Advertisement

ಸಮಸ್ಯೆ ಬಗೆಹರಿಸದ ಅಧಿಕಾರಿಗಳಿಗೆ ತರಾಟೆ

12:41 PM Apr 07, 2017 | Team Udayavani |

ತಿ.ನರಸೀಪುರ: ರೈತರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ರೈತರು ಹರಿಹಾಯ್ದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆಯಿತು. ತಹಸೀಲ್ದಾರ್‌ ಬಿ.ಶಂಕರಯ್ಯ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಅಧಿಕಾರ ವಿರುದ್ಧ ದೂರಿನ ಸುರಿಮಳೆಗೈದ ರೈತರು ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ತಾಪಂ ಕಾರ್ಯನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು.

Advertisement

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಖಾತೆ, ತಿದ್ದುಪಡಿ ಮಾಡಿಸಿಕೊಳ್ಳಲು ವಿಎ, ಆರ್‌ಐಗಳ ಬಳಿ ಅರ್ಜಿ ತೆಗೆದುಕೊಂಡು ಹೋದರೆ ಅಧಿಕಾರಿಗಳು ಲಂಚ ನೀಡುವಂತೆ ಕೇಳುತ್ತಾರೆ. ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಆಲಗೂಡು ಮಹದೇವು ದೂರಿದರು.

ಮೂಗೂರು ಹೋಬಳಿ ವ್ಯಾಪ್ತಿಯಲ್ಲಿ ಟಿಎಸ್‌ಪಿ ಯೋಜನೆಯಡಿ ರೈತರಿಗೆ ಕೊಳವೆಬಾವಿ ಕೊರೆಸಲು ಫ‌ಲಾನುಭವಿಗಳ ಪಟ್ಟಿ ತಯಾರಿಸಲಾಗಿತ್ತು. ಆದರೆ, ಅಧಿಕಾರಿಗಳು ಪಟ್ಟಿಯಲ್ಲಿ ಆಯ್ಕೆಯಾಗಿರುವ ಫ‌ಲಾನುಭವಿಗಳನ್ನು ಬಿಟ್ಟು ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಅವರ ಇಚ್ಛೆಯುಳ್ಳವರಿಗೆ ಕೊಳವೆಬಾವಿ ಕೊರೆಸಲು ಅನುಮತಿ ನೀಡಲಾಗಿದೆ ಎಂದು ಆರೋಪಿಸಿದರು.

ರೈತ ಮುಖಂಡ ನಾರಾಯಣ್‌ ಮಾತನಾಡಿ, ಬನ್ನೂರು ಹೋಬಳಿ ವ್ಯಾಪ್ತಿಯ ರೈತರು ತಾವು ಬೆಳೆದಂತಹ ತರಕಾರಿ, ಇನ್ನಿತರ ಧಾನ್ಯಗಳನ್ನು ಬನ್ನೂರು ಪಟ್ಟಣದಲ್ಲಿ ವ್ಯಾಪಾರ ಮಾಡುತ್ತಿದ್ದು, ವ್ಯಾಪಾರ ಮಾಡುವ ರೈತರಿಂದ ಶುಲ್ಕ ವಸೂಲಿ ಮಾಡುವ ಪುರಸಭೆಯವರು ಕುಡಿಯುವ ನೀರು, ಶೌಚಾಲಯ ಕಲ್ಪಿಸಿಲ್ಲ ಎಂದು ಕಿಡಿಕಾರಿದರು.

ಮೇವಿನ ಕೇಂದ್ರ ತೆರೆಯಿರಿ: ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಎದುರಾಗಿದೆ. ಆದರೂ ತಾಲೂಕು ಆಡಳಿತ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕೂಡಲೇ ತಾಲೂಕಿನಲ್ಲಿ ಮೇವಿನ ಕೇಂದ್ರ ತೆರೆಯುವಂತೆ ಆಗ್ರಹಿಸಿದರು.

Advertisement

ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಶಿವಪ್ರಸಾದ್‌ ಮಾತನಾಡಿ, ಕೊತ್ತೇಗಾಲ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್‌ ಕಂಬಗಳು ಶಿಥಿಲಗೊಂಡಿದ್ದು, ವೈರ್‌ಗಳು ಜೋತು ಬಿದ್ದು ಅನಾಹುತ ನಡೆಯುವ ಸಾಧ್ಯತೆಯಿದೆ. ಕೂಡಲೇ ಇದನ್ನು ಸರಿಪಡಿಸಿ ಕೊಡಿ ಎಂದು ಸೆಸ್ಕಾಂಗೆ ದೂರು ನೀಡಿದರೆ ಕ್ರಮವಹಿಸಬೇಕಾದ ಅಧಿಕಾರಿಗಳು ವಿದ್ಯುತ್‌ ಕಂಬ, ವೈರ್‌ಗಳಿಗಾಗಿ ರೈತರೇ ಹಣ ನೀಡಬೇಕೆಂದು ಹೇಳುತ್ತಾರೆ. ಇದೂ ಎಷ್ಟರ ಮಟ್ಟಿಗೆ ಸರಿ ಎಂದು ಸೆಸ್ಕಾಂ ಎಇಇ ಶಂಕರ್‌ ಅವರನ್ನು ಪ್ರಶ್ನಿಸಿದರು.

ಸಾಂಕ್ರಾಮಿಕ ರೋಗಗಳ ಭೀತಿ: ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಪ್ರಮುಖ ರಸ್ತೆಗಳನ್ನು ಸ್ವತ್ಛಗೊಳಿಸದಿದ್ದರಿಂದ ಅನೈರ್ಮಲ್ಯ ತಾಂಡವವಾಡುತ್ತಿದೆ. ಬೇಸಿಗೆ ಆರಂಭವಾಗಿದ್ದು, ಅನೈರ್ಮಲ್ಯದಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.  ಈ ಬಗ್ಗೆ ಪಿಡಿಒಗಳ ಗಮನಕ್ಕೆ ತಂದರೂ ಅಸಡ್ಡೆ ತೋರುತ್ತಿದ್ದು, ಈ ಬಗ್ಗೆ ನಿಮಗೆ ಮನವಿ ಮಾಡಿದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ತಾಪಂ ಇಒ ಬಿ.ಎಸ್‌.ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.

ಬರಗಾಲವಿರುವುದರಿಂದ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತೊಟ್ಟಿ ನಿರ್ಮಾಣ ಮಾಡಿ ನೀರು ಸರಬರಾಜು ಮಾಡಬೇಕು. ಆದರೆ, ಇದುವರೆಗೂ ಯಾವುದನ್ನೂ ಮಾಡಿಲ್ಲ ಎಂದು ಇಒ ವಿರುದ್ಧ ಹರಿಹಾಯ್ದರು.

ಚಿದರವಳ್ಳಿಯಲ್ಲಿ ಮೇವು ಬ್ಯಾಂಕ್‌: ತಹಶೀಲ್ದಾರ್‌ ಬಿ.ಶಂಕರಯ್ಯ ಮಾತನಾಡಿ, ಯಾವುದೇ ಅಧಿಕಾರಿ ಲಂಚ ಕೇಳಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರಿಗಿಸಲಾಗುವುದು. ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಶೀಘ್ರ ಚಿದರವಳ್ಳಿಯಲ್ಲಿ ಮೇವು ಬ್ಯಾಂಕ್‌ ತೆರೆದು ಕೆಜಿಗೆ 2 ರೂ.ನಂತೆ ಮೇವು ವಿತರಣೆ ಮಾಡಲಾಗುವುದು ಎಂದರು.

ತಾಪಂ ಇಒ ಬಿ.ಎಸ್‌. ರಾಜು ಮಾತನಾಡಿ, ಈಗಾಗಲೇ ಯಾವ ಗ್ರಾಮಗಳಲ್ಲಿ ಕುಡಿಯವ ನೀರು ಹಾಗೂ ಮೇವಿನ ಸಮಸ್ಯೆ ಇದೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದು, ತಾಲೂಕಿನಾದ್ಯಂತ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ಸ್ವತ್ಛತೆ ಕಾಪಾಡುವಂತೆ ಆಯಾ ಗ್ರಾಪಂ ಪಿಡಿಒಗೆ ನಿರ್ದೇಶನ ನೀಡಲಾಗುವುದೆಂದು ಭರವಸೆ ನೀಡಿದರು.

ಸಭೆಯಲ್ಲಿ ರೈತ ಮುಖಂಡರಾದ ಬನ್ನೂರು ಹುಚ್ಚೇಗೌಡ, ಗೌಡರ ಪ್ರಕಾಶ್‌, ತಲಕಾಡು ದಿನೇಶ್‌, ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷೆ ರೇವತಿ. ಕೃಷಿ ಅಧಿಕಾರಿ ಕೃಷ್ಣಮೂರ್ತಿ, ಸಬ್‌ಇನ್ಸ್‌ಪೆಕ್ಟರ್‌ ಎನ್‌.ಆನಂದ್‌, ಬನ್ನೂರು ಪುರಸಭೆ ಮುಖ್ಯಾಧಿಕಾರಿ ಗಂಗಾಧರ್‌, ಕರೋಹಟ್ಟಿ ಕುಮಾರಸ್ವಾಮಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next