Advertisement

ಸಾಮಾಜಿಕ ಬದಲಾವಣೆ, ದೇಶ ಕಟ್ಟುವಲ್ಲಿ  ಯುವ ಜನರ ಪಾತ್ರ

01:20 PM Jul 25, 2021 | Team Udayavani |

ಸಾಮಾಜಿಕ ಜವಾಬ್ದಾರಿ ಎನ್ನುವಂಥದ್ದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇರಬೇಕು. ಆದರೆ ಹೆಚ್ಚು ಹೆಚ್ಚು  ಸಾಮಾಜಿಕ ಕಾಳಜಿ ಯುವಜನರಿಗೆ ಬೇಕು. ನೆಲಕ್ಕಾಗಿ, ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಡಿದ ಮಹಾತ್ಮರನ್ನು ನಾವು ನೋಡಿದ್ದೇವೆ ಮತ್ತು ಅವರ ಆದರ್ಶಗಳನ್ನು ನಾವು ಪಾಲಿಸುತ್ತ ಬದುಕುತ್ತಿದ್ದೇವೆ.

Advertisement

ದೇಶದಲ್ಲಿ ಸಾಮಾಜಿಕ ಬದಲಾವಣೆ ಅಂದರೆ ಒಂದು ಚೌಕಟ್ಟನ್ನು ಹಾಕಿಕೊಂಡು ಯಾರೋ ಹೇಳಿದ ಹಾದಿ ಹಿಡಿದು ಹೊರಟಿದ್ದೇವೆ. ತಪ್ಪು ಗ್ರಹಿಕೆ ಮತ್ತು ಉಹಾಪೋಹದ ಮಾತುಗಳನ್ನು ಕೇಳುತ್ತಾ ಸ್ವಂತ ಆಲೋಚನೆ ಇಲ್ಲದೆ, ಅದೇ ಸರಿ ಎಂದು ಹೊರಟಿದ್ದೇವೆ. ಅದು ಸರಿ ಮಾಡಿಕೊಂಡಾಗ ಮಾತ್ರ ನಾವು, ಮೊದಲು ಬದಲಾವಣೆ ಕಾಣಲು ಸಾಧ್ಯ.

ನಾವು ಮೊದಲು ಅರಿಯಬೇಕಾದದ್ದು ಏನೆಂದರೆ ನಾವು ನಮ್ಮ ಆದರ್ಶ ವ್ಯಕ್ತಿಗಳನ್ನು, ಮಹಾತ್ಮರನ್ನು ನೋಡುವಾಗ ಸ್ವಾಮಿ ವಿವೇಕಾನಂದರು ಏನು ಹೇಳಿದ್ದಾರೆ, ಭಗತ್‌ ಸಿಂಗ್‌ ಏನು ಹೇಳಿದ್ದಾರೆ ಅವರ ಮಾರ್ಗ ಹೇಗಿತ್ತು. ಅವರ ಧೋರಣೆಗಳು ಹೇಗಿದ್ದವು, ಇದನ್ನು ನಾವು ನೋಡುವುದಿಲ್ಲ. ಬರೀ ಯಾರೋ ಬಿಗಿದ ಭಾಷಣಕ್ಕೆ ಮರುಳಾಗಿ ಅದೇ ಸತ್ಯದ ಇತಿಹಾಸವೆಂದು ಭಾವಿಸಿ ದ್ವೇಷ ಸಾಧಿಸುತ್ತೇವೆ. ಇದೇ ನಮ್ಮ ಮೊದಲ ತಪ್ಪು. ಗ್ರಹಿಕೆಗೆ ನಮ್ಮ ಸ್ವಂತ ಆಲೋಚನೆ ಬೇಕಿದೆ.

ಮಹಾತ್ಮಾರ ಪುಸ್ತಕಗಳನ್ನು ಓದುವುದರಿಂದ ನಾವು ಸತ್ಯವನ್ನು ಅರಿಯಬೇಕಿದೆ. ಬಳಿಕ ನಾವು ಸ್ವ ವಿಮರ್ಶೆ ಮಾಡಿಕೊಳ್ಳಬೇಕು. ಅಲ್ಲದೇ ವಿಚಾರಿಸುವ ಮುನ್ನ, ಮಾತನಾಡುವ ಮುನ್ನ ವಾಸ್ತವದ ಸ್ಥಿತಿಗತಿಗಳನ್ನು ಪರಾಮರ್ಶಿಸಿ ಮಾತನಾಡಬೇಕಿದೆ. ಆಗ ಮಾತ್ರ ನಮ್ಮ ವಿಚಾರಗಳು ಎಲ್ಲರಿಗೂ ಅಪ್ಯಾಯಮಾನವಾಗುತ್ತವೆ.

ಯುವಜನರು ಇತ್ತೀಚೆಗೆ ಯಾವ್ಯಾವುದೋ ಸಾಮಾಜಿಕ ಸಾಮರಸ್ಯ ಕೆಡಿಸುವ ಅಂಶಗಳಿಗೆ ಬಲಿಯಾಗುತ್ತಿರುವುದು ದುರಂತ. ಇದರಿಂದ ತಮ್ಮ ಜೀವನವನ್ನೇ ಅವರು ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂಥವುಗಳಿಂದ ಮೊದಲು ದೂರವಾಗಿ ಮಹಾತ್ಮರ ಸಾನ್ನಿಧ್ಯದಲ್ಲಿ ಪುಣ್ಯಸ್ನಾನ ಮಾಡಿ, ಅವರ ವಿಚಾರಗಳನ್ನು ನಾವು ಜೀವನದಲ್ಲಿ ಬೆಳಸಿಕೊಂಡಾಗ ಮಾತ್ರ ನಾವು ಮಾನವರಾಗಲೂ ಸಾಧ್ಯ.

Advertisement

ಪ್ರಶ್ನಿಸಿ? :

ನಾವು ಯಾವುದೇ ವಿಚಾರವನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಮುನ್ನ ಅದರ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ. ಅದು ಸಾಮಾಜಿಕ ಸಾಮರಸ್ಯಕ್ಕೆ ಒಳಿತಾಗಬಹುದೇ  ಅಥವಾ ನನ್ನ ಆದರ್ಶ ಜೀವನಕ್ಕೆ ಪೂರಕವಾಗಬಲ್ಲುದೇ ಎಂದು ಗಮನಹರಿಸಬೇಕಿದೆ. ಇದರಿಂದ ನಾವು ನಮ್ಮನ್ನು ನಾವು ಪ್ರಶ್ನಿಸಿ,  ಸ್ವವಿಮರ್ಶೆ ಮಾಡಿಕೊಂಡಾಗ ಮಾತ್ರ ನಮ್ಮ ವಿಚಾರ ಮತ್ತು ಜೀವನ ಮಾದರಿಯಾಗಬಲ್ಲುದು. ಇದರಿಂದ ಬದಲಾವಣೆ ಸಾಧ್ಯವಾಗಬಹುದು. ಯುವಜನರಿಂದ ಮುಖ್ಯವಾಗಿ ಸಮಾಜವನ್ನು ಕಟ್ಟುವ ಒಂದುಗೂಡಿಸುವ ಬದಲಾವಣೆ ತರುವ ಅವಕಾಶವಿದೆ. ಹಾಗಾಗಿ ಯಾವುದು ತಪ್ಪು, ಯಾವುದು ಸರಿ ಎನ್ನುವಂತದ್ದು ಯುವಜನರು ತೀರ್ಮಾನಿಸಬೇಕು. ಬೇರೆಯವರು ಹೇಳಿದ್ದನ್ನು ಅವರದ್ದೇ ಪಾಲಿಸಿದರೆ ನಾವು ಗುಲಾಮರಾಗುವುದರಲ್ಲಿ ಸಂದೇಹವಿಲ್ಲ. ನಿಜವಾಗಿಯೂ ದೇಶ, ಸಮಾಜ ಏನು ಎನ್ನುವಂಥದ್ದು ನಾವು ಅರಿತುಕೊಳ್ಳೋಣ.  ನಮ್ಮ ಜೀವನದ ಮೊದಲ ಪಾಠ ನಮ್ಮ ಬದುಕು ನಾವು ಬಂದಂತಹ ಕುಟುಂಬದ ಹಿನ್ನೆಲೆ ನಡವಳಿಕೆ. ಜನರೊಂದಿಗಿನ ಬೆಳೆಸುವ ಪ್ರೀತಿ, ವಿಶ್ವಾಸ, ಮಾನವ ಪರವಾದ ಕಾಳಜಿ. ಇನ್ನೊಬ್ಬರ ಕಷ್ಟಗಳನ್ನು ಪರಿಗಣಿಸಿ ನಮ್ಮ ಕಷ್ಟ ಎಂದುಕೊಂಡು ಅದನ್ನು ಪರಿಹರಿಸಿಕೊಂಡಾಗ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಈ ಎಲ್ಲ ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ ಸಾಗೋಣ.

 

ಶಂಕರ್‌ ಡಿ. ಸುರಳ್‌ 

ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next