Advertisement

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

01:53 AM Oct 01, 2020 | mahesh |

ಬಾಬರಿ ಮಸೀದಿ ವಿವಾದದ ಉಗಮ ಸ್ಥಾನ ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯ ಅಯೋಧ್ಯೆ. 1980-90ರ ದಶಕದಲ್ಲಿ ಅಲ್ಲಿ ವಿವಾದವಾಗಿದ್ದಾಗ ಅಂದಿನ ರಾಜಕೀಯ ಪರಿಸ್ಥಿತಿ ಹೇಗಿತ್ತು. ಈ ರಾಮಮಂದಿರ ಗಲಾಟೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲು ಆ ಅವಧಿಯಲ್ಲಿದ್ದ ರಾಜೀವ್‌ ಗಾಂಧಿ, ವಿ.ಪಿ. ಸಿಂಗ್‌, ಪಿ.ವಿ. ನರಸಿಂಹ ರಾವ್‌ ಸರಕಾರಗಳು ಹೇಗೆ ಪ್ರಯತ್ನಿಸಿದವು. ಅದರಿಂದ ಅವು ಯಶಸ್ವಿಯಾದವೇ, ವೈಫ‌ಲ್ಯವಾದವೇ ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

Advertisement

ರಾಜೀವ್‌ ಗಾಂಧಿ
1980ರ ದಶಕದಲ್ಲಿ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯ ಜಾಗದಲ್ಲಿ ಪುನಃ ರಾಮಮಂದಿರ ತಲೆ ಎತ್ತಬೇಕು ಎಂಬ ಬಗ್ಗೆ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವ ಸಲುವಾಗಿ ರಥಯಾತ್ರೆ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಲೋಚಿಸಿತು. ಅದನ್ನು 1990ರಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸಿದ್ದು ವಿಎಚ್‌ಪಿಯ ರಾಜಕೀಯ ಧ್ವನಿಯೆನಿಸಿದ್ದ ಬಿಜೆಪಿ. ಅಷ್ಟರಲ್ಲಿ, ಫೈಜಾಬಾದ್‌ ಜಿಲ್ಲಾ ನ್ಯಾಯಾಲಯ 1986ರಲ್ಲಿ ತೀರ್ಪೊಂದನ್ನು ನೀಡಿ, ವಿವಾದಿತ ಬಾಬರಿ ಮಸೀದಿಯಲ್ಲಿ ಹಿಂದೂಗಳು ಕೂಡ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿತು. ಶಾ ಬಾನೋ ಪ್ರಕರಣದಲ್ಲಿ ಹಿಂದೂಗಳ ವಿವಾದ ಕಟ್ಟಿಕೊಂಡಿದ್ದ ರಾಜೀವ್‌ ಗಾಂಧಿ ಸರಕಾರ, ಫೈಜಾಬಾದ್‌ ನ್ಯಾಯಾಲಯದ ತೀರ್ಪನ್ನು ಹಿಂದೂಗಳ ಮೆಚ್ಚುಗೆ ಗಳಿಸಲು ಬಳಸಿಕೊಂಡಿತು. ಆದರೆ, ಅದು ಫ‌ಲ ನೀಡಲಿಲ್ಲ. 1989ರ ಮಹಾಚುನಾವಣೆಯಲ್ಲಿ ರಾಜೀವ್‌ ಗಾಂಧಿ ಸರಕಾರ ಸೋಲೊಪ್ಪಿಕೊಂಡಿತು.

ವಿ.ಪಿ. ಸಿಂಗ್‌
ಮತ್ತೂಂದೆಡೆ, 1984ರಲ್ಲಿ ಲೋಕಸಭೆಯಲ್ಲಿ ಕೇವಲ 2 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ, 1989ರ ಹೊತ್ತಿಗೆ 85 ಸ್ಥಾನಗಳನ್ನು ಪಡೆದಿತ್ತು. ಆಗ ಅದು, ನ್ಯಾಷನಲ್‌ ಫ್ರಂಟ್‌ ಒಕ್ಕೂಟಕ್ಕೆ ಬಾಹ್ಯ ಬೆಂಬಲ ನೀಡಿದ್ದರಿಂದ ಕೇಂದ್ರದಲ್ಲಿ ವಿಶ್ವನಾಥ್‌ ಪ್ರತಾಪ್‌ ಸಿಂಗ್‌ ನೇತೃತ್ವದಲ್ಲಿ ಸರಕಾರ ರಚನೆಯಾಯಿತು. 1990ರಲ್ಲಿ ಲಾಲ್‌ಕೃಷ್ಣ ಆಡ್ವಾಣಿಯವರ ಸಾರಥ್ಯದಲ್ಲಿ ರಥಯಾತ್ರೆ ಪ್ರಾರಂಭವಾಯಿತು. ಬಿಹಾರಕ್ಕೆ ಈ ರಥಯಾತ್ರೆ ಆಗಮಿಸಿದಾಗ ಆಡ್ವಾಣಿ ಬಂಧನಕ್ಕೊಳಗಾದರು. ಆಗ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂಪ್ರಸಾದ್‌ ಯಾದವ್‌, ಆಡ್ವಾಣಿಯವರನ್ನು ಗೃಹಬಂಧನದಲ್ಲಿ ಇಟ್ಟಿದ್ದರು. ಇದು ರಾಷ್ಟ್ರವ್ಯಾಪಿ ವಿವಾದವಾಯಿತು. ಅದರ ಬಿಸಿ ಕೇಂದ್ರಕ್ಕೂ ತಟ್ಟಿತು. ಕೂಡಲೇ ವಾಜಪೇಯಿ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ಕೇಂದ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದರು. ಪರಿಣಾಮವಾಗಿ ವಿ.ಪಿ.ಸಿಂಗ್‌ ನೇತೃ ತ್ವದ ಸರಕಾರ ಪತನಗೊಂಡಿತು.

ಪಿ.ವಿ. ನರಸಿಂಹ ರಾವ್‌
1991ರಿಂದ 1996ರವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ. ನರಸಿಂಹ ರಾವ್‌ ನೇತೃತ್ವದ ಸರಕಾರ, ಉತ್ತರ ಪ್ರದೇಶದಲ್ಲಿ ಬಾಬರಿ ಮಸೀದಿ ವಿವಾದ ತಾರಕಕ್ಕೇರಿದ್ದರೂ, ನಿರ್ಲಿಪ್ತವಾಗಿದ್ದದ್ದೇ ಮುಂದಿನ ಬೆಳವಣಿಗೆಗೆ ಕಾರಣ ಎಂಬ ಆರೋಪವಿದೆ. ಬಾಬರಿ ಮಸೀದಿ ಕೆಡವಿದ ಮೇಲೆ, ಉತ್ತರ ಪ್ರದೇಶದಲ್ಲಿದ್ದ ಕಲ್ಯಾಣ್‌ ಸಿಂಗ್‌ ಸರಕಾರವನ್ನು ನರಸಿಂಹರಾವ್‌ ಸರಕಾರ ವಜಾ ಮಾಡಿತ್ತು. ಇದರ ಪರಿಣಾಮವಾಗಿ ರಾವ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಮುಂದಿನ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ಬರುವಲ್ಲಿ ವಿಫ‌ಲವಾಯಿತು.

ಮೋದಿಯಿಂದ ಸೌಹಾರ್ದಯುತ ವೇದಿಕೆ
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಮೊದಲ ಅವಧಿಯ ಸರಕಾರ ಅಧಿಕಾರಕ್ಕೆ ಬಂದಾಗ, ಅಷ್ಟರಲ್ಲಾಗಲೇ ರಾಮಜನ್ಮಭೂಮಿ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 2019ರಲ್ಲಿ ಆ ಪ್ರಕರಣದ ತೀರ್ಪು ಹೊರಬೀಳುವಷ್ಟರಲ್ಲಿ ಯಾವುದೇ ಗಲಭೆಗಳಾಗದಂತೆ, ಯಾವುದೇ ಸಂಘರ್ಷಗಳು ಉಂಟಾಗದಂತೆ ಒಂದು ಸೌಹಾರ್ದಯುತ ವೇದಿಕೆಯನ್ನು ಸಜ್ಜುಗೊಳಿಸಿದ ಹೆಗ್ಗಳಿಕೆ ಮೋದಿ ಸರಕಾರಕ್ಕೆ ಸಲ್ಲುತ್ತದೆ. ಅದರ ಪರಿಣಾಮ, ಆ. 5ರಂದು ಅಯೋಧ್ಯೆಯಲ್ಲಿ ಮೋದಿಯವರೇ ಖುದ್ದಾಗಿ ಶ್ರೀರಾಮಮಂದಿರದ ಭೂಮಿ ಪೂಜೆ ನೆರವೇರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next