Advertisement

ಮಹಾಘಟಬಂಧನ್‌ಗೆ ಆಘಾತ

03:45 AM Jun 22, 2017 | Harsha Rao |

– ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಯಲ್ಲಿ ವಿಪಕ್ಷಗಳಿಗೆ ಭಾರೀ ಹಿನ್ನಡೆ
ಹೊಸದಿಲ್ಲಿ:  ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಊಹೆಯಂತೆಯೇ ವಿಪಕ್ಷಗಳಲ್ಲಿ ಬಿರುಕು ಮೂಡಿಸಿದೆ. ಅದಕ್ಕೂ ಹೆಚ್ಚಿಗೆ ಈ ಬಾರಿ ಬಿಹಾರದ ಜೆಡಿಯು ತನ್ನ “ಗತಿ’ ಬದಲಿಸಿ ಎಲ್ಲರ ಅಚ್ಚರಿಗೆ  ಕಾರಣವಾಗಿದೆ. ಅಲ್ಲದೆ  ಬಿಹಾರದಲ್ಲಿರುವ ಮಹಾಘಟಬಂಧನ್‌ ಮುರಿದು ಬಿದ್ದರೂ ಬೀಳಬಹುದು ಎಂಬ ರಾಜಕೀಯ ವಿಶ್ಲೇಷಣೆಗೂ ನಾಂದಿ ಹಾಡಿದೆ.

Advertisement

ಎರಡು ತಿಂಗಳ ಹಿಂದೆಯೇ ಪ್ರತಿಪಕ್ಷಗಳ ಕಡೆಯಿಂದ ರಾಷ್ಟ್ರಪತಿ ಚುನಾವಣೆಗಾಗಿ ಭರ್ಜರಿ ತಯಾರಿ ನಡೆದಿತ್ತು. ಇದರ ನೇತೃತ್ವ ವಹಿಸಿದ್ದವರೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರೇ. ಬಹಳ ಹಿಂದೆಯೇ ದಿಲ್ಲಿಗೆ ಬಂದಿದ್ದ ನಿತೀಶ್‌ಕುಮಾರ್‌, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಎನ್‌ಡಿಎ ಮೈತ್ರಿಕೂಟಕ್ಕೆ ಪ್ರತಿಯಾಗಿ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚಿಸಿದ್ದರು. ಇವರು ಬಂದು ಹೋದ ಮೇಲೆ, ಆರ್‌ಜೆಡಿಯ ಲಾಲು, ಎಡಪಕ್ಷಗಳ ಕಡೆಯಿಂದ ಸೀತಾರಾಂ ಯೆಚೂರಿ, ಶರದ್‌ ಪವಾರ್‌, ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ನಾಯಕರು ಸೋನಿಯಾ ನಿವಾಸಕ್ಕೆ ಹೋಗಿ ಈ ಬಗ್ಗೆ ಮಾತನಾಡಿದ್ದರು. 

ಆದರೆ ಆಗಲೇ ನಿತೀಶ್‌ಕುಮಾರ್‌ ತಾವು ವಿಪಕ್ಷಗಳ ಸಾಲಲ್ಲಿ ನಿಲ್ಲಲ್ಲ ಎಂಬ ಸುಳಿವು ನೀಡಿದ್ದರು. ಇದೀಗ ನಿತೀಶ್‌ ಪ್ರಧಾನಿ ಮೋದಿಗೆ ಹತ್ತಿರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. . ಈಗಾಗಲೇ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಸೋನಿಯಾ ಗಾಂಧಿ ಅವರ ಬಳಿ ನಿತೀಶ್‌ ಅವರ ನಡೆಯ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ. ಜತೆಗೆ ಪ್ರಧಾನಿ ಮೋದಿ ಜತೆ ಅವರ ಸಂಬಂಧ ಉತ್ತಮವಾಗುತ್ತಿರುವ ಬಗ್ಗೆ ಹೇಳಿದ್ದಾರೆ. 

ಲಾಲು ಜತೆ ನಿತೀಶ್‌ಗೆ ಮುನಿಸು?: ಮೂಲಗಳ ಪ್ರಕಾರ, ನಿತೀಶ್‌ ಮೈತ್ರಿ ಪಕ್ಷ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಬಗ್ಗೆ ಮುನಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ, ಲಾಲು ಕುಟುಂಬದ ಮೇಲೆ ಐಟಿ ದಾಳಿಯಾಗುತ್ತಿದ್ದರೂ ಪದೇ ಪದೆ ಭ್ರಷ್ಟಾಚಾರದ ಆರೋಪ ಬರುತ್ತಿದ್ದರೂ ನಿತೀಶ್‌ ಎಲ್ಲೂ ಮಾತನಾಡುತ್ತಿಲ್ಲ. ಹೀಗಾಗಿ ಅವರು, ಲಾಲು ಮತ್ತು ಕಾಂಗ್ರೆಸ್‌ ಸಖ್ಯ ತೊರೆಯಲು ಮುಂದಾಗಿರಬಹುದೇ ಎಂಬ ಮಾತುಗಳೂ ಇವೆ.

ಮೊದಲೇ ಊಹಿಸಿದ್ದರು: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿದ್ದರು.  ಈ ವೇಳೆಯೇ ಟ್ವಿಟರ್‌ನಲ್ಲಿ ಬೆಂಗಳೂರಿನ ಲಲಿತ್‌ ಮಿಶ್ರಾ ಎನ್ನುವ ವ್ಯಕ್ತಿ ಫೇಮಸ್‌ ಆಗಿದ್ದಾರೆ. ಅದೂ ರಾಮನಾಥ್‌ ಕೋವಿಂದ್‌ ರಾಷ್ಟ್ರಪತಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಮೊದಲೇ ಊಹಿಸಿದ್ದಕ್ಕಾಗಿ! ಜೂನ್‌ 15ರಂದು ಪತ್ರಕರ್ತರೊಬ್ಬರು “ಬಿಜೆಪಿ ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿಸ ಬಹುದು?’ ಎಂಬ ಪ್ರಶ್ನೆಯನ್ನು ಟ್ವಿಟರ್‌ನಲ್ಲಿ ಕೇಳಿದ್ದರು. ಆಗ ಮಿಶ್ರಾ ಕೋವಿಂದ್‌ ಹೆಸರು ಹೇಳಿದ್ದರು.

Advertisement

ಲಾಲು ಕೈಗೆ ಬೆಂಬಲ
ಇನ್ನು, ನಿತೀಶ್‌ ನೇತೃತ್ವದ ಜೆಡಿಯು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದ ಬೆನ್ನಲ್ಲೇ, ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ ವಿಪಕ್ಷಗಳ ಜತೆಗೇ ನಿಲ್ಲುವುದಾಗಿ ಸ್ಪಷ್ಟವಾಗಿ ಹೇಳಿದೆ. ಗುರುವಾರ ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲವೆಂದೇ ಅದು ಸ್ಪಷ್ಟವಾಗಿ ಹೇಳಿದೆ. 

ಇಕ್ಕಟ್ಟಿನಲ್ಲಿ ಮಾಯಾವತಿ
ದಲಿತ ವ್ಯಕ್ತಿಯೊಬ್ಬರು ಉನ್ನತ ಹುದ್ದೆಗೆ ಏರುತ್ತಾರೆ ಎಂದರೆ ಅದನ್ನು ವಿರೋಧಿಸಲು ಸಾಧ್ಯವೇ ಎಂದಿದ್ದ ಮಾಯಾವತಿ ಅವರು, ಇದೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹೀಗಾಗಿಯೇ ಗುರುವಾರದ ಸಭೆಯ ನಿರ್ಧಾರ ಪರಿಗಣಿಸಿ ಮಾಯಾವತಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ, ಪ್ರಕಾಶ್‌ ಅಂಬೇಡ್ಕರ್‌ ಅವರೇ ಕಣಕ್ಕಿಳಿದರೆ, ವಿಪಕ್ಷಗಳ ಸಾಲಿನಲ್ಲೇ ಮಾಯಾ ನಿಲ್ಲಬಹುದು.

ಇನ್ನು ಅಖೀಲೇಶ್‌ ಕೂಡ ಗುರುವಾರದ ಸಭೆಗೆ ಹೋಗುತ್ತಿಲ್ಲ. ಆದರೆ ಎಸ್‌ಪಿ ಪ್ರತಿನಿಧಿಯೊಬ್ಬರು ಹೋಗುತ್ತಿದ್ದಾರೆ. ಇನ್ನು ಮುಲಾಯಂ ಕೋವಿಂದ್‌ ಹೆಸರು ಘೋಷಣೆ ಮಾಡುವ ಮುನ್ನ  ಬೆಂಬಲ ಘೋಷಿಸಿರುವುದು ಕುತೂಹಲ ಕೆರಳಿಸಿದೆ.

ಪ್ರಕಾಶ್‌ ಅಂಬೇಡ್ಕರ್‌, ಮೀರಾ ಕುಮಾರ್‌ ಅಭ್ಯರ್ಥಿಗಳು?
ಕಾಂಗ್ರೆಸ್‌, ಎಡಪಕ್ಷಗಳು, ಮಮತಾ ಬ್ಯಾನರ್ಜಿ, ಲಾಲು ಅವರ ಪಕ್ಷಗಳಷ್ಟೇ ಸದ್ಯಕ್ಕೆ ಕೋವಿಂದ್‌ ಅವರಿಗೆ ಬೆಂಬಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಉಳಿದ ಚಿಕ್ಕಪುಟ್ಟ ಪಕ್ಷಗಳು ಇನ್ನೂ ನಿರ್ಧರಿಸಿಲ್ಲ. ಈ ಪಕ್ಷಗಳು ಗುರುವಾರದ ಸಭೆಯ ಅನಂತರ ನಿರ್ಧರಿಸುವುದಾಗಿ ಹೇಳಿವೆ. ಆದರೆ ಎಡಪಕ್ಷಗಳು ಬುಧವಾರ, ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮೊಗ ಪ್ರಕಾಶ್‌ ಅಂಬೇಡ್ಕರ್‌ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಕಣಕ್ಕಿಳಿಸಲು ನಿರ್ಧರಿಸಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಗುರುವಾರದ ಸಭೆಯಲ್ಲಿ ಪ್ರಸ್ತಾವ ಮಂಡಿಸಿ, ಕಾಂಗ್ರೆಸ್‌ ಸೇರಿದಂತೆ ಇತರೆ ವಿಪಕ್ಷಗಳ ಬೆಂಬಲ ಪಡೆಯುವ ಚಿಂತನೆಯೂ ಎಡಪಕ್ಷಗಳಿಗಿದೆ. ಈಗಾಗಲೇ ಎಡಪಕ್ಷಗಳೇ ಕಾಂಗ್ರೆಸ್‌ ನಾಯಕರಾದ ಸುಶೀಲ್‌ಕುಮಾರ್‌ ಶಿಂಧೆ ಮತ್ತು ಮೀರಾ ಕುಮಾರ್‌ ಅವರ ಹೆಸರನ್ನು ಪ್ರಸ್ತಾವಿಸಿದ್ದವು. ಈ ಬಗ್ಗೆ ಕಾಂಗ್ರೆಸ್‌ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ, ಪ್ರಕಾಶ್‌ ಅಂಬೇಡ್ಕರ್‌ ಅವರ ಹೆಸರನ್ನು ಎಡಪಕ್ಷಗಳು ತೇಲಿಬಿಟ್ಟಿವೆ ಎಂದು ಹೇಳಲಾಗಿದೆ. ಆದರೂ, ಸದ್ಯದ ಮಟ್ಟಿಗೆ ಬೆಂಬಲದ ವಿಚಾರದಲ್ಲಿ ಕೋವಿಂದ್‌ ಅವರು ಭಾರೀ ಮುಂದಿದ್ದು, ವಿಪಕ್ಷದ ಅಭ್ಯರ್ಥಿಗೆ ಶೇ. 25ರಷ್ಟು ಮತ ಸಿಗಬಹುದು ಎಂಬ ಅಂದಾಜಿದೆ. 

Advertisement

Udayavani is now on Telegram. Click here to join our channel and stay updated with the latest news.

Next