Advertisement

ಅಭ್ಯರ್ಥಿಗಿಂತ ರಾಷ್ಟ್ರ ರಾಜಕೀಯ ಪರಿಸ್ಥಿತಿಯೇ ನಿರ್ಣಾಯಕ

06:36 AM Apr 11, 2019 | Lakshmi GovindaRaju |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ರಾಜಕೀಯ ವಿಶೇಷತೆ ಮತ್ತು ವಿಭಿನ್ನತೆಗಳನ್ನು ಮೈಗೂಡಿಸಿಕೊಂಡು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದಿರುವ ಕ್ಷೇತ್ರ. ಈ ಹಿಂದೆ ಮಂಗಳೂರು ಕ್ಷೇತ್ರವಾಗಿದ್ದು, ಪುನರ್‌ ವಿಂಗಡನೆ ಬಳಿಕ ಕೊಡಗು ಜಿಲ್ಲೆಯನ್ನು ಕಳಚಿಕೊಂಡು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಗಿ ಬದಲಾಗಿದೆ.

Advertisement

1991ರಿಂದ 2019ವರೆಗೆ ಒಟ್ಟು 28 ವರ್ಷ ಬಿಜೆಪಿ ಸಂಸದರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. 2009 ಹಾಗೂ 2014ರಲ್ಲಿ ಸತತವಾಗಿ ಆಯ್ಕೆಯಾಗಿರುವ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಈ ಬಾರಿಯೂ ಸ್ಪರ್ಧಿಸುತ್ತಿದ್ದು ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದ್ದಾರೆ.

ಕಳೆದ 28 ವರ್ಷಗಳಿಂದ ತಮ್ಮಿಂದ ಜಾರಿಹೋಗಿರುವ ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕೆಂದು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರನ್ನು ಕಣಕ್ಕಿಳಿಸಿದೆ. ಎಸ್‌ಡಿಪಿಐ, ಬಿಎಸ್‌ಪಿ, ಉತ್ತಮ ಪ್ರಜಾಕೀಯ ಪಾರ್ಟಿ, ಹಿಂದೂಸ್ತಾನ್‌ ಜನತಾ ಪಾರ್ಟಿ ಹಾಗೂ 7 ಮಂದಿ ಪಕ್ಷೇತರರು ಸೇರಿ ಒಟ್ಟು 13 ಮಂದಿ ಸ್ಪರ್ಧಾಕಣದಲ್ಲಿದ್ದಾರೆ.

ಈ ಕ್ಷೇತ್ರದ ಇತಿಹಾಸ ಗಮನಿಸಿದರೆ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸಾಂಪ್ರದಾಯಿಕ ಎದುರಾಳಿಗಳು. ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ನಿಕಟ ಸ್ಪರ್ಧೆ ಈ ಎರಡೂ ಪಕ್ಷಗಳ ನಡುವೆಯೇ ನಡೆದಿತ್ತು. ಈ ಬಾರಿಯೂ ಇದೇ ಚಿತ್ರಣ ಕಂಡುಬಂದಿದೆ.

ಗೆಲುವಿನ ಸಾಧ್ಯತೆ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಒಟ್ಟು 8 ಕ್ಷೇತ್ರಗಳನ್ನು ಹೊಂದಿದೆ. 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ 8ರಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. ಚುನಾವಣೆಯಲ್ಲಿ ಒಟ್ಟಾರೆ ಮತ ಗಳಿಕೆಯಲ್ಲಿ ಬಿಜೆಪಿ ಒಟ್ಟು 8 ಕ್ಷೇತ್ರಗಳಲ್ಲಿ 7,15,208 ಹಾಗೂ ಕಾಂಗ್ರೆಸ್‌ 5,57,935 ಮತಗಳನ್ನು ಗಳಿಸಿದೆ.

Advertisement

ಅಂದರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿ 1,57,273 ಅಧಿಕ ಮತಗಳನ್ನು ಪಡೆದುಕೊಂಡಿದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ನ ಬಿ.ಜನಾರ್ದನ ಪೂಜಾರಿ ವಿರುದ್ಧ 1,42,000 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

2018ರ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯಲ್ಲಿ ಇನ್ನಷ್ಟು ಹೆಚ್ಚಳವಾಗಿದ್ದು, ಬಿಜೆಪಿಯ ಗೆಲುವಿನ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ನರೇಂದ್ರ ಮೋದಿಯವರ ಸಾಧನೆಗಳನ್ನು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಕ್ಷೇತ್ರದಲ್ಲಿ 1991ರಿಂದ ಲೋಕಸಭಾ ಚುನಾವಣೆಗಳಲ್ಲಿ ನಿರಂತರವಾಗಿ ಸೋಲು ಅನುಭವಿಸುತ್ತಾ ಬಂದಿರುವ ಕಾಂಗ್ರೆಸ್‌ ಈ ಬಾರಿ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕೆಂಬ ಪಣತೊಟ್ಟು 4 ದಶಕಗಳ ಬಳಿಕ ಹೊಸ ಮುಖಕ್ಕೆ ಅವಕಾಶ ನೀಡಿ ಮಿಥುನ್‌ ರೈ ಅವರನ್ನು ಕಣಕ್ಕಿಳಿಸಿದೆ.

ನಳಿನ್‌ ಕುಮಾರ್‌ ಕಟೀಲು ಅವರ ವೈಫಲ್ಯಗಳನ್ನು ಪಟ್ಟಿ ಮಾಡಿ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿದೆ. ಜತೆಗೆ ಮೋದಿ ಸರಕಾರ 5 ವರ್ಷಗಳ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದಾಗಿ ಮತದಾರರ ಮುಂದೆ ಪ್ರತಿಪಾದಿಸುತ್ತಿದೆ. ಇದೆಲ್ಲಾ ಅಂಶಗಳು ಈ ಬಾರಿ ನಮಗೆ ಗೆಲವು ತಂದುಕೊಡಲಿದೆ ಎಂಬ ಆತ್ಮವಿಶ್ವಾಸ ಕಾಂಗ್ರೆಸ್‌ ಪಾಳೆಯದಲ್ಲಿದೆ.

ಎಸ್‌ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್‌ ಮಹಮ್ಮದ್‌ ತುಂಬೆ ಸ್ಪರ್ಧಿಸುತ್ತಿದ್ದಾರೆ. ಎಸ್‌ಡಿಪಿಐ ಕಳೆದ ಬಾರಿ 27,254 ಮತಗಳನ್ನು ಗಳಿಸಿತ್ತು . ಈ ಬಾರಿಯೂ ಎಸ್‌ಡಿಪಿಐ ಸಾಕಷ್ಟು ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ಗಳಿಸುವ ಸಾಧ್ಯತೆಗಳಿವೆ. ಕಳೆದ ಬಾರಿ ಸ್ಪರ್ಧಿಸಿದ್ದ ಎಡ ಪಕ್ಷಗಳು ಈ ಬಾರಿ ಕಣದಿಂದ ದೂರ ಉಳಿದಿದ್ದು ಇದರ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ ಪಾಲಾಗುವ ನಿರೀಕ್ಷೆಯಿದೆ.

ವಿದ್ಯಾವಂತ ಮತದಾರರೇ ಹೆಚ್ಚಿರುವ ಕಾರಣ ಈ ಕ್ಷೇತ್ರದಲ್ಲಿ ಹಣ ಮತ್ತು ಆಮಿಷಗಳ ಪ್ರಭಾವ ಅಷ್ಟೊಂದಿಲ್ಲ. ಸ್ಥಳೀಯ ವಿಚಾರಗಳಿಗಿಂತ ರಾಷ್ಟ್ರ ಮತ್ತು ರಾಜ್ಯ ರಾಜಕಾರಣವೇ ಮತಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದು ಕಣದಲ್ಲಿ ಕಂಡುಬರುತ್ತಿರುವ ಚಿತ್ರಣ.

ಯಾವ ಜಾತಿ ಎಷ್ಟೆಷ್ಟು?: ಜಾತಿವಾರು ಲೆಕ್ಕಚಾರದ ಬಗ್ಗೆ ಅಧಿಕೃತ ಅಂಕಿಅಂಶಗಳಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು 4.20 ಲಕ್ಷ ಬಿಲ್ಲವರು, 3.60 ಲಕ್ಷ ಮುಸ್ಲಿಮರು, 1.55 ಲಕ್ಷ ಕ್ರಿಶ್ಚಿಯನ್‌, 2.20 ಲಕ್ಷ ಬಂಟ ಸಮುದಾಯದ ಮತದಾರದಿದ್ದಾರೆ. ಕುಲಾಲ್‌, ಮೊಗವೀರ, ಬ್ರಾಹ್ಮಣ, ಜೈನ್‌, ಜಿಎಸ್‌ಬಿ, ವಿಶ್ವಕರ್ಮ, ಕ್ಷತ್ರಿಯ, ಗಾಣಿಗ, ದೇವಾಡಿಗ, ಒಕ್ಕಲಿಗ, ಮಡಿವಾಳ ಸೇರಿ ಇತರ ಸಮುದಾಯದ ಸುಮಾರು 5 .60ಲಕ್ಷ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

ಒಟ್ಟು ಮತದಾರರು: 17,24,566
ಪುರುಷರು: 8,45,283
ಮಹಿಳೆಯರು: 879186

* ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next