ನೂ ಜಡ್ಜ್ ಮಾಡೋಕೆ ಹೋಗ್ಬೇಡಿ ಎಂದು ತಿಳಿಸಿರುವ ರೀತಿ. ಕಥಾನಾಯಕ ಒಬ್ಬ ಡೆಲಿವರಿ ಬಾಯ್‌ ಆಗಿದ್ದಾಗ್ಯೂ ಅನಂತರದಲ್ಲಿ ನ್ಯಾಷನಲ್‌ ಕುಸ್ತಿಪಟು ಆಗುತ್ತಾನೆ.

ಇಂದು ಕಷ್ಟದಲ್ಲಿರುವವರಿಗೆ ನಾಳೆ ಸುಖದ ದಿನಗಳು ಬರಬಹುದು. ಹಾಗೆಯೇ ಇಂದು ಸುಖದಲ್ಲಿರುವವರಿಗೆ ನಾಳೆ ಕಷ್ಟದ ದಿನಗಳು ಬಂದೆರಗಬಹುದು. ನಮ್ಮ ಜೀವನವು ಎಷ್ಟು ನಾಜೂಕು ಮತ್ತು ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ನಾವು ಅರಿತುಕೊಂಡರೆ ಈ ಜೀವನದಲ್ಲಿ ಎಲ್ಲರ ವಿಷಯದಲ್ಲೂ ನಾವು ಸೌಮ್ಯವಾಗಿ ನಡೆದುಕೊಳ್ಳುತ್ತೇವೆ.

ಜೀವನದಲ್ಲಿ ಗೆಲುವು ಸಿಗುವವರೆಗೂ, ಸೋಲಿನ ದಾರಿಯಲ್ಲೇ ಇರುವವರೆಗೂ ನಮ್ಮ ಎಲ್ಲ ಪ್ರತಿಭೆಗಳು ನಗಣ್ಯ ಎಂಬುದು ಸಮಾಜದ ಕಟು ಸತ್ಯ. ಶ್ರೀಮಂತಿಕೆ, ಅರಸೊತ್ತಿಗೆಗಳಿಲ್ಲದೆ ಸಾಮಾನ್ಯ ಕುಟುಂಬದಲ್ಲಿ ಜನಿಸುವ ಪ್ರತಿಯೊಬ್ಬನ ಬದುಕು ಸಂಘರ್ಷಗಳ ಔತಣ. ಅದನ್ನು  ಮೆಟ್ಟಿ ನಿಲ್ಲವುದೇ ಸಾಧನೆ. ಇದೇ ಈ ಸಿನೆಮಾದ ಕಥಾಹಂದರ.

-ಸಿಂಚನಾ ಎಂ.ಕೆ.

ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next