Advertisement

ಪಯಸ್ವಿನಿ ಹೊಳೆಯ ಸೇತುವೆ ಶಿಥಿಲ

09:49 PM May 15, 2019 | Team Udayavani |

ಅರಂತೋಡು: ಅರಂತೋಡು-ತೊಡಿಕಾನ ಸಂಪರ್ಕದ ಪಯಸ್ವಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಪಿಲ್ಲರ್‌ಗಳು ಶಿಥಿಲಗೊಂಡಿದ್ದು, ಅಪಾಯದ ಮುನ್ಸೂಚನೆ ಇದೆ.

Advertisement

ಸೇತುವೆ ಒಟ್ಟು ಆರು ಪಿಲ್ಲರ್‌ಗಳನ್ನು ಹೊಂದಿದೆ. ಇದರಲ್ಲಿ ಮಧ್ಯದ ಮೂರು ಪಿಲ್ಲರ್‌ಗಳು ಶಿಥಿಲಗೊಂಡಿದೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಿಂದ ದೊಡ್ಡ ದೊಡ್ಡ ಮರಗಳು ಹಾಗೂ ಕಲ್ಲುಗಳು ಬಂದು ಗುದ್ದಿದ ಪರಿಣಾಮ ಪಿಲ್ಲರ್‌ಗಳು ಶಿಥಿಲಗೊಂಡಿವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಶಬ್ದ ಕೇಳಿಸುತ್ತದೆ
ಸೇತುವೆ ಸ್ಲಾಬ್‌ ಕೆಲವೆಡೆ ಒಡೆದು ಹೋಗಿದೆ. ಮೇಲಿನಿಂದ ವಾಹನಗಳು ಸಂಚರಿಸುವಾಗ ಸೇತುವೆಯ ಕೆಳಗಡೆ ನಿಂತರೆ ಗಡ ಗಡ ಎನ್ನುವ ಶಬ್ದ ಕೇಳುತ್ತದೆ. ಈ ಸೇತುವೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಸಂಪರ್ಕ ಕಲ್ಪಿಸುತ್ತಿದೆ. ದಿನನಿತ್ಯ ಈ ಸೇತುವೆ ಮೂಲಕ ನೂರಾರು ಭಕ್ತರು, ಉತ್ಸವಾದಿ ಸಮಯದಲ್ಲಿ ಸಾವಿರಾರು ಭಕ್ತರು, ಗ್ರಾಮಸ್ಥರು ತೆರಳುತ್ತಾರೆ.

ಸುಮಾರು 25 ವರ್ಷಗಳ ಹಿಂದೆ ತೊಡಿಕಾನ ಗ್ರಾಮದವರ ಬಹುಕಾಲದ ಬೇಡಿಕೆಯಂತೆ ಪಯಸ್ವಿನಿ ಹೊಳೆಗೆ ಅರಂತೋಡು ಸಮೀಪ ಸೇತುವೆ ನಿರ್ಮಾಣ ಮಾಡಲಾಯಿತು. ಇದು ತೊಡಿಕಾನ – ಅರಂತೋಡು ಗ್ರಾಮ ಸಂಪರ್ಕಕ್ಕೆ ವರದಾನವಾಗಿ ಪರಿಣಮಿಸಿತು.

ದೋಣಿ ಮೂಲಕ ಸಂಚಾರ
ಅರಂತೋಡಿನಲ್ಲಿ ಪಯಸ್ವಿನಿ ಹೊಳೆಗೆ ಸೇತುವೆ ನಿರ್ಮಾಣವಾಗುವುದಕ್ಕೆ ಮೊದಲು ತೊಡಿಕಾನ ಗ್ರಾಮದವರು ಹಾಗೂ ಅರಂತೋಡು ಭಾಗದ ಜನರು ಈ ಹೊಳೆಯನ್ನು ಮಳೆಗಾಲದಲ್ಲಿ ದೋಣಿ ಮೂಲಕ ದಾಟಿಕೊಂಡು ಬರುತ್ತಿದ್ದರು.

Advertisement

ತೊಡಿಕಾನ ಗ್ರಾಮದವರು ಆ ಸಮಯದಲ್ಲಿ ಅರಂತೋಡು ಸಹಕಾರಿ ಬ್ಯಾಂಕ್‌ನಿಂದ ರೇಷನ್‌ ಅನ್ನು ಹೊಳೆಯ ಮೂಲಕ ತಲೆ ಹೊರೆಯಲ್ಲಿ ಹೊತ್ತುಕೊಂಡು ದೋಣಿ ಮೂಲಕ ಸಾಗುತ್ತಿದ್ದರು.

ಈ ಸೇತುವೆ ಅರಂತೋಡು- ತೊಡಿಕಾನ ಸಂಪರ್ಕದ ಅತ್ಯಗತ್ಯ ಸೇತುವೆಯಾಗಿದ್ದು, ಸೇತುವೆ ಕುಸಿದರೆ ಎರಡು ಗ್ರಾಮಗಳ ಸಂಪರ್ಕಕ್ಕೆ ಸಮಸ್ಯೆಯಾಗಲಿದ್ದು, ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತತ್‌ಕ್ಷಣ ಗಮನಹರಿಸಿ ಅರಂತೋಡು-ತೊಡಿಕಾನ ಸಂಪರ್ಕದ ಪಯಸ್ವಿನಿ ಹೊಳೆಗೆ ನಿರ್ಮಿಸಲಾದ ಸೇತುವೆ ಶಿಥಿಲಗೊಂಡಿದೆ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅಪಾಯ ಎದುರಾಗುವ ಸಾಧ್ಯತೆ ಇದೆ.
– ತಾಜುದ್ದೀನ್‌ಅರಂತೋಡು, ಸ್ಥಳಿಯರು

ಪತ್ರ ಬರೆಯುತ್ತೇವೆ
ಸೇತುವೆಯ ಪಿಲ್ಲರ್‌ಗಳಿಗೆ ಹಾನಿಯಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುತ್ತೇವೆ. ಈ ಸೇತುವೆ ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ಸಂಪರ್ಕದ ಕೊಂಡಿಯಾಗಿದೆ.
– ಶಿವಾನಂದ ಕುಕ್ಕುಂಬಳ, ಉಪಾಧ್ಯಕ್ಷರು, ಅರಂತೋಡು
ಗ್ರಾಮ ಪಂಚಾಯತ್‌

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next