Advertisement

ಖಾಲಿ ಇರುವ ಹುದ್ದೆ ಭರ್ತಿಗೆ ಬರಲಿದೆ ಪರಿಷ್ಕೃತ ನಿಯಮ

07:30 AM Dec 18, 2017 | |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಪ್ರಸಕ್ತ ಅಗತ್ಯಕ್ಕೆ ತಕ್ಕಂತೆ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಣೆ ಮಾಡಲು ಸರ್ಕಾರ ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ.

Advertisement

ಸರ್ಕಾರಿ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ 3 ವರ್ಷಗಳಿಗೊಮ್ಮೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಬೇಕು ಎಂಬ ನಿಯಮವಿದ್ದರೂ ಅನೇಕ ಇಲಾಖೆಗಳು ಇನ್ನೂ 2-3 ದಶಕಗಳ ಹಿಂದಿನ ನೇಮಕಾತಿ ನಿಯಮಗಳ್ನನೇ ಅನುಸರಿಸುತ್ತಿವೆ. ಈ ಬಗ್ಗೆ 2004, 2008, 2011,2015 ಮತ್ತು 2017ರ ಜೂನ್‌ ತಿಂಗಳಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದರು. ಅದರಲ್ಲೂ 2017ರ ಜೂನ್‌ ತಿಂಗಳಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಒಂದು ತಿಂಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಪರಿಷ್ಕರಣೆ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದ್ದರು.

ಸ್ಪಂದಿಸದ ಇಲಾಖೆಗಳು: ಈ ಯಾವ ಆದೇಶಗಳಿಗೂ ಇಲಾಖೆಗಳು ಮಾತ್ರ ಇನ್ನೂ ಸ್ಪಂದಿಸಿಲ್ಲ. ಅದರಲ್ಲೂ ಮುಖ್ಯವಾಗಿ ಶಿಕ್ಷಣ, ಕಂದಾಯ, ಅಬಕಾರಿ, ಕಾನೂನು ಮಾಪನಶಾಸOಉ ಇಲಾಖೆ, ವಸತಿ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳು ಸುದೀರ್ಘ‌ ಕಾಲದಿಂದ ನಿಯಮ ಪರಿಷ್ಕರಣೆ ಮಾಡಿಯೇ ಇಲ್ಲ. ಆ ಇಲಾಖೆಗಳಲ್ಲಿ ಈಗಲೂ 25-30 ವರ್ಷಗಳ ಹಿಂದೆ ರೂಪಿಸಿದ್ದ ವೃಂದ ಮತ್ತು ನೇಮಕಾತಿ ನಿಯಮಗಳೇ ಜಾರಿಯಲ್ಲಿವೆ. ಇನ್ನು ಕೆಲವು ಇಲಾಖೆಗಳಲ್ಲಿ ಸಮಗ್ರ ಪರಿಷ್ಕರಣೆ ಮಾಡದೆ ಒಂದೆರಡು ವೃಂದಗಳಿಗೆ
ಸಂಬಂಧಿಸಿದಂತೆ ಮಾತ್ರ ತಿದ್ದುಪಡಿ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಳೆದ 10 ವರ್ಷಗಳಿಂದ ಪರಿಷ್ಕರಿಸದೇ ಇರುವ ಇಲಾಖೆಗಳು ಇನ್ನು 1 ತಿಂಗಳಲ್ಲಿ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಂಡು ಇಲಾಖೆ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿಯವರ ಅಧ್ಯಕ್ಷತೆಯ ವೃಂದ ಪರಿಶೀಲನಾ ಉಪ ಸಮಿತಿ ಸಭೆಯಲ್ಲಿ ಪ್ರಸ್ತಾವನೆಗಳನ್ನು ಚರ್ಚಿಸಬೇಕು. ನಂತರ ಕರಡು ನಿಯಮಗಳನ್ನು ಸಂಸದೀಯ ವ್ಯವಹಾರಗಳ ಇಲಾಖೆಯಿಂದ ಪರಿಶೋಧಿಸಿಕೊಂಡು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿರುವ ಸಮಿತಿ ಮುಂದೆ ಮಂಡಿಸಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯಭಾಸ್ಕರ್‌ ಡಿ.15ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ. ಇಲಾಖೆಗಳು ಮಾತ್ರವಲ್ಲದೆ, ಇದುವರೆಗೆ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆ ಮಾಡದೇ ಇರುವ ಅವುಗಳಡಿ ಕಾರ್ಯನಿರ್ವಹಿಸುವ ಸ್ಥಳೀಯ ಸಂಸ್ಥೆಗಳು, ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆಗಳು ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಒಂದು ತಿಂಗಳ ನಂತರ ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲು ಇಲಾಖಾವಾರು ಸಭೆಗಳನ್ನು ನಡೆಸಬೇಕು ಎಂದೂ ತಿಳಿಸಿದ್ದಾರೆ.

ಯಾಕಾಗಿ ಪರಿಷ್ಕರಣೆ?
ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುವುದರಿಂದ ಇಲಾಖೆಯ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಹತೆ ಮತ್ತು ತಾಂತ್ರಿಕ ಪರಿಣತಿ ಹೊಂದಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಇದಲ್ಲದೆ, ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಮಾಣವನ್ನು ನಿರ್ಧರಿಸಿ ವೃಂದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಅನುಕೂಲವಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next