Advertisement

ಈ ಸೀಬೆ ಬೆಳೆದವನೇ ಸಿರಿವಂತ

06:00 AM Nov 19, 2018 | |

ಹುಲ್ಲು ಮತ್ತು ಎಲುಬಿನ ಬೆಳವಣಿಗೆಗೆ ಅಗತ್ಯವಿರುವ ಸುಣ್ಣದ ಅಂಶವನ್ನು, ರಕ್ತ ವರ್ಧಕವಾದ ಕಬ್ಬಿಣದ ಅಂಶವನ್ನು ಹೊಂದಿರುವ ಸೀಬೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇದೀಗ, ಬೀಜವಿಲ್ಲದ ಸೀಬೆಯ ಹಣ್ಣಿನ ತಳಿಯೊಂದನ್ನು ಬೆಳ್ತಂಗಡಿಯ ರೈತರೊಬ್ಬರು ಬೆಳೆದಿದ್ದಾರೆ…    

Advertisement

ಸೀಬೆ ಅಥವಾ ಪೇರಳೆಹಣ್ಣು ದೋರೆಗಾಯಿಯಾಗಿದ್ದರೂ ಎಳಸಾಗಿದ್ದರೂ ಕಚ್ಚಿ ತಿನ್ನಲು ತುಂಬ ರುಚಿಕರವಾಗಿರುತ್ತದೆ. ಮಾತ್ರವಲ್ಲ, ಅದರೊಳಗೆ ಪುಷ್ಕಳವಾಗಿ ಪೋಷಕಾಂಶಗಳಿವೆ. ಹಲ್ಲು ಮತ್ತು ಎಲುಬಿನ ಬೆಳವಣಿಗೆಗೆ ಅಗತ್ಯವಾದ ಸುಣ್ಣದ ಅಂಶ ಈ ಹಣ್ಣಿನಲ್ಲಿದೆ. ರಕ್ತವರ್ಧಕವಾದ ಕಬ್ಬಿಣಾಂಶವಿದೆ. ಜೀರ್ಣಕಾರಕವಾದ ಸೀಬೆಯನ್ನು ಬೇಯಿಸಿ ಎಳೆಯ ಮಕ್ಕಳಿಗೂ ತಿನ್ನಿಸಬಹುದು.

ಹೀಗಿದ್ದರೂ, ಸೀಬೆಹಣ್ಣಿನೊಳಗೆ ವಿಪುಲವಾಗಿರುವ ಬೀಜಗಳು ಮಾತ್ರ ಹಲ್ಲುಗಳಿಗೆ ಕಿರಿಕಿರಿಯುಂಟು ಮಾಡುತ್ತವೆ, ಜೀರ್ಣವಾಗದ ಬೀಜಗಳು ಸರ್ಜನಾಂಗಗಳಿಗೂ ಬಾಧೆ ತರುತ್ತವೆ. ಆದರೆ ಒಳಗೆ ಒಂದೇ ಒಂದು ಬೀಜವೇ ಇಲ್ಲದ ಅಪರೂಪದ ಸೀಬೆ ತಳಿಯೊಂದನ್ನು ಸಂವರ್ಧಿಸಿದ್ದಾರೆ ರವಿಶಂಕರ ಭಟ್ಟರು. ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಸನಿಹ ಇವರ ಮನೆ ಇದೆ.

ಈ ವಿಶಿಷ್ಟವಾದ ಸೀಬೆಹಣ್ಣು ದೊಡ್ಡ ಗಾತ್ರದ ಸೇಬಿನ ಹಣ್ಣಿನಂತಿದೆ.  ಕನಿಷ್ಠ ಮುನ್ನೂರು ಗ್ರಾಮ್‌ ತೂಕ. ಒಳಗೆ ಕೂಡ ಸೇಬಿನದೇ ಆಕಾರವನ್ನು ಹೊಂದಿದೆ. ಮನ ಸೆಳೆಯುವ ರುಚಿ, ಭಿನ್ನ ಪರಿಮಳಗಳ ಜೊತೆಗೆ ತುಂಬ ಸಿಹಿಯಾಗಿದೆ. ಹಲ್ಲಿಲ್ಲದವರಿಗೂ ತಿನ್ನಲು ಸುಲಭವಾಗಿದೆ. ಜೊತೆಗೆ, ಈ ಹೊಸ ತಳಿ ಬಹು ಮೃದು ಹಣ್ಣು.

ಹತ್ತು ವರ್ಷಗಳ ಹಿಂದೆ ದೂರದ ಸಂಬಂಧಿಗಳ ಮನೆಯಿಂದ ರವಿಶಂಕರ ಭಟ್ಟರು ತಂದು ನೆಟ್ಟ ಮರ ಈಗ ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಹರಡಿಕೊಂಡು ದೊಡ್ಡದಾಗಿ ಬೆಳೆದಿದೆ. ವರ್ಷದ ಎಲ್ಲ ಋತುಗಳಲ್ಲಿಯೂ ಹಣ್ಣುಗಳನ್ನು ಕೊಡುವುದು ಇದರ ವೈಶಿಷ್ಟ್ಯ. ಹಣ್ಣುಗಳಿಗೆ ಪೇಟೆಯಲ್ಲಿಯೂ ಒಳ್ಳೆಯ ಬೇಡಿಕೆ ಇದೆ. ಒಂದು ಮರ ಸುಮಾರು ಒಂದು ಕ್ವಿಂಟಾಲಿಗಿಂತ ಹೆಚ್ಚು ಹಣ್ಣು ಕೊಡುತ್ತದೆ. ಕಿಲೋಗೆ ನೂರು ರೂ.ದರದಲ್ಲಿ ಮಾರಾಟವಾಗುತ್ತದೆ. ಮೂರು ಹಣ್ಣುಗಳಿದ್ದರೆ ಒಂದು ಕಿಲೋ ತೂಗುತ್ತದೆ. ಹಣ್ಣನ್ನು ಹೀಗೆಯೇ ತಿನ್ನಬಹುದು. ಮಿಲ್ಕ್ಷೇಕ್‌, ಐಸ್‌ಕ್ರೀಮ್‌ ಮೊದಲಾದ ಸಿಹಿಗಳನ್ನು ತಯಾರಿಸಿದರೆ ಅದರ ಸ್ವಾದವೇ ಪ್ರತ್ಯೇಕ ಎನ್ನುತ್ತಾರೆ ಭಟ್ಟರ ಪತ್ನಿ ಜ್ಯೋತಿ.

Advertisement

ಗಿಡ ನೆಟ್ಟ ವರ್ಷ ಬುಡಕ್ಕೆ ನೀರು ಹಾಕಿರುವುದನ್ನು ಬಿಟ್ಟರೆ ಅನಂತರ ನೀರು, ಗೊಬ್ಬರ ಎರಡನ್ನೂ ಕೊಟ್ಟಿಲ್ಲ. ಮಣ್ಣಿನಲ್ಲಿ ಸಹಜವಾಗಿರುವ ಸತ್ತಾ$Ìಂಶವನ್ನೇ ಬಳಸಿಕೊಂಡು ಮರ ಹಣ್ಣುಗಳಿಂದ ಬಾಗುತ್ತದೆ. ಬಾವಲಿಗಳು ಉಗುರುಗಳಿಂದ ಗೀರಿ ಹಾನಿ ಮಾಡುವ ಕಾರಣ ಹೆಚ್ಚು ಹಣ್ಣುಗಳಿರುವಾಗ ತೆಳುವಾದ ಬಲೆ ಹೊದೆಸಬೇಕಾಗುತ್ತದೆಯಂತೆ. ಹೆಚ್ಚು ಬಿಸಿಲಿರುವ ಜಾಗ, ಮಣ್ಣು ಫ‌ಲವತ್ತಾಗಿದ್ದು ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲದಂತಿದ್ದರೆ ಎಲ್ಲ ಗುಣದ ಮಣ್ಣಿಗೂ ಹೊಂದಿಕೊಳ್ಳುತ್ತದೆ. ಬೇಸಗೆಯಲ್ಲಿ ಅಧಿಕವಾಗಿ ಹಣ್ಣು ಕೊಡುತ್ತದೆ.

ಇನ್ನು ಪೇರಳೆ ಹಣ್ಣಿಗಿಂತಲೂ ಅದರ ಗಿಡಗಳ ಮಾರಾಟ ಹೆಚ್ಚು ಲಾಭ ತರುತ್ತದೆ ಎನ್ನುತ್ತಾರೆ ಭಟ್ಟರು. ಇದರ ಗಿಡ ತಯಾರಿಸುವುದು ತುಂಬ ಪ್ರಯಾಸಕರವಂತೆ. ಬಲಿತ ಕೊಂಬೆಗಳ ಕೆಳಭಾಗದಲ್ಲಿ ಸಗಣಿ ಗೊಬ್ಬರದ ಹುಡಿ ಮತ್ತು ಸುಡುಮಣ್ಣು ತುಂಬಿದ ಮುದ್ದೆಯನ್ನಿರಿಸಿ ತೆಂಗಿನ ನಾರಿನಿಂದ ಅದಕ್ಕೊಂದು ಆವರಣ ನಿರ್ಮಿಸಬೇಕು. ಹುರಿ ಹಗ್ಗದಿಂದ ಬಿಗಿದು ಕಟ್ಟಬೇಕು. ಕೊಂಬೆಯಿಂದ ಬೇರುಗಳೊಡೆದು ಈ ಆವರಣ ಸೇರಿಕೊಂಡ ಬಳಿಕ ಎಚ್ಚರಿಕೆಯಿಂದ ಕೊಂಬೆಯನ್ನು ಬೇರಿನ ಕೆಳಭಾಗದಿಂದ ಕತ್ತರಿಸಿ ನಾಟಿಗೆ ಬಳಸಬೇಕು. ಹೀಗೆ, ನೂರು ಗಿಡಗಳಿಗೆ ಬೇರು ಬರಿಸುವ ಪ್ರಯತ್ನದಲ್ಲಿ ಹತ್ತು ಗಿಡ ಮಾತ್ರ ಸಿಗುತ್ತದೆ. ಆದಕಾರಣ, ಒಂದು ಗಿಡಕ್ಕೆ ಒಂದರಿಂದ ಒಂದೂವರೆ ಸಾವಿರ ರೂಪಾಯಿ ಬೆಲೆ ಹೇಳುತ್ತೇನೆ. ಆದರೂ ಗಿಡಗಳಿಗೆ ಬೇಡಿಕೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ ಈ ಕೃಷಿಕರು. ನೂರಕ್ಕಿಂತ ಹೆಚ್ಚು ವರ್ಷ ಬದುಕಿ ಬೆಳೆಸಿದವನ ಪಾಲಿಗೆ ಚಿನ್ನವಾಗುವ ಈ ಹೊಂಬಣ್ಣದ ಹಣ್ಣು ತಿಂದವರ ಮನ ಗೆಲ್ಲುತ್ತದೆ.

– ಪರಾಶರ

Advertisement

Udayavani is now on Telegram. Click here to join our channel and stay updated with the latest news.

Next