Advertisement

ಸರಣಿ ವಿಜಯಕ್ಕೆ ಒಂದೇ ಹೆಜ್ಜೆ

08:45 AM Aug 27, 2017 | Team Udayavani |

ಪಲ್ಲೆಕಿಲೆ: ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಗೆಲುವು ಭಾರತದ ಕೈ ಎಟುಕಿನಲ್ಲಿದೆ. ರವಿವಾರ ಇಲ್ಲಿ ನಡೆಯುವ 3ನೇ ಪಂದ್ಯವನ್ನೂ ಗೆದ್ದರೆ ಟೀಮ್‌ ಇಂಡಿಯಾ ಸರಣಿ ವಶಪಡಿಸಿಕೊಳ್ಳಲಿದೆ. ಗೆಲ್ಲಲು ಮರೆತಿರುವ ಲಂಕೆಗೆ ಸತತ ಸೋಲಿನೇಟು ಬಿಗಿಯುವುದು ಕೊಹ್ಲಿ ಪಡೆಗೆ ಅಸಾಧ್ಯವೇನಲ್ಲ.

Advertisement

ನಿಜಕ್ಕಾದರೆ ಗುರುವಾರ ಪಲ್ಲೆಕಿಲೆಯಲ್ಲೇ ನಡೆದ ದ್ವಿತೀಯ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಕ್ಕೆ ತರುವ ಎಲ್ಲ ಅವಕಾಶ ಶ್ರೀಲಂಕಾದ ಮುಂದಿತ್ತು. ಹಿಂದಿನ ದಿನವಷ್ಟೇ ವೈವಾಹಿಕ ಬದುಕಿಗೆ ಕಾಲಿರಿಸಿದ ಅಖೀಲ ಧನಂಜಯ ತಮ್ಮ ಆಫ್-ಬ್ರೇಕ್‌ ದಾಳಿ ಮೂಲಕ ತಂಡದ ಗೆಲುವಿನ ಮಾರ್ಗವನ್ನು ಸುಗಮಗೊಳಿಸಿದ್ದರು. ಆದರೆ 8ನೇ ವಿಕೆಟಿಗೆ ಜತೆಗೂಡಿದ ಧೋನಿ-ಭುವನೇಶ್ವರ್‌ ಶತಕದ ಜತೆಯಾಟದೊಂದಿಗೆ ಭಾರತಕ್ಕೆ ನಂಬಲಾಗದ ಜಯವೊಂದನ್ನು ತಂದಿತ್ತರು. ಲಂಕೆಗೆ ನಸೀಬು ಕೈಕೊಟ್ಟಿರುವುದು ಇದರಿಂದ ಸ್ಪಷ್ಟವಾಯಿತು. 

ಈ ಬಾರಿ ಶ್ರೀಲಂಕಾದ ಸಮಸ್ಯೆಗಳ ಪಟ್ಟಿ ಇನ್ನಷ್ಟು ಬೆಳೆದಿದೆ. ಕಳೆದ ಪಂದ್ಯದಲ್ಲಿ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲರಾದ ಕಾರಣಕ್ಕೆ ನಾಯಕ ಉಪುಲ್‌ ತರಂಗ 2 ಪಂದ್ಯಗಳ ನಿಷೇಧಕ್ಕೊಳಗಾಗಿದ್ದಾರೆ. ಗಾಯಾಳು ದನುಷ್ಕ ಗುಣತಿಲಕ ಸರಣಿಯಿಂದಲೇ ಹೊರಬಿದ್ದಿದ್ದಾರೆ. ತಂಡವನ್ನು ಮುನ್ನಡೆಸುವ ಜವಾಬ್ದಾರಿ ಚಾಮರ ಕಪುಗೆಡರ ಪಾಲಾಗಿದೆ. ಇವರ ಅದೃಷ್ಟ ಹೇಗಿದ್ದೀತು ಎಂಬುದು ಲಂಕಾ ಕ್ರಿಕೆಟ್‌ ಅಭಿಮಾನಿಗಳ ಸಣ್ಣ ಮಟ್ಟದ ಕುತೂಹಲ. 

ತರಂಗ ಮತ್ತು ಗುಣತಿಲಕ ಬದಲು ಅನುಭವಿ ಗಳಾದ ದಿನೇಶ್‌ ಚಂಡಿಮಾಲ್‌ ಮತ್ತು ಲಹಿರು ತಿರಿಮನ್ನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರು ತಮ್ಮ ಅನು ಭವವನ್ನು ತೆರೆದಿರಿಸಿದರಷ್ಟೇ ಲಂಕೆಗೆ ಲಾಭ. 

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಯೊಂದಿದೆ, ಈವರೆಗೆ ಬರೀ ಏಕಪಕ್ಷೀಯ ವಾಗಿ ಸಾಗಿ ಬಂದ ಸರಣಿ ಗುರುವಾರದ ಪಂದ್ಯದ ಮೂಲಕ ಏಕದಿನ ಕ್ರಿಕೆಟಿನ ನೈಜ ಹೋರಾಟದ ಕಾವೇರಿಸಿದೆ. ಇಂಥದೊಂದು ಫೈಟ್‌ ಮುಂದುವರಿದರಷ್ಟೇ ಸಿಂಹಳೀಯರು ಸರಣಿಯನ್ನು ಜೀವಂತವಾಗಿ ಇರಿಸಬಲ್ಲರು. 

Advertisement

ಈ ಬಾರಿ ಎಂಥ ಪ್ರಯೋಗ? ಭಾರತ ಈ ಸರಣಿಯನ್ನು ಸಂಪೂರ್ಣವಾಗಿ ವಿಶ್ವಕಪ್‌ ಪ್ರಯೋಗಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ತಂಡದ ಎಲ್ಲ ಆಟಗಾರರಿಗೂ ಅವಕಾಶ ಕಲ್ಪಿಸುವುದು ಇದರಲ್ಲೊಂದು. ಆದರೆ ಗುರುವಾರ ಬ್ಯಾಟಿಂಗ್‌ ಸರದಿಯ ಬದಲಾವಣೆಯ ಪ್ರಯೋಗ ಕ್ಲಿಕ್‌ ಆಗಲಿಲ್ಲ. ಶಿಖರ್‌ ಧವನ್‌-ರೋಹಿತ್‌ ಶರ್ಮ ನೀಡಿದ ಭರ್ಜರಿ ಆರಂಭ ಕಂಡಾಗ ಭಾರತ ದೊಡ್ಡ ಅಂತರದಲ್ಲೇ ಸುಲಭ ಜಯ ವನ್ನು ಸಾಧಿಸಬೇಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಸಂಭವಿಸಿತು. ರಾಹುಲ್‌, ಜಾಧವ್‌, ಕೊಹ್ಲಿ, ಪಾಂಡ್ಯ ಸುಲಭದ ತುತ್ತಾದರು. ಇವರೆಲ್ಲರೂ ಧನಂಜಯ ಮೋಡಿಗೆ ಸಿಲುಕಿದರು. ಈ ನಾಲ್ವರಿಂದ ಒಟ್ಟುಗೂಡಿದ ರನ್‌ ಕೇವಲ 9 ಮಾತ್ರ ಎಂಬುದನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕಿದೆ.

ಆರಂಭಕಾರ ರಾಹುಲ್‌ ವನ್‌ಡೌನ್‌ನಲ್ಲಿ ಆಡಿದ್ದು, ಜಾಧವ್‌ಗೆ ಭಡ್ತಿ ನೀಡಿದ್ದು, ಕ್ಯಾಪ್ಟನ್‌ ಕೊಹ್ಲಿ ಮೂರರ ಬದಲು 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದದ್ದೆಲ್ಲ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಪ್ರಯೋಗ ಗಳಾಗಿದ್ದವು. ಆದರೆ ಇವೆಲ್ಲವೂ ಕೈಕೊಟ್ಟವು. ಹೀಗಾಗಿ ಮೂಲ ಬ್ಯಾಟಿಂಗ್‌ ಕ್ರಮಾಂಕಕ್ಕೆ ಭಾರತ ಅಂಟಿಕೊಳ್ಳುವ ಸಾಧ್ಯತೆ ಇದೆ. 

ಈ ಪಂದ್ಯದ ಗಮನಾರ್ಹ ಸಂಗತಿಗಳೆಂದರೆ ಓಪನಿಂಗ್‌ ಯಶಸ್ಸು ಹಾಗೂ ಮಾಜಿ ನಾಯಕ ಧೋನಿ ಮತ್ತೆ ತಮ್ಮ ಫಿನಿಶಿಂಗ್‌ ಆಟವನ್ನಾಡಿ ತಂಡಕ್ಕೆ ಗೆಲುವು ಕೊಡಿಸಿದ್ದು. ಇವರಿಗೆ ಬೆಂಬಲವನ್ನಿತ್ತ ಭುವನೇಶ್ವರ್‌ ಕುಮಾರ್‌ಗೂ
ಪೂರ್ತಿ ಅಂಕ ಸಿಗಬೇಕು. ಸೋತೇ ಹೋಗ ಲಿದ್ದ ಭಾರತ ಗೆಲುವಿನ ಬಾವುಟ ಹಾರಿಸಿತು; ಕೊಹ್ಲಿ ಪಡೆಯ ಲಕ್‌ ಚೆನ್ನಾಗಿದೆ!

ಹಾರ್ದಿಕ್‌ ಪಾಂಡ್ಯ ಗಾಯಾಳು? ಭಾರತ ಈವರೆಗಿನ ಎರಡೂ ಪಂದ್ಯಗಳ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಸರದಿಯಲ್ಲಿ ಕಾಯುತ್ತಿರುವವರು ಬಹಳಷ್ಟು ಮಂದಿ ಇದ್ದಾರೆ. ಇವರೆಂದರೆ ಮನೀಷ್‌ ಪಾಂಡೆ, ಅಜಿಂಕ್ಯ ರಹಾನೆ, ಶಾದೂìಲ್‌ ಠಾಕೂರ್‌ ಹಾಗೂ ಕುಲದೀಪ್‌ ಯಾದವ್‌. 

ಆಲ್‌ರೌಂಡರ್‌ ಆಗಿ ಮಿಂಚುತ್ತಿರುವ ಹಾರ್ದಿಕ್‌ ಪಾಂಡ್ಯ ಸ್ನಾಯು ಸೆಳೆತಕ್ಕೆ ಸಿಲುಕಿದ್ದ ರಿಂದ ಆಡುವುದು ಇನ್ನೂ ಖಚಿತಪಟ್ಟಿಲ್ಲ. ಆಗ ಇವರಲ್ಲೊಬ್ಬರು ಅವಕಾಶ ಪಡೆಯಲಿದ್ದಾರೆ. ಇದು ಪಾಂಡೆಗೆ ಲಭಿಸಿದರೆ ಅಚ್ಚರಿಯೇನಿಲ್ಲ. ಆದರೆ ಪಲ್ಲೆಕಿಲೆ ಪಿಚ್‌ ಸ್ಪಿನ್ನಿಗೆ ನೆರವು ನೀಡುವ ಸಾಧ್ಯತೆ ಇರುವುದರಿಂದ ಕುಲದೀಪ್‌ ಯಾದವ್‌ ಆಡಲೂಬಹುದು.

ಸಂಭಾವ್ಯ ತಂಡಗಳು
ಭಾರತ:
ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಕೇದಾರ್‌ ಜಾಧವ್‌, ವಿರಾಟ್‌ ಕೊಹ್ಲಿ (ನಾಯಕ), ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ/ಮನೀಷ್‌ ಪಾಂಡೆ, ಅಕ್ಷರ್‌ ಪಟೇಲ್‌, ಯಜುವೇಂದ್ರ ಚಾಹಲ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ.

ಶ್ರೀಲಂಕಾ: ನಿರೋಷನ್‌ ಡಿಕ್ವೆಲ್ಲ, ಲಹಿರು ತಿರಿಮನ್ನೆ, ಕುಸಲ್‌ ಮೆಂಡಿಸ್‌, ದಿನೇಶ್‌ ಚಂಡಿಮಾಲ್‌, ಏಂಜೆಲೊ ಮ್ಯಾಥ್ಯೂಸ್‌, ಚಾಮರ ಕಪುಗೆಡರ (ನಾಯಕ), ಮಿಲಿಂದ ಸಿರಿವರ್ಧನ, ಅಖೀಲ ಧನಂಜಯ, ದುಷ್ಮಂತ ಚಮೀರ, ವಿಶ್ವ ಫೆರ್ನಾಂಡೊ, ಲಸಿತ ಮಾಲಿಂಗ.

ಧೋನಿ ಸ್ಟಂಪಿಂಗ್‌ “ಶತಕ’?
ಭಾರತದ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಏಕದಿನ ಕ್ರಿಕೆಟ್‌ನಲ್ಲಿ 100 ಸ್ಟಂಪಿಂಗ್‌ ಮಾಡಿದ ಮೊದಲ ಕೀಪರ್‌ ಎನಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ. ಇದಕ್ಕೆ ಬೇಕಿರುವುದು ಒಂದೇ ಸ್ಟಂಪಿಂಗ್‌. ಆಗ ಅವರು ಕುಮಾರ ಸಂಗಕ್ಕರ ದಾಖಲೆಯನ್ನು ಅವರದೇ ನೆಲದಲ್ಲಿ ಮುರಿದಂತಾಗುವುದು. ಸದ್ಯ ಸಂಗಕ್ಕರ ಮತ್ತು ಧೋನಿ 99 ಸ್ಟಂಪಿಂಗ್‌ನೊಂದಿಗೆ ಜಂಟಿ ಅಗ್ರಸ್ಥಾನ ದಲ್ಲಿದ್ದಾರೆ. 75 ಸ್ಟಂಪಿಂಗ್‌ ಮಾಡಿರುವ ಲಂಕೆಯ ರೊಮೇಶ್‌ ಕಲುವಿತರಣ ಅವರಿಗೆ ಅನಂತರದ ಸ್ಥಾನ. 

ಸಂಗಕ್ಕರ 404 ಏಕದಿನ ಪಂದ್ಯಗಳಿಂದ ಈ ಸಾಧನೆ ಮಾಡಿದರೆ, ಧೋನಿ ಕೇವಲ 298 ಪಂದ್ಯಗಳಲ್ಲಿ ಇದನ್ನು ಸಾಧಿಸಿದ್ದಾರೆ. ದ್ವಿತೀಯ ಏಕದಿನದಲ್ಲಿ ಗುಣತಿಲಕ ಅವರನ್ನು ಸ್ಟಂಪ್ಡ್ ಔಟ್‌ ಮಾಡುವ ಮೂಲಕ ಧೋನಿ 99ಕ್ಕೆ ಬಂದು ನಿಂತಿದ್ದಾರೆ.

ಒಮ್ಮೆ ಧೋನಿ “ಸ್ಟಂಪಿಂಗ್‌ ಶತಕ’ದ ಮೈಲುಗಲ್ಲು ನೆಟ್ಟರೆ ಇದನ್ನು ಹಿಂದಿಕ್ಕುವುದು ಉಳಿದ ಕೀಪರ್‌ಗಳಿಗೆ ದೊಡ್ಡ ಸವಾ ಲಾಗುವುದು ಖಂಡಿತ. ಸಮಕಾಲೀನ ಕ್ರಿಕೆಟ್‌ನಲ್ಲಿ ಧೋನಿ ಅನಂತರದ ಸ್ಥಾನದಲ್ಲಿರುವವರು ಬಾಂಗ್ಲಾದ ಮುಶ್ಫಿಕರ್‌ ರಹೀಂ. ಇವರು ಮಾಡಿರುವ ಸ್ಟಂಪಿಂಗ್‌ ಕೇವಲ 40.

Advertisement

Udayavani is now on Telegram. Click here to join our channel and stay updated with the latest news.

Next