Advertisement

ಆಧುನಿಕ ಶೈಲಿಯ ಆಹಾರ ಪದಾರ್ಥ; ಸ್ಥೂಲಕಾಯ ನಿವಾರಣೆಗೆ ಸರಳ ಮನೆಮದ್ದು

06:41 PM Mar 01, 2021 | Team Udayavani |

ಆಧುನಿಕ  ಜಗತ್ತು ಮನುಷ್ಯನನ್ನು ಹೊಸ ಪ್ರಪಂಚದತ್ತ ಕರೆದೊಯ್ದಿದೆ. ಜನರ  ಜೀವನ ಕ್ರಮ ಆಚಾರ ವಿಚಾರಗಳನ್ನು ಒಳಗೊಂಡಂತೆ ಆಹಾರ ಕ್ರಮದಲ್ಲಿಯೂ ಗಣನೀಯವಾದ ಬದಲಾವಣೆಗಳಾಗಿವೆ. ಬಾಯಿಗೆ ರುಚಿ ಎನಿಸುವ ಪದಾರ್ಥಗಳನ್ನೇ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಿದ್ದು, ಈ ನಡುವೆ ಇಂತಹ ಆಧುನಿಕ ಶೈಲಿಯ ಆಹಾರ ಪದಾರ್ಥಗಳು ನಮ್ಮನ್ನು ಹಲವಾರು ಸಮಸ್ಯೆಗಳತ್ತ ಸೆಳೆಯುತ್ತಿದೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುವ ಸಮಸ್ಯೆಯಾದ ಬೊಜ್ಜು ಕೂಡಾ ಒಂದು.

Advertisement

ಬೊಜ್ಜು  ಅಥವಾ ಸ್ಥೂಲ ಕಾಯತೆ ಎಂದು ಕರೆಯಲ್ಪಡುವ  ಈ ಸಮಸ್ಯೆ, ದೇಹದಲ್ಲಿ ನಿಗದಿತ ಆರೋಗ್ಯಕರ ತೂಕಕ್ಕಿಂತಲೂ ಅಧಿಕ ತೂಕವನ್ನು ಹೊಂದಿರುವುದನ್ನು ಸೂಚಿಸುತ್ತದೆ. ಹೀಗೆ ದೇಹದಲ್ಲಿ ಹೆಚ್ಚಿನ ಪ್ರಮಾಣದ ಮಾಂಸ ಶೇಖರಣೆಗೊಂಡಾಗ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾವನ್ನು ಬೀರುತ್ತದೆ.

ಬೊಜ್ಜಿನಿಂದ ಉಂಟಾಗುವ ಸಮಸ್ಯೆಗಳು.

ಸ್ಥೂಲ ಕಾಯವನ್ನು ಹೊಂದಿರುವವರ ದೇಹದ ಆರೋಗ್ಯದಲ್ಲಿ ನಾನಾ ವಿಧವಾದ ಸಮಸ್ಯೆಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಹೃದ್ರೋಗ ಸಮಸ್ಯೆ, ಮಧುಮೇಹ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ಕೆಲವು ವಿಧವಾದ ಕ್ಯಾನ್ಸರ್, ಮೂತ್ರ ನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅಸ್ಥಿ ಸಂಧಿವಾತ, ಅಸ್ಥಮಾ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕಾಣಬಹುದಾಗಿದೆ.

ಸ್ಥೂಲಕಾಯ ಸಮಸ್ಯೆಗೆ ಸರಳ ಪರಿಹಾರ

Advertisement

ಸ್ಥೂಲ ಕಾಯದಿಂದ ಮುಕ್ತಿ ಹೊಂದುವ ಮೂಲಕ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ಮನೆ ಮದ್ದುಗಳನ್ನು ಸುಲಭವಾಗಿ ತಯಾರಿಸಿ ಬಳಸಬಹುದಾಗಿದೆ. ಈ ಮನೆಮದ್ದುಗಳನ್ನು ದೀರ್ಘ ಸಮಯದವರೆಗೆ ಬಳಸಿದರೂ ಯಾವುದೇ ವಿಧವಾದ ಅಡ್ಡ ಪರಿಣಾಮಗಳು ಕಂಡುಬರುವುದಿಲ್ಲ. ಆದರೆ ಯಾವುದೇ ಮನೆ ಮದ್ದನ್ನು ಬಳಸುವ ಮುನ್ನ ನಮ್ಮ ಆಹಾರ ಕ್ರಮವನ್ನು ಸಿಗದಿತವಾದ ರೀತಿಯಲ್ಲಿ ಪಾಲಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು..

ಸ್ಥೂಲ ಕಾಯ ಸಮಸ್ಯೆಯಿಂದ ನಮ್ಮ ದೇಹವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಯಾವುದಾದರೂ ಮನೆಮದ್ದುಗಳನ್ನು ಬಳಸಬಹುದಾಗಿದೆ.

1.ಅರ್ಧ ಲಿಂಬೆ ಹಣ್ಣಿನ ರಸವನ್ನು ಒಂದು ಲೋಟದಷ್ಟು ನೀರಿನಲ್ಲಿ ಬೆರೆಸಿ ಪ್ರತಿನಿತ್ಯವೂ ಬೆಳಿಗ್ಗೆಯ ಸಮಯದಲ್ಲಿ ಸೇವನೆ ಮಾಡುವುದು ಸ್ಥೂಲ ಕಾಯ ನಿವಾರಣೆಗೆ ರಾಮಬಾಣವಾಗಿದೆ.

2.1/4  ಚಮಚ ಶುಂಠಿ ರಸ, 1/4 ಚಮಚ  ಜೇನು, 1/4   ಚಮಚ ಲಿಂಬೆರಸ ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.

  1. ಪ್ರತಿನಿತ್ಯವೂ ಅರ್ಧ ಚಮಚ ಜೇನು ಮತ್ತು ಅರ್ದ ಚಮಚ ಲಿಂಬೆಯ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ತೂಕವನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಒಂದು ವೇಳೆ ಲಿಂಬೆ ಹಣ್ಣಿನ ಲಭ್ಯತೆ ಇಲ್ಲದಿರುವಾಗ ಕೇವಲ ಜೇನನ್ನು ಮಾತ್ರ ಬಿಸಿ ನೀರಿನಲ್ಲಿ ಬೆರೆಸಿ ಸೇವನೆ ಮಾಡಬಹುದು.
  2. ಬಾಳೆಯ ದಿಂಡನ್ನು ತಂದು ಅದಕ್ಕೆ ಒಂದು ಮುಷ್ಠಿಯಷ್ಟು ಗರಿಕೆ ಹುಲ್ಲನ್ನು ಸೇರಿಸಿ, ಅರ್ದ ಲಿಂಬೆ ಹಣ್ಣನ್ನು ಸಿಪ್ಪೆ ಸಮೇತವಾಗಿ ಒಂದು ಲೋಟ ನೀರಿನೊಂದಿಗೆ ಬೆರಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಈ ದ್ರವರೂಪದ ಔಷಧಿಯನ್ನು ಸೋಸಿ ಬೆಳಿಗ್ಗೆಯ ಸಮಯದಲ್ಲಿ ಬರಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಹೀಗೆ ಸೇವನೆಯನ್ನು ಮಾಡಿದ ಬಳಿಕ ಒಂದು ಗಂಟೆಗಳ ಕಾಲ ಯಾವುದೇ ಆಹಾರವನ್ನು ಸೇವಿಸಬಾರದು.
  3. ಒಂದು ಲೋಟ ಮಜ್ಜಿಗೆಗೆ ನೀರು. ಮೆಂತ್ಯ, ಉಪ್ಪು, ಹಸಿ ಶುಂಠಿ ,ಪುದೀನ ಸೊಪ್ಪನ್ನು ಬೆರೆಸಿ ಆಗಾಗ ಕುಡಿಯುವುದರಿಂದ ಬೊಜ್ಜು ನಿವಾರಣೆಯಾಗುತ್ತದೆ.
  4. ಕೆಂಪಕ್ಕಿಯ ಗಂಜಿಯ ತಿಳಿಯನ್ನು ಸ್ಪಲ್ಪ ಕಾಳು ಮೆಣಸು, ಉಪ್ಪು ಮತ್ತು ಸ್ಪಲ್ಪ ಪ್ರಮಾಣದ ತುಪ್ಪವನ್ನು ಸೇರಿಸಿ ಊಟಕ್ಕಿಂತ ಮೊದಲು ಸೇವಿಸಬೇಕು. ಇದನ್ನು ರಾತ್ರಿ ವೇಳೆಯಲ್ಲಿಯೂ ಊಟದ ಬದಲು ಸೇವಿಸುವುದು ಉತ್ತಮ.
  5. ಮೆಂತ್ಯ ಸೊಪ್ಪಿನಲ್ಲಿ ದೇಹದ ಬೊಜ್ಜು ಕರಗಿಸುವ ಅಂಶ ಹೇರಳವಾಗಿರುವುದರಿಂದ ನಮ್ಮ ದಿನನಿತ್ಯದ ಆಹಾರದಲ್ಲಿ ಮೆಂತ್ಯ ಸೊಪ್ಪಿನ ಬಳಕೆ ಮಾಡುವುದು ಉತ್ತಮ.
  6. ಹಸಿ ಅರಶಿನವನ್ನು ಲಿಂಬೆ ರಸದಲ್ಲಿ ತೇಯಬೇಕು. ನಂತರ ಇದನ್ನು ಒಂದು ಚಮಚ ಬೆಳಿಗ್ಗೆ ಹಾಗೂ ಒಂದು ಚಮಚ ಸಂಜೆ ವೇಳೆ ಸೇವಿಸಬೇಕು. ನಂತರ ಬಿಸಿ ನೀರನ್ನು ಕುಡಿಯಬೇಕು.
  7. ಕೊತ್ತಂಬರಿ ಸೊಪ್ಪು ಮತ್ತು ಮೆಂತ್ಯ ಸೊಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದು ಇದರ ಅರ್ಧದಷ್ಟು ಜೀರಿಗೆಯನ್ನು ಸೇರಿಸಿ, ಎರಡು ಎಸಳು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಇದರ ರಸವನ್ನು ತೆಗೆದು ಬೆಳಿಗ್ಗೆ ವೇಳೆ ಖಾಲಿ ಹೊಟ್ಟೆಯಲ್ಲಿ ಸೇವನೆಯನ್ನು ಮಾಡಬೇಕು.ಇದರಿಂದ ಅಧಿಕ ತೂಕದವರನ್ನು ಕಾಡುವ ಹೃದಯದ ಸಮಸ್ಯೆಗಳು ಪರಿಹಾರವಾಗುತ್ತವೆ.

ಈ ಮೇಲಿನ ಮನೆಮದ್ದುಗಳನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣದ ಪ್ರಮಾಣ ಅಧಿಕವಾಗುವ ಸಾಧ್ಯತೆಗಳಿರುತ್ತದೆ, ಹೀಗಾಗಿ ಈ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next