Advertisement

ಶಾಲೆ, ದೇವಾಲಯ ಗ್ರಾಮದ ಪರಿಪೂರ್ಣತೆಯ ದ್ಯೋತಕ

08:00 AM Apr 28, 2018 | Team Udayavani |

ಕಾಪು: ಮನುಷ್ಯನ ತಲೆ ಮತ್ತು  ಹೃದಯ ಎರಡೂ ಸರಿಯಾಗಿದ್ದರೆ ಅದು ಪರಿಪೂರ್ಣತೆಯ ಲಕ್ಷಣ. ಯಾವುದಾದರೂ ಒಂದು ಸರಿಯಿಲ್ಲದಿದ್ದರೂ ಆಗ ಜೀವನವೇ ಅಸ್ತವ್ಯಸ್ತವಾಗುತ್ತದೆ. ಅದೇ ರೀತಿಯಲ್ಲಿ ಒಂದು ಗ್ರಾಮ ಆರೋಗ್ಯಪೂರ್ಣವಾಗಿ ಪ್ರಗತಿ ಸಾಧಿಸಬೇಕಾದರೆ ಗ್ರಾಮದ ಶಾಲೆ ಮತ್ತು ದೇವಸ್ಥಾನ ಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಾಲೆ ಗ್ರಾಮದ ಶಿರವಾಗಿದ್ದರೆ, ದೇವಾಲಯ ಹೃದಯವಿದ್ದಂತೆ. ವಿದ್ಯಾಲಯ ಮತ್ತು ದೇವಾಲಯಗಳು ಗ್ರಾಮದ ಪರಿಪೂರ್ಣತೆಯ ದ್ಯೋತಕಗಳಾಗಿವೆ ಎಂದು ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

Advertisement

ಉಂಡಾರು ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಜರಗಿದ ನವೀಕೃತ ದೇವಾಲಯ ಸಮರ್ಪಣೆ, ಬಿಂಬ ಪ್ರತಿಷ್ಠಾಪನೆೆ, ಬ್ರಹ್ಮಕಲಶ ಮಹೋತ್ಸವ ಹಾಗೂ ಮನ್ಮಹಾರಥೋತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗ್ರಾಮಸ್ಥರ ಸಹಕಾರ ಅವಿಸ್ಮರಣೀಯ
ಇನ್ನಂಜೆ ಗ್ರಾಮದಲ್ಲಿ ಸೋದೆ ಮಠದ ಮೂಲಕ ಸ್ಥಾಪನೆಗೊಂಡ ಶಾಲೆ ಹಾಗೂ ಸೋದೆ ಮಠದ ಆಡಳಿತ ದಲ್ಲಿರುವ ದೇವಾಲಯ ಎರಡೂ ಪ್ರಸಿದ್ಧಿಯಾಗಿದೆ. ದೇವಾಲಯ ಸರ್ವ ಸುಂದರವಾಗಿ ಮೂಡಿ ಬರುವಲ್ಲಿ  ಗ್ರಾಮಸ್ಥರು ನಿರೀಕ್ಷೆಗೂ ಮೀರಿ ನೀಡಿದ ಸಹಕಾರ ಅವಿಸ್ಮರಣೀಯವಾಗಿದೆ. ಮುಂದೆ ವಿದ್ಯಾಲಯದ ಪುನಶ್ಚೇತನದಲ್ಲಿಯೂ ಗ್ರಾಮಸ್ಥರ ಪರಿಪೂರ್ಣ ಸಹಕಾರ ಅತ್ಯಗತ್ಯವಾಗಿ ದೊರಕಬೇಕಿದೆ ಎಂದರು.

ಸಂತರು ನಾಡಿಗೆ ಬಂದರೆ ಊರು ಪಾವನ
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್‌ ವೆಂಕಟೇಶ ಕುಲಕರ್ಣಿ ಮಾತನಾಡಿ, ಆಚಾರ್ಯ ಮಧ್ವರು ಮತ್ತು ವಾದಿರಾಜರು ಕರಾವಳಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲೂ ನಡೆಸಿರುವ ಪವಾಡಗಳ ಘಟನೆಗಳನ್ನು ವಿವರಿಸಿದರು. ಉಂಡಾರು ವಿಷ್ಣುಮೂರ್ತಿ ಸನ್ನಿಧಾನವು ವಿಶೇಷ  ಸಾಧನಾ ಕ್ಷೇತ್ರವಾಗಿದ್ದು, ಸಂತರು ನಾಡಿಗೆ ಬಂದರೆ ಊರು ಪಾವನವಾಗುತ್ತದೆ ಎನ್ನುವುದಕ್ಕೆ ಉಂಡಾರು ಗ್ರಾಮವೇ ಉದಾಹರಣೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ ಬಿ. ಪುಂಡಲೀಕ ಮರಾಠೆ ಮಾತನಾಡಿ, ಸೋದೆ ಶ್ರೀಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಊರವರ ಸಕ್ರಿಯ ಸೇವೆಯಿಂದಾಗಿ ವಿಷ್ಣುಮೂರ್ತಿ ದೇಗುಲವು ಆಕರ್ಷಕವಾಗಿ ಪುನಃ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಈ ತಾಣವು ಭವ್ಯ ಯಾತ್ರಾ ಕ್ಷೇತ್ರವಾಗಿ ಮೂಡಿಬರುವ ಎಲ್ಲ ಲಕ್ಷಣಗಳಿವೆ ಎಂದರು.

Advertisement

ಗ್ರಾಮಸ್ಥರಿಂದ ಸಮ್ಮಾನ
ಉಂಡಾರು ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ವಿಶೇಷವಾಗಿ ತೊಡಗಿಸಿಕೊಂಡ ಮುಂಬಯಿ ಸಮಿತಿಯ ಚಂದ್ರಹಾಸ ಗುರುಸ್ವಾಮಿಯವರನ್ನು ಗ್ರಾಮಸ್ಥರು ಶ್ರೀಗಳ ಮೂಲಕವಾಗಿ ಅದ್ದೂರಿಯಾಗಿ ಸಮ್ಮಾನಿಸಿ ಗೌರವಿಸಿದರು. ದಾನಿಗಳನ್ನು ಜೀರ್ಣೋದ್ಧಾರ ಸಮಿತಿ ಮತ್ತು ದೇಗುಲದ ವತಿಯಿಂದ ಸಮ್ಮಾನಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ದಯಾನಂದ ಶೆಟ್ಟಿ ಮಂಡೇಡಿ, ಸಮಿತಿಯ ಕೋಶಾಧಿಕಾರಿ ವಿ.ಜಿ. ಶೆಟ್ಟಿ, ಸತೀಶ್‌ ಶೆಟ್ಟಿ ಶಂಕರಪುರ ಉಪಸ್ಥಿತರಿದ್ದರು.

ಬಂಟಕಲ್ಲು ರಾಮಕೃಷ್ಣ ಶರ್ಮಾ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಯು. ನಂದನ ಕುಮಾರ್‌ ದಾನಿಗಳ ಪಟ್ಟಿ ವಾಚಿಸಿದರು. ನವೀನ್‌ ಅಮೀನ್‌ ಶಂಕರಪುರ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲಾ ಶೆಟ್ಟಿ ವಂದಿಸಿದರು.

ಪಾಕೆಟ್‌ಮನಿ ದೇವರಿಗೆ ಸಮರ್ಪಿಸಿದ ಬಾಲಕಿ
ಉಂಡಾರು ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ಹಿರಿಯರೊಂದಿಗೆ ಕರಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮನೆಯಲ್ಲಿ ಹಿರಿಯರು ತಿಂಡಿಗಾಗಿ ನೀಡಿದ ಪಾಕೆಟ್‌ಮನಿಯನ್ನು ಸಂಗ್ರಹಿಸಿ ರೂ.1,600/-ನ್ನು ದೇವರ ಕಾರ್ಯಕ್ಕೆ ಸಮರ್ಪಿಸಿದ 4ನೇ ತರಗತಿಯ ವಿದ್ಯಾರ್ಥಿನಿ ಅಂಚೆಪಾಲಕಿ ರೇಖಾ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ದಂಪತಿಯ ಪುತ್ರಿ ವೈಷ್ಣವಿಯ ಸೇವೆಯನ್ನು ಸೋದೆ ಶ್ರೀ ವಿಶೇಷವಾಗಿ ಉಲ್ಲೇಖೀಸಿದರು. ವೈಷ್ಣವಿಯ ಸೇವೆಯನ್ನು ರಾಮಾಯಣದಲ್ಲಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ವಾನರ ಸೇನೆಯ ನಡುವೆ ಅಳಿಲು ಸಲ್ಲಿಸಿದ ಸೇವೆಗೆ ಹೋಲಿಸಿ, ಈಕೆಯ ದೇವ ಕಾರ್ಯ ಇತರಿಗೆ ಮಾದರಿಯಾಗಿದೆ ಎಂದು ಹರಸಿ ಸಮ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next