Advertisement

ಭಾಷಾ ಅಲ್ಪಸಂಖ್ಯಾಕರ ಕತ್ತು ಹಿಚುಕುತ್ತಿರುವ ಪಿಣರಾಯಿ ಸರಕಾರ

04:09 PM Apr 13, 2017 | Harsha Rao |

ಕಾಸರಗೋಡು: ಶಿಕ್ಷಣದಲ್ಲಿ ಮಲಯಾಳ ಕಲಿಕೆಯನ್ನು ಕಡ್ಡಾಯಮಾಡಿ ಭಾಷಾ ಅಲ್ಪಸಂಖ್ಯಾಕರ ಭಾಷೆ, ಸಂಸ್ಕೃತಿ ಹಾಗೂ ಬದುಕಿನ ಮೇಲೆ ಗದಾಪ್ರಹಾರ ಮಾಡಿರುವ ಕೇರಳ ಸರಕಾರ ಅದರ ಬೆನ್ನಲ್ಲೇ ರಾಜ್ಯದ ಏಕೈಕ ಆಡಳಿತ ಭಾಷೆಯಾಗಿ ಮಲಯಾಳದ ಬಳಕೆಯನ್ನು ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದ್ದು ಗಾಯದ ಮೇಲೆ ಬರೆಯೆಳೆದಂತಾಗಿದೆ. ಮೇ 1ರಿಂದ ರಾಜ್ಯ ಸಚಿವಾಲಯ ಸಹಿತ ವಿವಿಧ ಸರಕಾರಿ, ಅರೆ ಸರಕಾರಿ, ಸಾರ್ವಜನಿಕ, ಸ್ಥಳೀಯಾಡಳಿತ, ಸಹಕಾರಿ ಕಚೇರಿಗಳಿಂದ ಪ್ರಕಟಿಸುವ ಆದೇಶ, ಸುತ್ತೋಲೆ, ಪತ್ರಗಳು ಮೊದಲಾದವು ಕಡ್ಡಾಯವಾಗಿ ಮಲಯಾಳ ದಲ್ಲಿರಬೇಕೆಂದು ಮುಖ್ಯ ಮಂತ್ರಿಯವರ ಕಚೇರಿಯಲ್ಲಿ ಸೇರಿದ ಆಡಳಿತ ಭಾಷಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದೆ.

Advertisement

ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ತಿದ್ದುಪಡಿ ಸೂಚಿಸಿ ಕೇರಳ ವಿಧಾನಸಭೆ ಅಂಗೀಕರಿಸಿದ ಮಲಯಾಳ ಭಾಷಾ ಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾಕ ಪ್ರದೇಶಗಳಲ್ಲಿ ಆಯಾ ಅಲ್ಪಸಂಖ್ಯಾಕ ಭಾಷೆಗಳನ್ನೂ ಆಡಳಿತ ಭಾಷೆ ಮಲಯಾಳಕ್ಕೆ ಸಮಾನವಾಗಿ ಬಳಸಬೇಕೆಂದೂ ಈ ಪ್ರದೇಶದಲ್ಲಿ ಪ್ರಕಟಿಸುವ ಆದೇಶ, ಸುತ್ತೋಲೆ, ಪ್ರಕಟನೆ, ಮಾಹಿತಿ ಮೊದಲಾದವು ಆಯಾ ಅಲ್ಪಸಂಖ್ಯಾತ ಭಾಷೆಗಳಲ್ಲೂ ಇರಬೇಕು ಎಂದು ಹೇಳಲಾಗಿದ್ದರೂ ಪಿಣರಾಯಿ ಸರಕಾರ ಪ್ರಕಟಿಸಿದ ಹೊಸ ಆದೇಶದಲ್ಲಿ ಭಾಷಾ ಅಲ್ಪಸಂಖ್ಯಾಕರ ಬಗ್ಗೆ ಉಲ್ಲೇಖವೇ ಇಲ್ಲ. ಮಾತ್ರವಲ್ಲ ರಾಷ್ಟ್ರಪತಿಯವರಿಗೆ ಅಂಗೀಕಾರಕ್ಕಾಗಿ ಕಳುಹಿಸಲಾದ ಮಸೂದೆಯ ಪ್ರತಿಯಲ್ಲೂ ನೆಲ್ಲಿಕುನ್ನು ಅವರು ಸೂಚಿಸಿದ ಭಾಷಾ ಅಲ್ಪಸಂಖ್ಯಾಕ ಪರ ತಿದ್ದುಪಡಿಗಳಿಲ್ಲ ಎಂದು ಮಾಹಿತಿ ಹಕ್ಕು ಪ್ರಕಾರ ತಿಳಿದು ಬಂದಿದೆ.

ಸರ್ವಾಧಿಕಾರಿ ಎಡರಂಗ ಸರಕಾರದ ಹತ್ತು ಹಲವು ಪ್ರಚಲಿತ ವಿಷಯಗಳಲ್ಲಿ ಸರ್ವಾಧಿಕಾರ ಪ್ರವೃತ್ತಿ ತೋರುತ್ತ ಮಲಯಾಳಿ ಮಾಧ್ಯಮಗಳಿಂದಲೇ ಟೀಕೆಗೊಳಲಾಗುತ್ತಿರುವ ಪಿಣರಾಯಿ ಸರಕಾರ ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾಕರ ವಿಷಯದಲ್ಲಂತೂ ಕ್ರೌರ್ಯವನ್ನೇ ಮೆರೆಯುತ್ತಿದೆ ಎಂದು ಕನ್ನಡಿಗರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣದಲ್ಲಿ ಮಲಯಾಳ ಕಡ್ಡಾಯ ಮಾಡಿರುವುದರಿಂದ ಕಾಸರಗೋಡಿನಲ್ಲಿ ಭಾಷೆ ಸಂಸ್ಕೃತಿ ಸಾಹಿತ್ಯ ಸಾರ್ವಜನಿಕ ವ್ಯವಹಾರ ಮೊದಲಾದ ಎಲ್ಲ ವಲಯ ಗಳಲ್ಲಿ ಕನ್ನಡದ ಯುಗಾಂತ್ಯವಾಗಲಿದೆ. ಮುಂದಿನ ಪೀಳಿಗೆಯ ಕನ್ನಡಿಗರು ತಮ್ಮ  ಸ್ವಂತಿಕೆಯನ್ನು ಕಳೆದುಕೊಂಡು ಮಲಯಾಳಿಗಳಾಗಿ ಬಾಳುವುದು ಅನಿವಾರ್ಯವಾಗಲಿದೆ. ಕನಿಷ್ಠ ಪಕ್ಷ ಇಂದಿನ ಪೀಳಿಗೆಯ ಕನ್ನಡಿಗರನ್ನಾದರೂ ನೆಮ್ಮದಿಯಿಂದ ಬಾಳಲು ಸರಕಾರ ಬಿಡಬಹುದೆಂಬ ಆಶಾಭಾವನೆಯೂ ಸುಳ್ಳಾಗಿದೆ.

ಪ್ರತಿಯೊಂದು ಆದೇಶ, ಪ್ರಕಟಣೆ ಮಾಹಿತಿ ಮೊದಲಾದವು ಅರ್ಥಮಾಡಿಕೊಳ್ಳಲಾಗದ ಮಲಯಾಳದಲ್ಲೇ ಪ್ರಕಟವಾಗತೊಡಗಿ ದರೆ ಭಾಷಾ ಅಲ್ಪಸಂಖ್ಯಾಕ ಜನಸಾಮಾನ್ಯರ ದೈನಂದಿನ ಬಾಳು ಬರ್ಬರವಾದೀತು. 

ಹೀಗಾದರೆ ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನ ಮಾಡಿದ ಸಂರಕ್ಷಣೆಗೆ ಏನು ಬೆಲೆ ನೀಡಿದಂತಾಯಿತು? ಕೇಂದ್ರ ಸರಕಾರ ಕೂಡ ಹಿಂದಿ ಅಧಿಕೃತ ಆಡಳಿತ ಭಾಷೆಯಾದರೂ ಅದೊಂದೇ ಭಾಷೆಗೆ ಜೋತು ಬೀಳದೆ ಸಮಾನವಾಗಿ ಇಂಗ್ಲಿಷನ್ನೂ ಆಡಳಿತದಲ್ಲಿ ಬಳಸುತ್ತಿದೆ. ಮಲಯಾಳವೊಂದೇ ಸಾಕು ಎಂದು ಸರ್ವಾಧಿಕಾರ ಪ್ರವೃತ್ತಿ ತೋರುವ ಪಿಣರಾಯಿ ಸರಕಾರಕ್ಕೆ ಕೇಂದ್ರ ಸರಕಾರ ಅಥವಾ ರಾಷ್ಟ್ರಪತಿಗಳೊಂದಿಗೆ ಮಲಯಾಳದಲ್ಲಿ ವ್ಯವಹರಿಸಲು ಸಾಧ್ಯವೇ ?       

Advertisement

ಯಾವುದೇ ಗಣ್ಯವ್ಯಕ್ತಿಗಳ ಶಿಫಾರಸಿ ಲ್ಲದೆ ಸಾಮಾನ್ಯನ ನೆಲೆಯಲ್ಲಿ ಸರಕಾರಕ್ಕೆ ಹಲವಾರು ಕನ್ನಡಪರ ದೂರು, ಮನವಿಗಳನ್ನು ಸಮರ್ಪಿಸಿದ್ದ ಲೇಖಕ ನರೇಶ್‌ ಮುಳ್ಳೇರಿಯಾ ಅವರ ಅನುಭವದ ಪ್ರಕಾರ ಹಿಂದಿನ ಸರಕಾರದ ಕಾಲದಲ್ಲಿ ಮುಖ್ಯಮಂತ್ರಿ ಅಥವಾ ಮಂತ್ರಿಗಳಿಗೆ ಮನವಿ ಕಳುಹಿಸಿದ ತತ್‌ಕ್ಷಣ ಅವರ ಕಚೇರಿಯಿಂದ ಸ್ವೀಕೃತಿ ಪತ್ರ ಬರುತ್ತಿತ್ತು. ಅದರಲ್ಲಿರುವ ಉಲ್ಲೇಖ ಸಂಖ್ಯೆಯ    ಆಧಾರದಲ್ಲಿ   ಅಂತರ್‌ಜಾಲದ ಮೂಲಕ ಕಡತದ ಆಗುಹೋಗುಗಳನ್ನು ತಿಳಿಯುವ ವ್ಯವಸ್ಥೆಯಿತ್ತು. ಮಾತ್ರವಲ್ಲ ಸಚಿವಾಲಯಕ್ಕೆ ತೆರಳಿ ಮನವಿಯ ಬೆಳವಣಿಗೆಯನ್ನು ಪರಿಶೀಲಿಸುವ ಸಾಧ್ಯತೆಯಿತ್ತು. ಇದರಿಂದ ದೂರದ ಕಾಸರಗೋಡಿನಲ್ಲಿರುವ ಜನರಿಗೆ ಹಾಗೂ ರಾಜಕೀಯ ವ್ಯಕ್ತಿಗಳ ಸಹಾಯವಿಲ್ಲದ ಸಾಮಾನ್ಯರಿಗೆ ಅನುಕೂಲವಾಗುತ್ತಿತ್ತು. ಇದು ಹಲವರ ಅನುಭವ ಕೂಡ. ರಾಜಕೀಯ ಪುಡಾರಿಗಳ ಸಹಾಯ ವಿಲ್ಲದೆ ಕೆಲವಾರು ಕನ್ನಡ ಪರ ಆದೇಶ ಗಳು ಪ್ರಕಟವಾಗಿವೆ. ಆದರೆ ಈಗ ಈ ಸರಕಾರದ ಕಾಲದಲ್ಲಿ ಅಂತಹ ವ್ಯವಸ್ಥೆಗಳೆಲ್ಲ ಫಲಪ್ರದವಾಗಿ ಅನುಷ್ಠಾನ ಗೊಳ್ಳುತ್ತಿಲ್ಲ. ಮಾತ್ರವಲ್ಲ ಪ್ರತಿಯೊಂದು ವಿಚಾರಕ್ಕೂ ಆಡಳಿತ ಪಕ್ಷದ ಸ್ಥಳೀಯ ನಾಯಕರ ಶಿಫಾರಸು ಪತ್ರ ಪಡೆದೇ ಸರಕಾರವನ್ನು ಸಮೀಪಿಸಬೇಕೆನ್ನುವ ಪರಿಸ್ಥಿತಿ ಪಕ್ಷಾತೀತರಾದ ಜನಸಾಮಾನ್ಯ ರಿಗೆ ಬಹಳ ಮುಜುಗರವನ್ನೂ ತೊಂದರೆ ಯನ್ನೂ ಉಂಟು ಮಾಡುತ್ತವೆ. ಸ್ಥಳೀಯ ಆಡಳಿತ ಪಕ್ಷದ ರಾಜಕಾರಣಿಗಳಲ್ಲಿ ಬಹಳಷ್ಟು ಮಂದಿಗೆ ಕಾಸರಗೋಡಿನ ಭಾಷಿಕ ಇತಿಹಾಸ ಹಾಗೂ ಭಾಷಾ ಅಲ್ಪಸಂಖ್ಯಾಕರ ಸಾಂವಿಧಾನಿಕ ಹಕ್ಕು ಗಳ ಬಗ್ಗೆ ಕಡಿಮೆ ಮಾಹಿತಿಯಿದೆ ಮಾತ್ರ ವಲ್ಲ ರಾಜಕೀಯವಾಗಿ ತಟಸ್ಥರಾಗಿ ರುವ ಕನ್ನಡಿಗರು ಅವರ ಮತ ಬ್ಯಾಂಕ್‌ ಅಲ್ಲದ ಕಾರಣ ತೋರಿಕೆಯ ಸಹಾನು ಭೂತಿಯೂ ಗೋಚರಿಸುವುದಿಲ್ಲ. ಎಡರಂಗ ನಾಯಕರೆಲ್ಲ ಮಲಯಾಳಿ ಸಾಹಿತಿಗಳ ತಾಳಕ್ಕೆ ತಕ್ಕಂತೆ ಮಲಯಾಳ ಪರ ನಿಲುವಿಗೆ ಅಂಟಿಕೊಂಡಿದ್ದಾರೆಂದು ಸಾಮಾನ್ಯರು ಭಾವಿಸುತ್ತಿದ್ದಾರೆ. ಹಾಗಾಗಿ ಎಡರಂಗ ಸರಕಾರ ಮತ್ತು ಕನ್ನಡಿಗರ ನಡುವೆ ಅಗಾಧ ಕಂದಕ ಏರ್ಪಟ್ಟಿದೆ. ಪಿಣರಾಯಿ ಸರಕಾರದ ನಿಲುವುಗಳು ಈ ಕಂದರವನ್ನು ಹೆಚ್ಚಿಸುತ್ತಿವೆ.

ಸರಕಾರ ಜನ ವಿಶ್ವಾಸವನ್ನು ಗೆಲ್ಲಲಿ 
ಶಿಕ್ಷಣ ಆಡಳಿತ ಮೊದಲಾದ ರಂಗಗಳಲ್ಲಿ ಕಡ್ಡಾಯ ಮಲಯಾಳ ಹೇರಿಕೆಯಿಂದ ಭಾಷಾ ಅಲ್ಪಸಂಖ್ಯಾಕ ರನ್ನು ಹೊರತುಪಡಿಸುವ ಮೂಲಕ ಜನರ ವಿಶ್ವಾಸವನ್ನು ಸರಕಾರ ಗೆಲ್ಲಬೇಕು. ಇಲ್ಲವಾದರೆ ಕಾಸರ ಗೋಡಿನ ಭಾಷಾ ಸಾಂಸ್ಕೃತಿಕ ವೈವಿಧ್ಯ ವನ್ನು ನಾಶಮಾಡಿದ ಕುಪ್ರಸಿದ್ಧಿ ಮಾತ್ರ ಸರಕಾರಕ್ಕೆ ದೊರೆಯುತ್ತದೆ. 

ಅಲ್ಪಸಂಖ್ಯಾಕ ಅಸಂಘಟಿತ  ದುರ್ಬಲ ಜನ ಸಮುದಾಯವನ್ನು ದಮನಿಸಿದ ಸರಕಾರ ತನ್ನ ಸಂವಿಧಾನ ವಿರೋಧಿ  ಸರ್ವಾಧಿಕಾರಿ   ಪ್ರವೃತ್ತಿಗೆ ಬೇರೆ ಯಾವುದಾದರೂ ರೀತಿಯಲ್ಲಾದರೂ ತಕ್ಕ ಫಲವನ್ನು ಅನುಭವಿಸಬೇಕಾಗುತ್ತದೆ.

ಹಿಂದಿನ ಸರಕಾರವೇ ಎಷ್ಟೋ ಚೆನ್ನಾಗಿತ್ತು
ಭಾಷಾ ಅಲ್ಪಸಂಖ್ಯಾಕರ ಪಾಲಿಗೆ ಸಾಕ್ಷಾತ್‌ ದುಷ್ಮನ್‌ ಆಗಿರುವ ಪಿಣರಾಯಿ ಸರಕಾರಕ್ಕಿಂತ ಹಿಂದಿನ ಉಮ್ಮನ್‌ಚಾಂಡಿ ಸರಕಾರವೇ ಎಷ್ಟೋ ಚೆನ್ನಾಗಿತ್ತು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ದಂತಹ ಗಂಭೀರ ಆರೋಪಗಳನ್ನು ಹೊಂದಿದ್ದರೂ ಹಿಂದಿನ ಮುಖ್ಯಮಂತ್ರಿ ಉಮ್ಮನ್‌ಚಾಂಡಿಯವರು ಭಾಷಾ ಅಲ್ಪಸಂಖ್ಯಾಕರ ಬಗ್ಗೆ ಸ್ವಲ್ಪ ಮೃದು ನೀತಿಯನ್ನು ಅನುಸರಿಸುತ್ತಿದ್ದರು. ಸಾಹಿತಿಗಳು ಹಾಗೂ ಅಧಿಕಾರಿ ವಲಯದ ಒತ್ತಡದಿಂದ ಮಲಯಾಳ ಕಡ್ಡಾಯದ ಪರ ನಿಲುವು ತಳೆದಿದ್ದರೂ ಭಾಷೆಯ ಹೆಸರಿನಲ್ಲಿ ಮೂಲಭೂತವಾದಿಗಳಂತೆ ವರ್ತಿಸ ಕೂಡದು ಎಂದು ಮಲಯಾಳಿ ಸಾಹಿತಿ, ಬುದ್ಧಿಜೀವಿಗಳಿಗೆ ಕಿವಿಮಾತು ಹೇಳಿದ್ದ ಅವರು ಮಲಯಾಳ ಭಾಷಾ ನೀತಿಯನ್ನು ಪ್ರಕಟಿಸುವಾಗಲೆಲ್ಲ ಭಾಷಾ ಅಲ್ಪಸಂಖ್ಯಾಕರ ಹಿತವನ್ನು ಸಂರಕ್ಷಿಸ ಲಾಗುವುದೆಂದು ಮರೆಯದೆ ಉಲ್ಲೇಖೀ ಸುತ್ತಿದ್ದರು. ಭಾಷಾ ಅಲ್ಪಸಂಖ್ಯಾಕರ ಸಹಿತ ಜನಸಾಮಾನ್ಯರ ಭೇಟಿಗೆ ಹಾಗೂ ತಮ್ಮ ದೂರು, ಮನವಿಗಳನ್ನು ಸಲ್ಲಿಸುವುದಕ್ಕೆ ಮುಖ್ಯಮಂತ್ರಿಯವರು ಮುಕ್ತ ಅವಕಾಶ ಕಲ್ಪಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next