Advertisement

ಮತ್ತೂಂದು ರಂಗ ಪ್ರಸಂಗ

01:40 PM Aug 04, 2017 | |

ಕಾಲದ ವೇಗದಲ್ಲಿ ಯಕ್ಷಗಾನವೂ ಸಿಲುಕಿ ಹಳೆಯ ಪರಂಪರೆಯ ವೇಷಗಳನ್ನು ನೋಡುವ ಅವಕಾಶದಿಂದ ವಂಚಿತವಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮತ್ತೆ ಆ ಪರಂಪರೆಯನ್ನು ಸವಿಯುವ ಒಂದು ಅಪೂರ್ವ ಯೋಗ ಬೆಂಗಳೂರಿನ ಯಕ್ಷಾಭಿಮಾನಿಗಳಿಗೆ ಒದಗಿ ಬಂದದ್ದು ಖುಷಿಯ ವಿಷಯವೇ ಸರಿ. ಈ ದೃಷ್ಟಿಯಿಂದ ಬೆಂಗಳೂರಿನ ಯಕ್ಷಗಾನ ಲೋಕದಲ್ಲಿ ಜುಲೈ 16, 2017 ಅತ್ಯಂತ ಮಹತ್ವದ ದಿನ. ಇಲ್ಲಿನ ಕೋಣನಕುಂಟೆಯ ಶ್ರೀರಾಮ ಕಲಾ ಸಂಘದ ಹನ್ನೊಂದನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು ಇವರಿಂದ ರಂಗ ಪ್ರಸಂಗ-5 ಎಂಬ ಯಕ್ಷಗಾನ ಪಾರಂಪರಿಕ ವೈಭವ ಅನಾವರಣಗೊಂಡಿತು. ಜೆ.ಪಿ. ನಗರ 8ನೇ ಹಂತದಲ್ಲಿ ರುವ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಕಿಕ್ಕಿರಿದ ಪ್ರೇಕ್ಷಕರೆದುರು ಈ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟಿತು.

Advertisement

ಪರಿಪೂರ್ಣ ಯಕ್ಷಗಾನ ನೋಡುವುದೇ ಅಪರೂಪ ವಾಗಿರುವ ಈ ಕಾಲದಲ್ಲಿ ನೈಜ ಹಾಗೂ ಪರಂಪರೆಯ ಯಕ್ಷಗಾನವನ್ನು ಉಳಿಸುವ ಪಣ ತೊಟ್ಟಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರಮ ಅಪಾರವಾದುದು. ಬೆಂಗಳೂರಲ್ಲಂತೂ ಇಂತಹಾ ಪೂರ್ವರಂಗ ಪ್ರದರ್ಶನ ಇತ್ತೀಚೆಗಿನ ಕಾಲದಲ್ಲಿ ಇದೇ ಪ್ರಥಮ ಬಾರಿಗೆ ನಡೆದದ್ದು ಎಂದರೂ ತಪ್ಪಾಗಲಾರದು.

ಕಾರ್ಯಕ್ರಮದ ಆರಂಭದಲ್ಲಿ ರವಿಶಂಕರ ವಳಕ್ಕುಂಜ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣಮಯ್ಯ ಸಿರಿಬಾಗಿಲು ಹಾಗೂ ಬಲಿಪ ಶಿವಶಂಕರ ಭಟ್‌ ಕಾರ್ಯಕ್ರಮವನ್ನು ಮುನ್ನಡೆಸಿ ದರು. ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಹಾಗೂ ಮದ್ದಳೆಯಲ್ಲಿ ರಾಮ್‌ ಪ್ರಕಾಶ್‌ ಕಲ್ಲೂರಾಯ, ಶ್ರೀಧರ ವಿಟ್ಲ, ಅಮೋಘ ಸಹಕರಿಸಿದರು. ಚಕ್ರತಾಳದಲ್ಲಿ ಶ್ರೀಶಂಕರ ಜೋಯಿಸ್‌ ಜತೆಯಾದರು.

ಮುಮ್ಮೇಳದ ನಿತ್ಯ ವೇಷದಲ್ಲಿ ಪುಟಾಣಿಗಳಾದ ಉಪಾಸನಾ ಪಂಜರಿಕೆ ಹಾಗೂ ಕಿಶನ್‌ ನೆಲ್ಲಿಕಟ್ಟೆ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು. ಪೀಠಿಕೆ ಸ್ತ್ರೀವೇಷದಲ್ಲಿ ಪ್ರಕಾಶ್‌ ನಾಯಕ್‌ ನೀರ್ಚಾಲು ಮತ್ತು ರಾಜೇಶ್‌ ಆಚಾರ್ಯ ಮೂಡಬಿದ್ರೆ ಇವರು ಗಮನ ಸೆಳೆದರು. ಶಂಭಯ್ಯ ಕಂಜರ್ಪಣೆ ಅಪರೂಪದ ಷಣ್ಮುಖ ಸುಬ್ರಾಯನಾಗಿ ರಂಜಿಸಿದರು. ಚಪ್ಪರಮಂಚ ವೇಷವನ್ನು ಲಕ್ಷ್ಮಣ ಕುಮಾರ್‌ ಮರಕಡ ಪ್ರಸ್ತುತಪಡಿಸಿದರು. ಹೆಣ್ಣುಬಣ್ಣದ ತೆರೆ ಹಾಗೂ ಶೂರ್ಪನಖಾ ವೇಷದಲ್ಲಿ ಜಗದಭಿರಾಮ ಪಡುಬಿದ್ರೆಯವರು ಪ್ರೇಕ್ಷಕರ ಮನ ಗೆದ್ದರು. ಬಣ್ಣದ ವೇಷದಲ್ಲಿ ಬಾಲಕೃಷ್ಣ ಮಿಜಾರು ತೆರೆ ಪರ್ಪಾಟಿನಲ್ಲಿ ಅಭಿನಯಿಸಿ ರಾವಣನ ಒಡ್ಡೋಲಗದಲ್ಲಿ ರಂಜಿಸಿದರು. ಅರ್ಧನಾರೀಶ್ವರನಾಗಿ ಪ್ರಸಾದ ಚೇರ್ಕಾಡಿ ಭಾವಪೂರ್ಣವಾಗಿ ಅಭಿನಯಿಸಿದರು ಹಾಗೂ ಹನುಮಂತನ ಒಡ್ಡೋಲಗದಲ್ಲಿ ಪವನ್‌ ಕೆರ್ವಾಶೆ ಚಿತ್ತಾಕರ್ಷಕವಾಗಿ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಸಂತೋಷಗೊಳಿಸಿದರು. ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ 5.30ರ ವರೆಗೆ ಸೇರಿದ ಕಲಾಭಿಮಾನಿಗಳ ಮನಸೂರೆಗೊಂಡಿತು. ಯಕ್ಷಗಾನ ಅಧ್ಯಯನ ಮಾಡುವವರಿಗೆ ಅಪೂರ್ವ ಅವಕಾಶ ಒದಗಿಬಂತು. ರಂಗಪ್ರಸಂಗದ ನಿರೂಪಣೆಯನ್ನು ಗುರುರಾಜ ಹೊಳ್ಳ ಬಲು ಸೊಗಸಾಗಿ ನಿರ್ವಹಿಸಿದರು.

ಅನಂತರ ಶ್ರೀರಾಮ ಕಲಾಸಂಘದ ಹನ್ನೊಂದನೇ ವಾರ್ಷಿಕೋತ್ಸವದ ಸಭಾಕಾರ್ಯಕ್ರಮ ನೆರೆವೇರಿತು. 2006ರಲ್ಲಿ ಆರಂಭಗೊಂಡ ಶ್ರೀರಾಮ ಕಲಾಸಂಘವು ಕಳೆದ ಹನ್ನೊಂದು ವರ್ಷಗಳಲ್ಲಿ ನೂರಿಪ್ಪತ್ತೈದಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ವಿಶೇಷವಾಗಿ 108 ತಾಳಮದ್ದಳೆಗಳನ್ನು ನಡೆಸಿದ ಬೆಂಗಳೂರಿನ ಏಕೈಕ ಸಂಘವೆಂದು ಗುರುತಿಸಲ್ಪಟ್ಟಿದೆ. ಮಕ್ಕಳಿಗೆ ಯಕ್ಷಗಾನ ನಾಟ್ಯ ತರಬೇತಿಯನ್ನು ನೀಡಿದ್ದು ಈ ಮಕ್ಕಳ ತಂಡವು ಬೆಂಗಳೂರಿನಲ್ಲಿ ಹಲವಾರು ಕಡೆ ಪ್ರದರ್ಶನ ನೀಡಿ ಮೆಚ್ಚುಗೆಯನ್ನು ಗಳಿಸಿದೆ. ಶಾಸ್ತ್ರೀಯ ಸಂಗೀತ ಕಛೇರಿ, ಭರತನಾಟ್ಯ ಮತ್ತು ಪುರಾಣವಾಚನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮನ್ನಣೆಯನ್ನು ಗಳಿಸಿದೆ. 2011 ಮತ್ತು 2016ರಲ್ಲಿ ಕ್ರಮವಾಗಿ ಐದನೆಯ ವಾರ್ಷಿಕೋತ್ಸವ ಮತ್ತು ದಶಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ. ಬೆಂಗಳೂರಿಗೆ ಬರುವ ಪ್ರವಾಸಿ ಯಕ್ಷಮಂಡಳಿಗಳಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರುಗಳ ಕಾರ್ಯಕ್ರಮವನ್ನೂ ಪ್ರಾಯೋಜಿಸಿದೆ. 

Advertisement

ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ಧರ್ಮದರ್ಶಿ ಗಳಾದ ಡಾ| ಸಮೀರ ಸಿಂಹ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಶ್ರೀರಾಮ ಕಲಾ ಸಂಘದ ಸಾಂಸ್ಕೃತಿಕ ಕೊಡುಗೆ ಯನ್ನು ಕೊಂಡಾಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಯಕ್ಷಗಾನ ವಿದ್ವಾಂಸರಾದ ಡಾ| ಆನಂದ ರಾಮ ಉಪಾಧ್ಯಾಯರು “ಶ್ರೀರಾಮ ಕಲಾ ಸಂಘ ಬೆಂಗಳೂರಿನಲ್ಲಿ 125 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದರೂ ಎಲೆಯ ಮರೆಯ ಕಾಯಿಯಂತಿದೆ’ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಸೋಮಶೇಖರ್‌ ಹಾಗೂ ಶ್ರೀರಾಮ ಕಲಾ ಸಂಘದ ಸ್ಥಾಪಕಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್‌ ಪರಂಗೋಡು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಪ್ರಸಂಗಗಳ ಕತೃìಗಳೂ ಹಿರಿಯ ಭಾಗವತರೂ ಆದ ಮಧುಕುಮಾರ್‌ ನಿಸರ್ಗ ಅವರನ್ನು ಸಮ್ಮಾನಿಸಿ, “ಯಕ್ಷಕವಿ ಮಕರಂದ’ ಎಂಬ ಬಿರುದನ್ನಿತ್ತು ಗೌರವಿಸಲಾಯಿತು. ಇದೇ ಸಂದರ್ಭ ದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಖ್ಯಾತ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಶ್ರೀ ಪಾಂಚಜನ್ಯ ಯಕ್ಷಕಲಾ ತಂಡ (ರಿ.) ನೇರಳಕಟ್ಟೆ ಇದರ ವ್ಯವಸ್ಥಾಪಕ ರಾದ ಸುಬ್ರಹ್ಮಣ್ಯ ಭಟ್‌ ಪೆರ್ವೋಡಿ ಇವರನ್ನು ಗೌರವಿಸಲಾಯಿತು. 

ಅನಂತರ ಶ್ರೀ ಪಾಂಚಜನ್ಯ ಯಕ್ಷಕಲಾ ತಂಡ (ರಿ.) ನೇರಳಕಟ್ಟೆ ಇವರಿಂದ  ಪಾರಿಜಾತ-ನರಕಾಸುರ-ರಕ್ತರಾತ್ರಿ ಯಕ್ಷಗಾನ ಬಯಲಾಟ ಅದ್ದೂರಿಯಾಗಿ ನಡೆದು ಕಲಾಭಿಮಾನಿಗಳ ಮನಸೂರೆಗೊಂಡಿತು. ಲಕ್ಷ್ಮಣ ಕುಮಾರ್‌ ಮರಕಡ ಪಾರಿಜಾತದ ಕೃಷ್ಣನಾಗಿ ಹಾಗೂ ನರಕಾಸುರನಾಗಿ ರಾಧಾಕೃಷ್ಣ ನಾವುಡ ಜನಮೆಚ್ಚುಗೆಯನ್ನು ಪಡೆದರು. ರಕ್ತರಾತ್ರಿಯ ಅಶ್ವತ್ಥಾಮನಾಗಿ ಗುಂಡಿಮಜಲು ಗೋಪಾಲಕೃಷ್ಣ ಭಟ್‌ ಪಾತ್ರ ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ಅಭಿನಯಿಸಿದರು. ಈ ಕಾರ್ಯಕ್ರಮವು ಬೆಂಗಳೂರಿನ ಯಕ್ಷಾಭಿಮಾನಿಗಳಿಗೆ ಚಿರನೆನಪೊಂದನ್ನು ನೀಡಿದರೆ, ಯಕ್ಷಗಾನ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದ ಶ್ರೀರಾಮ ಕಲಾಸಂಘದ ಪಾಲಿಗೆ ಸಾರ್ಥಕತೆಯ ಭಾವವನ್ನು ತಂದುಕೊಟ್ಟಿತು.

ಕೃಷ್ಣ ಜೋಯಿಸ

Advertisement

Udayavani is now on Telegram. Click here to join our channel and stay updated with the latest news.

Next