ಮಹಾನಗರ: ಮಂಗಳೂರು ನಗರದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಆತಂಕ ಮೂಡಿಸಿದೆ. ಭೀಕರ ಅಪಘಾತಗಳು ಸರಣಿಯಂತೆ ಸಂಭವಿಸುತ್ತಿವೆ. ಒಂದೆಡೆ ಸವಾರರು/ ಚಾಲಕರು ಸಂಚಾರ ನಿಯಮ ಪಾಲನೆ ಮಾಡದಿರುವುದು, ಇನ್ನೊಂದೆಡೆ ಸಂಚಾರ ನಿಯಮ ಪಾಲನೆ ಮಾಡದವರ ಬಗ್ಗೆ ಪೊಲೀಸರು ನಿಗಾ ಕಡಿಮೆಗೊಳಿಸಿರುವುದು ಕಂಡುಬರುತ್ತಿದೆ ಎಂದು ನಗರದ ನಾಗರಿಕರು ದೂರಿದ್ದಾರೆ.
ಅತೀವೇಗ, ಓವರ್ಟೇಕ್ ಭರಾಟೆ, ಮದ್ಯಸೇವಿಸಿ ವಾಹನ ಚಾಲನೆ, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ರಹಿತ ಸಂಚಾರ ಸಾಮಾನ್ಯ ಎಂಬಂತಾಗಿದೆ. ಹಗಲಿನ ವೇಳೆಯೇ ಸಂಚಾರ ನಿಯಮ ಉಲ್ಲಂಘನೆ ವ್ಯಾಪಕವಾಗಿ ನಡೆಯುತ್ತಿದೆ. ರಾತ್ರಿ 8 ಗಂಟೆಯ ಅನಂತರ ಉಲ್ಲಂಘನೆ ತೀರಾ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಇದೆ. ರಸ್ತೆಗಳು ಉತ್ತಮಗೊಳ್ಳುತ್ತಿದ್ದರೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ.
ಅಪಘಾತಗಳ ಸರಣಿ
ಫೆ. 21ರಂದು ಬಿಜೈನಲ್ಲಿ ಆಟೋರಿಕ್ಷಾಕ್ಕೆ ಬೈಕ್ ಢಿಕ್ಕಿಯಾಗಿ ವಿದ್ಯಾರ್ಥಿ ಮೃತಪಟ್ಟಿದ್ದ. ಆತ ಹೆಲ್ಮೆಟ್ ಧರಿಸಿರಲಿಲ್ಲ. ಮಾ. 12ರಂದು ಕೋಡಿಕಲ್ ಕ್ರಾಸ್ ಬಳಿ ರಾ.ಹೆದ್ದಾರಿ 66ರಲ್ಲಿ ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟಿದ್ದರು.
ಕಾರು ಚಾಲಕ ಮದ್ಯಸೇವನೆ ಮಾಡಿದ್ದ. ಮಾ. 13ರಂದು ಲೇಡಿಹಿಲ್ನಲ್ಲಿ ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿಯಾಗಿ ಸವಾರ ಮೃತಪಟ್ಟು ಸಹಸವಾರ ಗಾಯ ಗೊಂಡಿದ್ದರು. ಓವರ್ಟೇಕ್ನಿಂದಾಗಿ ಅಪಘಾತ ಸಂಭವಿಸಿತ್ತು. ಕಳೆದ ವರ್ಷದ ಅ. 12ರಂದು ನಂತೂರು ಜಂಕ್ಷನ್ನಲ್ಲಿ ಸ್ಕೂಟರ್ಗ ಬಸ್ ಢಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟಿದ್ದರು. ಅ. 14ರಂದು ಆಕಾಶಭವನದಲ್ಲಿ ಆಮ್ನಿ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದರು.
Related Articles
ಅ. 17ರಂದು ಲಾಲ್ಬಾಗ್ ಜಂಕ್ಷನ್ನಲ್ಲಿ ಸ್ಕೂಟರ್ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ನಲ್ಲಿದ್ದ ಬಾಲಕ ಮೃತಪಟ್ಟಿದ್ದ. ವೇಗಮಿತಿ 40 ಕಿ.ಮೀ. ನಿಗದಿಗೊಳಿಸಿ ನಗರದಲ್ಲಿ ವಾಹನಗಳ ಓಡಾಟಕ್ಕೆ ಇರುವ ವೇಗ ಮಿತಿ ನಿಯಮವೂ ಪಾಲನೆಯಾಗುತ್ತಿಲ್ಲ. ವೇಗಮಿತಿ ಇದೆ ಎಂಬುದು ಹೆಚ್ಚಿನ ಚಾಲಕರಿಗೆ ಅರಿವಿಲ್ಲ. ವೇಗಮಿತಿಯ ಸೂಚನ ಫಲಕ ಅಳವಡಿಸಿಲ್ಲ. ವೇಗಮಿತಿ ನಿಯಮ ಉಲ್ಲಂಘಿಸಿದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ನಗರದ ಮುಖ್ಯ
ರಸ್ತೆಗೆ ವೇಗಮಿತಿ 40 ಕಿ.ಮೀ. ಇಟ್ಟು ನಗರದ ಇತರ ರಸ್ತೆಗಳ ವೇಗಮಿತಿಯನ್ನು ಅದಕ್ಕಿಂತಲೂ ಕಡಿಮೆಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಟಿ ವ್ಯಾಪ್ತಿ ಯಲ್ಲಿ 60 ಕಿ.ಮೀ.ಗೆ ಮಿತಿಗೊಳಿಸಬೇಕು ಎಂದು ರಸ್ತೆ ಸುರಕ್ಷತ ಸಮಿತಿ ಸದಸ್ಯ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ಸುಗಮ ಸಂಚಾರಕ್ಕೆ ಸಲಹೆ
ಸಂಚಾರ ನಿಯಮ ಉಲ್ಲಂ ಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ವೇಗಮಿತಿ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು. ಅಗತ್ಯವಿರುವಲ್ಲಿ ಬೀದಿ ದೀಪದ ವ್ಯವಸ್ಥೆ ಮಾಡಬೇಕು. ರಸ್ತೆಗೆ ತೀರಾ ಪಕ್ಕದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಅಸಮರ್ಪಕ ವಿನ್ಯಾಸ, ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
ರಸ್ತೆ ಸುರಕ್ಷಕ್ಷತಾ ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸಿ ಅಹವಾಲು- ಸಲಹೆ ಆಲಿಸಬೇಕು. ಮುಖ್ಯರಸ್ತೆ ಪ್ರವೇಶಿಸುವಲ್ಲಿ ಒಳರಸ್ತೆಗಳಿಗೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು. ಎಲ್ಲ ವಾಹನ ಅಪಘಾತ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಸೂಚನ ಫಲಕ ಅಳವಡಿಕೆ ಮತ್ತಿತರ ಕ್ರಮ ಕೈಗೊಳ್ಳಬೇಕು.
ಅತೀವೇಗದ ಚಾಲನೆಗೆ ಪ್ರಕರಣ ನಗರದಲ್ಲಿ ವಾಹನಗಳಿಗೆ ವೇಗಮಿತಿ ಇದೆ. ಅತಿಯಾದ ವೇಗದಲ್ಲಿ ವಾಹನ ಚಲಾಯಿಸಿದರೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ವೇಗಮಿತಿ ನಿಯಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
– ಗೀತಾ ಕುಲಕರ್ಣಿ, ಎಸಿಪಿ,
ಸಂಚಾರ ವಿಭಾಗ, ಮಂಗಳೂರು