Advertisement

ನಿದ್ರೆಯಲ್ಲಿದ್ದ ಸಿಎಂಗೆ ಈಗ ಎಚ್ಚರವಾಗಿದೆ

11:28 AM Aug 21, 2017 | |

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷ ರಾಜಕರಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಹೋರಾಟ ಆರಂಭಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ರಾಜಕೀಯ ಪ್ರೇರಿತ ದೂರ ದಾಖಲಿಸಿರುವುದನ್ನು ಖಂಡಿಸಿ ನಗರ ಜಿಲ್ಲಾ ಬಿಜೆಪಿ ವತಿಯಿಂದ ಮೈಸೂರ್‌ ಬ್ಯಾಂಕ್‌ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಬಕರ್ಣನ ಅಣ್ಣ ಅಥವಾ ತಮ್ಮ ಇರಬೇಕು. ಸದಾ ನಿದ್ದೆಯಲ್ಲೇ ಇರುತ್ತಾರೆ. ಈಗ ಎಚ್ಚರಾಗಿ, ಎರಡೇ ನಿಮಿಷದಲ್ಲಿ ಬಿ.ಎಸ್‌.ವೈ ವಿರುದ್ಧ ರಾಜಕೀಯ ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿದ್ದರೂ, ಯಾಕೆ ತನಿಖೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಫಿಕ್ಸರ್‌ ಸಿದ್ದು ಆಗಿದ್ದಾರೆ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿ ಮೂಲಕ ಸಿಕ್ಸರ್‌ ಸಿದ್ದು ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ನಾಲ್ಕುವರೆ ವರ್ಷದ ನಂತರ ಫಿಕ್ಸರ್‌ ಸಿದ್ದು ಆಗಿದ್ದಾರೆ. ಬಿಜೆಪಿ ನಾಯಕರ ಮೇಲೆ ಹಲವು ಕೇಸ್‌ ದಾಖಲಿಸುವ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ತಾವು ಮಾಡಿದ ಅನ್ಯಾಯ, ಭ್ರಷ್ಟಾಚಾರ ಹಾಗೂ ತಪ್ಪುಗಳನ್ನು ಮುಚ್ಚಿಹಾಕಲು ತಿಂಗಳಿಗೊಂದು ಕೇಸ್‌ ಹೊರ ತರುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯದ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಅನುದಾನ ಎಲ್ಲಿಗೆ ಹೋಯ್ತು ಎಂದು ಪ್ರಶ್ನೆ ಕೇಳಿದರೆ, ಹಳೇ ಕೇಸ್‌ ಮರು ದಾಖಲಿಸುವ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇವರ ಗೊಡ್ಡು ಬೇದರಿಕೆಗೆ ನಾವು ಹೆದರುವುದಿಲ್ಲ. ಎಸಿಬಿ, ಪೊಲೀಸ್‌ ಹಾಗೂ ಲೋಕಾಯುಕ್ತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಏಕೆ ಮುಚ್ಚಿದಿರಿ ಎಂಬುದರ ಬಗ್ಗೆ ರಾಜ್ಯದ ಜನತೆಗೆ ಸಿಎಂ ಉತ್ತರ ನೀಡಬೇಕು. ನಿಮ್ಮ ಮೇಲಿನ ಕೇಸು, ಕಾಂಗ್ರೆಸ್‌ ನಾಯಕರ ಮರಳು ದಂಧೆ, ಭೂ ದಂದೆ, ಮುಚ್ಚಿ ಹಾಕುತ್ತಿದ್ದಿರಿ. ನಿಮಗೆ ಸಿಎಂ ಖುರ್ಚಿ ಮೇಲೆ ಕುಳಿತುಕೊಳ್ಳುವ ಯಾವ ಅರ್ಹತೆಯೂ ಇಲ್ಲ ತಕ್ಷಣವೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

“ರಾಜ್ಯದಲ್ಲಿ ನಿಷ್ಟಾವಂತ ಅಧಿಕಾರಿಗಳಿಗೆ ಉಳಿಗಾಲ ಇಲ್ಲ. ತಮಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಗೆ ನೇಮಿಸುತ್ತಿದ್ದಾರೆ. ಹಲವು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ಕೇಂದ್ರದ ಸೇವೆಗೆ ಹೋಗುತ್ತಿದ್ದಾರೆ. ಬಸವರಾಜೇಂದ್ರ ಅವರ ಕೊಲೆ ಅಥವಾ ಆತ್ಮಹತ್ಯೆ ಮಾಡಿಸಲು ಸಿಎಂ ಯತ್ನಿಸುತ್ತಿದ್ದಾರೆ,’ ಎಂದು ಶೋಭಾ ಗಂಭೀರ ಆರೋಪ ಮಾಡಿದರು.

Advertisement

ಸೇಡಿಗೆ ಮತ್ತೂಂದು ಹೆಸರೇ ಸಿಎಂ: ವಿಧಾನ ಪರಿಷತ್‌ ಸದಸ್ಯ ವಿ. ಸೋಮಣ್ಣ ಮಾತನಾಡಿ, ಸೇಡಿಗೆ ಮತ್ತೂಂದು ಹೆಸರಾಗಿರುವ ಸಿದ್ದರಾಮಯ್ಯನವರು ಮಾಡಿರುವ ಕುತಂತ್ರ ಬಟ್ಟ ಬಯಲಾಗಿದೆ. ಎಸಿಬಿಯನ್ನು ದುರ್ಬಳಕೆ ಮಾಡಿ, ಲೋಕಾಯುಕ್ತಕ್ಕೆ ದಿಕ್ಕು ದೆಸೆ ಇಲ್ಲದಂತೆ ಮಾಡಿದ್ದೀರಿ. ನಮ್ಮ ನಾಯಕರಾದ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಅಪಾದನೆ ಮಾಡಿ, ಜನರ ಭಾವನೆಯನ್ನು ಕೆರಳಿಸುತ್ತಿದ್ದೀರಿ. 35 ವರ್ಷದಲ್ಲಿ ರಾಜ್ಯದ ಯಾವ  ಮುಖ್ಯಮಂತ್ರಿಯೂ ಇಂಥ ಕೀಳು ಮಟ್ಟದ ರಾಜಕಾರಣ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಬಾಯಲ್ಲಿ ಹೇಳವುದು ಭಗದ್ಗೀತೆ, ಆದರೆ ಮಾಡುವುದು ಕೀಳುಮಟ್ಟದ ಕೆಲಸ ಎಂದು ದೂರಿದರು.

ಅರ್ಕವತಿ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ವರದಿ ನೀಡಿದ್ದೇನೆ. ಅದನ್ನು ತೀರ್ಮಾನಿಸಲು ಕಾಚಾಚಾರಕ್ಕೆ ಒಂದು ಆಯೋಗ ರಚನೆ ಮಾಡಲಾಗಿದೆ. ಎಸಿಬಿ ಅಧಿಕಾರಿಗಳಿಗೆ ಆಶ್ವಾಸನೆ ನೀಡಿ, ಅವರನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದಿರಿ. ಪೊಲೀಸ್‌ ಅಧಿಕಾರಿಗಳು ನಿಮ್ಮ ಮನೆಯ ಸೊತ್ತಾಗಿದ್ದಾರೆ. ನಿಮ್ಮ ಕೀಳು ನಡವಳಿಕೆ ಇನ್ನಾದರೂ ಬದಲಿಸಿಕೊಂಡು ರಾಜೀನಾಮೆ ನೀಡಿ, ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಶಿವರಾಮ ಕಾರಂತ ಬಡವಣೆಯೇ ಇಲ್ಲ ಎಂದು  ಹೈ ಕೋರ್ಟ್‌ ದ್ವಿಸದಸ್ಯ ಪೀಠವೇ ಹೇಳಿದೆ. ಅರ್ಕಾವತಿ ಬಡವಾಣೆಗೆ 660 ಎಕರೆಗೆ ಸಿಎಂ ಸಿದ್ದರಾಮಯ್ಯ ಅವರೇ ಎನ್‌ಒಸಿ ನೀಡಿದ್ದಾರೆ. ಹಾಗೆಯೇ ಅವರ ಮೇಲೆ 16 ಕೇಸ್‌ ಇದೆ. ಕಾಂಗ್ರೆಸ್‌ ಪಟಾಲಂಗಳ ಮೇಲೆ ಇರುವ ಕೇಸ್‌ ಏನಾಯ್ತು?  ಎಂದು ಪ್ರಶ್ನಿಸಿದರು. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕ ವೈ.ಎ.ನಾರಾಯಣ ಸ್ವಾಮಿ ಸೇರಿದಂತೆ ಬಿಜೆಪಿನಾಯಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next