ಮೇಘನಾ ರಾಜ್ ನಿರ್ಮಾಣದ “ಪುಟಾಣಿ ಪಂಟರ್ಸ್’ ಚಿತ್ರಕ್ಕೆ ಬುಧವಾರ ಮುಹೂರ್ತ ನೆರವೇರಿದೆ. ಅಂದಹಾಗೆ, ಬೆನಕ ಪವನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದ “ಪುಟಾಣಿ ಪಂಟರ್ಸ್’ ಚಿತ್ರದ ಸಮಾರಂಭದಲ್ಲಿ ನಟ ಧ್ರುವ ಸರ್ಜಾ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮತ್ತೂಬ್ಬ ನಟ ಚಿರಂಜೀವಿ ಸರ್ಜಾ ಕ್ಯಾಮರಾ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಇನ್ನು ಚಿತ್ರದ ಹೆಸರೇ ಹೇಳುವಂತೆ “ಪುಟಾಣಿ ಪಂಟರ್ಸ್’ ಮಕ್ಕಳ ಚಿತ್ರ. ಚಿತ್ರದ ಬಗ್ಗೆ ಮಾತನಾಡುವ ಮೇಘನಾ, “ಮೊದಲಿನಿಂದಲೂ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿಯಿತ್ತು. ಈಗ ಆ ಕನಸು ನನಸಾಗುತ್ತಿದೆ. ನಾನು ಮಾಡುವ ಚಿತ್ರ ಮೊದಲು ನನಗೆ ಇಷ್ಟವಾಗಬೇಕು ನಂತರ ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
ಹಾಗಾಗಿ ನನಗೆ ಇಷ್ಟವಾಗುವ ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಂಡು ಈ ಚಿತ್ರವನ್ನು ನಿರ್ಮಿಸಲು ಮುಂದಾದೆ. ಇದು ಮಕ್ಕಳ ಚಿತ್ರವಾದರೂ, ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಆಗಿ ಚಿತ್ರವನ್ನು ಆಡಿಯನ್ಸ್ ಮುಂದೆ ತರುವ ಯೋಜನೆ ಇದೆ. ಸಂಪೂರ್ಣ ಮನರಂಜನೆ ಈ ಚಿತ್ರದಲ್ಲಿ ಇರಲಿದೆ’ ಎಂದರು.
ನಿರ್ದೇಶಕ ಬೆನಕ ಪವನ್, “ಸಾಕಷ್ಟು ವರ್ಷಗಳಿಂದ ಚಿತ್ರ ನಿರ್ದೇಶಿಸಬೇಕು ಎಂಬ ಯೋಚನೆ ಇತ್ತು. ಚಿತ್ರರಂಗದ ಅನೇಕ ಸ್ನೇಹಿತರು ಚಿತ್ರವನ್ನು ನಿರ್ದೇಶಿಸಲು ಪ್ರೋತ್ಸಾಹಿಸುತ್ತಿದ್ದರು. ಆದರೆ ಅಭಿನಯದಲ್ಲೇ ಹೆಚ್ಚು ತೊಡಗಿಕೊಂಡಿದ್ದರಿಂದ ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಈಗ ಚಿತ್ರ ನಿರ್ದೇಶಿಸುವ ಅವಕಾಶ ಒದಗಿದೆ.
ಕನ್ನಡದ ಪ್ರೇಕ್ಷಕರ ಮುಂದೆ ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಸದಭಿರುಚಿಯ ಚಿತ್ರವನ್ನು ಕೊಡಲು ನಮ್ಮ ತಂಡ ತಯಾರಿ ಮಾಡಿಕೊಂಡಿದೆ’ ಎಂದರು. “ಪುಟಾಣಿ ಪಂಟರ್ಸ್’ ಚಿತ್ರದಲ್ಲಿ ಮಕ್ಕಳ ತುಂಟಾಟ, ತರಲೆ, ಅವರ ಯೋಚನೆ ಎಲ್ಲವನ್ನೂ ತೆರೆಮೇಲೆ ತರಲು ನಿರ್ದೇಶಕ ಪವನ್ ಪ್ಲಾನ್ ಮಾಡಿಕೊಂಡಿದ್ದಾರೆ.
ಈಗಾಗಲೇ ಕಿರುತೆರೆ ಮತ್ತು ರಂಗಭೂಮಿಯಲ್ಲಿ ಅಭಿನಯಿಸಿರುವ ಸುಮಾರು ಏಳೆಂಟು ಮಕ್ಕಳು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟ ಸುಂದರ ರಾಜ್, ಪ್ರಮೀಳಾ ಜೋಷಾಯ್, ಸ್ಪರ್ಶ ರೇಖಾ, ನಾಗರಾಜ ಮೂರ್ತಿ, ರಮೇಶ್ ಪಂಡಿತ್, ಮುಖ್ಯಮಂತ್ರಿ ಚಂದ್ರು, ಮೈಕೋ ಮಂಜು, ರಾಜೇಶ್ ನಟರಂಗ ಸೇರಿದಂತೆ ಹಲವು ಕಲಾವಿದರು ಇತರೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಪುಟಾಣಿ ಪಂಟರ್ಸ್’ ಚಿತ್ರದ ಹಾಡುಗಳಿಗೆ ವಸಂತ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಬಿ.ಎಸ್ ಮೀರಾ ಹಾಡುಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ. ಚಿತ್ರಕ್ಕೆ ತ್ರಿಭುವನ್ ನೃತ್ಯ ಸಂಯೋಜನೆ ಮತ್ತು ಅಲ್ಟಿಮೇಟ್ ಶಿವು ಸಾಹಸ ಸಂಯೋಜಿಸುತ್ತಿದ್ದಾರೆ.