Advertisement

ರಾಜ್ಯದ ಮೊದಲ ಕನ್ನಡ ಗ್ರಾಪಂ ಅಂತರ್ಜಾಲ ತಾಣ

04:51 PM Jan 11, 2020 | Suhan S |

ಮಂಡ್ಯ: ಗ್ರಾಮ ಪಂಚಾಯಿತಿಯೊಂದು ಪರಿಪೂರ್ಣವಾಗಿ ಕನ್ನಡದಲ್ಲಿ ರೂಪಿಸಿದ ರಾಜ್ಯದ ಮೊದಲ ಅಂತರ್ಜಾಲ ತಾಣಕ್ಕೆ ಮಂಡ್ಯ ಜಿಲ್ಲೆ ಮುನ್ನುಡಿ ಬರೆದಿದೆ. ಪಂಚಾಯಿತಿ ಕಾರ್ಯಸಾಧನೆ ಯನ್ನು ಗೋಡೆ ಪತ್ರಿಕೆ ಮುಖಾಂತರ ಜನರಿಗೆ ತಲುಪಿಸುವ ವಿಭಿನ್ನ ಪ್ರಯೋಗ ನಡೆಸಿದ್ದ ಮದ್ದೂರು ತಾಲೂಕಿನ ಅಣ್ಣೂರು ಗ್ರಾಪಂ ಇದೀಗ ತನ್ನೆಲ್ಲಾ ಕಾರ್ಯ ಚಟುವಟಿಕೆಯನ್ನೂ ಅಂತರ್ಜಾಲಕ್ಕೆ ಸೇರಿಸುವುದರೊಂದಿಗೆ ವಿಶ್ವವ್ಯಾಪಿಗೊಳಿಸಿದೆ.

Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾರ್ಗದರ್ಶನದಂತೆ ಅಣ್ಣೂರು ಗ್ರಾಪಂ ಅಂತರ್ಜಾಲ ತಾಣ ರಚನೆಯಾಗಿದೆ. ಇಲ್ಲಿರುವ ಎಲ್ಲಾ ಮಾಹಿತಿಯೂ ಸಂಪೂರ್ಣ ಕನ್ನಡಮಯವಾಗಿದೆ. ಪಂಚಾಯಿತಿ ಕಾರ್ಯ ಚಟುವಟಿಕೆ, ಪ್ರಗತಿಯ ವಿವರ, ಸಂಕಲ್ಪ, ಪಂಚಾಯಿತಿ ಪರಿಚಯ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ- ಸಿಬ್ಬಂದಿ ವರ್ಗದವರ ಮಾಹಿತಿಯೂ ಸೇರಿದಂತೆ ಪಂಚಾಯಿತಿ ಪ್ರತಿಯೊಂದು ಮಾಹಿತಿ ಯನ್ನೂ ಅಂತರ್ಜಾಲದಲ್ಲಿ ಅಡಗಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದೆ.

ಗ್ರಾಮ ಸ್ವರಾಜ್ಯದಿಂದ ಅಂತರ್ಜಾಲದವರೆಗೆ: ಜನಸ್ನೇಹಿ ಆಡಳಿತ, ಸಮುದಾಯದ ಸಹಕಾರ, ಸ್ಪಂದನಾಶೀಲ ಮನೋಭಾವದ ಸದಸ್ಯರು ಹಾಗೂ ಸಿಬ್ಬಂದಿಯ ಸಹಕಾರದ ಪರಿಣಾಮ ಹಲವು ಧನಾತ್ಮಕ ಅಂಶಗಳಿಂದ ಅಣ್ಣೂರು ಗ್ರಾಪಂನಲ್ಲಿ ವಿಭಿನ್ನ ಕಾರ್ಯಚಟುವಟಿಕೆಗಳನ್ನು ಹಲವು ದಶಕಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಗ್ರಾಮ ಪಂಚಾಯತ್‌ ವತಿಯಿಂದ ಗ್ರಾಮ ಸ್ವರಾಜ್ಯ ಮಾಸಿಕ ಪತ್ರಿಕೆ (ಗೋಡೆ ಪತ್ರಿಕೆ) ಹೊರತಂದು ಸರ್ಕಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳು, ಗ್ರಾಪಂ ಚಟುವಟಿಕೆಗಳು, ಹಣಕಾಸಿನ ವಿವರ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ಜನರಿಗೆ ತಲುಪಿಸಲಾಗಿತ್ತು.

ಡಿಜಿಟಲ್‌ ಲೈಬ್ರರಿ ಮಾಡುವ ಚಿಂತನೆ: ಆ ಮೂಲಕ ರಾಜ್ಯದ ಗಮನ ಸೆಳೆದಿದ್ದ ಅಣ್ಣೂರು ಗ್ರಾಮ ಪಂಚಾಯಿತಿ ತಂತ್ರಜ್ಞಾನ ಯುಗದ ಅಗತ್ಯತೆಯನ್ನು ಮನಗಂಡು ಪಂಚಾಯತ್‌ ಅಂತರ್ಜಾಲ ತಾಣವನ್ನು ವ್ಯವಸ್ಥಿತವಾಗಿ, ಸುಂದರವಾಗಿ ರೂಪಿಸಲಾಗಿದೆ. ಇಡೀ ಗ್ರಾಪಂ ಮಾಹಿತಿ ಕೋಶ ತುಂಬಿಸಲಾಗಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್‌ ಲೈಬ್ರರಿ ಮಾಡುವ ಉದ್ದೇಶ ಹೊಂದಿದೆ. ಕಾಲದ ಅಗತ್ಯತೆಗೆ ತಕ್ಕಂತೆ ತೆರೆದುಕೊಳ್ಳುವ ಮನೋಭಾವದೊಂದಿಗೆ ಗ್ರಾಮ ಸ್ವರಾಜ್ಯದಿಂದ ಅಂತರ್ಜಾಲದವರೆಗೆ ಪಯಣ ಬೆಳೆಸಿದೆ. ಗ್ರಾಮದ ಹಿನ್ನೆಲೆ, ಗ್ರಾಮ ಪಂಚಾಯಿತಿ ಕ್ಷೇತ್ರ ವ್ಯಾಪ್ತಿ, ಜನಸಂಖ್ಯೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳು, ಆ ಭಾಗದಲ್ಲಿರುವ ಪ್ರಮುಖ ಕಾರ್ಖಾನೆಗಳು, ಮಣ್ಣಿನ ಸ್ವರೂಪ, ಕಲ್ಲಿನ ಲಕ್ಷಣ, ಯಾವ ಜನಾಂಗದವರು ವಾಸಿಸುತ್ತಿದ್ದಾರೆ ಎಂಬ ಮಾಹಿತಿ ನಮ್ಮ ಬಗ್ಗೆ ಕಲಂನಲ್ಲಿ ಸಿಗಲಿದೆ.

ಮಾಹಿತಿ ಅಪ್‌ಲೋಡ್‌: ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ, ಸಿಬ್ಬಂದಿ ವರ್ಗದ ವಿವರ, ದೂರವಾಣಿ ಸಂಖ್ಯೆಯನ್ನು ಅವರ ಭಾವಚಿತ್ರ ಸಹಿತ ಅಂತರ್ಜಾಲಕ್ಕೆ ಸೇರ್ಪಡೆಗೊಳಿಸಲಾಗಿದೆ. ಸಕಾಲದಲ್ಲಿ ದೊರಕುವ ಸೇವೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಕಾಲಮಿತಿಯ ವಿವರಗಳು, ಗ್ರಾಪಂ ಹಮ್ಮಿಕೊಂಡಿರುವ 2019-20ನೇ ಸಾಲಿನ ಹಣಕಾಸು ಆಯೋಗದ ಮೂಲ ಅನುದಾನದ ಮೊದಲನೇ ಕಂತಿನ ಕ್ರಿಯಾ ಯೋಜನೆ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ.

Advertisement

ಸಂಪೂರ್ಣ ವಿವರ: ಬಟ್ಟೆ ಬ್ಯಾಗ್‌ ಮೇಲೆ ಬರೆದಿರುವ ಸ್ವಚ್ಛ ಮೇವ ಜಯತೆ ಕಲಂ ಕ್ಲಿಕ್‌ ಮಾಡಿದರೆ ಪ್ಲಾಸ್ಟಿಕ್‌ ಬಳಕೆ ನಿರ್ಮೂಲನೆಗೆ ಮಾಡಿರುವ ಸಂಕಲ್ಪ, ಪ್ಲಾಸ್ಟಿಕ್‌ ನಿಷೇಧ ಸೇರಿ ಘನತ್ಯಾಜ್ಯ ನಿರ್ವಹಣೆ ಸಂಬಂಧ ಪಂಚಾಯಿತಿ ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರವನ್ನು ನೀಡಲಾಗಿದೆ. ಪ್ಲಾಸ್ಟಿಕ್‌ ನಿಷೇಧ ಸೇರಿದಂತೆ ಘನತ್ಯಾಜ್ಯ ನಿರ್ವಹಣೆ ಸಂಬಂಧ ಉಪವಿಧಿಗಳನ್ನು ರಚಿಸಿ ಜಿಪಂ ಸಾಮಾನ್ಯ ಸಭೆಯಿಂದ ಅನುಮೋದನೆ ಪಡೆದ ಜಿಲ್ಲೆಯ ಮೊದಲ ಗ್ರಾಮ ಪಂಚಾಯತ್‌ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನುಳಿದಂತೆ ಪಂಚಾಯಿತಿ ಸಾಮಾನ್ಯ ಮಾಹಿತಿ, ಪ್ರಗತಿಯ ವರದಿ, ಸಭಾ ನಡವಳಿ, ಮಾಹಿತಿ ಹಕ್ಕು, ಯಶೋಗಾಥೆ, ಚಿತ್ರಸಂಪುಟ ಸೇರಿದಂತೆ ಎಲ್ಲ ವಿವರಗಳನ್ನು ದಾಖಲಿಸಲಾಗಿದೆ. ಜನಸಾಮಾನ್ಯರಿಗೆ ಪ್ರತಿಯೊಂದು ಮಾಹಿತಿ ಯೂ ಸಿಗುವಂತೆ ರೂಪಿಸಲಾಗಿದೆ. ಪಂಚಾಯಿತಿಯ ಅಂತರ್ಜಾಲ ತಾಣಗಳಲ್ಲೇ ವಿಶಿಷ್ಟ ಸೊಬಗಿನೊಂದಿಗೆ ಮಾತೃಭಾಷೆ ಯಲ್ಲಿ ಮಾಹಿತಿಯನ್ನೊಳಗೊಂಡು ಕನ್ನಡದ ಕಹಳೆ ಮೊಳಗಿಸುತ್ತಿರುವುದು ವಿಶೇಷವಾಗಿದೆ.

ಅಣ್ಣೂರು ಗ್ರಾಮ ಪಂಚಾಯತ್‌ನ ಮಾಹಿತಿ ಹಾಗೂ ಕಾರ್ಯಚಟುವಟಿಕೆಗಳು ಅಂತರ್ಜಾಲ ತಾಣಕ್ಕೆ ವಿಸ್ತರಿಸಿರುವುದು ಸಂತೋಷದ ವಿಚಾರ. ಮಾಹಿತಿ ಎಲ್ಲವೂ ಸಂಪೂರ್ಣ ಕನ್ನಡಮಯವಾಗಿರುವುದು ಜಾಲ ತಾಣದ ಸೊಬಗನ್ನು ಹೆಚ್ಚಿಸಿದೆ. ಪಂಚಾಯತ್‌ ಹಲವು ಸಾಧನೆಗಳೊಂದಿಗೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದೇವೆ. ಈ ಹಿಂದೆ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ರೂಪಿಸಲು ಕಾರ್ಯಯೋಜನೆಗಳನ್ನು ರೂಪಿಸಿ ಯಶಸ್ಸು ಸಾಧಿಸಿದ ಮಾದರಿಯಲ್ಲೇ ಪ್ಲಾಸ್ಟಿಕ್‌ ನಿಷೇಧ ಸೇರಿದಂತೆ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಪಣತೊಟ್ಟಿದ್ದೇವೆ. ಎಲ್ಲರಿಂದ ಎಲ್ಲರೂ ಸೇರಿ ಯಶಸ್ಸು ಸಾಧಿಸುತ್ತೇವೆ ಎಂಬ ಆತ್ಮವಿಶ್ವಾಸ ನಮ್ಮದಾಗಿದೆ.  ಎಂ.ಆರ್‌.ಅಶ್ವಿ‌ನಿ, ಪಿಡಿಒ, ಅಣ್ಣೂರು ಗ್ರಾಪಂ

ಅಣ್ಣೂರು ಗ್ರಾಪಂಗೆ ಸಂದಿರುವ ಪ್ರಶಸ್ತಿಗಳು:  ಪ್ರಶಸ್ತಿಗಳು ಎಂದಿರುವ ವಿಶೇಷ ಕಲಂನಲ್ಲಿ ಅಣ್ಣೂರು ಗ್ರಾಪಂಗೆ ದೊರಕಿರುವ ನಿರ್ಮಲ ಗ್ರಾಮ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಬಯಲು ಬಹಿರ್ದೆಸೆ ಮುಕ್ತ ಪಂಚಾಯಿತಿ, ನಮ್ಮ ಗ್ರಾಮ ನಮ್ಮ ಯೋಜನೆ ಸ್ತ್ರೀ ಪ್ರಗತಿ ಮತ್ತು ಎಸ್‌.ಡಿ.ಜಯರಾಮ್‌ ಹೆಸರಿನಲ್ಲಿ ನೀಡಿರುವ ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಚಿತ್ರ ಸಹಿತ ದಾಖಲಿಸಲಾಗಿದೆ.

 

-ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next