Advertisement

“ಮಹಾ’ಸರ್ಕಾರಕ್ಕೆ ರಾಜ್ಯ ಬಿಜೆಪಿ ಅಮಿತೋತ್ಸಾಹ

09:51 AM Nov 25, 2019 | Team Udayavani |

ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫ‌ಡ್ನವೀಸ್‌ ಮುಖ್ಯಮಂತ್ರಿಯಾಗಿ, ಎನ್‌ಸಿಪಿಯ ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಶನಿವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದು ರಾಜ್ಯ ಬಿಜೆಪಿಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. 15 ಕ್ಷೇತ್ರಗಳ ಉಪಚುನಾವಣೆಯ ಪ್ರಚಾರದ ತರಾತುರಿಯಲ್ಲಿರುವ ಬಿಜೆಪಿ ನಾಯಕರಿಗೆ ಈ ಮಹತ್ತರ ರಾಜಕೀಯ ಬೆಳವಣಿಗೆ ಇನ್ನಷ್ಟು ಹುಮ್ಮಸ್ಸು ಮೂಡಿಸಿರುವುದು ಸುಳ್ಳಲ್ಲ. ಉಪಕದನದ ಅಖಾಡದ ನಡುವೆಯೇ ಯಾರು, ಏನೆಲ್ಲ ಪ್ರತಿಕ್ರಿಯಿಸಿದರು ಇಲ್ಲಿದೆ…

Advertisement

ಇಡೀ ಎನ್‌ಸಿಪಿ ಬಿಜೆಪಿಗೆ ಬರಲಿದೆ: ಪ್ರಹ್ಲಾದ ಜೋಶಿ
ಹುಬ್ಬಳ್ಳಿ: ಮಹಾರಾಷ್ಟ್ರದ ಜನರ ತೀರ್ಪಿಗೆ ವಿರುದ್ಧವಾಗಿ ಶಿವಸೇನೆ ಪಕ್ಷ ಕಾಂಗ್ರೆಸ್‌ ಹಾಗೂ ಎನ್‌ಸಿಪಿಯೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದರಿಂದ ಬಿಜೆಪಿಯು ಎನ್‌ಸಿಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತ ನಾಡಿ, ಅನೈತಿಕ ರಾಜಕಾರಣಕ್ಕೆ ನಾವು ಮುಂದಾಗಿಲ್ಲ. ಎನ್‌ಸಿಪಿಯ ಶಾಸಕಾಂಗ ನಾಯಕ ರನ್ನಾಗಿ ಅವರ ಪಕ್ಷದವರೇ ಅಜಿತ್‌ ಪವಾರ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಈಗ ಅಜಿತ್‌ ಪವಾರ್‌ ಅವರೇ ಉಪಮುಖ್ಯಮಂತ್ರಿಯಾದರೆ ಇದರಲ್ಲಿ ನಮ್ಮ ಕೈವಾಡ ವೇನಿದೆ? ನೀವು ನೋಡ್ತಾ ಇರಿ, ಇಡೀ ಎನ್‌ಸಿಪಿಯೇ ನಮ್ಮೊಂದಿಗೆ ಬರಲಿದೆ ಎಂದರು.

ಸಂಜಯ ರಾವುತ್‌ ಎಂಬ ದುರಹಂಕಾರಿ ಹಾಗೂ ಉದ್ಧವ ಠಾಕ್ರೆ ಎಂಬ ಅಧಿಕಾರದಾಹಿ ವ್ಯಕ್ತಿಗೆ ಅನಿವಾರ್ಯ ವಾಗಿ ಪಾಠ ಕಲಿಸಬೇಕಾಯಿತು. ರಾಜ್ಯದಲ್ಲಿಯೂ ಹಿಂದೆ ಹೀಗೆಯೇ ಆಗಿತ್ತು. ಇದು ಅಧಿಕಾರ ದುರ್ಬಳಕೆಯಲ್ಲ. ಕಳೆದೊಂದು ತಿಂಗಳಿನಿಂದ ಬಿಜೆಪಿ ಶಾಂತವಾಗಿ, ಸಂಯಮದಿಂದ ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಲು ಪ್ರಯತ್ನಿಸಿತು.

ಅವರು ಸುಧಾರಿಸುತ್ತಾರೆಂಬುದು ನಮ್ಮ ನಿರೀಕ್ಷೆಯಾಗಿತ್ತು. ಬಿಜೆಪಿ 105 ಸ್ಥಾನಗಳಲ್ಲಿ ಜಯಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮಗೆ ಯಾವುದೇ ಆಯ್ಕೆಗಳಿರಲಿಲ್ಲ. ಚುನಾವಣೆ ಪೂರ್ವದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತದೆಯೋ ಆ ಪಕ್ಷಕ್ಕೆ ಸಿಎಂ ಸ್ಥಾನ ನೀಡಬೇಕೆಂಬ ಒಪ್ಪಂದವಾಗಿತ್ತು ಎಂದರು.

Advertisement

ವರ್ಷದಲ್ಲಿ ಶಿವಸೇನೆಯೇ ಇರುವುದಿಲ್ಲ
ಬೆಂಗಳೂರು: ಮಹಾರಾಷ್ಟ್ರದಲ್ಲಿ ಬಿಜೆಪಿಯೇನು ಎನ್‌ಸಿಪಿಯ ಬೆಂಬಲ ಕೋರಿಲ್ಲ. ಎನ್‌ಸಿಪಿಯ ಶರದ್‌ ಪವಾರ್‌ ಅವರು ಪ್ರಧಾನಿಯವರನ್ನು ಭೇಟಿಯಾಗಿದ್ದಾಗಲೇ ಕೆಲವರು ಊಹೆ ಮಾಡಿದ್ದರು. ಆದರೆ ಬಿಜೆಪಿಯವರು ರಹಸ್ಯ ಕಾಪಾಡುವುದರಲ್ಲಿ ನಿಸ್ಸೀಮರು. ಎನ್‌ಸಿಪಿ ಕೂಡ ಗೌಪ್ಯತೆ ಕಾಪಾಡಿದೆ. ಇದೀಗ ಸರ್ಕಾರ ರಚನೆಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿ ರದ್ಧತಿ, ತ್ರಿವಳಿ ತಲಾಖ್‌ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶರದ್‌ ಪವಾರ್‌ ಶಹಬ್ಟಾಸ್‌ಗಿರಿ ನೀಡಿದ್ದರು. ಉಳಿದ ಪಕ್ಷಗಳಿಗಿಂತ ಬಿಜೆಪಿಯೇ ದೇಶಕ್ಕೆ ಉತ್ತಮ ಎಂದು ಅವರಿಗೆ ಅನಿಸಿರಬೇಕು. ಹಾಗಾಗಿ ಮೈತ್ರಿ ಏರ್ಪಟ್ಟಂತಿದೆ ಎಂದು ಹೇಳಿದರು.

30 ವರ್ಷಗಳಿಂದ ಶಿವಸೇನೆ ಬಿಜೆಪಿಯೊಂದಿಗಿದ್ದ ಕಾರಣ ಒಟ್ಟಿಗೇ ಮುಂದುವರಿಯುವ ಭಾವನೆ ಇತ್ತು. ಶಿವಸೇನೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದರೂ ಸಹಿಸಿದ್ದೆವು. ಆದರೆ ಶಿವಸೇನೆಗೆ ಅಧಿಕಾರ ವ್ಯಾಮೋಹ ಬಂತು. ಏನಾದರೂ ಮಾಡಿ ಅಧಿಕಾರ ಹಿಡಿಯಲೇ ಬೇಕೆಂಬ ರೀತಿಯಲ್ಲಿ ಹೋರಾಟಕ್ಕಿಳಿಯಿತು. ಆ ಮೂಲಕ ಅವರ ಗುಂಡಿ ಅವರೇ ತೋಡಿಕೊಂಡರು. ಆರು ತಿಂಗಳು ಇಲ್ಲವೇ ವರ್ಷದಲ್ಲಿ ಶಿವಸೇನೆ ಪಕ್ಷವೇ ಇರುವುದಿಲ್ಲ ಎಂದು ತಿಳಿಸಿದರು.

ಹೆಚ್ಚು ಸ್ಥಾನ ಗೆದ್ದವರಿಗೆ ಅಧಿಕಾರ: ಸಂತೋಷ್‌
ಚಿಕ್ಕಬಳ್ಳಾಪುರ: ಹೆಚ್ಚು ಸೀಟು ಗೆದ್ದವರಿಗೆ ಅಧಿಕಾರ ಬಿಡಬೇಕು. ಅದೇ ರೀತಿ ಬಿಜೆಪಿ ಪರ ಜನಾದೇಶ ಇತ್ತು. ಹಾಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ರಚನೆ ಕೂಡ ಅದೇ ರೀತಿ ಆಗಿದ್ದು, ಈಗ ಮಹಾರಾಷ್ಟ್ರದಲ್ಲಿ ಅದೇ ಆಯಿತು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರ. ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು.

ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಜೊತೆ ಇದ್ದು ಅಧಿಕಾರ ತಪ್ಪಿಸಲು ನಡೆಸಿದ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಜನರ ಅಶೀರ್ವಾದದಂತೆ ಅತಿ ದೊಡ್ಡ ಪಕ್ಷ ಅಧಿಕಾರಕ್ಕೆ ಬರಬೇಕು. ಅದೇ ರೀತಿ ಈಗ ಮಹಾರಾಷ್ಟ್ರದಲ್ಲಿ ಆಗಿದ್ದು, ಹಲವು ಪಕ್ಷಗಳಿಗೆ ಪಾಠ ಆಗಿದೆ ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಒಳ್ಳೆಯ ಆಡಳಿತ ನೀಡಲಿದೆ ಎಂಬ ವಿಶ್ವಾಸದಿಂದ ಎನ್‌ಸಿಪಿ ನಮ್ಮ ಬಳಿ ಬಂದಿದೆ. ದೇಶಾದ್ಯಂತ ಜನರ ಒಲವು ಬಿಜೆಪಿ ಪರವಾಗಿದೆ. ಹೀಗಾಗಿ ರಾಜ್ಯದಲ್ಲೂ 15 ಕ್ಷೇತ್ರ ಗೆಲ್ಲುತ್ತೇವೆ.
-ಸದಾನಂದಗೌಡ ಕೇಂದ್ರ ಸಚಿವ

ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ವಿಭಿನ್ನ ನಡೆಯ ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಆ ಪ್ರಯತ್ನ ಫಲಿಸದಿದ್ದರಿಂದ ಜನಾದೇಶಕ್ಕೆ ಈಗ ಬೆಲೆ ಬಂದಿದೆ. ದೇವರ ಆಶೀರ್ವಾದಿಂದ ಜನರ ನಿರೀಕ್ಷೆಯಂತೆ ಸರ್ಕಾರ ರಚನೆಯಾಗಿದೆ. ಸರ್ಕಾರ ಬಹುಮತ ಸಾಬೀತುಪಡಿಸುವ ವಿಶ್ವಾಸ ನಮಗಿದೆ.
-ನಳೀನ್‌ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ಮಹಾರಾಷ್ಟ್ರ ರಾಜಕೀಯ ವಿದ್ಯಮಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಬೆಳ್ಳಂಬೆಳಗ್ಗೆ ಸಹಿ ಹಾಕುತ್ತಾರೆ ಎಂದರೆ ಏನು ಅರ್ಥ? ಯಾವ ಆಧಾರದ ಮೇಲೆ ಸರ್ಕಾರ ರಚನೆ ಮಾಡಲು ಅವಕಾಶ ಕೊಟ್ಟರು? ಮಹಾರಾಷ್ಟ್ರ ರಾಜ್ಯಪಾಲರು ಕೇಂದ್ರದ ರಬ್ಬರ್‌ ಸ್ಟಾಂಪ್‌ ಹಾಗೆ ಕೆಲಸ ಮಾಡಿದ್ದಾರೆ. ಬಿಜೆಪಿ ಯಾವ ನೈತಿಕತೆ ಉಳಿಸಿಕೊಂಡಿಲ್ಲ, ನಾವು ಏನಾದರೂ ಮಾಡುತ್ತೇವೆ ಎಂಬ ಧೋರಣೆ ಅವರದ್ದು.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ನೀಡುವ ಉದ್ದೇಶದಿಂದ ಬಿಜೆಪಿ, ಎನ್‌ಸಿಪಿ ಒಂದಾಗಿ ಸರ್ಕಾರ ರಚಿಸಲಾಗಿದೆ. ಅಸಹಜ ಮತ್ತು ಅಪವಿತ್ರ ಮೈತ್ರಿಯ ಪ್ರಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ಅಲ್ಲಿ ಸುಮಾರು 27 ದಿನಗಳಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿ ಸರ್ಕಾರವೇ ರಚನೆ ಆಗಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಇಷ್ಟು ದಿನ ಎನ್‌ಸಿಪಿ, ಶಿವಸೇನೆ, ಕಾಂಗ್ರೆಸ್‌ ಸರ್ಕಾರ ಅಂತಿದ್ದು ಈಗ ಆಗಿರುವುದೇ ಬೇರೆ. ಶರದ್‌ ಪವಾರ್‌ ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು. ಬಿಜೆಪಿಯವರು ಎನ್‌ಸಿಪಿ ಭ್ರಷ್ಟಾಚಾರ ಬಯಲು ಮಾಡುತ್ತೇವೆ ಅಂತಿದ್ರು, ಇವತ್ತು ರಾಜಕಾರಣದಲ್ಲಿ ನೈತಿಕತೆ ಉಳಿದುಕೊಂಡಿಲ್ಲ. ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next