Advertisement

“ಆತ್ಮ ಕಥನ”ಕುತೂಹಲ

10:10 AM Mar 02, 2020 | mahesh |

ನಮ್ಮಲ್ಲಿ ಆತ್ಮಕಥನಗಳ ದೊಡ್ಡ ಪರಂಪರೆಯೇ ಇದೆ. ಮರಾಠಿ ಭಾಷೆಯಲ್ಲಂತೂ ಆತ್ಮಕತೆ ಎಂದರೆ ಕೇವಲ ಒಬ್ಬ ವ್ಯಕ್ತಿಯ ಅನುಭವದ ಬರಹವಲ್ಲ , ಸಾಮಾಜಿಕ ಸಂಕಥನವೂ ಹೌದು. ಇತ್ತೀಚೆಗೆಯಂತೂ ಅನ್ಯಾನ್ಯ ಕ್ಷೇತ್ರಗಳ ಮಂದಿ ಆತ್ಮಕತೆಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಹೇಳಿಕೇಳಿ, “ಸೆಲ್ಫಿ’ ಮನಸ್ಥಿತಿ ಎಲ್ಲೆಡೆ ಆವರಿಸುವ ಈ ದಿನಗಳಲ್ಲಿ ಆತ್ಮಕತೆ ಎಂದರೆ ಏನು ಎಂಬುದನ್ನು ಹೊಸ”ಬಗೆ’ಯಲ್ಲಿ ಕೇಳಿಕೊಳ್ಳುವ ಅಗತ್ಯ ಇದೆಯಲ್ಲವೆ? ಸಾಹಿತಿಗಳು ಆತ್ಮಕತೆ ಯಾಕೆ ಬರೆಯಬೇಕು? ಆತ್ಮಕತೆ ಎಂದರೆ ಆತ್ಮಮೋಹವೆ? ಆತ್ಮವಿಮರ್ಶೆಯೆ? ಆತ್ಮವಿಮುಖತೆಯೆ? ಈ ಕುರಿತು ಕನ್ನಡದ ಜನಪ್ರೀತಿಯ ಬರಹಗಾರ ಜಯಂತ ಕಾಯ್ಕಿಣಿ ಪುಟ್ಟ ಟಿಪ್ಪಣಿ ಬರೆದಿದ್ದಾರೆ.

Advertisement

ಸ್ವತಃ ಕಥೆ, ಕಾದಂಬರಿ, ಕಾವ್ಯ ಇತ್ಯಾದಿಗಳನ್ನು ಜೀವನದುದ್ದಕ್ಕೂ ಬರೆದುಕೊಂಡು ಬಂದ ಕೆಲವು ಲೇಖಕರಿಗೆ ಯಾವುದೋ ಒಂದು ಹಂತದಲ್ಲಿ “ಆತ್ಮಕಥೆ’ಯನ್ನು ಬರೆಯಬೇಕು ಅಂತ ಏಕೆ ಅನಿಸುತ್ತದೆ ಎಂಬುದು ನನ್ನ ಕುತೂಹಲ. ಏಕೆಂದರೆ, ಅವರ ಕಥೆ, ಕಾದಂಬರಿಗಳಲ್ಲಿ ಅವರ ಆತ್ಮಕಥನದ ಎಳೆಗಳೇ ಅಥವಾ ಜೀವಾಂಶಗಳೇ ಇನ್ನೂ ವ್ಯಾಪಕವಾದ ಸಂಯುಕ್ತ ಸಾಮಾಜಿಕ ಆವರಣದಲ್ಲಿ ವಿಸ್ತರಣೆಗೊಂಡು ಒಂದು ಹೊಸ ಆತ್ಮವಿಮುಖ ನೆಲೆಗೆ ತೇರ್ಗಡೆ ಹೊಂದಿರುತ್ತವೆ. ಇಂಥ ಸಂವೇದನಾಶೀಲ ವ್ಯಾಪಕ ನೆಲೆಗೆ ಹೋದ ಮೇಲೆ ಮತ್ತೆ ಆ ಲೇಖಕನಿಗೆ ತನ್ನ ಖಾಸಗಿ ದಿನಚರಿ ಪುಟಗಳನ್ನು ಇತರರಿಗೆ ತೋರಿಸಬೇಕು ಅಂತೇಕೆ ಅನಿಸುತ್ತದೆ !

ಹೀಗಾಗಿ, ಸಾಕಷ್ಟು ಕತೆ-ಕಾದಂಬರಿಗಳನ್ನು ಬರೆದಿರುವ ಸಾಹಿತಿಗಳ ಆತ್ಮಕಥನ ನನಗಂತೂ ವಿಶೇಷ ಅನಿಸುವುದಿಲ್ಲ. ಬದಲಿಗೆ ಎಂದೂ ಸಾಹಿತ್ಯವನ್ನೇ ಬರೆದಿರದವರ “ಆತ್ಮಕಥನ’ದ ಕುರಿತು ನನಗೆ ಸೆಳೆತ, ತಾದಾತ್ಮ ಜಾಸ್ತಿ. ಒಬ್ಬ ರೈತನೋ, ವಿಜ್ಞಾನಿಯೋ, ಸೂಲಗಿತ್ತಿಯೋ, ಶಿಕ್ಷಕಿಯೋ ಅಕ್ಷರ ಲೋಕದಿಂದ ವಂಚಿತ ಸಮುದಾಯದ ಅಕ್ಷರಸ್ಥನೋ, ವಲಸೆಗಾರನೋ, ಸಂಗೀತಗಾರನೋ, ಮೀನುಗಾರ್ತಿಯೋ… ಹೀಗೆ “ಅಸಾಹಿತ್ಯಿಕ’ ನೆಲೆಯಿಂದ ಬರುವ ಆತ್ಮಕಥನಗಳ ಜೀವನಸತ್ವವೇ ಬೇರೆ, ವಿಕಾಸ ವಿನ್ಯಾಸಗಳೇ ಬೇರೆ. ಮೂರ್ತಿ ರೂಪಣೆ ಅಥವಾ ಮೂರ್ತಿ ಭಂಜನೆ ಇವೆರಡರ ಹಂಗಿಲ್ಲದ, ಆತ್ಮಿಕ ಸ್ನಾನಗಳಂಥ ಬರವಣಿಗೆಗಳು ಅವಾಗಿರುತ್ತವೆ. ಅವು ನಮ್ಮೊಳಗಿನ “ಕದ್ದು ಪಕ್ಕದ ಮನೆಯಲ್ಲಿ ಇಣುಕುವ’ ಪ್ರವೃತ್ತಿಯಿಂದ ನಮ್ಮನ್ನೆ ಬಿಡುಗಡೆಗೊಳಿಸುವಂಥ ಶಕ್ತಿಯನ್ನು ಹೊಂದಿರುತ್ತವೆ. ನಿಜವಾದ ಆತ್ಮಕಥನ ನಮ್ಮೊಳಗಿನ ಕಛಿಛಿಟಜಿnಜ ಠಿಟಞ ಗೆ ಕುಮ್ಮಕ್ಕು ಕೊಡುವುದಿಲ್ಲ.

ಬೇಂದ್ರೆ ಆತ್ಮಕಥೆ ಬರೆಯಲೇ ಇಲ್ಲ. ಹುಡುಕಿಕೊಂಡು ಹೋದರೆ ಮನೋಹರ ಗ್ರಂಥಮಾಲೆಯ ಮನ್ವಂತರದ ಒಂದು ವಿಶೇಷಾಂಕದಲ್ಲಿ ಕೆಲವು ಪುಟ ಅವರ ಆತ್ಮಕಥನಾತ್ಮಕ ಟಿಪ್ಪಣಿಗಳು ಸಿಗುತ್ತವೆ. ಕೆಲವರುಷಗಳ ಹಿಂದೆ ತಮ್ಮ ಆತ್ಮಕಥೆ ಬರೆದ ಜಿ.ಎಸ್‌. ಆಮೂರ್‌ ಅವರು ಆ ಅನುಭವದ ಕುರಿತು ಕೇಳಿದಾಗ- “ಇದೊಂದು ನೋವಿನ ಪಯಣ. ಒಮ್ಮೆ ಅನುಭವಿಸಿ ಆದ ಸಂಗತಿಗಳನ್ನೇ ಮತ್ತೂಮ್ಮೆ ಯಾಕೆ ಅನುಭವಿಸಬೇಕು?’ ಎಂದರು. ನನ್ನ ತಮ್ಮ ಶಂಕರ ಬರೆದ ಅನಂತನಾಗ್‌, ಅದರ ಪುಸ್ತಕ ರೂಪದ ಹೊಸ ಆವೃತ್ತಿ ಬರುವ ಸಂದರ್ಭದಲ್ಲಿ ಅದರ ಪ್ರೂಫ್ ನೋಡಲು ಕೂಡ ಒಪ್ಪಲಿಲ್ಲ. ಇನ್ನೊಮ್ಮೆ ಆ ಅನುಭವಗಳ ಮೂಲಕ ಹಾಯುವುದು ಕಷ್ಟ ಅಂತ. ಹೋದ ವಾರ ತೀರಿಕೊಂಡ ಉತ್ತರಕನ್ನಡದ ಕವಿ ವಿಡಂಬಾರಿ (ಅಂಚೆ ಪೇದೆಯ ಆತ್ಮಕಥನ ಬರೆದವರು) ಹಿಂದೊಮ್ಮೆ ಸಿಕ್ಕಾಗ, “ಪ್ರತೀ ಸಲ ಮತ್ತೆ ಅದನ್ನು ಓದುವಾಗ ಬರೆಯದೇ ಹೋದ ಸಂಗತಿಗಳೇ ರಾಶಿ ರಾಶಿ ನೆನಪಾಗಿ ಕಾಡ್ತಾವೆ’ ಎಂದರು. (ನಮ್ಮ ನಡುವಿನ ಅಪೂರ್ವ ಆತ್ಮಕತೆಗಳ ಬಗ್ಗೆ ಗೆಳೆಯ ರಹಮತ್‌ ತರೀಕೆರೆ, ದೇಶಕಾಲ ದ 14ನೆಯ ಸಂಚಿಕೆಯಲ್ಲಿ ಬರೆದಿರುವ ಲೇಖನವನ್ನು ಆಸಕ್ತರು ಹುಡುಕಿಕೊಂಡು ಓದಲೇಬೇಕು.)

ನನ್ನ ತಂದೆ ಗೌರೀಶರು ಮಾತಿನಲ್ಲಿ ಹಳೆಯ ನೆನಪುಗಳನ್ನು ತುಂಬಾ ಹೇಳುತ್ತಲೇ ಇರುತ್ತಿದ್ದರು. ಒಮ್ಮೆ ಅವರು ಹಿಂದೊಮ್ಮೆ ಹೇಳಿದ ನೆನಪನ್ನೇ ಇನ್ನೊಮ್ಮೆ ಹೇಳಿದಾಗ ಅದು ಸ್ವಲ್ಪ ಬೇರೆ ಇತ್ತು. “ನೀವು ಆವತ್ತು ಹೇಳಿದಾಗ ಬೇರೆ ಇತ್ತು. ಈವತ್ತು ಬೇರೆ ಆಗಿದೆಯಲ್ಲ’ ಎಂದು ನಾನು ಕೇಳಿದಾಗ, “ಅದು ಅಂದಿನ ನೆನಪು, ಇದು ಇಂದಿನ ನೆನಪು’ ಎಂದರು! ಮತ್ತು ಅವರು ಪ್ರಾಮಾಣಿಕವಾಗಿಯೇ ಪ್ರಾಂಜಲವಾಗಿಯೇ ಮಾತಾಡುತ್ತಿದ್ದರು. ನೆನಪು ಅನ್ನೋದು ಈಗಿನ ಸತ್ಯ. ಅದು ನಮಗೆ ಈಗ ಆಗ್ತಿದೆ ಅಂದಾಗ ಅದು ಇಂದಿನ ಹಂಗಿನಲ್ಲೇ ಇರುತ್ತದೆ. ಇಂದಿನ ಯಾವುದೋ ಪ್ರಚೋದನೆಗೆ ತಕ್ಕುದಾದ ಮೈಯನ್ನು ಪಡೆಯುತ್ತ ಅದು ಮೂಡುತ್ತದೆ. ನೆನಪು ಅನ್ನೋದು “ಎಂದಿನ’ ಮರದಲ್ಲಿ “ಇಂದು’ ಅರಳಿದ ಹೂವು. ಇಂದಿನ ತೇವ, ಗಾಳಿ, ಬೆಳಕಿನ ಹಂಗೇ ಅದರ ಜೀವಾಳ. ಹಾಗಾದರೆ ಆತ್ಮಕಥನ ಬರೆಯುವಾಗಿನ, ಕಥನದಲ್ಲಿ ಬರುವ ಸಂವೇದನೆ ಇಂದಿನದೋ, ಅಂದಿನದೋ? ಆತ್ಮಕಥನ ಬರೆಯುವಾಗ, ಬಾಲ್ಯದ ಘಟನೆಗಳು ಬಂದರೆ, ಅದನ್ನು ಅನುಭವಿಸಿಕೊಂಡು ಹಂಚಿಕೊಳ್ಳುವ ಮನಸ್ಸು ಇಂದಿನದೋ, ಬಾಲ್ಯಧ್ದೋ?

Advertisement

“ನನ್ನ ಬದುಕಿನ ದಾರಿಯನ್ನು ಆತ್ಮವಿಮರ್ಶೆ ಮಾಡಲು ಬರೆದಿದ್ದೇನೆ’ ಎನ್ನುವ ಕಥನಕಾರ, ಬಹುಶಃ ಒಂದರ್ಥದಲ್ಲಿ, ತನ್ನನ್ನು ರೂಪಿಸಿದ ಸಂಗತಿಗಳನ್ನು , ಸನ್ನಿವೇಶಗಳನ್ನು , ಮನಸ್ಸಿನಲ್ಲುಳಿದಿರುವ ಪ್ರತಿಮೆ, ಚಿತ್ರ, ರೂಹುಗಳನ್ನು ಮತ್ತೆ ಮನಸ್ಸಿನಾಳದಿಂದ ಬಗೆದು ತೆಗೆಯುತ್ತ, ಅದಕ್ಕೆ ವಶನಾಗುತ್ತಿರುವಾಗಲೇ, ಅದರಿಂದ ಬಿಡುಗಡೆಗೊಳ್ಳಲೂ ಅದೇ ಕಾಲಕ್ಕೆ ಪ್ರಯತ್ನಿಸುತ್ತಿದ್ದಾನೆ. ಇಲ್ಲದಿದ್ದರೆ ಅವನು ಅದನ್ನು ಶೀರ್ಷಿಕೆ ಕೊಟ್ಟು ಪ್ರಕಾಶಕರಿಗೆ ಕೊಟ್ಟು ಚಂದ ಮುದ್ರಣ ಮಾಡಿಸಿ ಬೆಲೆ ಚೀಟಿ ಅಂಟಿಸಿ ಪುಸ್ತಕದ ಅಂಗಡಿಗೆ ಕಳಿಸುತ್ತಿರಲಿಲ್ಲ. “ಇದು ನನ್ನದು ಹೌದು, ಆದರೆ ನನ್ನದು ಮಾತ್ರ ಅಲ್ಲ, ಸಮಯದ್ದು, ಯಾರಿಗೂ ನಿಲುಕಬಹುದಾದದ್ದು…’ ಎನ್ನುವ ನಂಬಿಕೆ ಮತ್ತು ಸಾಮಾಜಿಕ ಋಣ ಇದೆ ಅಲ್ಲಿ. ಮನುಜಲೋಕದ ಸಂಯುಕ್ತ ಕೌಟುಂಬಿಕತೆಯೇ ಈ “ಹಂಚಿಕೊಳ್ಳುವ’ ಸಲಿಗೆಯನ್ನು ಪಯಣಿಗನಿಗೆ ಕೊಡುತ್ತದೆ.

ಆತ್ಮಕಥನ ಬರೆಯುವುದೆಂದರೆ ಬೀದಿಗಾಯಕನೊಬ್ಬ ಕೊರಳಿಗೆ ಹಾರ್ಮೋನಿಯಂ ಕಟ್ಟಿಕೊಂಡು ಹಾಡುತ್ತ ನಡೆದಂತೆ. ಆ ಹಾರ್ಮೋನಿಯಂ ಹಗುರವಲ್ಲ. ಮಣಭಾರ. ಕೊರಳಿಗೆ ಬಿದ್ದ ಸಂಸಾರದ ಭಾರ ಅದು. ಆದರೆ, ಅದರಿಂದಲೇ ಸಂಗೀತವನ್ನು ಹೊಮ್ಮಿಸಿ ಅವನು ಹಾಡುತ್ತಾನೆ. ಒಂದು ಘನವಾದ ಆತ್ಮ ವಿಮುಖ ಕ್ಷಣದಲ್ಲಿ , ಆರ್ತತೆಯಲ್ಲಿ ಅದು ಎಲ್ಲರ ಸೊಲ್ಲಾಗುತ್ತದೆ.
(ಸಂವಾದಕ್ಕೆ ಸ್ವಾಗತ)

ಜಯಂತ ಕಾಯ್ಕಿಣಿ

Advertisement

Udayavani is now on Telegram. Click here to join our channel and stay updated with the latest news.

Next