Advertisement

ಸಮಸ್ಯೆ ಈಗಿಲ್ಲ; ನೀರು ಮಿತ ಬಳಕೆಗೆ ಸಕಾಲ

09:32 AM Apr 29, 2019 | Suhan S |

 

Advertisement

ಪುತ್ತೂರು ಎ. 28: ಪುತ್ತೂರು ನಗರ ವ್ಯಾಪ್ತಿಗೆ ನೀರು ಪೂರೈಕೆ ಪ್ರಧಾನ ವ್ಯವಸ್ಥೆ ಯಾದ ಕುಮಾರಧಾರಾ ನದಿಯ ನೆಕ್ಕಿಲಾಡಿ ಕಿಂಡಿ ಅಣೆಕಟ್ಟಿನಲ್ಲಿ 630 ಮಿಲಿಯನ್‌ ಲೀಟರ್‌ ನೀರು ಶೇಖರಣೆಗೊಂಡಿದೆ. ಮುಂದಿನ ಒಂದು ತಿಂಗಳಿಗೆ ಶೇಖರಣೆ ಯಾದ ನೀರು ಸಾಕಾಗುತ್ತದೆ. ಈ ನಡುವೆ ಕುಮಾರಧಾರಾ ನದಿ ಮೂಲ ಭಾಗಗಳಲ್ಲಿ ಮಳೆಯಾಗಿರುವುದರಿಂದ ನೀರಿನ ಮಟ್ಟ ಏರಿಕೆ ಕಂಡಿದೆ.

80 ಲಕ್ಷ ಲೀ. ನೀರು ಆವಶ್ಯ:

ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಸುಮಾರು 60 ಸಾವಿರ ಜನಸಂಖ್ಯೆಯಿದೆ. ಪ್ರತೀ ದಿನ 80 ಲಕ್ಷ ಲೀ. (8 ಮಿ.ಲೀ.) ನೀರಿನ ಆವಶ್ಯಕತೆ ಇಲ್ಲಿದೆ. ಇದನ್ನು ಪೂರೈಸಲು 10,700 ನೀರು ಸಂಪರ್ಕ ಗಳನ್ನು ನೀಡಲಾಗಿದೆ. ಇದರ ಜತೆಗೆ 34 ಶಿಕ್ಷಣ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಸಂಪರ್ಕ ಪಡೆದಿವೆ. ಕಾಲನಿ ಪ್ರದೇಶಗಳಲ್ಲಿ ಅಂದಾಜು 500 ನಳ್ಳಿ ಸಂಪರ್ಕಗಳಿವೆ.

ಸುಮಾರು 75 ಲಕ್ಷ ಲೀಟರ್‌ (7.5 ಮಿ.ಲೀ.) ನೀರು ಉಪ್ಪಿನಂಗಡಿ ಕುಮಾರ ಧಾರಾ ನದಿಯಿಂದ ನೆಕ್ಕಿಲಾಡಿ ರೇಚಕ ಸ್ಥಾವರದ ಮೂಲಕ ನಗರಸಭಾ ವ್ಯಾಪ್ತಿಗೆ ಪೂರೈಕೆಯಾಗುತ್ತದೆ. ಉಳಿದ ನೀರನ್ನು ಬೋರ್‌ವೆಲ್ಗಳಿಂದ ಪಡೆಯಲಾಗುತ್ತಿದೆ. ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 144 ಬೋರ್‌ವೆಲ್ಗಳಿವೆ.

Advertisement

 

ಪುತ್ತೂರು ನಗರ ನೀರು ಸರಬರಾಜು ಯೋಜನೆಯ ರೇಚಕ ಯಂತ್ರ ಸ್ಥಾವರ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಕುಮಾರ ಧಾರಾ ನದಿ ದಂಡೆಯ ಬಳಿ ಇದೆ. ಇಲ್ಲಿ 35 ಅಶ್ವಶಕ್ತಿಗಳ 3 ಪಂಪ್‌ಗ್ಳಿವೆ. ಇಲ್ಲಿಂದ ಸುಮಾರು 12 ಕಿ.ಮೀ. ದೂರದ ಪುತ್ತೂರು ನಗರಕ್ಕೆ ದಿನಂಪ್ರತಿ 70 ಲಕ್ಷ ಲೀ. ನೀರು ಸರಬರಾಜಾಗುತ್ತಿದೆ. ನೀರು ಸರಬರಾಜು ವ್ಯವಸ್ಥೆಯ ರೇಚಕ ಯಂತ್ರ ಸ್ಥಾವರಕ್ಕೆ ಪುತ್ತೂರು ಉಪವಿದ್ಯುತ್‌ ಕೇಂದ್ರದಿಂದ 11 ಕೆ.ವಿ. ಸಾಮರ್ಥ್ಯದ ಎಕ್ಸ್‌ಪ್ರೆಸ್‌ ಫೀಡರ್‌ ಲೈನ್‌ ಎಳೆಯಲಾಗಿದೆ.

ಮಂಗಳೂರಿಗೆ ಬೇಕಾದರೆ?:

2016ನೇ ಸಾಲಿನ ಬೇಸಗೆಯಲ್ಲಿ ಮಂಗಳೂರು ನಗರದಲ್ಲಿ ನೀರಿಗೆ ಸಮಸ್ಯೆ ಉಂಟಾದಾಗ ನೆಕ್ಕಿಲಾಡಿ ಅಣೆಕಟ್ಟಿನಿಂದ ನೀರು ಹರಿಸಲು ಜಿಲ್ಲಾಧಿಕಾರಿ ಆದೇಶಿಸಿ ದ್ದರು. ಆಗ ಪುತ್ತೂರಿಗೂ ನೀರಿನ ಕೊರತೆ ಯಾಗುವ ಭೀತಿ ಎದುರಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಘಟ್ಟ ಭಾಗದಲ್ಲಿ ಮಳೆಯಾಗಿ ಸಮಸ್ಯೆ ನಿವಾರಣೆಯಾಗಿತ್ತು. ಈ ಬಾರಿಯೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾದರೆ ಮತ್ತು ನೆಕ್ಕಿಲಾಡಿಯಿಂದ ನೀರು ಹರಿಸುವುದು ಅನಿವಾರ್ಯದರೆ ಮಾತ್ರ ಪುತ್ತೂರು ಭಾಗಕ್ಕೂ ಸಮಸ್ಯೆಯಾಗಲಿದೆ.

ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆಯ ಬಗ್ಗೆ ವರದಿ ಮಾಡಿ ಅದಕ್ಕೆ ಶಾಶ್ವತ ಪರಿಹಾರ ಒದಗಿಸುವಲ್ಲಿ ‘ಉದಯವಾಣಿ-ಸುದಿನ’ ಮುಂದಾಗಿದ್ದು ಇದಕ್ಕೆ ಅನುಗುಣವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಅನುಭವಿಸುತ್ತಿರುವ ನೀರಿನ ಬವಣೆಗಳನ್ನು ತಿಳಿಸುವ ಒಂದು ಪ್ರಯತ್ನ.

ನೆಕ್ಕಿಲಾಡಿ ಅಣೆಕಟ್ಟಿನ ತಳಭಾಗದಲ್ಲಿ ನೀರಿನ ಸೋರಿಕೆ ಹಲವು ವರ್ಷಗಳಿಂದ ಇದೆ. ಸಣ್ಣಪುಟ್ಟ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದ್ದರೂ ಸೋರಿಕೆಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಇದರ ಜತೆಗೆ ಡ್ಯಾಂ ವ್ಯಾಪ್ತಿಯಲ್ಲಿ ಅನಧಿಕೃತ ಪಂಪ್‌ಗ್ಳಿಂದ ನೀರು ಮೇಲಕ್ಕೆತ್ತುವ ಕಾರ್ಯವೂ ನಡೆ ಯುತ್ತಿದೆ. ಕೃಷಿ ಹಾಗೂ ಇತರ ವಾಣಿಜ್ಯ ಚಟುವಟಿಕೆಗೆ ನದಿ ನೀರಿನ ಬಳಕೆ ನಿಷಿದ್ಧವಿದ್ದರೂ ಕದ್ದು ಮುಚ್ಚಿ ಪಂಪ್‌ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ ಎನ್ನುವ ಆರೋಪವೂ ಇದೆ.

 

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next