Advertisement

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಆತ್ಮಾವಲೋಕನ ಅಗತ್ಯ: ಕಾಗೇರಿ

09:00 PM Sep 24, 2021 | Team Udayavani |

ಬೆಂಗಳೂರು: ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

Advertisement

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಜಾಪ್ರಭುತ್ವ, ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಎರಡೂ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಆದರ್ಶಗಳ ಮೌಲ್ಯಗಳ ಅಧಪತನವಾಗುತ್ತಿರುವ ಬಗ್ಗೆ ನೋಡುತ್ತಿದ್ದೇವೆ. ವ್ಯಕ್ತಿ ವ್ಯಕ್ತಿಗಳ ನಡುವೆ ಇರುವ ಮೌಲ್ಯಗಳ ಕುಷಿತವಾಗುತ್ತಿವೆ. ನಮ್ಮ ದುಖ, ನೋವು, ಆತಂಕ ಎಲ್ಲವನ್ನೂ ಹೊರ ಹಾಕುತ್ತೇವೆ. ಬೇಸರವನ್ನು ಹೊರ ಹಾಕುವುದರ ಜೊತೆಗೆ ಸರಿಪಡಿಸುವ ಕೆಲಸವನ್ನೂ ನಾವು ಮಾಡಬೇಕಿದೆ ಎಂದು ಹೇಳಿದರು.

ಸಂಸದೀಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರದೇ ಹೋದರೆ ನಾವು ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಒಮ್ಮೆ ಪ್ರಜಾಪ್ರಭುತ್ವದ ದೇಗುಲಕ್ಕೆ ಒಳಗೆ ಬಂದ ನಂತರ ಜನ ಪರ ಕೆಲಸ ಮಾಡಬೇಕಿದೆ. ಭಾರತದ ಸಂಸದೀಯ ವ್ಯವಸ್ಥೆ ಜಗತ್ತಿನ ಅತ್ಯಂತ ಮಹತ್ವದ ಪ್ರಜಾಪ್ರಭುತ್ವ ವ್ಯವಸ್ಥೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಜಗತ್ತಿನಲ್ಲಿಯೇ ಅತ್ಯಂತ ಪ್ರಭಾವಶಾಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತ ಜಾರಿಗೆ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆ ಮಾಡುವ ಕುರಿತು ನಾವೆಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ಇಲ್ಲದಿದ್ದರೆ ಅರಾಜಕತೆ ಉಂಟಾದರೆ ವ್ಯವಸ್ಥೆ ನಾಶವಾಗುತ್ತದೆ ಎನ್ನುವುದಕ್ಕೆ ಅನೇಕ ದೇಶಗಳು ಉದಾಹರಣೆಯಾಗಿವೆ. ನಾವು ಕೇವಲ ಒಬ್ಬ ಶಾಸಕನಾಗಿದ್ದೇನೆ ಎಂದುಕೊಳ್ಳದೇ ಲಕ್ಷಾಂತರ ಜನರ ಪ್ರತಿನಿಧಿಯಾಗಿದ್ದೇನೆ ಎಂಬ ಜವಾಬ್ದಾರಿ ನಮಗಿರಬೇಕು.

ಈ ವ್ಯವಸ್ಥೆಯಲ್ಲಿ ಎಲ್ಲರೂ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಆಡಳಿತ ನಡೆಸಿದ್ದಾರೆ. ಆದರೆ, ಯಾರು ಬಂದರು, ಯಾರು ಬರಲಿಲ್ಲ ಎನ್ನುವುದನ್ನು ಜನ ನೋಡಿದ್ದಾರೆ. ಕೇವಲ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುವ ಬದಲು ವ್ಯವಸ್ಥೆ ಸುಧಾರಣೆ ಮಾಡುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ:ಬಾಸ್ಕೆಟ್‌ಬಾಲ್‌ ಪಟು ಸತ್ನಾಮ್‌ ವೃತ್ತಿಪರ ಕುಸ್ತಿಗೆ ಹಾಜರ್‌!

Advertisement

ನಮ್ಮ ವ್ಯವಸ್ಥೆ ಇಷ್ಟೊಂದು ಸುಂದರವಾಗಿರಲು ಸಂವಿಧಾನ ಬರೆದ ಅಂಬೇಡ್ಕರ್‌ ಅವರ ಕೊಡುಗೆ ದೊಡ್ಡದಿದೆ. ನಮ್ಮಷ್ಟೆ ಜವಾಬ್ದಾರಿ ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಕ್ಕೂ ಇದೆ. ಎಲ್ಲ ರಂಗಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾರ್ಯಾಂಗಕ್ಕೂ ಜವಾಬ್ದಾರಿ ಇದೆ. ನ್ಯಾಯಾಂಗ ಹಾಗೂ ಪತ್ರಿಕಾರಂಗದ ಬಗ್ಗೆಯೂ ಜನರು ಹೇಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ನೋಡಿದ್ದೇವೆ. ಶಾಸಕಾಂಗ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇವೆ. ಉಳಿದ ಅಂಗಗಳೂ ತಮ್ಮ ಕಾರ್ಯ ಚಟುವಟಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಆತ್ಮಾವಲೋಕನ ಮಾಡಿಕೊಂಡು ಬೇರೆಯವರಿಗೆ ಮಾರ್ಗದರ್ಶಕರಾಗೋಣ. ಕೇವಲ ಚುನಾವಣೆಗಳ ಬಗ್ಗೆ ಆಲೋಚನೆ ಮಾಡುವ ಬದಲು ವ್ಯವಸ್ಥೆ ಸುಧಾರಣೆ ಮಾಡುವ ಕಡೆಗೆ ಗಮನ ಹರಿಸೋಣ ಎಂದು ಹೇಳಿದರು.

ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ಗೈರು ಹಾಜರಾಗಿರುವುದು ಬೇಸರದ ಸಂಗತಿ. ಮೂವರು ಸಂವಿಧಾನಿಕ ಸ್ಥಾನದಲ್ಲಿರುವವರು ಭಾಗವಹಿಸು ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಭಾಗವಹಿಸದಿರುವುದು ಬೇಸರ ತಂದಿದೆ ಎಂದು ಹೇಳಿದರು.

ಇದಲ್ಲದೇ ತಮ್ಮ ಲಿಖಿತ ಭಾಷಣದಲ್ಲಿ ಚುನಾವಣೆಗಳಲ್ಲಿ ಸುಧಾರಣೆ ತರಲು 1951ರ ಪ್ರಜಾಪ್ರತಿನಿಧಿ ಕಾಯ್ದೆಯನ್ನು ತಿದ್ದುಪಡಿ ಮಾಡುವುದು, ಅಧಿವೇಶನದ ಕಾಲಾವಧಿ ಹೆಚ್ಚಿಸುವುದು, ಸದನದ ಕಾರ್ಯಕಲಾಪ ಬಹಿಷ್ಕರಿಸುವ ಹಾಗೂ ಮೊಟಕುಗೊಳಿಸುವ ಸದಸ್ಯರ ವಿರುದ್ಧ ತಕ್ಷಣ ಅಮಾನತು ಅಥವಾ ಭತ್ಯೆ ಕಡಿತಗೊಳಿಸುವಂತಹ ಕಠಿಣ ಕ್ರಮ ಜರುಗಿಸಲು ಅವಕಾಶ ದೊರೆಯುವಂತೆ ನಿಯಮಗಳ ತಿದ್ದುಪಡಿ, ಪ್ರತಿಪಕ್ಷಗಳು ಚರ್ಚಿಸುವ ವಿಷಯಗಳಿಗೆ ಪ್ರತ್ಯೇಕ ದಿನ ಅಥವಾ ಸಮಯ ನಿಗದಿ ಮಾಡುವುದು ಹಾಗೂ ಶಾಸಕರು ಶಿಸ್ತು, ಘನತೆಯಿಂದ ನಡೆದುಕೊಳ್ಳುವಂತೆ ನೋಡಿಕೊಳ್ಳುವುದು ಆಯಾ ಪಕ್ಷಗಳ ಜವಾಬ್ದಾರಿಯಾಗಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next