Advertisement

ಕಣಿವೆಯ ನಾಡಿನ ಹಾಡು

10:26 PM Aug 10, 2019 | mahesh |

ಓಡಾಡಿ, ಕಣಿವೆ ನಾಡಿನಲ್ಲಿ ಕ್ಷೇತ್ರಾಧ್ಯಯನ ಮಾಡಿ ರಚಯಿತವಾದ ಕನ್ನಡ ಕಾದಂಬರಿ “ಕಶೀರ’ ಕಳೆದ ವರ್ಷ ಪ್ರಕಟಗೊಂಡಿತ್ತು. ಅಪಾರ ಜನಪ್ರಿಯತೆ ಪಡೆದ ಈ ಕಾದಂಬರಿ ಅತ್ಯಂತ ಕಡಿಮೆ ಅವಧಿಯಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆ. ದೇಶದ ಎಲ್ಲರ ಗಮನ ಕಾಶ್ಮೀರದತ್ತ ನೆಟ್ಟಿರುವ ಈ ದಿನಗಳಲ್ಲಿ ಈ ಕಾದಂಬರಿ ಹೆಚ್ಚಿನ ಮಹಣ್ತೀವನ್ನು ಪಡೆಯುತ್ತದೆ. ಭಾರತೀಯ ಅಖಂಡ ಸಂಸ್ಕೃತಿಯಲ್ಲಿ ಶಿಖರೋಪಾದಿಯಲ್ಲಿರುವ ಕಾಶ್ಮೀರದ ಕಥನವನ್ನು ಮನೋಜ್ಞವಾಗಿ ನಿರೂಪಿಸುತ್ತದೆ. ಈ ಕಾದಂಬರಿಯನ್ನು ಬರೆದ ಸಹನಾ ವಿಜಯಕುಮಾರ್‌ ಅವರೊಂದಿಗಿನ ಮಾತುಕತೆಯಿದು…

Advertisement

ನಿಸರ್ಗ ರಮಣೀಯತೆಯ ಸುಂದರ ಕಾಶ್ಮೀರದ ಗಿರಿಕಂದರಗಳಲ್ಲಿ ಹೊಸತನದ ಗಾಳಿ ಬೀಸುತ್ತಿದೆ. ಚರಿತ್ರೆಯ ವಿನೂತನ ಪಥದಲ್ಲಿ ಉತ್ತರದ ಈ ತುತ್ತತುದಿಯ “ರಾಜ್ಯ’ ಅಲ್ಲ , ಇದೀಗ “ಕೇಂದ್ರಾಡ ಳಿತ’ ಪ್ರದೇಶ ಅಡಿಯಿಡುತ್ತಿದೆ. ಬೌದ್ಧರ ನೆಲೆವೀಡಾದ ಲಡಾಕ್‌ ನಿಂದ ಬೇರ್ಪಟ್ಟು ಹಿಂದೂ-ಮುಸ್ಲಿಂ ಸಾಂಗತ್ಯದ ಹೊಸ ಬದುಕು ಜಮ್ಮು-ಕಾಶ್ಮೀರದಲ್ಲಿ ಟಿಸಿಲೊಡೆಯಬೇಕಾಗಿದೆ. “ನಾವೊಂದು ಪ್ರತ್ಯೇಕತೆಯ ನೆಲ’ ಎಂಬ ಉತ್ತರದ ತತ್ತರಿಸುವ ಭೀತಿವಾದದ ನೆಲೆಯೇ ಇಂದು ಕುಸಿದಿದೆ; ವಿಶೇಷ “ಮಾನ, ಸ್ಥಾನ’ ಎಂದೆಲ್ಲ ಬೊಬ್ಬಿರಿಯುವ ಮಂದಿಯ ಸ್ಥೈರ್ಯ ಚಳಿಗಾಲದ ದಾಲ್‌ ಸರೋವರದಂತೆ ಹೆಪ್ಪುಗಟ್ಟಿದೆ. 370ರ ವಿಧಿ, ಅದಕ್ಕೆ ಸ್ಪಂದಿಸಿ ನಿಂತು 35ನೇ ವಿಧಿ ಎಲ್ಲವೂ ಇದೀಗ ಇತಿಹಾಸದ ಗರ್ಭದಲ್ಲಿ ಉಡುಗಿಹೋಗಿದೆ. ನೇರವಾಗಿ ನವದೆಹಲಿಯ ಕೃಪಾ ಛತ್ರದಡಿಯಲ್ಲಿ ನವಕಾಶ್ಮೀರದ ಕೇಸರಿಹೂಗಳು ಅರಳಬೇಕಾಗಿವೆ. ಕಲ್ಲು- ಕೋವಿಗಳ ಸಪ್ಪಳದ ಬದಲು, ಅಲ್ಲಿನ ಸರೋವರಗಳಲ್ಲಿ ದೋಣಿಮನೆಗಳ ಝಳುಝಳು ನಿನಾದ ಪುಟಿದೇಳಬೇಕಾಗಿದೆ. ಇವೆಲ್ಲ ಕನಸೋ, ನನಸೋ ಎಂಬಂತೆ, ಭಾರತದ ನೆತ್ತಿಯ ಮೇಲೆ ಇದ್ದ ಭೀತಿವಾದದ ಕತ್ತಿಯನ್ನು ಸಶಕ್ತತೆಯಿಂದ ಎತ್ತಿ ಬಿಸುಟ ದಿಟ್ಟ

ಕೇಂದ್ರ ಸರಕಾರ, ಸಂಸತ್ತಿನ ಪ್ರಚಂಡ ಕರತಾಡನದ ಕರಡು ಮಸೂ ದೆಯ ಅನುಮೋದನೆ ನಿಜಕ್ಕೂ ಅದ್ಭುತ. ಶಾಂತಿಯ ಆಹ್ಲಾದ ಕಿರಣಗಳು ನಯನ ಮನೋಹರ ಕಾಶ್ಮೀರ ಶಾಲುಗಳ ಮೇಲೆ ಝಗಝಗಿ ಸುವ ಸುವರ್ಣ ಸಂಧಿಕಾಲಕ್ಕೆ ನಾವಿಂದು ಸಾಕ್ಷಿ ಆಗಿದ್ದೇವೆ!

1969ರಲ್ಲಿ ಬಿ.ಎ. ವಿದ್ಯಾರ್ಥಿಯಾಗಿ ಭಾರತ ಸಂವಿಧಾನದ ಪುಟಗಳನ್ನು ತಿರುಹುತ್ತಿದ್ದಾಗ ಇದೇ 370ರ ವಿಧಿ “ತಾತ್ಕಾಲಿಕ’ ಎಂಬ ಶಿರೋನಾಮೆ ಹೊಂದಿ ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವ ಆವಶ್ಯಕತೆಯಾದರೂ ಏನಿತ್ತು ಎಂಬ ಪ್ರಶ್ನೆ ಕಾದಿತ್ತು. ಇದೀಗ ಸರಿಸುಮಾರು ಅರ್ಧ ಶತಮಾನದ ಬಳಿಕ ನಮ್ಮಿ ಒಕ್ಕೂಟದ ಇತರ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮಿತ್ರಕೂಟದ ಸಹಪಂಕ್ತಿಯಲ್ಲಿ ಇರುವಿಕೆ ಅತ್ಯಂತ ಮುದ ನೀಡಿದೆ.

ರಾಜಾಗುಲಾಬ್‌ ಸಿಂಗರಿಂದ ಆರಂಭಗೊಂಡ ಡೋಗ್ರಾ ರಾಜವಂಶದ ಆಳ್ವಿಕೆ ಡಾ. ಕರುಣಸಿಂಗರ ಸದರ್‌-ಇ. ರಿಯಾಸತ್‌ ಕೊನೆಗೊಳ್ಳುವುದರೊಂದಿಗೆ ಅಸ್ತಂಗತವಾಯಿತು. ಶೈವ, ಬೌದ್ಧ ಪ್ರಾಬಲ್ಯದ, ಒಂದು ಕಾಲದ ಹಿಂದೂ ವೈದಿಕ ಧರ್ಮ ಉಚ್ಛಾ†ಯ ದಿನಗಳು ಇಂದು ಅಸ್ತಂಗತವಾಗಿ, ಕಾಶ್ಮೀರದ ಉದ್ದಕ್ಕೂ ಪಳೆಯುಳಿಕೆ ಗಳಂತಾಗಿವೆ. ಕಾಶ್ಯಪ ಋಷಿಗಳ ನಾಮಧೇಯದಿಂದಲೇ ಶುಭಾರಂಭ ಗೊಂಡ “ಕಾಶ್ಯಪಮಾರ್‌’ ಸುಮಾರು 8000 ವರ್ಷಗಳ ಸುದೀರ್ಘ‌ ಇತಿಹಾಸದ ನೆಲ.

Advertisement

ಸ್ವತಃ ಕಾಶ್ಮೀರದ ಕಣಿವೆಯಲ್ಲಿ ಸಂಚರಿಸಿದ ಅನುಭವವನ್ನು ಒಂದಿಷ್ಟು ಹಂಚಿಕೊಳ್ಳುತ್ತೇನೆ. “ಗುರು’ ಎಂಬ ಸರ್‌ನೆಮ್‌ ಹೊಂದಿದ ಸಭ್ಯ ಮುಸ್ಲಿಂ ಮನೆಯಲ್ಲೇ ಸ್ವಚ್ಛ ಪರಿಸರ, ಶುದ್ಧ ಸಸ್ಯಾಹಾರ (ಅದು ರಮ್ಜಾನ್‌ ಉಪವಾಸದ ಸಂದರ್ಭವೂ ಆಗಿತ್ತು)ದ, ಅತ್ಯಂತ ಪ್ರೀತಿ ಪುರಸ್ಸರ ಆತಿಥ್ಯದ ಸವಿ ಉಂಡವ ನಾನು. “ಸರ್‌, 5 ಗಂಟೆಯ ಒಳಗೇ ಮನೆ ಸೇರಿಕೊಳ್ಳಿ. ಯುನಿವರ್ಸಿಟಿಯ ಲೈಬ್ರೆರಿ ವರ್ಕ್‌, ಪ್ರಾಧ್ಯಾಪಕರೊಂದಿಗೆ ಸಂದರ್ಶನ ಎಂದೆಲ್ಲಾ ಜಾಸ್ತಿ ಹೊತ್ತು ತೆಗೀಬೇಡಿ. ಇಲ್ಲೆಲ್ಲ ಉಗ್ರಗಾಮಿಗಳ, ಸೈನಿಕರ ಮಧ್ಯೆ ಕ್ರಾಸ್‌ ಫೈರಿಂಗ್‌ ಆಗುತ್ತದೆ’ ಎಂದ ಅಕ್ಕರೆಯ ಮಾತೃ ಹೃದಯದ ಗುರೂಪತ್ನಿಯ ಧ್ವನಿ ಇಂದಿಗೂ ನನ್ನ ಕಿವಿಯಲ್ಲಿ ಅನು ರ ಣಿ ಸು ತ್ತಿದೆ. ವಿಶಾಲ, ಮಹಡಿಯ ಮನೆ, ಚಳಿ ಸೋಂಕದಿರಲಿ ಎಂದು ಹಲಗಿ ಹಾಸಿನ ನೆಲ, ಪ್ರತ್ಯೇಕ ಕೊಠಡಿ, ಸೇಬು, ಬ್ರೆಡ್‌, ಹಾಲು ತುಂಬಿಸಿ ಚೀಲ ಕಟ್ಟಿಕೊಟ್ಟ ಆ ಅಕ್ಕನ ಪ್ರೀತಿ- ಇವೆಲ್ಲವೂ ಕಾಶ್ಮೀರದ ನಿಸರ್ಗ ರಮಣೀಯತೆಯ ರೀತಿಯಲ್ಲಿಯೇ ಹಸಿರು ನೆನಪು. “”ಬನ್ನಿ, ನಿಮಗೆ ಶಹಜಹಾನ್‌ ನಿರ್ಮಿಸಿದ ಮೊಗಲ್‌ ಗಾರ್ಡನ್‌ ತೋರಿಸುತ್ತೇನೆ” ಎಂದು ಆಕೆಯೇ ಅಕ್ಕರೆಯಲ್ಲಿ ತಿರುಗಾಡಿಸಿದ್ದರು. “”ನೋಡಿ ನನ್ನ ಅಕ್ಕನ ಮಗಳು ನಿಮ್ಮ ಮಂಗಳೂರಿನಲ್ಲಿ ಆರಾಮದಲ್ಲಿ ಕಲಿಯುತ್ತಿದ್ದಾಳೆ. ಹಾಗಾಗಿ, ನಿಮ್ಮ ಎಲ್ಲಾ ಸುರಕ್ಷೆ, ಉಪಚಾರ ನಮ್ಮ ನೈತಿಕ ಹೊಣೆಗಾರಿಕೆ. ನಮ್ಮ ಓರ್ವನೇ ಮಗ ವಿದೇಶದಲ್ಲಿ ಕಲಿಯುತ್ತಿದ್ದಾನೆ. ನೀವೇನೂ ಸಂಕೋಚ ಮಾಡಬೇಡಿ” ಎಂದು ಆ ಸಹೋದರಿ ನುಡಿದ ಮಾತು ಮಾಣಿಕ್ಯದಂತೆ ನನ್ನ ಪಾಲಿಗೆ ನಯಾ ಕಾಶ್ಮೀ ರ ವನ್ನು ತೆರೆ ಸಿತು. ಅಲ್ಲಿ ಮಹಿಳೆಯರು ಬುರ್ಖಾ ತೊಡುವುದಿಲ್ಲ, ಬದಲಾಗಿ ಶುಭ್ರ ಮೇಲುಡುಗೆ ಧರಿಸುತ್ತಾರೆ. ಆದರೆ, ಇದೀಗ ಭೀತಿವಾದಿಗಳ “ಜುಲುಂ’ ಹೆಚ್ಚಾಗಿ ಆಕರ್ಷಣೀಯ ಕಾಶ್ಮೀರಿಗಳು ತಮ್ಮ ಉಡುಗೆತೊಡುಗೆಗಳಲ್ಲಿ ಅನಿವಾರ್ಯ ಬದಲಾವಣೆ ತಂದೊಡ್ಡುತ್ತಿದ್ದಾರೆ.

ಈ ಎಲ್ಲಾ ವಿವರಣೆಗಳ ಜತೆಗೆ ನನ್ನ ಆತಿಥೇಯ ಮಹಮ್ಮದ್‌ ಗುರು ವಿದಾಯದ ದಿನದಂದು ಶಂಕರಬೆಟ್ಟಕ್ಕೆ ಕರೆದೊಯ್ಯುವಾಗ ಹೇಳಿದ ಮಾತುಗಳು ಇನ್ನೂ ನೆನ ಪಿ ವೆ. ನಾನು ಅವರ ಗುರು ನಾಮವಾಚಕದ ಹಿನ್ನೆಲೆಯನ್ನು ಸಲುಗೆಯಿಂದ ಪ್ರಶ್ನಿಸಿದೆ. ಅದಕ್ಕವರು, “”ನೋಡಿ ಸರ್‌, ನಮ್ಮ ಹಿರಿಯರು ಆಚಾರ್ಯ ಅಥವಾ ಪುರೋಹಿತ ವರ್ಗದವರು. ಅದೇ ರೀತಿ ಇಲ್ಲಿನ ಎಲ್ಲಾ ಮುಸ್ಲಿಂ ಹೆಸರುಗಳ ಮುಂದೆ “ಭಟ್‌’ ನಾಮವಾಚಕತೆ ಅವರ ಪಂಡಿತ ಪೂರ್ವಜರಿಂದ ಬಳುವಳಿಯಾಗಿ ಬಂದುದು. ಇನ್ನು ಕೆಲವರಿಗೆ “ವಾನಿ’ ಅರ್ಥಾತ್‌ ಸರಸ್ವತಿಯ ಅಭಿದಾನವಿದ್ದು ಅವರು “ಉಪಾಧ್ಯಾಯ’ ವರ್ಗದವರು. ನೋಡಿ ಹಿಂದೆ ನಾವು ಸಣ್ಣವರಿದ್ದಾಗ, ಎಲ್ಲಾ ಪಂಡಿತ ಮಕ್ಕಳೊಂದಿಗೆ ಬೆರೆತು ಆಟವಾಡುತ್ತಿದ್ದೆವು. ಆ ಶಂಕರಬೆಟ್ಟಕ್ಕೆ ಆರಾಮದಲ್ಲಿ ಹತ್ತಿ, ಇಳಿದು ಬರುತ್ತಿದ್ದೆವು. 1986ರವರೆಗೆ ಒಂದು ಬಿಂದು ರಕ್ತ ಕಂಡರೂ ಹೆದರಿ ಓಡುವ ಮಂದಿ ನಾವು. ನಿಜಕ್ಕೂ ನಮಗೆ ಈ ರಕ್ತಪಾತ, ಕಲ್ಲು ತೂರಾಟ, ಕೋವಿಯೊಂದಿಗೆ ಚೆಲ್ಲಾಟ ಬೇಡ. ನೆಮ್ಮದಿಯ ಬದುಕು, ಸಲೀಸಾದ ವ್ಯಾಪಾರ, ಕುಶಲಕಲೆಗಳಿಗೆ ಮಾನ್ಯತೆ, ಪ್ರವಾಸೋದ್ಯಮ ಬೇಕು. ಒಂದೆಡೆ ಪಾಕಿಸ್ತಾನಿ ಪ್ರಚೋದಿತ ಯುವಜನಾಂಗದಿಂದ ನಾವು ಬಳಲಿದ್ದೇವೆ. ಇನ್ನೊಂದೆಡೆ ಸೈನಿಕರ ಸರ್ಪಗಾವಲಿನಲ್ಲಿ ನಾವು ಮುದುಡಿಕೊಂಡಿದ್ದೇವೆ”
ಬೆಟ್ಟ ಹತ್ತಿ ಸಾಗುವವರೆಗೂ ನಿಟ್ಟುಸಿರಿನೊಂದಿಗೆ ನಮ್ಮ ಕಾರು ಪಯಣ ಸಾಗಿತ್ತು.

ಕಾಶ್ಮೀರದ ಬಗ್ಗೆ ಕನ್ನಡದಲ್ಲಿ ಕಾದಂಬರಿ ಬರೆಯಬೇಕೆಂದು ನಿಮಗೆ ಯಾಕೆ ಅನ್ನಿಸಿತು?
ಈ ಕಥಾವಸ್ತುವು ಕಾಶ್ಮೀರದ ಕುರಿತು ಅಧ್ಯಯನ ಮಾಡುವಾಗಲೇ ಬಲವಾಗಿ ಕಾಡಲಾರಂಭಿಸಿತ್ತು. ಬಹಳ ಹಿಂದಿನಿಂದಲೂ ಜ್ಞಾನೋಪಾಸನೆಯ ಕೇಂದ್ರವಾಗಿದ್ದ, ಅನೇಕ ದಾರ್ಶನಿಕ ಹಾಗೂ ಶಾಸ್ತ್ರಜ್ಞರನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಕಾಶ್ಮೀರದ ಇಂದಿನ ದುಃಸ್ಥಿತಿ ಕಾದಂಬರಿ ಬರೆಯಲು ಪ್ರೇರೇಪಿಸಿತು.

ಶಾರದೆಯನ್ನು “ಕಾಶ್ಮೀರ ಪುರವಾಸಿನಿ’ ಎಂದು ಬಣ್ಣಿಸಲು ಕಾರಣವಾದ ಅಂಶ ನಿಮ್ಮ ಅನುಭವಕ್ಕೆ ಬಂದಿತ್ತೆ ?
-ಇದನ್ನು ಅನುಭವಕ್ಕೆ ತಂದುಕೊಳ್ಳುವ ಪರಿಸ್ಥಿತಿ ಸದ್ಯಕ್ಕೆ ಕಾಶ್ಮೀರದಲ್ಲಿರಲಿಲ್ಲ. ಏಕೆಂದರೆ, ಶಾರದಾಪೀಠ ಇರುವುದು ಇಂದಿನ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ, ಭಾರತದ ವ್ಯಾಪ್ತಿಗೆ ಬರುವ ಕಾಶ್ಮೀರದಲ್ಲಿ ಬರೀ ಉಗ್ರವಾದ, ಕಲ್ಲೆಸೆತಗಳೇ. ಆದರೆ, ಶಾರದೆ ಕಾಶ್ಮೀರ ಪುರವಾಸಿನಿ ಎಂಬ ಉಲ್ಲೇಖ ಕಲ್ಹಣನ ರಾಜತರಂಗಿಣಿಯಲ್ಲೇ ದೊರಕುತ್ತದೆ. ಅಲ್ಲದೆ ಹಲವಾರು ಪೌರಾಣಿಕ ಕಥೆಗಳ ಹಾಗೂ ಸಂಶೋಧಕರ ಆಕರಗಳಿಂದ ಪುರಾವೆಗಳು ದೊರಕುತ್ತವೆ.

ಕಾಶ್ಮೀರ ಕ್ಷೇತ್ರಕಾರ್ಯದಲ್ಲಿ ನಿಮಗೇನಾದರೂ ತೊಂದರೆಯಾಗಲಿಲ್ಲವೆ?
ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡುವಾಗ ವಹಿಸಬೇಕಾದ ಮುಂಜಾಗ್ರತೆಗಳನ್ನು ಗಮನದಲ್ಲಿಟ್ಟುಕೊಂಡಿದ್ದರೂ ಒಂದೆರಡು ಬಾರಿ ಅಪಾಯಕರ ಸನ್ನಿವೇಶಗಳಿಂದ ಪಾರಾದೆವು ಎಂದು ಜೊತೆಗೆ ಕರೆದೊಯ್ದವರು ಹೇಳಿದರು. ಉಳಿದಂತೆ ಹೆಜ್ಜೆ ಹೆಜ್ಜೆಗೂ ಮುನ್ನೆಚ್ಚರಿಕೆ ಅತ್ಯಗತ್ಯ. ಭಾರತದ ಇತರ ನಗರಗಳಲ್ಲಿ ಓಡಾಡುವಂತೆ ಬಿಡುಬೀಸಾಗಿ ಮನಬಂದಲ್ಲಿ ಸಂಚರಿಸಲಾಗದು.

ಕಾದಂಬರಿಯ ಬದಲಿಗೆ ಇತಿಹಾಸ ಕೃತಿಯನ್ನೇ ಬರೆಯಬಹುದಿತ್ತಲ್ಲ…
-ಸಂವೇದನೆಗಳನ್ನು ಬಿಂಬಿಸಲು ಕಾದಂಬರಿಯೇ ಸೂಕ್ತ ಮಾಧ್ಯಮ. ಇದರಲ್ಲಿ ಬರುವ ಕೈಲಾಶ್‌ ಪಂಡಿತರ ಪಾತ್ರ ಅನುಭವಿಸುವ ವೇದನೆ, ಬಶೀರ್‌ ಅಹ್ಮದ್‌ರ ಪಾತ್ರ, ಅನುಭವಿಸುವ ಗೊಂದಲಗಳನ್ನು ಮಾಹಿತಿಯ ರೂಪದಲ್ಲಿ ಪ್ರಸ್ತುತಪಡಿಸಿದ್ದರೆ ಇಷ್ಟು ಪರಿಣಾಮಕಾರಿಯಾಗಿರುತ್ತಿರಲಿಲ್ಲ.
ಮೇಲಾಗಿ ಇದು ಕಾಶ್ಮೀರಿ ಹಿಂದೂಗಳ ನೈಜ ಅನುಭವ.
ಕಾದಂಬರಿಯಲ್ಲಿ ಕಲ್ಪನೆಗೆ ಅವಕಾಶವಿದೆಯಲ್ಲ?
ಈ ಕಾದಂಬರಿಯ ಎಲ್ಲ ಕಾಲ್ಪನಿಕ ಅಂಶಗಳು ಸತ್ಯಾಧಾರಿತವಾದದ್ದೇ. ಏಕೆಂದರೆ, 28 ವರ್ಷಗಳ ಹಿಂದೆ ಕೆಲ ಮತಾಂಧರು ಕಾಶ್ಮೀರಿ ಹಿಂದೂಗಳನ್ನು ತಮ್ಮ ಮನೆ-ಮಠಗಳನ್ನು ಬಿಟ್ಟು ಹೊರಡುವಂತೆ ಮಾಡಿದ್ದು ಕಲ್ಪಿತ ಘಟನೆಯಲ್ಲ. ಅದನ್ನು ಆಧರಿಸಿರುವುದರಿಂದ ಈ ಕೃತಿಯಲ್ಲಿ ಕಲ್ಪನೆ ಸತ್ಯದ ಎಲ್ಲೆ ಮೀರದಂತೆ ಮೂಡಿಬಂದಿದೆ.

ಅನುಚ್ಛೇದ 370, ನೆಹರೂ-ಗಾಂಧಿ-ಪಟೇಲ್‌ರ ವಿಚಾರಧಾರೆಗಳು- ಇತ್ಯಾದಿ ಚಾರಿತ್ರಿಕ ವಿಚಾರಗಳನ್ನು ಕಾದಂಬರಿಯಲ್ಲಿ ನಿರೂಪಿಸುವುದು ಸವಾಲೆನಿಸಲಿಲ್ಲವೆ?
-ಹೌದು, ಆದರೆ, ಕಾಶ್ಮೀರದ ಇಂದಿನ ದುಃಸ್ಥಿತಿಗೆ ಕಾರಣವಾಗಿರುವುದು ಅಂದಿನ ರಾಜಕಾರಣಿಗಳ ದೂರದೃಷ್ಟಿ ಹಾಗೂ ಇಚ್ಛಾನುಶಕ್ತಿಯ ಕೊರತೆ. ಅದನ್ನು ಗಣನೆಗೆ ತೆಗೆದುಕೊಳ್ಳದೆ ಬರೀ ಕಥೆಯ ರೂಪದಲ್ಲಿ ಹೇಳುವುದು ವಾಸ್ತವಕ್ಕೆ ದ್ರೋಹವೆಸಗಿದಂತಾಗುತ್ತದೆ. ಆದ್ದರಿಂದ ಪಾತ್ರಗಳಿಗೆ ಪೂರಕವೆನಿಸಿದ ಪ್ರಮಾಣದಲ್ಲಿ ಅಂದಿನ ರಾಜಕಾರಣಿಗಳ ಕೊಡುಗೆಯೂ ಅಲ್ಲಲ್ಲಿ ಪ್ರಸ್ತಾಪವಾಗುತ್ತದೆ.

ಕಶ್ಯಪ ಮಹರ್ಷಿ, ಶಂಕರಾಚಾರ್ಯರು, ಹೃದಯನಾಥ ಪಂಡಿತರು… ಹೀಗೆ ಪುರಾಣ-ಚರಿತ್ರೆ- ವರ್ತಮಾನಗಳನ್ನು ಒಂದು ನೂಲಿನಲ್ಲಿ ಹೇಗೆ ಹೆಣೆದಿರಿ?
-ಪುರಾಣ, ಚರಿತ್ರೆಗಳು ಒಂದನ್ನೊಂದು ಬೆಸೆದುಕೊಂಡೇ ಬಂದಿವೆ. ಭೌಗೋಳಿಕವಾಗಿ ಕಾಶ್ಮೀರ ನಮಗೆ ದೂರವೆನಿಸಿದರೂ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ದಕ್ಷಿಣ ಭಾರತದಿಂದ ಶಂಕರಾಚಾರ್ಯರು ಅಲ್ಲಿಗೆ ಹೋಗಿದ್ದು ಹಾಗೂ ಕೊಲ್ಕತಾದಿಂದ ವಿವೇಕಾನಂದರು ಅಲ್ಲಿಗೆ ಭೇಟಿ ನೀಡಿದ್ದು ತಿಳಿದುಬರುತ್ತದೆ. ಇರುವ ಕೊಂಡಿಗಳನ್ನು ಕಳಚದಂತೆ ಕಾಪಾಡಿಕೊಳ್ಳುವುದಷ್ಟೇ ನಮ್ಮ ಕೆಲಸ.

ಸಲೀಂನಂಥ ವಿಚಾರವಂತರು ಕಾಶ್ಮೀರದಲ್ಲಿ ಸಾಕಷ್ಟು ಮಂದಿ ಇದ್ದಾರೆಯೆ?
-ಹೌದು, ಸಾಕಷ್ಟು ಜನರಿದ್ದಾರೆ. ಆದರೆ ಪ್ರತ್ಯೇಕತಾವಾದಿಗಳ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳುವ ದಾರಿ ಕಾಣದೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಲಾರದೆ ಮೌನವಾಗಿದ್ದಾರೆ. ರಾಜಕೀಯ ಮೇಲಾಟದಿಂದಾಗಿ ವಿದ್ಯೆಯಿಂದ, ಉದ್ಯೋಗಾವಕಾಶಗಳಿಂದ ವಂಚಿತರಾಗಿರುವವರ ಸಂಖ್ಯೆ ಬಹು ದೊಡ್ಡದಿದೆ.

ಇತ್ತೀಚೆಗೆ ಕೇಂದ್ರ ಸರಕಾರವು 370 ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರವನ್ನು ಭಾರತದ ಅಖಂಡ ಭಾಗವೆಂದು ಹೇಳಿದೆ. ಇದೊಂದು ಚಾರಿತ್ರಿಕ ಬೆಳವಣಿಗೆ. ಈಗ ಬರೆಯುತ್ತಿದ್ದರೆ ಕಾದಂಬರಿಯಲ್ಲೇನಾದರೂ ಬದಲಾವಣೆಯಾಗುತ್ತಿತ್ತೆ?
-370ನೆಯ ವಿಧಿಯನ್ನು ರದ್ದುಗೊಳಿಸಿದ ತತ್‌ ಕ್ಷಣ ಚರಿತ್ರೆಯೇನೂ ಬದಲಾಗುವುದಿಲ್ಲ. 1947ರಿಂದಲೇ ಕಾಶ್ಮೀರದ ಸಮಸ್ಯೆ ನಮ್ಮನ್ನು ಬಾಧಿಸುತ್ತಿದೆ. 1990ರಲ್ಲಿ ಕಶ್ಮೀರೀ ಹಿಂದೂಗಳ ಕಗ್ಗೊಲೆಯಾಗಿದೆ. ಈಗ ಮಾಡಿರುವ ರಾಜಕೀಯ ನಿರ್ಧಾರ ಮಹಣ್ತೀದ್ದು ನಿಜ. ಆದರೆ, ಚರಿತ್ರೆಯ ನೆನಪು ಹಾಗೆಯೇ ಇರುತ್ತದೆ. ಇಂಥ ಚರಿತ್ರೆಯನ್ನಿಟ್ಟು ಕೊಂಡು ಬರೆದ ಕಾದಂಬರಿ ಹೀಗೆಯೇ ಇರಬೇಕಲ್ಲದೆ ಬದಲಾಗಲು ಸಾಧ್ಯವಿಲ್ಲ. ಚರಿತ್ರೆಯನ್ನು ಮರೆತಿದ್ದರಿಂದಲೇ ಈ ಸಮಸ್ಯೆ ಪರಿಹಾರ ಕಾಣುವಲ್ಲಿ ಇಷ್ಟು ತಡವಾದದ್ದು. ಚರಿತ್ರೆಯ ಭದ್ರ ಬುನಾದಿಯ ಮೇಲೇ ವರ್ತಮಾನ ಹಾಗೂ ಭವಿಷ್ಯಗಳ ನಿರ್ಮಾಣವಾಗಬೇಕಿರುವುದು. ಈಗ ಬರೆದಿದ್ದರೂ ಚರಿತ್ರೆಗೆ ಅಷ್ಟೇ ಮಹಣ್ತೀ ನೀಡುತ್ತಿದ್ದೆ.

ಇತ್ತೀಚೆಗಿನ ರಾಜಕೀಯ ಬೆಳವಣಿಗೆಯ ಬಳಿಕ ನಿಮ್ಮ ಕಾದಂಬರಿಯ ಜನಪ್ರಿಯತೆ ಅಧಿಕವಾಗಿದೆಯೆ?
-ನಿಜ. ತುಂಬ ಮಂದಿ ಫೋನ್‌ ಮಾಡಿ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ನನಗೆ ಸಂತಸವಾಗಿರುವುದು ಎರಡು ಕಾರಣಗಳಿಗೆ. ಮೊದಲನೆಯದು, ಈಗಾಗಲೇ ಕಾದಂಬರಿಯನ್ನು ಓದಿದ್ದವರಿಗೆ 370ನೇ ವಿಧಿಯ ರದ್ದತಿ ಎಂಥ ಮಹಣ್ತೀಪೂರ್ಣ ನಿರ್ಧಾರ ಎಂಬುದರ ಅರಿವಾಗಿದೆ. ಕಶ್ಮೀರೀ ಹಿಂದೂಗಳಷ್ಟೇ ತಾವೂ ಹರ್ಷಿಸಲು ಅವಕಾಶವಾಗಿರುವುದು ಕೃತಿಯನ್ನೋದಿ ಮೂಡಿದ ತಿಳಿವಳಿಕೆಯಿಂದ ಎಂದು ನನಗೆ ಸಂದೇಶಗಳ ಮುಖೇನ ತಿಳಿಸಿದ್ದಾರೆ. ಎರಡನೆಯದು, ಕಾದಂಬರಿಯಲ್ಲಿರುವ ಕಥೆಯ ಅಂಶಗಳನ್ನು ಮಾತ್ರವಲ್ಲದೆ, ಅದರಲ್ಲಿ ಒಡಮೂಡಿರುವ ಸಾಂಸ್ಕೃತಿಕ, ಐತಿಹಾಸಿಕ, ರಾಜನೈತಿಕ ಸತ್ಯಗಳನ್ನೂ ಓದಿ, ಜೊತೆಗೆ ನಾನು ಉಲ್ಲೇಖೀಸಿರುವ ಮೂಲ ಆಕರಗಳನ್ನು ಓದುವ ಉತ್ಸಾಹ ಹಲವರಲ್ಲಿ ಕಂಡದ್ದು. ಇಂಥ ಸಹೃದಯ ಓದುಗರಿಂದಾಗಿ ನನ್ನಲ್ಲಿ ಸಾರ್ಥಕ್ಯ ಮೂಡಿದೆ.

ಹೊಸ ಬೆಳವಣಿಗೆಯಿಂದಾಗಿ ಸಾಂಸ್ಕೃತಿಕವಾಗಿ ಏನು ಲಾಭವಾಗಿದೆ?
-ಈಗ ಭಾರತದ ವಶದಲ್ಲಿರುವ ಕಾಶ್ಮೀರದಲ್ಲಿ ಸಂಸ್ಕೃತಿಯ ಕುರುಹುಗಳೇನೂ ಇಲ್ಲ. ಇದ್ದ ದೇವಾಲಯಗಳನ್ನೆಲ್ಲ ನಾಶಗೊಳಿಸಲಾಗಿದೆ. ಈಶ್ವರನ ದೇವಸ್ಥಾನ ಮಾತ್ರ, ಶಂಕರಾಚಾರ್ಯ ಬೆಟ್ಟದ ಮೇಲಿದೆಯೆಂಬ ಕಾರಣಕ್ಕಿರಬಹುದು, ಉಳಿದುಕೊಂಡಿದೆ. ಕಾಶ್ಮೀರೀ ಹಿಂದೂಗಳು ತಾಯ್ನಾಡಿಗೆ ಮರಳುವಂತಾಗಬೇಕು. ತಮ್ಮ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಬೇಕು. ಪಾಕ್‌ ಆಕ್ರ ಮಿತ ಕಾಶ್ಮೀರವೂ ಭಾರ ತದ ಸುಪ ರ್ದಿಗೆ ಬಂದರೆ ಮಾತ್ರ “ಸಮಗ್ರ ಕಾಶ್ಮೀರ’ ಕಲ್ಪನೆ ಸಿಗುತ್ತದೆ.ಶಾರದಾ ಪೀಠ ಇನ್ನೂ ಪಿಓಕೆಯ ವಶದಲ್ಲಿಯೇ ಇದೆ. ಕೇವಲ ಕಾಶ್ಮೀರದಲ್ಲಿ ಜಾಗ ಖರೀದಿಸಬಹುದು ಎಂಬಂಥ ಮಾತುಗಳನ್ನು ಆಡುವ ಬದಲು ಸಮಗ್ರ ಕಾಶ್ಮೀರದಲ್ಲಿ ಸಾಂಸ್ಕೃತಿಕವಾದ ಕಾಯಕಲ್ಪ ಮಾಡಬೇಕಾಗಿದೆ.

ಪಿ. ಅನಂತ ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next