ಕುದೂರು: ಹೋಬಳಿಯಾದ್ಯಂತ 71ನೇ ಸ್ವಾತಂತ್ರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದರು. ದ್ವಿಚಕ್ರ ವಾಹನ, ಆಟೋ, ಬಸ್, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳ ಮೇಲೆ ಎಲ್ಲಿ ನೋಡಿದರಲ್ಲಿ ತ್ರಿವರ್ಣ ಧ್ವಜ ಹಾರಾಡಿ ರಾಷ್ಟ್ರೀಯತೆಯ ಮೆರಗಿನ ಚಿತ್ತಾರ ಮೂಡಿಸಿದರೆ ಎಲ್ಲೆಲ್ಲಿಯೂ ದೇಶ ಭಕ್ತಿ ಚಿಮ್ಮಿಸುವ ಗೀತೆಗಳು ಮೊಳಗಿದವು.
ಗ್ರಾಮದ ರಾಮಲೀಲಾ ಕ್ರೀಡಾಂಗಣದಲ್ಲಿ ಗ್ರಾಪಂ ವತಿಯಿಂದ ಏರ್ಪಡಿಸಿದ್ದ ಸ್ವಾಂತಂತ್ರ್ಯದಿನದ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಪಂ ಸದಸ್ಯ ಎ.ಮಂಜು ಧ್ವಜಾರೋಹಣ ನೇರವೇರಿಸಿ ಗೌರವ ವಂದನೆ ಸ್ವೀಕರಿಸಿ ಬಳಿಕ ಮಾತನಾಡಿದರು. ಸ್ವಾತಂತ್ರಕ್ಕಾಗಿ ದುಡಿವರನ್ನು ಮತ್ತು ಮಡಿದವರನ್ನು ಗೌರವಯುತವಾಗಿ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಮಹಾತ್ಮ ಗಾಂಧಿಜೀ, ಭಗತ್ಸಿಂಗ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಹಸ್ರಾರು ಐತಿಹಾಸಿಕ ಪುರುಷರ ತ್ಯಾಗಮಯವಾದ ಹೋರಾಟದಿಂದ ನಮಗೆ ಸ್ವಾತಂತ್ರ ಲಭಿಸಿದೆ. ಅಂಥ ಮಹಾನ್ ತ್ಯಾಗಿಗಳು ನೀಡಿದ ಸ್ವಾಂತಂತ್ರ ರಕ್ಷಿಸುತ್ತಾ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನೆಡೆಸುವ ಮಹತ್ವದ ಕರ್ತವ್ಯ ನಾವು ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಕೆ.ಎಂ.ರಾಘವೇಂದ್ರ ಮಾತನಾಡಿ, ಪ್ರತಿಯೊಬ್ಬ ಯುವಕರು ರಾಷ್ಟ್ರಪ್ರೇಮವನ್ನು ರಕ್ತಗತವಾಗಿ ಬೆಳೆಸಿಕೊಳ್ಳುವ ಸ್ವಾಭಿಮಾನಿಗಳಾಗಬೇಕು ಎಂದರು. ಮುಖ್ಯಅತಿಥಿಯಾಗಿ ಆಗಮಿಸಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ.ಬಾಲರಾಜು, ಸ್ವಾಂತಂತ್ರ ದಿನಾಚರಣೆ ದೇಶ ಪ್ರೇಮ, ಭಕ್ತಿಗಳನ್ನು ಪ್ರದರ್ಶಿಸುವ ವಾರ್ಷಿಕ ಆಚರಣೆಯಾಗಬಾರದು. ಅದು ನಮ್ಮ ಮನಸ್ಸಿನಲ್ಲಿ ಬದುಕಿನುದ್ದಕ್ಕೂ ಜಾಗೃತವಾಗಿರಬೇಕು ಎಂದು ತಿಳಿಸಿದರು.
ಸನ್ಮಾನ: ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಎಎಸ್ಐ ನಾರಾಯಣಪ್ಪ, ರೇಷ್ಮೆ ಇಲಾಖೆ ಶಿವಣ್ಣ, ಅಂಗನವಾಡಿ ಶಿಕ್ಷಕಿ ಹೇಮಲತಾ, ವಿದ್ಯುತ್ ಇಲಾಖೆ ಶಶಿಧರ್, ಶಿಕ್ಷಣ ಇಲಾಖೆ ನರಸಿಂಹರಾಜು, ಶಿವಣ್ಣ, ಬಸವರಾಜು, ಗ್ರಾಪಂ ಕನ್ನಮ್ಮ, ಹವ್ಯಾಸಿ ಕಲಾವಿದ ರಾಜಶೇಖರ್, ಮಾಜಿ ಸೈನಿಕ ಯತಿರಾಜು, ಕೃಷಿ ಇಲಾಖೆ ನಾಗಭೂಷಣ್, ಬಿಎಸ್ಎನ್ಎಲ್ ಚಿದಾನಂದ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.
ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪೇರೆಡ್, ದೇಶ ಭಕ್ತಿ ಗೀತೆಗಳಿಗೆ ಮಕ್ಕಳಿಂದ ನೃತ್ಯ, ರೂಪಕ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ 101 ಅಡಿ ಉದ್ದದ್ದ ಭಾವುಟ ಎಲ್ಲರ ಗಮನ ಸೆಳೆಯಿತು. ಗುರುಕುಲ ವಿದ್ಯಾಮಂದಿರ, ಮಹಾಂತೇಶ್ವರ ಶಾಲಾ ಹಾಗೂ ಕೋಟೆಶಾಲೆ, ಎಸ್ಎಂಎಸ್, ವಿವೇಕಾನಂದ ಸರ್ಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಪಂ ಸದಸ್ಯೆ ದಿವ್ಯಾರಾಣಿ, ಗ್ರಾಪಂ ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯರಾದ ಯತೀಶ್, ಹೋನ್ನರಾಜು, ಶಂಕರ್, ಬಾಲಕೃಷ್ಣ, ಮಹೇಶ್, ಮಂಗಳಮ್ಮ ಈರಮಯ್ಯ, ಮುಖ್ಯಶಿಕ್ಷಕ ಎಂ.ಎಸ್.ನಾಗರಾಜು, ಪಿಡಿಒ ವೆಂಕಟೇಶ್, ಕುತ್ತಿನಗೆರೆ ಗಂಗರಾಜು, ಪದ್ಮನಾಭ್, ಕಣ್ಣನೂರು ಜಯಶಂಕರ್, ರಮೇಶ್, ಜಯಚಂದ್ರಬಾಬು ಮತ್ತಿತರರು ಪಾಲ್ಗೊಂಡಿದ್ದರು.