Advertisement

ಸಿಬಿಐಗೆ ಮುಕ್ತ ಸಮ್ಮತಿ ಬಂದ್‌ ಸ್ವಾಯತ್ತ ತನಿಖಾ ಸಂಸ್ಥೆಯಾಗಲಿ 

06:00 AM Nov 19, 2018 | |

ದೇಶದ ಅಗ್ರಮಾನ್ಯ ತನಿಖಾ ಸಂಸ್ಥೆಯಾಗಿರುವ ಸಿಬಿಐ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ತಿಂಗಳ ಹಿಂದೆಯಷ್ಟೇ ಸಿಬಿಐ ನಿರ್ದೇಶಕರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ  ಕೇಂದ್ರ ಸರಕಾರ ರಾತ್ರೋರಾತ್ರಿ  ನಿರ್ದೇಶಕರ ಸಹಿತ ಇಬ್ಬರು ಹಿರಿಯ ಅಧಿಕಾರಿಗಳನ್ನು  ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಕೇಂದ್ರದ  ಈ ನಡೆಯನ್ನು  ಪ್ರಶ್ನಿಸಿ  ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದು  ಈ ಅರ್ಜಿ ವಿಚಾರಣೆಯ ಹಂತದಲ್ಲಿದೆ.  

Advertisement

ಸಿಬಿಐನಲ್ಲಿನ  ಈ ಆಂತರಿಕ ಸಂಘರ್ಷದ ವಿಚಾರವನ್ನು ಕೇಂದ್ರ ಸರಕಾರ ನಿರ್ವಹಿಸಿದ  ರೀತಿ ಒಂದಿಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಂತೂ ಸುಳ್ಳಲ್ಲ. ಆದರೆ ಇದೀಗ  ಅಂಧ್ರಪ್ರದೇಶ  ಮತ್ತು  ಪಶ್ಚಿಮ ಬಂಗಾಳ ಸರಕಾರ ಸಿಬಿಐಗೆ  ನೀಡಲಾಗಿದ್ದ “ಮುಕ್ತ ಸಮ್ಮತಿ’ಯನ್ನು ಹಿಂಪಡೆದುಕೊಂಡಿರುವುದು ಮತ್ತೆ ತನಿಖಾ ಸಂಸ್ಥೆಯ ಸ್ವಾಯತ್ತೆಯ ಬಗೆಗೇ ಪ್ರಶ್ನೆಗಳನ್ನು  ಹುಟ್ಟು ಹಾಕುವಂತೆ ಮಾಡಿದೆ. 

ತೆಲುಗು ದೇಶಂ ಪಾರ್ಟಿ ವರಿಷ್ಠ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರಕಾರ ಸಿಬಿಐಗೆ  ನೀಡಿದ್ದ  “ಮುಕ್ತ ಸಮ್ಮತಿ’ಯನ್ನು  ಇದೀಗ ಏಕಾಏಕಿಯಾಗಿ ಹಿಂಪಡೆದಿರುವುದು ದೇಶದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಪಶ್ಚಿಮ ಬಂಗಾಳದ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ  ನಾಯ್ಡು ಅವರ ಈ ನಿರ್ಧಾರವನ್ನು  ಬೆಂಬಲಿಸಿದ್ದಾರೆ. ಮಮತಾ ಅವರು ಕೂಡ ಪಶ್ಚಿಮ ಬಂಗಾಳದಲ್ಲಿ  ಸಿಬಿಐಗೆ ನೀಡಲಾಗಿದ್ದ  “ಮುಕ್ತ ಸಮ್ಮತಿ’ಯನ್ನು  ವಾಪಸ್‌ ಪಡೆದುಕೊಂಡಿದ್ದಾರೆ. ಆದರೆ ನಾಯ್ಡು ಅವರ ಈ ನಿರ್ಧಾರವನ್ನು ಬಿಜೆಪಿ ಖಂಡಿಸಿದ್ದು ಇದು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ ಎಂದು ಕಿಡಿಕಾರಿದೆ.  

ಚಂದ್ರಬಾಬು ನಾಯ್ಡು ನೇತೃತ್ವದ  ಟಿಡಿಪಿ, ಕೇಂದ್ರದಲ್ಲಿನ ಎನ್‌ಡಿಎ ಸರಕಾರದಿಂದ ಹೊರಬಂದ ಬಳಿಕ ಆಂಧ್ರಪ್ರದೇಶದ ಹಲವೆಡೆ ಟಿಡಿಪಿ ನಾಯಕರ ಆಪ್ತರಾಗಿರುವ ಉದ್ಯಮಿಗಳ ನಿವಾಸ, ಕಚೇರಿಗಳ ಮೇಲೆ  ಸಿಬಿಐ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಕಳೆದ ನಾಲ್ಕು ವರ್ಷಗಳಿಂದ ಸುಮ್ಮನಿದ್ದ  ಸಿಬಿಐ ಅಧಿಕಾರಿಗಳು ಎನ್‌ಡಿಎಯಿಂದ ಟಿಡಿಪಿ ಹೊರಬಂದ ಬಳಿಕ  ದಿಢೀರನೆ ಸತತ ದಾಳಿ ನಡೆಸಿರುವುದು ಸಹಜವಾಗಿಯೇ  ಟಿಡಿಪಿ ನಾಯಕರು  ಕೆರಳುವಂತೆ  ಮಾಡಿದೆ. 

ಕೇಂದ್ರ ಸರಕಾರ ರಾಜಕೀಯ ದ್ವೇಷ ಸಾಧನೆಗಾಗಿ ಈ ತಂತ್ರ ಅನುಸರಿಸಿದೆ ಎಂಬುದು ಚಂದ್ರಬಾಬು ನಾಯ್ಡು  ಅವರ ನೇರ ಆರೋಪ. ಇನ್ನು ಪಶ್ಚಿಮ ಬಂಗಾಳದಲ್ಲಿ  ಶಾರದಾ ಚಿಟ್‌ಫ‌ಂಡ್‌ ಪ್ರಕರಣವನ್ನು  ಮುಂದಿಟ್ಟು  ಟಿಎಂಸಿ  ನಾಯಕರು ಮತ್ತವರ ಆಪ್ತರ ಮೇಲೆ ಇಂಥದ್ದೇ ದಾಳಿಗಳನ್ನು  ಸಿಬಿಐ ನಡೆಸಿತ್ತು. ಇದು ಮಮತಾ ಬ್ಯಾನರ್ಜಿ  ಸಿಬಿಐ ಮತ್ತು ಕೇಂದ್ರದ ವಿರುದ್ಧ ತಿರುಗಿ ಬೀಳಲು ಕಾರಣವಾಗಿತ್ತು. ಆದರೆ ನಾಯ್ಡು ಮತ್ತು ಮಮತಾ ಬ್ಯಾನರ್ಜಿ ಅವರ ಈ ನಿರ್ಧಾರವನ್ನು ರಾಜಕೀಯ ಪ್ರತಿತಂತ್ರವನ್ನಾಗಿ ಪರಿಗಣಿಸಬಹುದೇ ವಿನಾ ಇದು ಪ್ರಜಾಸತ್ತೆ ವಿರೋಧಿ ಮತ್ತು  ನೈತಿಕ ಅಧಃಪತನದ ನಡೆ ಎನ್ನುವುದರಲ್ಲಿ  ಎರಡು ಮಾತಿಲ್ಲ. 

Advertisement

ಈ ಹಿಂದೆಯೂ ರಾಜ್ಯ ಸರಕಾರಗಳು  ಸಿಬಿಐಗೆ ನೀಡಿದ್ದ  “ಮುಕ್ತ ಸಮ್ಮತಿ’ಯನ್ನು  ವಾಪಸ್‌ ಪಡೆದಿರುವ ಉದಾಹರಣೆಗಳು ಸಾಕಷ್ಟಿವೆ. 1990ರ ದಶಕದಲ್ಲಿ  ಕರ್ನಾಟಕದ ಜೆ.ಎಚ್‌.ಪಟೇಲ್‌ ಸರಕಾರ ಇಂಥದ್ದೇ ನಿರ್ಧಾರವನ್ನು  ಕೈಗೊಂಡಿತ್ತು. 

ಸ್ವತಂತ್ರ ತನಿಖಾ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದರೂ  ಇದು  ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಾ ಬಂದಿದೆ. ಆಡಳಿತಾರೂಢ ಸರಕಾರಗಳು  ಸಿಬಿಐಯನ್ನು  ತಮ್ಮ  ರಾಜಕೀಯ ದಾಳವನ್ನಾಗಿ ಪರಿಗಣಿಸುತ್ತಲೇ ಬಂದಿವೆ. ಕಳೆದ ಹಲವಾರು ದಶಕಗಳಿಂದ ಬಹುತೇಕ ಎಲ್ಲ ಆಡಳಿತ ಪಕ್ಷಗಳು ತಮ್ಮ  ರಾಜಕೀಯ ವಿರೋಧಿಗಳನ್ನು  ಹಣಿಯಲು ಸಿಬಿಐಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿವೆ. ಈ ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲಿ  ಸಿಬಿಐನ ಸ್ವಾಯತ್ತೆಯ ಬಗೆಗೆ ಸುಪ್ರೀಂ ಕೋರ್ಟ್‌  ಹಲವು ಬಾರಿ ಕೇಂದ್ರ ಸರಕಾರವನ್ನು  ಪ್ರಶ್ನಿಸಿತ್ತಲ್ಲದೆ  ಕೇಂದ್ರ ಸರಕಾರ ಸಿಬಿಐಯನ್ನು  “ಪಂಜರದ ಗಿಣಿ’ಯನ್ನಾಗಿಸಿದೆ ಎಂದು ಚಾಟಿ ಬೀಸಿತ್ತು. ಇದರ ಹೊರತಾಗಿಯೂ ಸರಕಾರಗಳು ಮತ್ತು  ರಾಜಕೀಯ ಪಕ್ಷಗಳ  ಧೋರಣೆಯಲ್ಲಿ ಬದಲಾವಣೆ ಕಂಡು ಬಾರದೇ ಇರುವುದರಿಂದ ಸಿಬಿಐ ಇಂದಿಗೂ ಕೇಂದ್ರ ಸರಕಾರದ ಕಪಿಮುಷ್ಠಿಯಲ್ಲಿದೆ.  
ಇಡೀ ಗೊಂದಲದ ಕೇಂದ್ರಬಿಂದುವಾಗಿರುವ ದಿಲ್ಲಿ  ವಿಶೇಷ ಪೊಲೀಸ್‌ ಕಾಯಿದೆ ವ್ಯಾಪ್ತಿಯಿಂದ ಸಿಬಿಐಯನ್ನು ಹೊರತರುವುದೇ ಅಲ್ಲದೆ ಕೇಂದ್ರ ಸರಕಾರದ ಅಧೀನದಿಂದಲೂ  ಮುಕ್ತಗೊಳಿಸಬೇಕಿದೆ. ಒಕ್ಕೂಟ ವ್ಯವಸ್ಥೆಯ ನೆಪವೊಡ್ಡಿ  ತನಿಖಾ ಸಂಸ್ಥೆಗಳನ್ನು  ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುವ ಆಡಳಿತ ಪಕ್ಷಗಳ ಚಾಳಿಗೆ ಪೂರ್ಣ ವಿರಾಮ ಹಾಕಲು ಸಿಬಿಐಯನ್ನು  ಸ್ವತಂತ್ರ ಸಂಸ್ಥೆಯನ್ನಾಗಿಸಿ ಶಾಸನಾತ್ಮಕ ಅಧಿಕಾರವನ್ನು  ನೀಡುವ ಅಗತ್ಯವಿದೆ.  ಸ್ವಾಯತ್ತೆ ದುರುಪಯೋಗವಾಗದಂತೆ ತಡೆಯಲು ಸಿಬಿಐಯನ್ನು ನ್ಯಾಯಾಂಗದ ಅಧೀನ ಸಂಸ್ಥೆಯನ್ನಾಗಿಸಬೇಕಿದೆ. ಹೀಗಾದಲ್ಲಿ  ಮಾತ್ರ ದೇಶದ ಜನತೆಯಲ್ಲಿ  ಸಿಬಿಐನ ಮೇಲೆ ಮತ್ತೆ ವಿಶ್ವಾಸಾರ್ಹತೆ ಮೂಡಲು ಸಾಧ್ಯ. 

Advertisement

Udayavani is now on Telegram. Click here to join our channel and stay updated with the latest news.

Next