Advertisement

ಚುನಾವಣಾ ಪ್ರಚಾರಕ್ಕೆ ಅಂಚೆ ಇಲಾಖೆ ದುರ್ಬಳಕೆ

07:26 AM Mar 15, 2019 | Team Udayavani |

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಾಗೂ ಪಕ್ಷದ ಪರ ಪ್ರಚಾರಕ್ಕೆ ಅಂಚೆಕಚೇರಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಮೈಸೂರು -ಕೊಡಗು ಕ್ಷೇತ್ರದ ಸಂಸದ ಪ್ರತಾಪ್‌ಸಿಂಹ ಹಾಗೂ ಸಹಕಾರ ನೀಡಿರುವ ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಪ್ರಕಾಶ್‌ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮು ಆಗ್ರಹಿಸಿದ್ದಾರೆ.

Advertisement

ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅವರಿಗೆ ದೂರು ಸಲ್ಲಿಸಿರುವ ಅವರು, ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಸಂಸದ ಪ್ರತಾಪ್‌ ಸಿಂಹ ಅವರು, ತಮ್ಮ ಪಕ್ಷ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳುಳ್ಳ 50 ಸಾವಿರ ಕಿರುಹೊತ್ತಿಗೆಗಳನ್ನು ಮುದ್ರಿಸಿ ಮೈಸೂರಿನ ವಿವಿಧ ಅಂಚೆ ಕಚೇರಿಗಳ ಪೋಸ್ಟ್‌ಮನ್‌ಗಳ ಮೂಲಕ ಮನೆ ಮನೆಗೆ ಹಂಚಿಕೆ ಮಾಡಿಸಲಾಗಿದೆ. 

ವಿಳಾಸ ರಹಿತವಾದ ಈ ಕಿರುಹೊತ್ತಿಗೆಯನ್ನು ಹಂಚಲು ಪೋಸ್ಟ್‌ಮನ್‌ಗಳನ್ನು ಬಳಕೆ ಮಾಡಿಕೊಂಡಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಜೊತೆಗೆ ಸಂಸದ ಪ್ರತಾಪ್‌ ಸಿಂಹ ಅವರ ಕಿರುಹೊತ್ತಿಗೆಯನ್ನು ಪೋಸ್ಟ್‌ಮನ್‌ಗಳ ಮೂಲಕ ವಿತರಣೆ ಮಾಡಿಸುವಂತೆ ಅಧಿಕೃತ ಸುತ್ತೋಲೆ ಹೊರಡಿಸಿರುವ ಹಿರಿಯ ಅಂಚೆ ಅಧೀಕ್ಷಕ ಪ್ರಕಾಶ್‌ ಅವರನ್ನು ಕೂಡಲೇ ಅಮಾನತುಪಡಿಸಿ, ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು.

ಜೊತೆಗೆ ಅಂಚೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರತಾಪ್‌ಸಿಂಹ ಅವರನ್ನು ಕಣದಿಂದ ಅನರ್ಹಗೊಳಿಸಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮೈಸೂರು ನಗರ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಮಹೇಶ್‌ ಗೌಡ, ಜಿಲ್ಲಾ ಕಾಂಗ್ರೆಸ್‌ ಓಬಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕಾಡನಹಳ್ಳಿ ಸ್ವಾಮಿಗೌಡ, ಮುಖಂಡರಾದ ಸತೀಶ್‌ಕುಮಾರ್‌, ಜಾಕೀರ್‌ ಹುಸೇನ್‌, ಪ್ರಸನ್ನ ದೊಡ್ಡುಂಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next