Advertisement

ಚುನಾವಣಾ ಸಿಬ್ಬಂದಿಯ ತೆರೆಯ ಹಿಂದಿನ ಕತೆ!

11:23 PM Apr 24, 2019 | Lakshmi GovindaRaju |

ಬೆಂಗಳೂರು: ಪ್ರಜಾತಂತ್ರದ ಹಬ್ಬ ಎಂದೇ ಬಿಂಬಿಸಲ್ಪಡುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಕ್ತಾಯಗೊಂಡಿದೆ. ಇನ್ನು ಉಳಿದಿರುವುದು ಫ‌ಲಿತಾಂಶವಷ್ಟೇ. ಇಷ್ಟು ದೊಡ್ಡ ಚುನಾವಣಾ ಪ್ರಕ್ರಿಯೆಯಲ್ಲಿ ಸಣ್ಣ ಪುಟ್ಟ ಗೊಂದಲಗಳನ್ನು ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಮತದಾನ ನಡೆಸಿಕೊಡುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿದೆ.

Advertisement

ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಪೊಲೀಸ್‌ ಇಲಾಖೆ, ರಕ್ಷಣಾ ಸಿಬ್ಬಂದಿ, ವಿಚಕ್ಷಣ ದಳ ಮತ್ತು ಚುನಾವಣಾ ಆಯೋಗದ ಸಿಬ್ಬಂದಿಗಳು ಹಗಲಿರುಳು ಶ್ರಮಿಸಿದ್ದಾರೆ. ಈ ವೇಳೆ ಒಬ್ಬರು ಕಾನ್‌ಸ್ಟೆಬಲ್‌ ಮತ್ತು ಏಳು ಜನ ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೃದಯಾಘಾತದಿಂದ ಮೃತಪಟ್ಟವರೇ ಹೆಚ್ಚು! ಇದು ಚುನಾವಣಾ ಕೆಲಸ ಎಷ್ಟು ಒತ್ತಡಮಯವಾಗಿರುತ್ತದೆ ಎನ್ನುವುದಕ್ಕೆ ಉದಾಹರಣೆ¿ಷ್ಟೇ. ತೆರೆಯ ಹಿಂದೆ ಚುನಾವಣಾ ಸಿಬ್ಬಂದಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.

ಚುನಾವಣೆ ಎಂದರೆನೇ ಒತ್ತಡ!: ಚುನಾವಣೆ ಎಂದರೆನೇ ಒತ್ತಡ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಚುನಾವಣಾ ಸಿಬ್ಬಂದಿ. ಮತದಾನ ನಡೆಯುವಾಗ ಹಲವು ಸವಾಲುಗಳು ಇರುತ್ತವೆ. ಯಾವುದರಲ್ಲಿ ತಪ್ಪಾದರೂ ನೌಕರಿಗೆ ಕತ್ತರಿ ಬೀಳುವ ಅಪಾಯವಿರುತ್ತದೆ. ರಾಜಕೀಯ ನಾಯಕರ ಹಾವಳಿ, ಟೆಂಡರ್‌ ಓಟು ಹಾಕಿ ಬಿಡುವ ಅಪಾಯ (ಒಂದಕ್ಕಿಂತ ಹೆಚ್ಚು ಓಟನ್ನು ಒಬ್ಬನೇ ವ್ಯಕ್ತಿ ಹಾಕುವುದು), ಲೆಕ್ಕದಲ್ಲಿ ತಪ್ಪಾಗುವ ಸಾಧ್ಯತೆ, ದಿಢೀರನೆ ಇವಿಎಂ ಕೈಕೊಡುವ ಸಾಧ್ಯತೆ, ಓಟರ್‌ ಲಿಸ್ಟ್‌ನಲ್ಲಿ ಹೆಸರಿಲ್ಲದ ಜನ ಪ್ರತಿಭಟನೆ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳು ಇರುತ್ತವೆ. ಇದರಲ್ಲಿ ಯಾವುದರಲ್ಲಿ ಸಮಸ್ಯೆ ಕಾಣಿಸಿಕೊಂಡರೂ ಸಾರ್ವಜನಿಕರು ಚುನಾವಣಾ ಸಿಬ್ಬಂದಿಯ ಮೇಲೆಯೇ ಮುಗಿಬೀಳುತ್ತಾರೆ ಎನ್ನುತ್ತಾರೆ ಅವರು.

ಮಹಿಳಾ ಸಿಬ್ಬಂದಿಗೆ ಸಮಸ್ಯೆ: ಚುನಾವಣಾ ಸಮಯದಲ್ಲಿ ಮಹಿಳಾ ಸಿಬ್ಬಂದಿಯೇ ಹೆಚ್ಚು ಸಂಕಷ್ಟ ಅನುಭವಿಸುತ್ತಾರೆ ಎನ್ನುತ್ತಾರೆ ಹಲವು ವರ್ಷ ಚುನಾವಣೆ ಸಿಬ್ಬಂದಿಯಾಗಿ ಕೆಲಸ ಮಾಡಿರುವ ರೇಖಾ ಸುರೇಶ್‌. ಚುನಾವಣಾ ಕೆಲಸಕ್ಕೆ ಒಂದು ಊರಿನಿಂದ ಮತ್ತೂಂದು ಊರಿಗೆ ಹಾಕುತ್ತಾರೆ. ನಮಗೆ ವಾಸ ಮಾಡಲು ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

ಈ ವ್ಯವಸ್ಥೆ ದೇವರಿಗೇ ಪ್ರೀತಿ. ಬಾಗಿಲಿದ್ದರೆ ಚಿಲಕವಿರುವುದಿಲ್ಲ, ಚಿಲಕವಿದ್ದರೆ ದೀಪದ ವ್ಯವಸ್ಥೆ ಇರುವುದಿಲ್ಲ. ಕತ್ತಲಿನಲ್ಲಿ ಕ್ಯಾಂಡಲ್‌ ಸಹಾಯದಿಂದಲೇ ಮರುದಿನದ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದೆಲ್ಲದಕ್ಕಿಂತ ಮುಖ್ಯ ಸಮಸ್ಯೆ ಎಂದರೆ, ಶೌಚಾಲಯ ಸಮಸ್ಯೆ. “ಚುನಾವಣಾ ಕೆಲಸಕ್ಕೆ ಬಂದಿದ್ದೇವೆ.

Advertisement

ಸ್ಪಲ್ಪ ನಿಮ್ಮ ಶೌಚಾಲಯವನ್ನು ಬಳಸಿಕೊಳ್ಳಬಹುದಾ ಎಂದು ಸುತ್ತಮುತ್ತಲಿನ ಜನರೊಂದಿಗೆ ಕೇಳುವುದಕ್ಕಿಂತ ಮತ್ತೂಂದು ಮುಜುಗರದ ಸಂಗತಿಯಿಲ್ಲ’ ಎನ್ನುತ್ತಾರೆ ರೇಖಾ. 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಚುನಾವಣಾ ಕೆಲಸದಿಂದ ಮುಕ್ತಿ ನೀಡುವಂತೆ ಹಲವರು ಒತ್ತಾಯಿಸಿದ್ದಾರೆ. 50 ವರ್ಷಕ್ಕಿಂತ ಮೇಲ್ಪಟ್ಟವರು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇವರಿಗೆ ವಿನಾಯ್ತಿ ಇರಲಿ ಎನ್ನುವ ಅಭಿಪ್ರಾಯವಿದೆ.

ಕೊನೆಯ ಹಂತದಲ್ಲಿ ಮಾರಾಮಾರಿ: ಮತದಾನವಾದ ಮೇಲೆ ಕೊನೆ ಹಂತದ ಪ್ರಕ್ರಿಯೆಗಳನ್ನು ಸುಲಭಗೊಳಿಸುವಂತೆ ಹಲವು ಮನವಿ ಮಾಡಿದ್ದಾರೆ. ಈ ಹಂತದಲ್ಲಿ ಅಧಿಕಾರಿಗಳ ನಡುವೆ ಮಾರಾಮಾರಿ ಹಂತಕ್ಕೆ ತಲುಪಿದ ಉದಾಹರಣೆಗಳೂ ಇವೆ ಇದು ತಪ್ಪಬೇಕು ಎನ್ನುವುದು ಸಿಬ್ಬಂದಿಗಳ ಅಭಿಪ್ರಾಯ.

ರಾಜ್ಯದಲ್ಲಿ 8 ಚುನಾವಣಾ ಸಿಬ್ಬಂದಿ ಸಾವು: ಈ ಬಾರಿ ಲೋಕಸಭಾ ಚುನಾವಣೆ ವೇಳೆ ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರ ಪೈಕಿ 8 ಮಂದಿ ಮೃತಪಟ್ಟಿದ್ದಾರೆ. ದೇವೇಂದ್ರಪ್ಪ, ರವಿಕಾಂತ್‌ ರಾಮ ಮಲ್ಲಶೇಖರ್‌, ಶಿವಪುತ್ರಪ್ಪ, ಶಾಂತಮೂರ್ತಿ, ಸುರೇಶ್‌ ಭೀಮಪ್ಪ, ತಿಪ್ಪೆಸ್ವಾಮಿ, ಎಚ್‌.ಎ ಬೆಲಿಬಂತ ಮತ್ತು ವೆಂಕಟಲಕ್ಷ್ಮೀ ಮೃತಪಟ್ಟವರು.

ತೆರೆಯ ಹಿಂದೆ ಆಯೋಗ ಮತ್ತು ಮಾಧ್ಯಮ: ನೀವು ಟಿವಿಯಲ್ಲಿ ನೋಡುವ ಚುನಾವಣಾ ಬ್ರೇಕಿಂಗ್‌ ಸುದ್ದಿಯ ಹಿಂದೆ, ಪತ್ರಿಕೆಗಳಲ್ಲಿ ಬರುವ ಚುನಾವಣಾ ಅಂಕಿ-ಅಂಶಗಳ ನಡುವೆಯೂ ಸ್ವಾರಸ್ಯಕರ ಸಂಗತಿಗಳಿವೆ. ಈ ಅಂಕಿ-ಅಂಶ ನೀಡುವುದಕ್ಕೆ ಆಯೋಗವೂ ತಲೆಕೆಡಿಸಿಕೊಳ್ಳುತ್ತದೆ. ಮಾಧ್ಯಮ ಪ್ರತಿನಿಧಿಗಳು ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ,

ಇಂತಹ ಪ್ರದೇಶದಲ್ಲಿ ಆರೋಪ ಕೇಳಿ ಬರುತ್ತಿದೆಯಲ್ಲ ಎನ್ನುವ ಪ್ರಶ್ನೆಗಳಿಗೆ ಆಯೋಗ ಉತ್ತರಿಸಬೇಕಾಗುತ್ತದೆ. ಕೆಲವು ಸಮಯದಲ್ಲಿ ಸಕಾಲದಲ್ಲಿ ಚುನಾವಣಾ ಆಯೋಗ ಸ್ಪಂದಿಸದೆ ಪತ್ರಕರ್ತರು ಮತ್ತು ಆಯೋಗದ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದ ಸಾಕಷ್ಟು ಉದಾಹರಣೆಗಳೂ ಇವೆ.

ಮೃತ ಸಿಬ್ಬಂದಿ ಕುಟುಂಬಕ್ಕೆ ತಲಾ 70 ಲಕ್ಷ ರೂ.ನೀಡಲು ಚಿಂತಿಸಲಾಗಿದೆ. ಈಗ ಸಿಗುವ ಸರ್ಕಾರಿ ಸೌಲಭ್ಯಗಳ ಜೊತೆಗೆ ಹೆಚ್ಚುವರಿಯಾಗಿ ಪರಿಹಾರ ಧನವಾಗಿ ಇದನ್ನು ನೀಡಲಾಗುತ್ತಿದೆ. 50 ವರ್ಷ ಮೇಲ್ಪಟ್ಟ ಸಿಬ್ಬಂದಿಗಳನ್ನು ಚುನಾವಣಾ ಕೆಲಸಕ್ಕೆ ನೇಮಿಸಿಕೊಳ್ಳುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ
-ಚುನಾವಣಾ ಆಯೋಗದ ಐಎಎಸ್‌ ಅಧಿಕಾರಿ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next