Advertisement

ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಸೂತ್ರ

10:59 AM Mar 01, 2018 | |

ಬೆಂಗಳೂರು: ಸಾಲದ ಸುಳಿಯಿಂದ ಕ್ರಮೇಣ ಹೊರಬರುತ್ತಿರುವ ಬಿಬಿಎಂಪಿ, ಮುಂದಿನ ಆರ್ಥಿಕ ವರ್ಷದಲ್ಲಿ ಯಾವುದೇ ಸಾಲ ಪಡೆಯುವ ಗೋಜಿಗೆ ಹೋಗದೆ, ರಾಜ್ಯ ಸರ್ಕಾರದ ಅನುದಾನ ಹಾಗೂ ಸ್ವಂತ ಬಂಡವಾಳ ಆದಾಯವನ್ನೇ ನೆಚ್ಚಿಕೊಂಡು ಬಜೆಟ್‌ ಮಂಡಿಸಿದೆ.

Advertisement

ಅಭಿವೃದ್ಧಿ ಹಾಗೂ ನಿರ್ವಹಣಾ ಕಾಮಗಾರಿಗಳಿಗೆ ಬಜೆಟ್‌ನ ಶೇ.54ರಷ್ಟು ಅನುದಾನ ಕಾಯ್ದಿರಿಸಲಾಗಿದೆ. 2017-18 ನೇ ಸಾಲಿಗೆ ಹೋಲಿಸಿದರೆ, ಈ ಬಾರಿಯ ಬಜೆಟ್‌ ಗಾತ್ರ 670 ಕೋಟಿ ರೂ. ಇಳಿಕೆಯಾಗಿರುವುದು ವಿಶೇಷ. ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಎಸ್‌ಎಫ್ಸಿ ಅನುದಾನ, ಮುಖ್ಯಮಂತ್ರಿಗಳ ನಗರೋತ್ಥಾನ ನಿಧಿ ಸೇರಿದಂತೆ 3343.42 ಕೋಟಿ ರೂ. ಯೋಜನೆಯನ್ನೂ ಪಾಲಿಕೆ ಬಜೆಟ್‌ ಬಜೆಟ್‌ನಲ್ಲಿ ಪ್ರಸ್ತಾಪಿಸಿ ಬೃಹತ್‌ ಯೋಜನೆಗಳನ್ನು ಆ ಅನುದಾನದಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಲಾಗಿದೆ.

ಇಂದಿರಾ ಕ್ಯಾಂಟೀನ್‌ ಹೆಚ್ಚು ಜನಪ್ರಿಯತೆ ಪಡೆದಿರುವುದರಿಂದ ಅಲ್ಲಿ ಊಟ-ತಿಂಡಿಯ ಜತೆಗೆ ಬಡವರಿಗೆ ಅಗತ್ಯವಾದ ಜನೌಷಧ ಲಭ್ಯವಾಗುವಂತೆ ಕೇಂದ್ರ ಆರಂಭಿಸುವುದಾಗಿ ತಿಳಿಸಲಾಗಿದೆ. ಬಡವರ ಒಂಟಿ ಮನೆಗಳ ನಿರ್ಮಾಣಕ್ಕೆ ಪ್ರಸ್ತುತ ನೀಡುತ್ತಿರುವ 4 ಲಕ್ಷ ರೂ. ಅನುದಾನ ಐದು ಲಕ್ಷಕ್ಕೆ ಏರಿಕೆ, ನಗರದ 400 ಕಡೆ ಉಚಿತ ವೈ-ಫೈ ಸೇವೆ ಕಲ್ಪಿಸುವುದು, ಹಿರಿಯ ನಾಗರಿಕರಿಗೆ ಉಚಿತ ರಕ್ತದೊತ್ತಡ ಹಾಗೂ ಮಧುಮೇಹ ಮಾತ್ರೆಗಳ ವಿತರಣೆ ಯೋಜನೆ ಘೋಷಿಸಲಾಗಿದೆ. 

ಪಾಲಿಕೆಯ ಶಾಲಾ-ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಕ್ಕಾಗಿ “ಪಿಂಕ್‌ ಬೇಬಿ’ಯೋಜನೆ ಘೋಷಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಪಾಲಿಕೆಯ ಶಾಲಾ-ಕಾಲೇಜುಗಳತ್ತ ಕರೆತರುವ ಪ್ರಯತ್ನ ಮಾಡಲಾಗಿದೆ.

ಆದಾಯಕ್ಕೆ ಪಂಚಸೂತ್ರ: ಪಾಲಿಕೆಯ ಆದಾಯ ಹೆಚ್ಚಿಸಲು ಬಜೆಟ್‌ನಲ್ಲಿ ವಿಶೇಷ ಕಾಳಜಿ ವಹಿಸಿ ಹಲವು ಕ್ರಮ ಘೋಷಿಸಲಾಗಿದ್ದು, ತೆರಿಗೆ ವಂಚಿಸುವವರ ಪತ್ತೆಗೆ ಕಂದಾಯ ಜಾಗೃತದಳ ಸ್ಥಾಪನೆ, ಜಾಹೀರಾತು ತೆರಿಗೆ ಆದಾಯ ಸೋರಿಕೆ ತಡೆಗೆ ಜಾಹೀರಾತು ಉಪವಿಧಿಗಳಿಗೆ ತಿದ್ದುಪಡಿ, ಮೊಬೈಲ್‌ ಟವರ್‌ಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು, ಕೇಂದ್ರ ವಲಯಗಳಲ್ಲಿನ ಮಾರುಕಟ್ಟೆ ಮಳಿಗೆಗಳ ಬಾಡಿಗೆ ಪರಿಷ್ಕರಣೆ, ನಗರದ ಪ್ರಮುಖ 800 ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸುವ ವಿಷಯ ಪ್ರಸ್ತಾಪಿಸಲಾಗಿದೆ.

Advertisement

ಚಾಲ್ತಿಯಲ್ಲಿರುವ ಹಾಗೂ ಈಗಾಗಲೇ ಘೋಷಿಸಿರುವ ವೈಟ್‌ಟಾಪಿಂಗ್‌ ಕಾಮಗಾರಿ ಹೊರತುಪಡಿಸಿದರೆ ರಸ್ತೆ ಮೂಲ ಸೌಕರ್ಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಿಲ್ಲ. ಆದರೆ, 360 ಕೋಟಿ ರೂ., ಮೇಯರ್‌, ಉಪ ಮೇಯರ್‌, ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರ ಉಸ್ತುವಾರಿ ಸಚಿವರ ವಿವೇಚನಾ ಕೋಟಾದಡಿ ಮೀಸಲಿಡಲಾಗಿದೆ.

ಬಂಪರ್‌ ನಿಧಿ: ಬಜೆಟ್‌ನಲ್ಲಿ ಮೇಯರ್‌ ನಿಧಿ 160 ಕೋಟಿ ರೂ. ಉಪ ಮೇಯರ್‌ಗೆ 50 ಕೋಟಿ ರೂ., ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 50 ಕೋಟಿ ರೂ., ನಗರ ಉಸ್ತುವಾರಿ ಸಚಿವರಿಗೆ 100 ಕೋಟಿ ರೂ. ವಿಶೇಷ ಅನುದಾನ ಕಾಯ್ದಿರಿಸಲಾಗಿದೆ.

ರಾಜ್ಯ ಆಯವ್ಯಯ ಯೋಜನೆಗಳ ಪುನರ್‌ ಪ್ರಸ್ತಾಪ
ಬಿಬಿಎಂಪಿ ಬಜೆಟ್‌ನಲ್ಲಿ ಸ್ವಂತ ಸಂಪನ್ಮೂಲ ದಡಿ ಬೃಹತ್‌ ಯೋಜನೆ ಘೋಷಿಸಿಲ್ಲವಾದರೂ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮ ಪ್ರಸ್ತಾಪಿಸಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದೆ. ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ 2,500 ಕೋಟಿ ರೂ. ವೆಚ್ಚದ ಯೋಜನೆಗಳ ವಿವರವನ್ನೂ ಬಜೆಟ್‌ನಲ್ಲಿ ನೀಡಲಾಗಿದೆ.
 
150 ಕಿ.ಮೀ. ಉದ್ದದ ರಸ್ತೆ ವೈಟ್‌ ಟಾಪಿಂಗ್‌, ಪಾಲಿಕೆ ವ್ಯಾಪ್ತಿಯ 100 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳ ಸಮಗ್ರ
ಅಭಿವೃದ್ಧಿ, ತೀವ್ರ ಸಂಚಾರ ದಟ್ಟಣೆಯಿರುವ ಪ್ರಮುಖ 8 ಜಂಕ್ಷನ್‌ಗಳಲ್ಲಿ ಗ್ರೇಡ್‌ ಸಪರೇಟರ್‌ಗಳ ನಿರ್ಮಾಣ, ಪಾದಚಾರಿಗಳ ಸುರಕ್ಷತೆಗಾಗಿ 250 ಕಿ.ಮೀ. ಉದ್ದದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗ ಅಭಿವೃದ್ಧಿ, ಕೆರೆಗಳ ಸಂರಕ್ಷಣೆಗೆ ಆದ್ಯತೆ, 110 ಹಳ್ಳಿಗಳ ರಸ್ತೆ ಅಭಿವೃದ್ಧಿ, ನಗರದ 25 ಪ್ರಮುಖ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ, ಕೆ.ಆರ್‌.ಮಾರುಕಟ್ಟೆ ಪುನಶ್ಚೇತನಗೊಳಿಸವುದು.

ಶಿವಾಜಿನಗರ ಸಂಯೋಜಿತ ಸಂಚಾರಿ ಕೇಂದ್ರ, ಕಬ್ಬನ್‌ ಉದ್ಯಾನ, ಸ್ವತಂತ್ರಪಾಳ್ಯ ಕೊಳೆಗೇರಿ, ಹಲಸೂರು ಹಾಗೂ ಸ್ಯಾಂಕಿ ಕೆರೆಗಳ ಅಭಿ ವೃದ್ಧಿ, 150 ಕಿ.ಮೀ ಉದ್ದದ ಬೃಹತ್‌ ಮಳೆನೀರು ಕಾಲುವೆಗಳ ಅಭಿವೃದ್ಧಿ ಕೆ.ಸಿ.ಜನರಲ್‌ ಆಸ್ಪತ್ರೆ ನವೀಕರಣ. ಮೆಟ್ರೋ ಕಾಮಗಾರಿಯಿಂದ ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಉಂಟಾಗುತ್ತಿರುವ ದಟ್ಟಣೆ ನಿವಾರಣೆಗೆ ಐಟಿಪಿಎಲ್‌ಗೆ 14 ಪರ್ಯಾಯ ರಸ್ತೆಗಳ ಅಭಿವೃದ್ಧಿ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಿಗ್ನಲ್‌ ಮುಕ್ತ ಕಾರಿಡಾರ್‌ಗೆ ಎಚ್‌ಎಎಲ್‌ ಸಂಸ್ಥೆ ನೀಡಿರುವ ಸ್ವತ್ತಿಗೆ ಬದಲಾಗಿ ಎನ್‌ಎಎಲ್‌ -ವಿಂಡ್‌ ಟನಲ್‌ ರಸ್ತೆ ನಿರ್ಮಾಣ,ನಗರದ
ಗಾಂಧಿ ಬಜಾರ್‌, ಗಾಂಧಿನಗರದ ಸುಖಸಾಗರ್‌ ಹೋಟೆಲ್‌ ಬಳಿ, ಡಿಸ್ಪೆನ್ಸರಿ ರಸ್ತೆ ಬಳಿ, ರೇಸ್‌ಕೋರ್ಸ್‌ ಬಳಿ, ಶೇಷಾದ್ರಿ ರಸ್ತೆ, ಕೋರ ಮಂಗಲ 4ನೇ ಬಡಾವಣೆ ಬಳಿ, ಜಯ ನಗರ ಕಾಂಪ್ಲೆಕ್ಸ್‌ ಹಾಗೂ ಪಾಲಿಕೆಯ ಕೇಂದ್ರ ಕಚೇರಿಯ ಆವರಣ ದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಲಾಗಿ¨ 

ಕನಸು ಕಾಣ್ತಾ ಇರಿ!
ಸಭೆಯ ಆರಂಭಕ್ಕೂ ಮೊದಲು ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ, ಕಾಂಗ್ರೆಸ್‌ನ ಹೆಚ್ಚಿನ ಸದಸ್ಯರು ಗೈರಾಗಿರುವುದನ್ನು ಕಂಡು ಕಾಂಗ್ರೆಸ್‌ ಸದಸ್ಯರಿಗೆ ಬಹುಶಃ ಅಸಮಾಧಾನ ಇರಬೇಕು. ನೀವು ಬಜೆಟ್‌ ಮಂಡಿಸಿದರೂ, ಇನ್ನು ಎರಡು ತಿಂಗಳಲ್ಲಿ ಅಧಿಕಾರಕ್ಕೆ ಬರಲಿರುವ ನಾವು ಬಜೆಟ್‌ ಮರು ಹೊಂದಾಣಿಕೆ ಮಾಡಲಿದ್ದೇವೆ ಎಂದು ಕಿಚಾಯಿಸಿದರು. ಅದಕ್ಕೆ ತಿರುಗೇಟು ನೀಡಿದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಹಾಗಂತ ಕನಸು ಕಾಣ್ತಾ ಇರಿ… ಎಂದು ತಿರುಗೇಟು ನೀಡಿದರು.

ನಗರದ ಎಲ್ಲ ವರ್ಗಗಳ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಮಹಿಳೆಯರ
ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಪಿಂಕ್‌ ಬೇಬಿ ಯೋಜನೆಗಳನ್ನು ಘೋಷಿಸಲಾಗಿದೆ. ಆ ಮೂಲಕ ಜನಸ್ನೇಹಿ ಹಾಗೂ ವಾಸ್ತವಕ್ಕೆ ಹತ್ತಿರವಾದ ಬಜೆಟ್‌ ಮಂಡಿಸಲಾಗಿದೆ. 
ಎಂ.ಶಿವರಾಜು, ಪಾಲಿಕೆಯ ಆಡಳಿತ ಪಕ್ಷ ನಾಯಕ

ವಿಧಾನಸಭಾ ಚುನಾವಣೆ ಸಂದರ್ಭಲ್ಲಿ ಅತ್ಯಂತ ನಿರಾಶಾದಾಯ ಬಜೆಟ್‌ ಮಂಡಿಸಿದ್ದು, ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನೌಷಧ ಕೇಂದ್ರ ಆರಂಭಿಸುವ ಯೋಜನೆ ಉತ್ತಮವಾಗಿದೆ. ಉಳಿದಂತೆ ನಗರದಲ್ಲಿ 30-40 ಹೆಲಿಪ್ಯಾಡ್‌ ಇರುವಾಗ ಮತ್ತೆ ಸಾರ್ವಜನಿಕ ಹಣ ಪೋಲು ಮಾಡಲು ಮುಂದಾಗಿರುವುದು ಸರಿಯಲ್ಲ.
ರವಿಚಂದರ್‌, ನಗರ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next