Advertisement

ಮೃತ ಬಾಲಕನನ್ನು ಬದುಕಿಸಲು ಉಪ್ಪಿನ ರಾಶಿಯಲ್ಲಿ ಮಲಗಿಸಿದ ಪೋಷಕರು

07:04 PM Sep 05, 2022 | Team Udayavani |

ಬಳ್ಳಾರಿ: ನೀರಿನ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿದ್ದ ಬಾಲಕನನ್ನು ಉಪ್ಪಿನ ರಾಶಿಯಲ್ಲಿ ಮಲಗಿಸಿದರೆ ಬದುಕುತ್ತಾನಂತೆ……!!! ಇಂತಹದ್ದೊಂದು ಮನಕಲಕುವ ಘಟನೆಯೊಂದು ತಾಲೂಕಿನ ಸಿರಿವಾರ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಬದುಕುಳಿಯದ್ದನ್ನು ಅರಿತ ಪೋಷಕರು ಕೊನೆಗೂ ಅಂತ್ಯಸಂಸ್ಕಾರ ಮಾಡಿದ್ದಾರೆ.

Advertisement

ತಾಲೂಕಿನ ಸಿರಿವಾರ ಗ್ರಾಮದ ಸುರೇಶ್ (10) ಮೃತ ಬಾಲಕ. ನೀರಿನ ಹೊಂಡದಲ್ಲಿ ಈಜಾಡಲೆಂದು ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ ಈಜು ಬಾರದೆ ಹೊಂಡದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೋಷಕರು, ಮೃತಪಟ್ಟವರನ್ನು ಉಪ್ಪಿನ ರಾಶಿಯಲ್ಲಿ ಮಲಗಿಸಿದರೆ ಬದುಕುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಸಂದೇಶವನ್ನು ನಂಬಿ, ಕೂಡಲೇ ನಾಲ್ಕೈದು ಚೀಲದಲ್ಲಿ ಉಪ್ಪು ತಂದು ತಲೆಯನ್ನು ಹೊರತುಪಡಿಸಿ ಇಡೀ ಮೃತ ದೇಹವನ್ನು ಉಪ್ಪಿನಲ್ಲಿ ಮುಚ್ಚಿ ಮಲಗಿಸಿದ್ದಾರೆ.

ಸುಮಾರು ನಾಲ್ಕೈದು ಗಂಟೆಗಳ ಕಾಲ ಕಾದು ಕುಳಿತರೂ ಬಾಲಕ ಬದುಕಲಿಲ್ಲ. ಬದುಕುಳಿಯದ್ದನ್ನು ಅರಿತ ಪೋಷಕರು ಕೊನೆಗೂ ಮಗನ ಮೃತ ದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಉಪ್ಪಿನಲ್ಲಿ ಮೃತದೇಹವನ್ನು ಮಲಗಿಸಿದ್ದ ಫೋಟೊಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next