Advertisement

ಗ್ರಾಮೀಣ ಭಾಗದ ಸಮಸ್ಯೆಗಳತ್ತ  ಗಮನಹರಿಸಿ: ರಾಯ್ಕರ

04:22 PM Sep 16, 2018 | Team Udayavani |

ಹಾವೇರಿ: ಇಂಜಿನಿಯರ್‌ಗಳು ಗ್ರಾಮೀಣ ಭಾಗದ ಸಮಸ್ಯೆಗಳತ್ತ ಗಮನಹರಿಸಬೇಕು. ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ನಿವೃತ್ತ ಕಾರ್ಯಪಾಲಕ ಇಂಜಿನೀಯರ್‌ ವಿ.ಜೆ. ರಾಯ್ಕರ ಹೇಳಿದರು. ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯನವರ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಇಂಜಿನಿಯರ್ ದಿನಾಚರಣೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

Advertisement

ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಇಂಜಿನಿಯರ್‌ಗಳ ಪಾತ್ರ ಮುಖ್ಯವಾಗಿದ್ದು, ಈ ಕ್ಷೇತ್ರದಲ್ಲಿರುವವರು ಅರ್ಪಣಾ ಭಾವದ ಸೇವೆ ಸಲ್ಲಿಸುವ ಮೂಲಕ ಹೊಸ ದೇಶ ಕಟ್ಟುವುದಕ್ಕೆ ತಮ್ಮ ಕಾಣಿಕೆ ನೀಡಬೇಕು ಎಂದರು. ವಿಶ್ವೇಶ್ವರಯ್ಯನವರು ತತ್ವಬದ್ಧರಾಗಿ ಹಾಗೂ ನೈತಿಕ ತಳಹದಿಯ ಮೇಲೆ ಕರ್ತವ್ಯ ನಿರ್ವಹಿಸಿದರು. ಕೆಆರ್‌ಎಸ್‌ ಡ್ಯಾಂ ನಿರ್ಮಾತೃ ಆಗಿ ಮೈಸೂರು ಭಾಗವನ್ನೇ ಹಸಿರು ಪ್ರದೇಶವನ್ನಾಗಿ ಪರಿವರ್ತಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದರು. ತುಂಗಭದ್ರಾ ಡ್ಯಾಂ ನಿರ್ಮಿಸುವ ಮೂಲಕ ನೀರಾವರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ ಅವರ ಮೌಲ್ಯಯುತ ಸೇವೆ ಇಂದಿಗೂ ಉಪಯೋಗವಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್‌ ಜಗದೀಶ ಜೋಶಿ ಮಾತನಾಡಿ, ಕರ್ತವ್ಯ ನಿಷ್ಠೆ ಹಾಗೂ ಆತ್ಮಗೌರವಕ್ಕೆ ಧಕ್ಕೆ ಬಂದಾಗ, ಪ್ರತಿಭಟನೆ ಮಾಡಿದ್ದು ವಿಶ್ವೇಶ್ವರಯ್ಯ ಜೀವನದ ವಿಶೇಷತೆಗಳು. ಈ ಎರಡೂ ಗುಣಗಳನ್ನು ಇಂದಿನ ಇಂಜಿನಿಯರ್‌ಗಳು ಅಳವಡಿಸಿಕೊಳ್ಳಬೇಕು ಎಂದರು. ನಿವೃತ್ತ ಇಂಜಿನಿಯರ್‌ ಎ.ಆರ್‌. ಕುಲಕರ್ಣಿ ಮಾತನಾಡಿ, ಕಾನೂನುಬದ್ಧ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಿದರೆ ಯಾರೊಬ್ಬರಿಗೂ ಅಂಜುವ ಅಗತ್ಯವಿಲ್ಲ ಎಂದರು.

ಇನ್ನೋರ್ವ ನಿವೃತ್ತ ಇಂಜಿನಿಯರ್‌ ವಿಶ್ವಬ್ರಾಹ್ಮಣ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಈ ಬಗ್ಗೆ ಅರಿವು ಮೂಡಿಸಿಕೊಳ್ಳಲು ಕಾರ್ಯಾಗಾರಗಳು ನಡೆಯಬೇಕು ಎಂದು ಆಶಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚಾಯತರಾಜ್‌ ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಕೆ.ವಿ. ಹಂಚಿನಮನಿ, ಇಂಜಿನಿಯರ್‌ಗಳು ಕೆಲಸ ನಿರ್ವಹಣೆಯಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಜನರ ಸಮಸ್ಯೆಗೆ ಸ್ಪಂದಿಸಿ ಅವರ ಜೀವನದಲ್ಲಿ ಬದಲಾವಣೆ ತರಲು ಯತ್ನಿಸಬೇಕು ಎಂದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಭಾವನ್‌ಮೂರ್ತಿ ಹಾಗೂ ಶಾಂತಣ್ಣ ಹಳ್ಳಿಕೇರಿ ಮಾತನಾಡಿದರು. ಇಂಜಿನಿಯರ್‌ ಬಾಳಪ್ಪಗೌಡ ಸ್ವಾಗತಿಸಿದರು. ಕಾರ್ಯಪಾಲಕ ಅಭಿಯಂತರ ವಿನಾಯಕ ಹುಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ವಿ. ಮಠ ವಂದಿಸಿದರು.

Advertisement

ಮೂರ್ತಿ ಅನಾವರಣ
ಕಾರ್ಯಾಲಯದ ಆವರಣದಲ್ಲಿ ಸರ್‌. ಎಂ. ವಿಶ್ವೇಶ್ವರಯ್ಯನವರ ಕಂಚಿನಮೂರ್ತಿಯನ್ನು ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಎ.ಆರ್‌. ಮುದ್ರಿ ಹಾಗೂ ಗುತ್ತಿಗೆದಾರ ಮಾರುತಿ ಮುಂತಾದವರನ್ನು ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next