Advertisement

ಕುಡಿದು ಗಲಾಟೆ ಮಾಡ್ತಿದ ತಂದೆಯನ್ನೇ ಕೊಂದ ಮಗ

11:43 AM Aug 09, 2017 | Team Udayavani |

ಬೆಂಗಳೂರು: ಮದ್ಯ ಸೇವಿಸಿ ಮನೆಗೆ ಬಂದು ನಿತ್ಯ ಕಿರುಕುಳ ನೀಡುತ್ತಿದ್ದ ತಂದೆಯ ಮೇಲೆ ಪುತ್ರನೇ ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯ ಬಂಗಾರಪ್ಪಗುಡ್ಡೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

Advertisement

ಕನಕಪುರದ ಕಾಂತರಾಜು (55) ಕೊಲೆಯಾದ ವ್ಯಕ್ತಿ. ಈ ಸಂಬಂಧ ಕಾಂತರಾಜು ಪುತ್ರ ಅಭಿಷೇಕ್‌ ಹಾಗೂ ಈತನ ಸ್ನೇಹಿತ ಕ್ಯಾಬ್‌ ಚಾಲಕ ರೇವಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಬಂಗಾರಪ್ಪಗುಡ್ಡದ ನಿವಾಸಿ ಕಾಂತರಾಜು ಈ ಮೊದಲು ಖಾಸಗಿ ಕಾಲೇಜಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ವಿಪರೀತ ಮದ್ಯ ಚಟ ಅಂಟಿಸಿಕೊಂಡಿದ್ದ ಕಾಂತರಾಜು, ಮೂರು ತಿಂಗಳಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈತನ ಪತ್ನಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇತ್ತ ಅಭಿಷೇಕ್‌ ಖಾಸಗಿ ಬಸ್‌ನಲ್ಲಿ ಕ್ಲೀನರ್‌ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ ಕೆಲಸ ಬಿಟ್ಟಿದ್ದ ಕಾಂತರಾಜು ಯಾವುದೇ ಕೆಲಸಕ್ಕೆ ಹೋಗದೆ ನಿತ್ಯ ಮದ್ಯ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅಲ್ಲದೇ ಮದ್ಯದ ಅಮಲಿನಲ್ಲಿ ಪತ್ನಿ ಮತ್ತು ಮಗನಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಜತೆಗೆ ಕುಡಿಯಲು ಪತ್ನಿ ಹಾಗೂ ಪುತ್ರನ ಬಳಿ ಹಣದ ಬೇಡಿಕೆ ಇಡುತ್ತಿದ್ದರು.

ಹಣ ಕೊಡಲು ನಿರಾಕರಿಸಿದಕ್ಕೆ ಮನೆಯಲ್ಲಿರುವ ವಸ್ತುಗಳನ್ನು ಒಂದೊಂದಾಗಿ ಕದ್ದು ಮಾರಾಟ ಮಾಡಿದ್ದರು. ಈ ಬಗ್ಗೆ ಪುತ್ರ ಅಭಿಷೇಕ್‌ ಹಲವು ಬಾರಿ ಬುದ್ದಿ ಹೇಳಿದ್ದರೂ ಕೇಳಿರಲಿಲ್ಲ. ಇದರಿಂದ ಬೇಸತ್ತ ಅಭಿಷೇಕ್‌, ಸ್ನೇಹಿತ ಹಾಗೂ ಕ್ಯಾಬ್‌ ಚಾಲಕ ರೇವಣ್ಣ ಜತೆ ತಂದೆಯನ್ನು ಕೊಲೆಗೈಯಲು ಸಂಚು ರೂಪಿಸಿದ್ದ.

Advertisement

ಅಂದರಂತೆ ಸೋಮವಾರ ತಡರಾತ್ರಿ ಮನೆಯ ಬಳಿ ಮದ್ಯದ ಅಮಲಿನಲ್ಲಿ ಮಲಗಿದ್ದ ತಂದೆ ಕಾಂತರಾಜುನನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಟವೆಲ್‌ನಿಂದ ಕುತ್ತಿಗೆ ಬಿಗಿದು, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next