Advertisement

ಮುಂದಿನ 5 ವರ್ಷದ ನೀಲನಕ್ಷೆ

12:50 AM Jul 04, 2019 | mahesh |

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರ ಚೊಚ್ಚಲ ಬಜೆಟ್‌ ಮುಂದಿನ ಐದು ವರ್ಷಗಳಲ್ಲಿನ ಸುಧಾರಣೆಗಳಿಗೆ ವೇದಿಕೆ ಸಿದ್ಧಪಡಿಸಲಿದೆ. ಕೇಂದ್ರ ಸರ್ಕಾರದ ಧ್ಯಾನ, ಕೃಷಿ, ಕಾರ್ಮಿಕ ವಲಯ, ವ್ಯಾಪಾರ ಮತ್ತು ಉದ್ಯಮಶೀಲತೆಯಂಥ ವಲಯಗಳಲ್ಲಿನ ಬಂಡವಾಳವನ್ನು ಆಕರ್ಷಿಸುವತ್ತ ಹೆಚ್ಚು ಕೇಂದ್ರೀಕೃತವಾಗಲಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ, ಪ್ರತಿಯೊಬ್ಬರಿಗೂ ಈ ಬಜೆಟ್‌ನಿಂದ ಬಹಳ ನಿರೀಕ್ಷೆಗಳಿವೆ. ರಿಯಲ್‌ ಎಸ್ಟೇಟ್‌ನಿಂದ ಹಿಡಿದು ಕ್ಯಾಶ್‌ ವಿತ್‌ಡ್ರಾವಲ್‌ ಮೇಲಿನ ತೆರಿಗೆಯವರೆಗೆ, ರಕ್ಷಣಾ ವಲಯದಿಂದ ಹಿಡಿದು, ಆಟೊಮೊಬೈಲ್‌ ಉದ್ಯಮದವರೆಗೆ ಈ ಬಜೆಟ್‌ನಲ್ಲಿ ಏನೇನು ಘೋಷಣೆಯಾಗ ಬಹುದೋ ನೋಡೋಣ ಬನ್ನಿ…

ಕ್ಯಾಶ್‌ ವಿತ್‌ಡ್ರಾವಲ್ ಮೇಲೆ ಪ್ರಹಾರ?
ಡಿಜಿಟಲ್ ವ್ಯವಹಾರಕ್ಕೆ ಮೊದಲಿನಿಂದಲೂ ಒತ್ತು ಕೊಡುತ್ತಾ ಬಂದಿದೆ ಮೋದಿ ಸರ್ಕಾರ, ಹೀಗಾಗಿ, ಬಜೆಟ್‌ನಲ್ಲಿ ಈ ಕುರಿತು ದೊಡ್ಡ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಸರ್ಕಾರವು, 10 ಲಕ್ಷಕ್ಕಿಂತಲೂ ಹೆಚ್ಚು ನಗದು ಹಣವನ್ನು ವಿತ್‌ಡ್ರಾ ಮಾಡುವವರ ಮೇಲೆ ಟ್ಯಾಕ್ಸ್‌ ವಿಧಿಸುವ ಸಂಭವನೀಯತೆಯ ಬಗ್ಗೆ ಯೋಚಿಸುತ್ತಿದೆ ಎನ್ನಲಾಗುತ್ತಿದೆ.
ಬಂದ್‌ ಆಗಬಹುದು ಈ ವಾಹನಗಳು
ದೇಶದಲ್ಲಿ ವಾಯುಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟ ಮುಟ್ಟುತ್ತಿರುವುದರಿಂದ, ಸರ್ಕಾರ 2000ನೇ ಇಸವಿಗೂ ಮೊದಲು ನೋಂದಣಿಯಾದ ವಾಹನಗಳ ಬಳಕೆಯನ್ನು ನಿಷೇಧಿಸಬಹುದು.

ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ?
ಸಂಕಷ್ಟದಲ್ಲಿರುವ ದೇಶದ ಆಟೊಮೊಬೈಲ್ ವಲಯಕ್ಕೆ ಈಗ ಸರ್ಕಾರದ ಬೆಂಬಲ ಅತ್ಯಗತ್ಯವಾಗಿದೆ. ಇಲ್ಲದಿದ್ದರೆ, ಅದರಲ್ಲಿ ಸುಧಾರಣೆ ಅಷ್ಟು ಸುಲಭವಲ್ಲ. ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವ ಪ್ರಮುಖ ಘೋಷಣೆಯನ್ನು ಸೀತಾರಾಮನ್‌ ಮಾಡಬಹುದು. ಮೋಟರ್‌ ಕಂಟ್ರೋಲರ್‌, ಬ್ರೇಕ್‌ ಸಿಸ್ಟಂ ಮತ್ತು ಎಲೆಕ್ಟ್ರಿಕ್‌ ಕಂಪ್ರಸರ್‌ನಂಥ ವಸ್ತುಗಳ ಮೇಲೆ ಆಮದು ಸುಂಕವನ್ನು ಕಡಿಮೆ ಮಾಡಬಹುದು. ಪ್ರಸಕ್ತ ಈ ವಸ್ತುಗಳ ಮೇಲಿನ ಆಮದು ಸುಂಕದ ಪ್ರಮಾಣ 10-15 ಪ್ರತಿಶತವಿದ್ದು, ಇವುಗಳಿಂದಾಗಿ ಎಲೆಕ್ಟ್ರಿಕ್‌ ವಾಹನಗಳ ಬೆಲೆಯೂ ಹೆಚ್ಚುವಂತಾಗಿದೆ.
ಆನಂದ್‌ ಮಹಿಂದ್ರಾ ಅಶಾವಾದ
ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಸಮೂಹದ ಮುಖ್ಯಸ್ಥ ಆನಂದ್‌ ಮಹಿಂದ್ರಾ ಅವರು ವಾಹನಗಳ ಮೇಲಿನ ಜಿಎಸ್‌ಟಿ ತಗ್ಗಿಸುವುದರಿಂದ ಅರ್ಥವ್ಯವಸ್ಥೆಗೆ ಲಾಭವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಚಿಕ್ಕ ಕಂಪನಿಗಳು ಮತ್ತು ಉದ್ಯೋಗಗಳ ಮೇಲೆ ಆಟೋ ಇಂಡಸ್ಟ್ರಿಯ ಪ್ರಭಾವ ವ್ಯಪಕವಾಗಿದೆ. ಇದು ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ನಿರ್ಮಿಸುವ ಮೂರನೇ ಅತಿದೊಡ್ಡ ವಲಯವಾಗಿದೆ. ವಾಹನಗಳ ಮೇಲಿನ ಜಿಎಸ್‌ಟಿ ಕಡಿತದಿಂದಾಗಿ, ಈ ವಲಯ ಸುಧಾರಿಸಿಕೊಳ್ಳುತ್ತದೆ’ ಎನ್ನುತ್ತಾರೆ ಮಹಿಂದ್ರಾ. ಪ್ರಸಕ್ತ ವಾಹನಗಳ ಮೇಲೆ 28 ಪರ್ಸೆಂಟ್ ಜಿಎಸ್‌ಟಿ ಅನ್ವಯವಾಗುತ್ತಿದೆ, ಇದರಿಂದಾಗಿ ಕಳೆದ 11 ತಿಂಗಳಿಂದ ವಾಹನ ಖರೀದಿ ಪ್ರಮಾಣ ಬಹಳ ತಗ್ಗಿದ್ದು, ಸರ್ಕಾರ ಜಿಎಸ್‌ಟಿಯನ್ನು 18 ಪ್ರತಿಶತಕ್ಕೆ ಇಳಿಸಬಹುದಾದ ಸಾಧ್ಯತೆ ಇದೆ.

ಅಟಲ್ ಪಿಂಚಣಿ ಯೋಜನೆಗೆ ಬಲ?
ಅಟಲ್ ಪೆನ್ಶನ್‌ ಯೋಜನೆಯನ್ನು ಮತ್ತಷ್ಟು ಜನರತ್ತ ಒಯ್ಯಲು ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಎರಡು ಪ್ರಮುಖ ಘೋಷಣೆಗಳನ್ನು ಮಾಡಬಹುದು. ಅಟಲ್ ಪಿಂಚಣಿ ಯೋಜನೆಯನ್ನು ನಿರ್ವಹಿಸುವ ‘ಪೆನ್ಶನ್‌ ಫ‌ಂಡ್‌ ರೆಗ್ಯುಲೇಟರಿ ಆ್ಯಂಡ್‌ ಡೆವಲಪ್‌ಮೆಂಟ್(ಪಿಎಫ್ಆರ್‌ಡಿಐ)’ ಈ ರೀತಿಯ ಪ್ರಸ್ತಾಪವನ್ನು ವಿತ್ತ ಸಚಿವಾಲಯದ ಮುಂದೆ ಇಟ್ಟಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿನ ಪೆನ್ಶನ್‌ ಮೊತ್ತ ಮತ್ತು ವಯೋಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಪಿಎಫ್ಆರ್‌ಡಿಐ ಕೇಂದ್ರದ ಮುಂದಿಟ್ಟಿದೆ. ಪ್ರಸಕ್ತ ಈ ಯೋಜನೆಯ ವಯೋಮಿತಿ 40 ವರ್ಷಗಳಿದ್ದು , ಅಟಲ್ ಪಿಂಚಣಿ ಯೋಜನೆಯ ಮೇಲಿನ ವಯೋಮಿತಿಯನ್ನು 40ರಿಂದ 50ಕ್ಕೇರಿಸಬೇಕೆಂದು ಈ ಸಂಸ್ಥೆ ವಿತ್ತ ಸಚಿವಾಲಯಕ್ಕೆ ಕೋರಿದೆ. ಇನ್ನು ಪೆನ್ಶನ್‌ ರಾಶಿಯನ್ನು 10 ಸಾವಿರ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾಪವೂ ಇದೆ.
ರಿಯಲ್ ಎಸ್ಟೇಟ್ ವಲಯದ ನಿರೀಕ್ಷೆಗಳು
Advertisement

ಹೌಸಿಂಗ್‌ ಸೆಕ್ಟರ್‌ಗೆ ಬಲ ತುಂಬುವುದಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೆ ತರಬಹುದು. ಅಫೋರ್ಡೆಬಲ್ ಹೌಸಿಂಗ್‌ ಯೋಜನೆಗಾಗಿ ಜಾಗ ಖರೀದಿಸಲು ಬಯಸುವ ಡೆವಲಪರ್‌ಗಳಿಗೆ ಸರ್ಕಾರ ಫ‌ಂಡ್ಸ್‌ಗಳು ಸಿಗುವಂತೆ ಮಾಡಬಹುದು ಮತ್ತು ಜಾಗವನ್ನು ಕಡಿಮೆ ಬಡ್ಡಿ ದರದಲ್ಲಿ ದೊರಕಿಸಿಕೊಡಬಹುದು.

ರಕ್ಷಣೆಗೆ ಬಲ?
ಕಳೆದ ಐದು ವರ್ಷಗಳಲ್ಲಿ ಭಾರತದ ರಕ್ಷಣಾ ಕ್ಷೇತ್ರ ಬಹಳ ಬಲಿಷ್ಠವಾಗಿದೆ. ಈ ಬಾರಿಯೂ ಈ ಕ್ಷೇತ್ರಕ್ಕೆ ಸರ್ಕಾರ ಮನ್ನಣೆ ನೀಡಬಹುದು. ಸರ್ಕಾರದ ಧ್ಯಾನ ಪ್ರಮುಖವಾಗಿ ವಿಶೇಷ ರಕ್ಷಣಾ ನಿವೇಷದ ಭತ್ಯೆಯ ಘೋಷಣೆಯತ್ತ ಇರಬಹುದು. ಇನ್ನು ರಕ್ಷಣಾ ಉತ್ಪಾದನೆ, ಟ್ಯಾಂಕುಗಳ ನಿರ್ಮಾಣ, ಶಸ್ತ್ರಸಜ್ಜಿತ ವಿಶೇಷ ವಾಹನಗಳ ನಿರ್ಮಾಣ, ಯುದ್ಧ ವಿಮಾನ, ಅಂತರಿಕ್ಷ ಯಾನ, ಯುದ್ಧ-ಬಾಹ್ಯಾಕಾಶ ನೌಕೆಗಳ ನಿರ್ಮಾಣ, ಶಸ್ತ್ರಾಸ್ತ್ರ ಮತ್ತು ಎಲ್ಲಾ ರೀತಿಯ ಮದ್ದು ಗುಂಡುಗಳ ಖರೀದಿ ಮತ್ತು ಉತ್ಪಾದನೆ, ಸೈನಿಕರಿಗೆ ವಿಶೇಷ ಸವಲತ್ತುಗಳ ವಿಸ್ತರಣೆಯತ್ತ ಕೇಂದ್ರದ ಇರಲಿದೆ ಎನ್ನಲಾಗುತ್ತದೆ.
ತೆರಿಗೆದಾರರಿಗೆ ಖುಷಿ ಸುದ್ದಿ?
ಈ ಬಾರಿ ಸಾಮಾನ್ಯ ತೆರಿಗೆದಾರರಿಗೆ ಖುಷಿ ಸುದ್ದಿ ಸಿಗಬಹುದೇ? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆದಾಯ ತೆರಿಗೆಯ ಮೇಲಿನ ವಿನಾಯಿತಿ ಸ್ಲ್ಯಾಬ್‌ ಅನ್ನು 3 ಲಕ್ಷಕ್ಕೆ ಏರಿಸಬಹುದು. ಇದು ನಿಜವಾದರೆ ದೇಶದ ಕೋಟ್ಯಂತರ ತೆರಿಗೆದಾರರಿಗೆ ಲಾಭವಾಗಲಿದೆ. ಪ್ರಸಕ್ತ ತೆರಿಗೆ ಸ್ಲ್ಯಾಬ್‌ 2.50 ಲಕ್ಷದಿಂದ ಆರಂಭವಾಗುತ್ತದೆ.
ಭಾರತದ ಆರೋಗ್ಯಕ್ಕಾಗಿ…
ಮೋದಿ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದು ಆಯುಷ್ಮಾನ್‌ ಭಾರತ ಯೋಜನೆ. ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು, ಈ ಬಾರಿ ಬಜೆಟ್‌ನಲ್ಲಿ ಮಹತ್ವಪೂರ್ಣ ಘೋಷಣೆಯಾಗಬಹುದು. ಹೊಸ ಆಸ್ಪತ್ರೆಗಳ ನಿರ್ಮಾಣದ ಬಗ್ಗೆಯೂ ನವ ಸರ್ಕಾರ ವಿಚಾರ ಮಾಡಿರಬಹುದು. ಇಷ್ಟೇ ಅಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಯ ವ್ಯವಸ್ಥೆ ಮತ್ತು ಜನರತ್ತ ಸಕ್ಷಮವಾಗಿ ಆರೋಗ್ಯ ಸೇವೆಗಳನ್ನು ಒಯ್ಯುವುದು ಸರ್ಕಾರದ ಆದ್ಯತೆಯಾಗಬಹುದು.
ಬಗೆಹರಿಯುವುದೇ ರೈತರ ಸಮಸ್ಯೆ?
ದೇಶದ ರೈತರಿಗೆ ಪ್ರತಿ ವರ್ಷ ಆರು ಸಾವಿರ ರೂಪಾಯಿ ಮತ್ತು ಪೆನ್ಶನ್‌ ಘೋಷಣೆಯ ನಂತರ ಮೋದಿ ಸರ್ಕಾರ, ಕಿಸಾನ್‌ ಕ್ರೆಡಿಟ್ ಕಾರ್ಡ್‌ನ ಮೇಲೆ ಬಡ್ಡಿ ಮುಕ್ತ ಸಾಲ ನೀಡಬಹುದು ಎಂಬ ನಿರೀಕ್ಷೆ ಇದೆ. ಇದಷ್ಟೇ ಅಲ್ಲದೇ, ಕೃಷಿ ವಲಯಕ್ಕಾಗಿಯೇ ವಿತ್ತ ಸಚಿವಾಲಯ 12 ಸೂತ್ರಗಳ ಕಾರ್ಯಕ್ರಮದ ಪ್ರಸ್ತಾವವನ್ನೂ ತಯ್ನಾರು ಮಾಡಿಕೊಂಡಿದೆ. ದೇಶದ ರೈತರನ್ನು ಗಮನದಲ್ಲಿಟ್ಟುಕೊಂಡೇ ಮೋದಿ ಸರ್ಕಾರ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಪ್ರಧಾನಮಂತ್ರಿ ಶ್ರಮ ಮಾನಧನ ಪೆನ್ಶನ್‌ ಯೋಜನೆಯಂಥ ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ. ಈಗ ಮೋದಿ 2.0 ಸರ್ಕಾರ ದೇಶದ ರೈತರ ಸಂಕಷ್ಟಗಳನ್ನು ಪರಿಹರಿಸಲು ಅನೇಕ ಯೋಜನೆಗಳನ್ನು ಘೋಷಿಸಬಹುದು. ಪರಿಣತರ ಪ್ರಕಾರ, ಈ ಬಾರಿ ರೈತರ ಸಹಾಯಕ್ಕಾಗಿ ಕೇಂದ್ರ ಸರ್ಕಾರ 30 ಪ್ರತಿಶತ ಹೆಚ್ಚು ಹಣವನ್ನು ಮೀಸಲಿರಿಸಲಿದೆ. ಅಷ್ಟೇ ಅಲ್ಲ, ರೈತರಿಗಾಗಿ ಫ್ಲ್ಯಾಗ್‌ಶಿಪ್‌ ಯೋಜನೆಗಳನ್ನೂ ಆರಂಭಿಸಬಹುದು. ಇದರೊಟ್ಟಿಗೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ, ಸಾಲದ ಸುಳಿಯಿಂದ ಕಂಗೆಟ್ಟಿರುವ ರೈತರಿಗೆ ಬಡ್ಡಿ ದರದಲ್ಲಿ ಇಳಿಕೆ, ಸಹಾಯಧನ ಹಾಗೂ ಗೊಬ್ಬರದ ಮೇಲೂ ಸಬ್ಸಿಡಿ ನೀಡಬಹುದು.
ಇದು ಟೀಂ ನಿರ್ಮಲಾ!
ಜುಲೈ ಐದರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಮತ್ತು ಹೊಸ ಸರ್ಕಾರದ ಮೊದಲ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ನಿಜಕ್ಕೂ ಮೋದಿ ಸರ್ಕಾರದ ಆದ್ಯತೆಯ ಪ್ರತಿಫ‌ಲನವಾಗಿರಲಿದ್ದು, ಇದನ್ನು ತಯ್ನಾರಿಸುವಲ್ಲಿ ಯಾರೆಲ್ಲ ಶ್ರಮವಹಿಸಿದ್ದಾರೆ ಎನ್ನುವ ಕಿರುಚಿತ್ರಣ ಇಲ್ಲಿದೆ. ನಿರ್ಮಲಾ ಸೀತಾರಾಮನ್‌ ಟೀಂನಲ್ಲಿನ ಆರು ಅಧಿಕಾರಿಗಳು ಬಜೆಟ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿತ್ತ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಕೂಡ ಈ ಟೀಮ್‌ನ ಭಾಗವಾಗಿದ್ದಾರೆ…
ಕೃಷ್ಣಮೂರ್ತಿ ಸುಬ್ರಮಣ್ಯಂ
ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಸುಬ್ರಮಣ್ಯಂ ದೇಶದ ಚಿರಪರಿಚಿತ ಅರ್ಥಶಾಸ್ತ್ರಜ್ಞರು. ಸುಬ್ರಮಣ್ಯಂ ಶಿಕಾಗೋ ಬೂಥ್‌ನಿಂದ ಪಿಎಚ್‌ಡಿ ಪಡೆದವರು, ಐಐಟಿ ಮತ್ತು ಐಐಎಂನಂಥ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಯಾಗಿದ್ದವರು. ಬ್ಯಾಂಕಿಂಗ್‌, ಕಾರ್ಪೊರೇಟ್ ಆಡಳಿತ ಮತ್ತು ಎಕನಾಮಿಕ್‌ ಪಾಲಿಸಿಯಲ್ಲಿ ಪ್ರಪಂಚದ ಪ್ರಮುಖ ಚಹರೆಗಳಲ್ಲಿ ಒಬ್ಬರು. ನೋಟ್ಬಂದಿಯ ಪ್ರಮುಖ ಸಮರ್ಥಕರಲ್ಲಿ ಕೃಷ್ಣಮೂರ್ತಿ ಸುಬ್ರಮಣ್ಯಂ ಒಬ್ಬರು.
ಅಜಯ್‌ ಭೂಷಣ್‌ ಪಾಂಡೆ
1984ರ ಬ್ಯಾಚಿನ ಐಎಎಸ್‌ ಅಧಿಕಾರಿ ಅಜಯ್‌ ಭೂಷಣ್‌ ಪಾಂಡೆ ಪ್ರಸಕ್ತ ವಿತ್ತ ಸಚಿವಾಲಯದ ರಾಜಸ್ವ ಕಾರ್ಯದರ್ಶಿ ಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಆಧಾರ್‌ ಕಾರ್ಡ್‌ ಜಾರಿ ಮಾಡಿದ ಸಂಸ್ಥೆ ಯೂನಿಕ್‌ ಐಡೆಂಟಿಫಿಕೇಷನ್‌ ಅಥಾರಿಟಿ ಆಫ್ ಇಂಡಿಯಾದಲ್ಲಿ 2010ರಿಂದ 2018ರವರೆಗೆ ಸಿಐಒ ಆಗಿದ್ದರು. ಜಿಎಸ್‌ಟಿಯ ಮೇಲೆ ಭೂಷಣ್‌ ಅವರಿಗೆ ಬಹಳ ಹಿಡಿತವಿದೆ ಎನ್ನಲಾಗುತ್ತದೆ.
ಸುಭಾಷ್‌ ಚಂದ್ರ ಗರ್ಗ್‌

 

1983ರ ಬ್ಯಾಚಿನ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿ ಸುಭಾಷ ಚಂದ್ರ ಗರ್ಗ್‌ ವಿತ್ತ ಕಾರ್ಯದರ್ಶಿಯಾಗಿದ್ದಾರೆ. ಪ್ರಸಕ್ತ ಗರ್ಗ್‌ ಅವರು ವಿತ್ತ ಸಚಿವಾಲಯದಲ್ಲಿ ದೇಶಿ-ವಿದೇಶಿ ಬಂಡ ವಾಳ ಮಾರುಕಟ್ಟೆಗಳು, ಬಜೆಟ್ ಮತ್ತು ಹಣಕಾಸು ವಲಯದಲ್ಲಿನ ಮೂಲಸೌಕರ್ಯದ ಕಾರ್ಯವೈಖರಿಯ ನಿಗಾ ವಹಿಸುತ್ತಿದ್ದಾರೆ. ವಿವಿಧ ಸಂಸ್ಥೆಗಳ ಧನಸಹಾಯವನ್ನು ನಿರ್ಧರಿಸುವ ಹಕ್ಕೂ ಅವರ ಬಳಿ ಇದೆ.
ಅತನು ಚಕ್ರವರ್ತಿ
ವಿತ್ತ ಸಚಿವಾಲಯದ ಹೂಡಿಕೆ ಇಲಾಖೆಯ ಕಾರ್ಯದರ್ಶಿ ಅತನು ಚಕ್ರವರ್ತಿ ಗುಜರಾತ್‌ ಕೇಡರ್‌ನ 1985 ಬ್ಯಾಚ್‌ನ ಅಧಿಕಾರಿ. ಅವರು ಪೆಟ್ರೋಲಿಯಂ ಸಚಿವಾಲಯದ ಹೈಡ್ರೋಕಾರ್ಬನ್‌ ವಿಭಾಗದ ಮಹಾನಿರ್ದೇಶಕರಾಗಿದ್ದರು. ಜತೆಗೆ ಗುಜರಾತ್‌ ಸರ್ಕಾರದ ಗುಜರಾತ್‌ ಸ್ಟೇಟ್ ಪೆಟ್ರೋಲಿಯಂ ಕಾರ್ಪೋರೇಷನ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದವರು.
ಗಿರೀಶ್‌ ಚಂದ್ರ ಮುರ್ಮು
ಗುಜರಾತ್‌ ಕೇಡರ್‌ನ ವರಿಷ್ಠ ಅಧಿಕಾರಿ ಗಿರೀಶ್‌ ಚಂದ್ರ ಮುರ್ಮೂ ಮೋದಿಯವರ ಖಾಸಾ ವ್ಯಕ್ತಿ ಎಂದು ಗುರುತಿಸಿ ಕೊಂಡವರು. ಅವರು ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಯೂ ಆಗಿದ್ದರು. ಪ್ರಸಕ್ತ ಅವರು ವಿತ್ತ ಸಚಿ ವಾಲಯದಲ್ಲಿನ ಖರ್ಚು-ವೆಚ್ಚ ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜೀವ್‌ ಕುಮಾರ್‌
ರಾಜೀವ್‌ ಕುಮಾರ್‌ ಪ್ರಸಕ್ತ ವಿತ್ತ ಸಚಿವಾಲಯದ ವಿತ್ತೀಯ ಸೇವೆಯ ಕಾರ್ಯದರ್ಶಿ. ಅವರು ಇದಕ್ಕೂ ಮುನ್ನ ಬಿಹಾರ, ಜಾರ್ಖಂಡ್‌ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನೇಕ ಪ್ರಮುಖ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ 33 ವರ್ಷಗಳ ಸೇವಾನುಭವವಿದೆ.
Advertisement

Udayavani is now on Telegram. Click here to join our channel and stay updated with the latest news.

Next